ಸಿಎಂ ಯಡಿಯೂರಪ್ಪ ಮೇಲೆ ಮತ್ತೆ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ!
ಬೆಂಗಳೂರು, ಜ. 07: ಬಿಜೆಪಿ ಜೊತೆಗಿನ ಹೊಂದಾಣಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದ ಹಾಲಿ-ಮಾಜಿ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಂತೆಯೆ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ಮೇಲೆ ಗರಂ ಆಗಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ಸರ್ಕಾರದ ಮೇಲೆ ಮೃದುಧೋರಣೆ ಯಾಕೆ ಅಂತಾ ಪಕ್ಷ ಸಂಘಟನಾ ಸಭೆಯಲ್ಲಿ ಬಹುತೇಕ ಶಾಸಕರು ಪ್ರಸ್ತಾಪ ಮಾಡಿದ್ದರು. ಅದರಿಂದಾಗಿ ಮಾಜಿ ಸಿಎಂ ಎಚ್ಡಿಕೆ ಇವತ್ತು ಬಿಜೆಪಿ ಸರ್ಕಾರ ಹಾಗೂ ಸಿಎಂ ಯಡಿಯೂರಪ್ಪ ಅವರ ಮೇಲೆ ಹರಿಹಾಯ್ದಿದ್ದಾರೆ.
ಜೆಡಿಎಸ್ ಪಕ್ಷ ಸಂಘಟನೆ ಕುರಿತಂತೆ ಸುದೀರ್ಘ ಸಭೆ ಇಂದು ಜೆಪಿ ಭವನದಲ್ಲಿ ನಡೆಯಿತು. ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಸೇರಿದಂತೆ ಬಹುತೇಕ ಎಲ್ಲ ನಾಯಕರು ಭಾಗವಹಿಸಿದ್ದರು. ಆದರೆ ಶಾಸಕ ಜಿ.ಟಿ. ದೇವೇಗೌಡ, ಮಾಜಿ ಶಾಸಕ ಮಧು ಬಂಗಾರಪ್ಪ ಸೇರಿದಂತೆ ಹಲವು ರೆಬಲ್ ನಾಯಕರು ಸಭೆಯಲ್ಲಿ ಭಾಗವಹಿಸಿರಲಿಲ್ಲ.
ಬಿಜೆಪಿಗೆ ಬೆಂಬಲ ವಿಚಾರ: ಜೆಡಿಎಸ್ ಸಂಘಟನಾ ಸಭೆಯಲ್ಲಿ ಅಸಮಾಧಾನ ಸ್ಪೋಟ!
ಸಭೆಯ ಬಳಿಕ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಸಿಎಂ ಯಡಿಯೂರಪ್ಪ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೋಗಸ್ ಬಿಜೆಪಿ ಸರ್ಕಾರ
ಬೀದರ್ನಲ್ಲಿ ಅನುಭವ ಮಂಟಪ ಕಟ್ಟುವುದು ಬೋಗಸ್. ನಿವೃತ್ತ ಐಎಎಸ್ ಅಧಿಕಾರಿ ಜಾಮದಾರ್ ಅವರೇ ಬೋಗಸ್ ಅಂದಿದ್ದಾರೆ. ಟೆಂಡರ್ ಕರೆಯುವುದಕ್ಕೆ ಸರ್ಕಾರದ ಬಳಿ ದುಡ್ಡಿಲ್ಲ. ಆದರೂ ಹೋಗಿ ಶಂಕುಸ್ಥಾಪನೆ ಮಾಡಿದ್ದಾರೆ. ಹಣವಿಲ್ಲದೆ ಅದೆಲ್ಲವನ್ನು ಎಲ್ಲಿ ಮಾಡುವುದಕ್ಕೆ ಆಗುತ್ತದೆ? ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ವಾಗ್ದಾಳಿ ನಡೆಸಿದ್ದಾರೆ.
25 ಕೋಟಿ ರೂ.ಗಳಿಂದ 50 ಲಕ್ಷ ರೂ.ಗಳಿಗೆ
ಸಿಎಂ ಯಡಿಯೂರಪ್ಪ ಅವರ ಮೇಲೆ ಬಿಜೆಪಿ ಶಾಸಕರ ಅಸಮಾಧಾನದ ಕುರಿತೂ ಮಾಜಿ ಸಿಎಂ ಎಚ್ಡಿಕೆ ಮಾತನಾಡಿದ್ದಾರೆ. ಬಿಜೆಪಿ ಶಾಸಕರ ಸಂಧಾನ ಸಭೆ ಮಾಡಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 25 ಕೋಟಿ ರೂ.ಗಳನ್ನು ಹಂತಹಂತವಾಗಿ ಕೊಡುತ್ತೇವೆ ಎಂದು ಮೊದಲು ಯಡಿಯೂರಪ್ಪ ತಮ್ಮ ಶಾಸಕರಿಗೆ ಹೇಳಿದ್ದರು. ಈಗ ಅದನ್ನು 50 ಲಕ್ಷ ರೂ. ಕೊಡುತ್ತೇವೆ ಎಂದಿದ್ದಾರೆ. 25 ಕೋಟಿ ರೂಪಾಯಿಗಳಿಂದ ಈಗ 50 ಲಕ್ಷ ರೂಪಾಯಿಗಳಿಗೆ ಬಂದಿದ್ದಾರೆ ಎಂದು ಸಿಎಂ ಯಡಿಯೂರಪ್ಪ ಅವರನ್ನು ಎಚ್ಡಿಕೆ ಲೇವಡಿ ಮಾಡಿದ್ದಾರೆ.
