ಕುಮಾರಸ್ವಾಮಿ ಕಟ್ಟಾ ವಿರೋಧಿಗಳ ಜೊತೆ ಏನದು ಸಿದ್ದರಾಮಯ್ಯನವರ ಚರ್ಚೆ?
Recommended Video
ರಾಜ್ಯದ ಎರಡನೇ ಹಂತದ ಚುನಾವಣೆ ಮುಗಿದ ನಂತರ ಸ್ವಲ್ಪದಿನ ವಿಶ್ರಾಂತಿಯ ಮೊರೆಹೋಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಸಕ್ರಿಯ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ರಮೇಶ್ ಜಾರಕಿಹೊಳಿ ಮತ್ತೆ ಅಪಸ್ವರ ಎತ್ತಿದಾಗ, ಮೌನಕ್ಕೆ ಶರಣಾಗಿದ್ದ ಸಿದ್ದರಾಮಯ್ಯನವರ ನಡೆ ವ್ಯಾಪಕ ಚರ್ಚೆಯಾಗೆ ಗುರಿಯಾಗಿತ್ತು.
ಎರಡು ದಿನದಿಂದ ಕುಂದಗೋಳ ಮತ್ತು ಚಿಂಚೋಳಿ ಕ್ಷೇತ್ರದ ಅಸೆಂಬ್ಲಿ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿನ ಸಭೆಯಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಈ ಮಧ್ಯೆ, ಮಂಗಳವಾರ (ಏ 30) ರಾತ್ರಿ ಸಿದ್ದರಾಮಯ್ಯ ನಾಲ್ವರು ಮುಖಂಡರನ್ನು ತನ್ನ ನಿವಾಸಕ್ಕೆ ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ.
ಪ್ರಮುಖವಾಗಿ ಮಂಡ್ಯ ಲೋಕಸಭಾ ಕ್ಷೆತ್ರದ ಮಾಹಿತಿ ಪಡೆಯಲು ಸಿದ್ದರಾಮಯ್ಯ ಇವರನ್ನು ಕರೆಸಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ನಾಲ್ವರಲ್ಲಿ ಮೂವರು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕಟ್ಟಾವಿರೋಧಿಗಳು. ಮಂಡ್ಯ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ಸಿನ ಹಿರಿಯ ಮುಖಂಡರು ಎಷ್ಟೇ ಪ್ರಯತ್ನ ಪಟ್ಟರೂ ಇವರುಗಳನ್ನು ಪ್ರಚಾರಕ್ಕೆ ಕರೆಸಿಕೊಳ್ಳಲು ಆಗಿರಲಿಲ್ಲ.
ರಾಜ್ಯದ ಈ 3 'ಎಚ್ಎಂಟಿ' ಕ್ಷೇತ್ರದ ಫಲಿತಾಂಶದ ಮೇಲೆ ಊರಿಗೆಲ್ಲಾ ಕಣ್ಣು
ಒಂದು ಕಾಲದಲ್ಲಿ ಕುಮಾರಸ್ವಾಮಿಯ ಪರಮಾಪ್ತ ವಲಯದಲ್ಲಿ ಕಾಣಸಿಕೊಳ್ಳುತ್ತಿದ್ದ ಮಾಜಿ ನಾಗಮಂಗಲ ಶಾಸಕ ಚೆಲುವರಾಯಸ್ವಾಮಿ, ಮಾಜಿ ಮಾಗಡಿ ಶಾಸಕ ಬಾಲಕೃಷ್ಣ, ನರೇಂದ್ರಸ್ವಾಮಿ ಮತ್ತು ಹಾಲೀ ಸಚಿವ ಜಮೀರ್ ಅಹಮದ್, ಈ ನಾಲ್ವರು ಸಿದ್ದರಾಮಯ್ಯನವರನ್ನು ಮಂಗಳವಾರ ರಾತ್ರಿ ಭೇಟಿಯಾಗಿದ್ದಾರೆ.
