ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
ಯಡಿಯೂರಪ್ಪನವರ ವಿಚಾರದಲ್ಲೂ ಒಂದು ದಿನದ ಕೆಳಗೆ ಹೇಳಿಕೆಯನ್ನು ನೀಡಿದ್ದ ಕುಮಾರಸ್ವಾಮಿ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಲ್ಲಿಂದ ಯಾರು ಮುಖ್ಯಮಂತ್ರಿ ಆಗಲಿದ್ದಾರೆ ಎನ್ನುವ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ದಾಖಲೆಗಳನ್ನು ಮತ್ತು ವಿರೋಧ ಪಕ್ಷಗಳ ಆಂತರಿಕ ರಹಸ್ಯವನ್ನು ಬೇಧಿಸುವಲ್ಲಿ ಚಾಣಾಕ್ಷರಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ರಾಜಕಾರಣದ ಮತ್ತೊಂದು ಅಂಶದ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ. ಎಚ್ಡಿಕೆ ಹೇಳಿಕೆ ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ.
ಪಂಚರತ್ನ ರಥಯಾತ್ರೆಗೆ ಜನತೆಯಿಂದ ಉತ್ತಮ ಸ್ಪಂದನೆ ಸಿಗುತ್ತಿದ್ದು, ದಾಸರಹಳ್ಳಿ ವ್ಯಾಪ್ತಿಯಲ್ಲಿ ಭರ್ಜರಿ ಪ್ರಚಾರವನ್ನು ಕುಮಾರಸ್ವಾಮಿ ನಡೆಸಿದ್ದಾರೆ. ಈ ವೇಳೆ, ರಾಜ್ಯದಲ್ಲಿ ಸದ್ಯ ಸದ್ದನ್ನು ಮಾಡುತ್ತಿರುವ ಸಿಡಿಯ ವಿಚಾರದ ಬಗ್ಗೆಯೂ ಕುಮಾರಸ್ವಾಮಿ ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ.
ಯಡಿಯೂರಪ್ಪನವರ ವಿಚಾರದಲ್ಲೂ ಒಂದು ದಿನದ ಕೆಳಗೆ ಹೇಳಿಕೆಯನ್ನು ನೀಡಿದ್ದ ಕುಮಾರಸ್ವಾಮಿ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಲ್ಲಿಂದ ಯಾರು ಮುಖ್ಯಮಂತ್ರಿ ಆಗಲಿದ್ದಾರೆ ಎನ್ನುವ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಯಡಿಯೂರಪ್ಪನವರು ಬಿಜೆಪಿ ತೊರೆಯುವುದರಲ್ಲಿ ಇದ್ದರು, ಅವರನ್ನು ನಾನೇ ತಡೆದದ್ದು, ನನ್ನನ್ನು ಸಚಿವರನ್ನಾಗಿ ಮಾಡಿ ಎಂದು ಬಿಎಸ್ವೈ ನನ್ನ ಬಳಿ ಬಂದಿದ್ದರು ಎಂದು ಕುಮಾರಸ್ವಾಮಿ ಹೇಳಿದ್ದರು.
ಜೆಡಿಎಸ್ ಪಂಚ ರತ್ನ ಹೆಸರು ಏಕೆ ಇಟ್ಟಿದ್ದಾರೆ? ಅದು ನವಗ್ರಹ ಯಾತ್ರೆ ಎಂದ ಪ್ರಹ್ಲಾದ್ ಜೋಶಿ
"ಸ್ಪಷ್ಟ ಬಹುಮತವನ್ನು ಜೆಡಿಎಸ್ ಪಕ್ಷಕ್ಕೆ ನೀಡಿದರೆ ಪಂಚರತ್ನ ಯೋಜನೆಯನ್ನು ಸಂಪೂರ್ಣವಾಗಿ ಜಾರಿಗೆ ತರುತ್ತೇವೆ. ಬಿಜೆಪಿಗೆ ನೀವೆಲ್ಲಾ ಆಶೀರ್ವಾದ ಮಾಡಿದ್ದೀರಿ, ಅವರು ರಾಜ್ಯದ ಖಜಾನೆಯನ್ನು ಲೂಟಿ ಹೊಡೆದರು"ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಜೊತೆಗೆ, ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣ ಸಮುದಾಯದವರು ಸಿಎಂ ಆಗಲಿದ್ದಾರೆ ಎಂದು ಹೇಳಿದ್ದಾರೆ.
