ಸಮ್ಮಿಶ್ರ ಸರಕಾರ ಪತನಗೊಂಡರೇನಂತೆ ಡಿಕೆಶಿ-ಎಚ್ಡಿಕೆ ನಡುವೆ ಅದೇ ವಿಶ್ವಾಸ.. ಅದೇ ಪ್ರೀತಿ..
ಜೆಡಿಎಸ್ ವರಿಷ್ಠ ದೇವೇಗೌಡ್ರು ಮತ್ತು ಡಿ.ಕೆ.ಶಿವಕುಮಾರ್ ಕುಟುಂಬದ ನಡುವಿನ ವೈರತ್ವ ಹಿಂದೆ ಯಾವ ಮಟ್ಟದಲ್ಲಿತ್ತು ಎನ್ನುವುದು ಗೊತ್ತಿರುವ ವಿಚಾರ. ಆದರೆ, ಬದಲಾದ ಪರಿಸ್ಥಿತಿಯಲ್ಲಿ, ಎರಡೂ ಕುಟುಂಬಗಳು ಒಂದಾಗಿದ್ದವು. ಈಗ ಮತ್ತೆ, ಡಿಕೆಶಿ-ಎಚ್ಡಿಕೆ ಮಧ್ಯೆ ರಾಜಕೀಯ ಬೇರೆ, ವಿಶ್ವಾಸ ಬೇರೆ ಎನ್ನುವ ಮಾತುಗಳು ಇಬ್ಬರು ನಾಯಕರಿಂದಲೇ ಬರುತ್ತಿದೆ.
ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿದ್ದಾಗ, ಕಾಂಗ್ರೆಸ್ ಮತ್ತು ಜೆಡಿಎಸ್ಸಿನ ಯಾವ ಮುಖಂಡರೂ ನೀಡದಿದ್ದಷ್ಟು ಸಹಾಯ, ಬಲವನ್ನು ಡಿಕೆಶಿ ನೀಡಿದ್ದರು. ಕುಮಾರಸ್ವಾಮಿ ಸರಕಾರ ಉಳಿಸಿಕೊಳ್ಲಲು, ಡಿಕೆಶಿ ಸಾಧ್ಯವಾದ ಎಲ್ಲಾ ಕಸರತ್ತುಗಳನ್ನು ಮಾಡಿದ್ದರು.
'ಹುಳಿ ಹಿಂಡುವವರ ನಾಟಕ ಫಲಿಸದು': ಯೋಗೇಶ್ವರ್ ವಿರುದ್ಧ ಎಚ್ಡಿಕೆ ಗರಂ
ಆದರೆ, ಸಮ್ಮಿಶ್ರ ಸರಕಾರ ಪತನಗೊಂಡು, ಬಿಎಸ್ವೈ ಸರಕಾರ ಅಧಿಕಾರಕ್ಕೇರಿದ ನಂತರ, ಕಾಂಗ್ರೆಸ್ಸಿನ ಒಂದೊಂದೇ ಮುಖಂಡರು, ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ತಪ್ಪು ಮಾಡಿದೆವು ಎನ್ನುವ ಮಾತನ್ನಾಡುತ್ತಿದ್ದಾರೆ.
ಇದಕ್ಕೆ ತಮ್ಮದೇ ಆದ ರೀತಿಯಲ್ಲಿ ತಿರುಗೇಟು ನೀಡುತ್ತಿರುವ ಕುಮಾರಸ್ವಾಮಿ, ದೋಸ್ತಿ ಸರಕಾರದ ಕೆಲವೊಂದು ಆಫ್ ದಿ ರೆಕಾರ್ಡ್ ವಿಚಾರವನ್ನು ಬಯಲುಗೆಳೆಯುತ್ತಿದ್ದಾರೆ. ಜೊತೆಗೆ, ಡಿಕೆಶಿ ಜೊತೆಗಿನ ವಿಶ್ವಾಸದ ಮಾತನ್ನಾಡಿದ್ದಾರೆ.