ಸ್ವಾಭಿಮಾನ ಬಿಟ್ಟು ಯಾರ ಮನೆಬಾಗಿಲಿಗೂ ಹೋಗುವುದಿಲ್ಲ
ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಮಂಡ್ಯ ಲೋಕಸಭಾ ಚುನಾವಣೆಯ ಬಗ್ಗೆ ಮಾಹಿತಿ ಪಡೆಯಲು ಸಿದ್ದರಾಮಯ್ಯ ಇವರುಗಳನ್ನು ಕರೆಸಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಲೋಕಸಭಾ ಚುನಾವಣೆಯ ವೇಳೆ, ಕುಮಾರಸ್ವಾಮಿ, ಸ್ವಾಭಿಮಾನ ಬಿಟ್ಟು ಯಾರ ಮನೆಬಾಗಿಲಿಗೂ ಹೋಗುವುದಿಲ್ಲ ಎಂದು ಚೆಲುವರಾಯಸ್ವಾಮಿಗೆ ಟಾಂಗ್ ನೀಡಿದ್ದರು. ಸಿದ್ದರಾಮಯ್ಯ ಮುಖಾಂತರ ಚೆಲುವರಾಯಸ್ವಾಮಿ, ನಾಗೇಂದ್ರಸ್ವಾಮಿಗೆ ಎಚ್ಚರಿಕೆಯನ್ನೂ ನೀಡಲಾಗಿತ್ತು.
ಮಂಡ್ಯದಲ್ಲಿ ಭರ್ಜರಿ ಬೆಟ್ಟಿಂಗ್ : ಗೆದ್ದರೆ ಕೋಟಿ, ಸೋತರೆ ಲಂಗೋಟಿ!
ಚೆಲುವರಾಯಸ್ವಾಮಿಯ ಬಗ್ಗೆ ಕುಮಾರಸ್ವಾಮಿ ಮಾತನಾಡಿರುವುದಕ್ಕೆ ಜಮೀರ್ ಬೇಸರ
ಕಾಂಗ್ರೆಸ್ ಮುಖಂಡರು, ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಸಹಾಯ ಮಾಡುತ್ತಿದ್ದಾರೆ ಎನ್ನುವ ಜೆಡಿಎಸ್ ನೇರ ಆರೋಪದ ನಡುವೆ, ಕಾಂಗ್ರೆಸ್ಸಿನ ಹಿರಿಯ ಮುಖಂಡರು ಚೆಲುವರಾಯಸ್ವಾಮಿ ಆದಿಯಾಗಿ ಕೆಲವರಿಗೆ ಕಟ್ಟೆಚ್ಚರ ನೀಡಿದ್ದರು. ಕೆಲವು ಸ್ಥಳೀಯ ಮುಖಂಡರನ್ನು ಪಕ್ಷ ಅಮಾನತು ಕೂಡಾ ಮಾಡಿತ್ತು. ಆದರೆ, ಇದ್ಯಾವುದಕ್ಕೂ ಕೆಲವು ಕಾಂಗ್ರೆಸ್ ಮುಖಂಡರು ಜಗ್ಗಿರಲಿಲ್ಲ. ಚೆಲುವರಾಯಸ್ವಾಮಿಯ ಬಗ್ಗೆ ಕುಮಾರಸ್ವಾಮಿ ಮಾತನಾಡಿರುವುದಕ್ಕೆ ಜಮೀರ್ ಅಹಮದ್ ಕೂಡಾ ಬಹಿರಂಗವಾಗಿಯೇ ಮಂಗಳವಾರ ಬೇಸರ ವ್ಯಕ್ತಪಡಿಸಿದ್ದರು.