ವಿಲೀನ ಅನ್ನೋದು ಶುದ್ಧ ಸುಳ್ಳು
ಬಿಜೆಪಿಯವರು ರಾಮರಾಜ್ಯ ಎಂದು ಹೊರಟಿದ್ದಾರೆ. ಬಿಜೆಪಿ ಆಡಳಿತದಲ್ಲಿ ಹೆಣ್ಣು ಮಕ್ಕಳ ಸ್ಥಿತಿ ಅಸಹನೀಯವಾಗಿದೆ. ಅದೆಂಥದೊ ಯೋಗಿ ಆಡಳಿತವಂತೆ. ಅದೇನು ರಾಮರಾಜ್ಯವೊ ಗೊತ್ತಿಲ್ಲ ಎಂದು ಬಿಜೆಪಿ ಆಡಳಿತದ ಬಗ್ಗೆ ಎಚ್ಡಿಕೆ ಕಿಡಿ ಕಾರಿದ್ದಾರೆ.
ಜೊತೆಗೆ ಬಿಜೆಪಿ ಜೊತೆಗೆ ಜೆಡಿಎಸ್ ವಿಲೀನದ ಕುರಿತು ಎಚ್ಡಿಕೆ ಮಾತನಾಡಿದ್ದಾರೆ. ನಾವು ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಸಿಎಂ ಯಡಿಯೂರಪ್ಪ ಅವರ ಜೊತೆಗೂ ಹೊಂದಾಣಿಕೆ ಇಲ್ಲ. ಬಿಜೆಪಿ ಜೊತೆ ವಿಲೀನ ಅನ್ನೋದು ಶುದ್ಧ ಸುಳ್ಳು. ಅಂಥಾದ್ದು ಯಾವುದೂ ನಮ್ಮ ಮುಂದಿಲ್ಲ. ಪಕ್ಷ ಕಟ್ಟುವವರು ನನ್ನ ಜೊತೆ ಬನ್ನಿ ಎಂದು ಸಂಘಟನಾ ಸಭೆಯಲ್ಲಿ ಎಚ್ಡಿಕೆ ಸ್ಪಷ್ಟಪಡಿಸಿದ್ದಾರೆ.
ದೇವೇಗೌಡರ ಇತಿಹಾಸ ಹೇಳಿದ ಎಚ್ಡಿಕೆ
ಹಿಂದೆ 1969ರಲ್ಲಿ ದಿ. ಮಾಜಿ ಸಿಎಂ ದೇವರಾಜು ಅರಸು ಅವರು ಕಾಂಗ್ರೆಸ್ ತೊರೆದಿದ್ದರು. ಅಂದೇ ದಿ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ದೇವೇಗೌಡರಿಗೆ ಒತ್ತಡ ಹಾಕಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಮುಖ್ಯಮಂತ್ರಿ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಅದಕ್ಕೆ ದೇವೇಗೌಡರು ಒಪ್ಪಿರಲಿಲ್ಲ. ಹೀಗಾಗಿ ದಿ. ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದರು.
ಇಂತಹ ಪಕ್ಷವನ್ನು ಬಿಜೆಪಿ ಜೊತೆ ವಿಲೀನ ಎಂದು ವದಂತಿ ಹಬ್ಬಿಸಿದ್ದಾರೆ. ಈ ಪ್ರಚಾರ ಯಾಕೆ ಬಂದಿತೊ ಗೊತ್ತಾಗುತ್ತಿಲ್ಲ. ಹಿಂದೆ ನಾನು ದೇವೇಗೌಡರ ವಿರುದ್ಧ ಹೋಗಿ ಮುಖ್ಯಮಂತ್ರಿ ಆಗಲಿಲ್ಲ. ಅಂದು ನೋವು ಕೊಟ್ಟು ನಾನು ಆ ತೀರ್ಮಾನ ಮಾಡಿದ್ದೆ. ಪಕ್ಷ ಉಳಿಸುವ ದೃಷ್ಟಿಯಿಂದ ನಾನು ಆ ಕೆಲಸ ಮಾಡಿದ್ದೆ ಎಂದು ಮಾಜಿ ಸಿಎಂ ಎಚ್ಡಿಕೆ ಅವರು ಬಿಜೆಪಿ ಜೊತೆಗೆ ಜಿಡಿಎಸ್ ಪಕ್ಷ ವಿಲೀನ ಎಂಬುದು ಕೇವಲ ವದಂತಿ ಎಂದಿದ್ದಾರೆ.