ಡಿಕೆಶಿ ಹಗಲು ಹೊತ್ತು ಮಾತ್ರ ಕಾಂಗ್ರೆಸ್ ಅಧ್ಯಕ್ಷ, ಜೋಡೆತ್ತು ವಿರುದ್ಧ ಯೋಗೇಶ್ವರ್ ವಾರ್
|
ಅಡ್ಜಸ್ಟ್ಮೆಂಟ್ ರಾಜಕಾರಣವನ್ನು ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡಲ್ಲ
"ನಾನು ಅಡ್ಜಸ್ಟ್ಮೆಂಟ್ ರಾಜಕಾರಣವನ್ನು ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡಲ್ಲ. ಡಿ.ಕೆ. ಶಿವಕುಮಾರ್ ಮತ್ತು ನನ್ನ ನಡುವಣ ರಾಜಕಾರಣವೇ ಬೇರೆ. ವೈಯಕ್ತಿಕ ವಿಶ್ವಾಸವೇ ಬೇರೆ. ಹಿಂಬಾಗಿಲ ರಾಜಕಾರಣದ ಮೂಲಕ ನೆಲೆ ಕಂಡುಕೊಂಡವರಿಂದ ಯಾವುದೇ ಡ್ಯಾಮೇಜ್ ಮಾಡಲು ಸಾಧ್ಯವಿಲ್ಲ" ಎಂದು ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು.
ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ
"ಶಿವಕುಮಾರ್ ಮತ್ತು ನಮ್ಮ ನಡುವಣ ಹಿಂದಿನ ಹಾಗೂ ಇಂದಿನ ರಾಜಕಾರಣ ಬೇರೆ. ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ. ಎಲ್ಲರೂ ಒಂದು ಗುರಿ ಇಟ್ಟು ಕೊಂಡೆ ದುಡಿಮೆ ಮಾಡುತ್ತಾರೆ. ಈ ಮಧ್ಯೆ ಹುಳಿ ಹಿಂಡುವವರ ನಾಟಕ ಫಲಿಸದು"ಎಂದು ಎಚ್.ಡಿ.ಕುಮಾರಸ್ವಾಮಿ, ಡಿಕೆಶಿ ಬಗ್ಗೆ ವಿಶ್ವಾಸದ ಮಾತನ್ನಾಡಿದ್ದರು.
ಕಾಂಗ್ರೆಸ್ ನಾಯಕರ ವಿರುದ್ದ ತಿರುಗಿಬಿದ್ದಾಗ
ಇನ್ನು ಎಚ್ಡಿಕೆ, ಕಾಂಗ್ರೆಸ್ ನಾಯಕರ ವಿರುದ್ದ ತಿರುಗಿಬಿದ್ದಾಗಲೂ ಡಿಕೆಶಿ ಇದಕ್ಕೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಹೋಗಿಲ್ಲ. "ನಮ್ಮ ಹೋರಾಟ ಬಿಜೆಪಿಯ ವಿರುದ್ದ, ಸರಕಾರದ ವಿರುದ್ದ, ಭ್ರಷ್ಟಾಚಾರದ ವಿರುದ್ದವೇ ಹೊರತು, ಕುಮಾರಸ್ವಾಮಿಯವರ ವಿರುದ್ದ ಅಲ್ಲ" ಎಂದು ಡಿಕೆಶಿ ಹೇಳಿದ್ದರು.
ಡಿಕೆಶಿ-ಎಚ್ಡಿಕೆ ಕುಟುಂಬಗಳ ನಡುವಿನ ವಿಶ್ವಾಸ ಹಿಂದಿನಂತೆಯೇ
ತಮ್ಮ ಪದಗ್ರಹಣ ಸಮಾರಂಭದಲ್ಲಿ ದಿನೇಶ್ ಗುಂಡೂರಾವ್, ಇದಾದ ನಂತರ ಸಿದ್ದರಾಮಯ್ಯ, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ತಪ್ಪು ಮಾಡಿದೆವು ಎನ್ನುವ ಹೇಳಿಕೆಯನ್ನು ನೀಡಿದ್ದರೂ, ಡಿಕೆಶಿ ಈ ಬಗ್ಗೆ ಏನನ್ನೂ ಹೇಳಲಿಲ್ಲ. ಇನ್ನು, ಯೋಗೇಶ್ವರ್ ವೃತ್ತಾಂತದಲ್ಲಂತೂ, ಡಿಕೆಶಿ-ಎಚ್ಡಿಕೆ ಕುಟುಂಬಗಳ ನಡುವಿನ ವಿಶ್ವಾಸ ಹಿಂದಿನಂತೆಯೇ ಇದೆ ಎನ್ನುವುದು ರುಜುವಾತಾಗಿದೆ.