ಪರೋಕ್ಷವಾಗಿ ಚೆಲುವರಾಯಸ್ವಾಮಿ ಹೆಸರನ್ನು ಪ್ರಸ್ತಾವಿಸಿದ ದೇವೇಗೌಡ್ರು
ಕಾಂಗ್ರೆಸ್ಸಿನ ಯಾವುದೇ ಎಚ್ಚರಿಕೆಗೆ ಜಗ್ಗದ ಮುಖಂಡರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಕೆ ಆರ್ ಪೇಟೆ, ಸಾರ್ವಜನಿಕ ಸಭೆಯಲ್ಲೂ ಗೈರಾಗಿದ್ದರು. ಪ್ರಮುಖರೊಬ್ಬರು ಈ ಸಭೆಗೆ ಗೈರಾಗಿದ್ದಾರೆ, ನಾನು ಅವರ ಬಗ್ಗೆ ಮಾತನಾಡುವುದಿಲ್ಲ, ಸಿದ್ದರಾಮಯ್ಯ ಅವರ ಬಗ್ಗೆ ಸಭೆಯಲ್ಲಿ ಮಾತನಾಡುತ್ತಾರೆಂದು, ಪರೋಕ್ಷವಾಗಿ ಚೆಲುವರಾಯಸ್ವಾಮಿ ಹೆಸರನ್ನು ದೇವೇಗೌಡರು ಪ್ರಸ್ತಾವಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ಸಮಾನ ಮನಸ್ಕರ ಸಭೆಯನ್ನು ರದ್ದುಗೊಳಿಸುವಂತೆ ಸಿದ್ದರಾಮಯ್ಯ ಸೂಚನೆ
ಮೂಲಗಳ ಪ್ರಕಾರ, ಸಿದ್ದರಾಮಯ್ಯ ತಮ್ಮನ್ನು ಭೇಟಿಯಾದ ನಾಲ್ವರು ಮುಖಂಡರಿಂದ ಅಸೆಂಬ್ಲಿವಾರು ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಇದರ ಜೊತೆಗೆ, ತುಮಕೂರು ಮತ್ತು ಹಾಸನ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರಿಂದಲೂ ಸಿದ್ದರಾಮಯ್ಯ ಮಾಹಿತಿ ಕಲೆಹಾಕುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯನವರ ಆಪ್ತರಾಗಿರುವ ಕೆಲವು ಶಾಸಕರು, ಮುಖಂಡರು ಎಸ್ ಟಿ ಸೋಮಶೇಖರ್ ನೇತೃತ್ವದಲ್ಲಿ ಸಮಾನ ಮನಸ್ಕರ ಸಭೆಯನ್ನು ಕರೆದದ್ದು, ಸಭೆಯನ್ನು ರದ್ದುಗೊಳಿಸುವಂತೆ ಸಿದ್ದರಾಮಯ್ಯ ಸೂಚಿಸಿದ್ದೂ ಚರ್ಚೆಗೆ ಗುರಿಯಾಗಿತ್ತು.
ನಾಲ್ವರು ಮುಖಂಡರನ್ನು ಸಿದ್ದರಾಮಯ್ಯ ಭೇಟಿಯಾಗಿರುವುದು ಹಲವು ಕುತೂಹಲಕ್ಕೆ ಕಾರಣ
ಚೆಲುವರಾಯಸ್ವಾಮಿ ಸೇರಿ ನಾಲ್ವರು ಮುಖಂಡರನ್ನು ಸಿದ್ದರಾಮಯ್ಯ ಭೇಟಿಯಾಗಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ, ಜೊತೆಗೆ ಇದು, ಕುಮಾರಸ್ವಾಮಿ ಬೇಸರಕ್ಕೂ ಕಾರಣವಾಗಬಹುದು. ಇತ್ತೀಚೆಗೆ, ನಾನೇನು ಸನ್ಯಾಸಿ ಅಲ್ಲ, ಸಿಎಂ ಆಗುವ ಆಸೆ ಇದೆ ಎಂದು ಸಿದ್ದರಾಮಯ್ಯ ಹೇಳಿರುವುದು ಹಲವು ಆಯಾಮದ ಚರ್ಚೆಗೆ ನಾಂದಿ ಹಾಡಿತ್ತು.