ಸಿಡಿಯಲ್ಲಿ ಬಿಜೆಪಿ ನಾಯಕರು ಎಕ್ಸ್ಪರ್ಟ್ಸ್ ಇದ್ದಾರೆ
ದಾಸರಹಳ್ಳಿ ವಿಧಾನಸಭಾ ವ್ಯಾಪ್ತಿಯ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಬೃಹತ್ ರೋಡ್ ಶೋ ನಡೆಸಿದ ಕುಮಾರಸ್ವಾಮಿ, "ರಾಜ್ಯದ ಜನತೆ ಈ ಬಾರಿ ಬಿಜೆಪಿಯನ್ನು ಸೋಲಿಸಲಿದ್ದಾರೆ. ಅವರು ಕೂಡಾ ವಿಜಯ ಸಂಕಲ್ಪ ಯಾತ್ರೆಯನ್ನು ಮಾಡುತ್ತಿದ್ದಾರೆ, ಅದರ ಬದಲು ಸಿಡಿಯಾತ್ರೆ ಮಾಡುವುದು ಉತ್ತಮ. ಸಿಡಿಯಲ್ಲಿ ಬಿಜೆಪಿ ನಾಯಕರು ಎಕ್ಸ್ಪರ್ಟ್ಸ್ ಇದ್ದಾರೆ. ಆ ಸಚಿವ ಮುನಿರತ್ನ ಇದ್ದಾರಲ್ವಾ ಅವರು ಸಿಡಿ ಮಾಡುವುದರಲ್ಲಿ ನಿಸ್ಸೀಮ"ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಕೇಂದ್ರ ಸಂಸದೀಯ ವ್ಯವಹಾರದ ಖಾತೆಯ ಸಚಿವ ಪ್ರಲ್ಹಾದ್ ಜೋಶಿ
ಕೇಂದ್ರ ಸಂಸದೀಯ ವ್ಯವಹಾರ ಖಾತೆಯ ಸಚಿವ ಪ್ರಲ್ಹಾದ್ ಜೋಶಿಯವರ ನವಗ್ರಹ ಯಾತ್ರೆ ಹೇಳಿಕೆಗೆ ಆಕ್ರೋಶ ವ್ಯಕ್ತ ಪಡಿಸುತ್ತಾ, "ಪಂಚರತ್ನ ಯೋಜನೆಗೆ ಜನಸ್ಪಂದನೆ ನೋಡಿ ಅವರು ಹೆದರಿದ್ದಾರೆ. ಪ್ರಹ್ಲಾದ್ ಜೋಶಿಯವರನ್ನು ಚುನಾವಣೆ ನಂತರ ಸಿಎಂ ಮಾಡಬೇಕು ಅಂತ ಸಂಘ ಪರಿವಾರ ನಿರ್ಧರಿಸಿದೆ" ಎಂದು ಹೇಳುವ ಮೂಲಕ ಕುಮಾರಸ್ವಾಮಿ ಹೊಸ ಬಾಂಬ್ ಅನ್ನು ಸಿಡಿಸಿದ್ದಾರೆ.
ಜೋಶಿ ಅವರು ನಮ್ಮ ಹಳೆಯ ಕಾಲದ ಬ್ರಾಹ್ಮಣರಲ್ಲ
"ಜೋಶಿ ಅವರು ನಮ್ಮ ಹಳೆಯ ಕಾಲದ ಬ್ರಾಹ್ಮಣರಲ್ಲ, ಬ್ರಾಹ್ಮಣರಲ್ಲಿ ಎರಡು ಮೂರು ವಿಧಗಳಿವೆ. ಶೃಂಗೇರಿಯ ಮಠ ಒಡೆದ ಬ್ರಾಹ್ಮಣ ವರ್ಗ ಜೋಶಿ ಅವರದ್ದು. ಮಹಾತ್ಮ ಗಾಂಧಿ ಅವರನ್ನು ಕೊಂದ ಬ್ರಾಹ್ಮಣರ ವರ್ಗದವರು ಇವರು. ಇವರು ನಮ್ಮ ಭಾಗದ ಹಳೆಯ ಬ್ರಾಹ್ಮಣರಂತೆ ಅಲ್ಲ, ಇವರು ಶೃಂಗೇರಿ ಮಠಕ್ಕೆ ಸೇರಿದವರಲ್ಲ. ಮರಾಠಿ ಪೇಶ್ವೆ ಸಮುದಾಯಕ್ಕೆ ಸೇರಿದವರು" ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ನಮ್ಮ ಭಾಗದ ಹಳೇ ಬ್ರಾಹ್ಮಣರು ಸರ್ವೇಜನ ಸುಖಿನೋ ಭವಂತು ಅನ್ನೋರು
"ನಮ್ಮ ಭಾಗದ ಹಳೇ ಬ್ರಾಹ್ಮಣರು ಸರ್ವೇಜನ ಸುಖಿನೋ ಭವಂತು ಅನ್ನುವವರು. ಸರ್ವ ಜನರ ಕ್ಷೇಮ ಬಯಸುವವರು, ಆದರೆ ಇವರು ದೇಶಕ್ಕೆ ಕೊಡುಗೆ ನೀಡಿದವರನ್ನ ಹತ್ಯೆ ಮಾಡಿದವರು.
ಬಿಜೆಪಿ ಮತ್ತು RSS ಕುತಂತ್ರಕ್ಕೆ ಬಲಿಯಾಗಬೇಡಿ. ಇವರು ದೇಶವನ್ನ ಹಾಳು ಮಾಡುತ್ತಾರೆ. ದೆಹಲಿಯಲ್ಲಿ ಎಂಟು ಜನ ಉಪ ಮುಖ್ಯಮಂತ್ರಿ ಮಾಡುವ ಸಭೆ ಮಾಡಿದ್ದಾರೆ. ಅದು ನನ್ನ ಗಮನಕ್ಕೆ ಬಂದಿದೆ, ಎಂಟು ಜನ ಯಾರು ಅಂತ ಹೆಸರು ಬೇಕಾದರೂ ಕೊಡಬಲ್ಲೆ" ಎನ್ನುವ ಮೂಲಕ ಬಿಜೆಪಿಯ ಆಂತರಿಕ ರಹಸ್ಯವನ್ನು ಕುಮಾರಸ್ವಾಮಿ ಬೇಧಿಸಿದ್ದಾರೆಯೇ ಎನ್ನುವ ಅನುಮಾನ ಬರಲಾರಂಭಿಸಿದೆ.