ಎಸ್.ಎಂ.ಕೃಷ್ಣ ಬದಲಿಗೆ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದು ಹೇಗೆ?
ಬೆಂಗಳೂರು, ಡಿ. 27: ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರಿಗೆ ಪ್ರಧಾನಮಂತ್ರಿ ಆಗುವ ಅವಕಾಶ ಸ್ವಲ್ಪದರಲ್ಲಿ ತಪ್ಪಿತ್ತಾ? ಹೌದು ಎಂಬ ಮಾಹಿತಿಯನ್ನು ಕೊಡುತ್ತಿದೆ ಎಸ್ಎಂಕೆ ಅವರ ಆತ್ಮಕಥನ ಸ್ಮೃತಿವಾಹಿನಿ. ಯುಪಿಎ ಸರ್ಕಾರದಲ್ಲಿ ಎಸ್.ಎಂ.ಕೃಷ್ಣ ಅವರೇ ಪ್ರಧಾನಮಂತ್ರಿಗಳಾಗುತ್ತಾರೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದರಂತೆ.
ಅವರು ಹೇಳಿದ ಹಾಗೆ ಆಗಿದ್ದರೆ ಮನಮೋಹನ್ ಸಿಂಗ್ ಅವರ ಬದಲಿಗೆ ಮಾಜಿ ಸಿಎಂ ಎಸ್.ಎಂ. ಕೃಷ್ಣಾ 2004ರಲ್ಲಿ ಯುಪಿಎ-1 ಸರ್ಕಾರದಲ್ಲಿ ಪ್ರಧಾನಮಂತ್ರಿ ಆಗಬೇಕಾಗಿತ್ತು. ಕೃಷ್ಣ ಅವರೆ ಮುಂದಿನ ಪ್ರಧಾನಿ ಎಂಬ ಮಾತುಗಳು ಕಾಂಗ್ರೆಸ್ ಹೈಕಮಾಂಡ್ ವಲಯದಲ್ಲಿಯೂ ಕೇಳಿ ಬಂದಿದ್ದವು. ಆದರೆ ಮುಂದೆ ಅದೇನಾಯ್ತೊ ಗೊತ್ತಿಲ್ಲ.
ಎರಡು ಬಾರಿ ಕಾಂಗ್ರೆಸ್ ಸೇರಲು ಮುಂದಾಗಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
ಮನಮೋಹನ್ ಸಿಂಗ್ ಎರಡು ಅವಧಿಗೆ ಪ್ರಧಾನಿ ಆಗುವ ಮೂಲಕ ಎಸ್ಎಂಕೆ ಪ್ರಧಾನಮಂತ್ರಿ ಹುದ್ದೆಗೆ ಹತ್ತಿರ ಬಂದು ಅದರಿಂದ ವಂಚಿತರಾದರು. ಜೊತೆಗೆ ಕೇಂದ್ರ ಸರ್ಕಾರದ ದೂರದರ್ಶನ ವಾಹಿನಿಗೆ ಕಾಯಕಲ್ಪ ಕೊಡುವ ಜವಾಬ್ದಾರಿ ಕೂಡ ಅವರ ಕೈತಪ್ಪಿದ್ದರ ಬಗ್ಗೆ ಸ್ವತಃ ಎಸ್ಎಂಕೆ ತಮ್ಮ ಆತ್ಮಕಥನದಲ್ಲಿ ಹೇಳಿಕೊಂಡಿದ್ದಾರೆ.
ಸ್ಮೃತಿವಾಹಿನಿ: ಪ್ರಧಾನಮಂತ್ರಿಗೆ ನನ್ನ ಹೆಸರು
ಮಾಜಿ ಸಿಎಂ ಎಸ್.ಎಂ. ಕೃಷ್ಣ ತಮ್ಮ ಆತ್ಮಕಥನ ಸ್ಮೃತಿವಾಹಿನಿಯಲ್ಲಿ ಪ್ರಧಾನಮಂತ್ರಿ ಹುದ್ದೆಗೆ ಹತ್ತಿರ ಬಂದಿದ್ದರ ಕುರಿತು ಹೇಳಿಕೊಂಡಿದ್ದಾರೆ. ಅದು ಹೀಗಿದೆ. ಡಾ. ಮನಮೋಹನ್ ಸಿಂಗ್ರವರು ತಮ್ಮ ಸಹಪಾಠಿಗಳಾಗಿದ್ದ ಪ್ರೊ. ಕೆ. ವೆಂಕಟಗಿರಿಗೌಡರವರ ಜೊತೆಯಲ್ಲಿ ಹಂಚಿಕೊಂಡಂತೆ 'ಕರ್ನಾಟಕದಲ್ಲಿ ಎಸ್.ಎಂ. ಕೃಷ್ಣ ಉತ್ತಮವಾದಂತಹ ಕೆಲಸ ಮಾಡುತ್ತಿದ್ದಾರೆ. 2004ರಲ್ಲಿ ಯುಪಿಎ ಸರ್ಕಾರ ಬಂದರೆ ಕೃಷ್ಣ ಅಥವಾ ನಾನು ಪ್ರಧಾನಮಂತ್ರಿಯಾಗುತ್ತೇವೆ. ಖಂಡಿತ ಸೋನಿಯಾ ಗಾಂಧಿಯವರು ಆ ಹುದ್ದೆಯ ಆಕಾಂಕ್ಷಿಯಲ್ಲ.' ಈ ವಿಚಾರವನ್ನು ಪ್ರೊ. ವೆಂಕಟಗಿರಿಗೌಡ ತಮ್ಮ ಆಪ್ತವಲಯದಲ್ಲಿ ಹೇಳಿಕೊಂಡಿದ್ದರು ಎಂದು ಎಸ್ಎಂಕೆ ತಮ್ಮ ಆತ್ಮಕತೆ ಸ್ಮೃತಿವಾಹಿನಿಯಲ್ಲಿ ಬರೆದುಕೊಂಡಿದ್ದಾರೆ.
ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರಿಗೆ ಮತ್ತೊಂದು 'ತಪ್ಪಿದ ಅವಕಾಶ'
ಮಾಜಿ ಸಿಎಂ ಎಸ್ಎಂಕೆ ಅವರಿಗೆ ಸ್ವಲ್ಪದರಲ್ಲಿ ಪ್ರಧಾನಮಂತ್ರಿ ಆಗುವ ಅವಕಾಶ ತಪ್ಪಿದ ಹಾಗೆ ಮತ್ತೊಂದು ಅವಕಾಶ ಕೂಡ ತಪ್ಪಿತ್ತು. ಅದು ಕೂಡ ಅತ್ಯಂತ ಮಹತ್ವದ ಜವಾಬ್ದಾರಿ ಆಗುವುದು ಸಾಧ್ಯವಿತ್ತು. ಕೃಷ್ಣ ಅವರ ಮಾತಲ್ಲೆ ಕೇಳೊದಾದರೆ ಹೀಗಿದೆ.
1984ರ ಲೋಕಸಭಾ ಚುನಾವಣೆಯಲ್ಲಿ ನಾನು ಸೋತಮೇಲೆ ಬೆಂಗಳೂರಿಗೆ ನನ್ನ ನಿವಾಸವನ್ನು ಬದಲಾವನೆ ಮಾಡಿಕೊಂಡೆ. ದೆಹಲಿಗೆ ಹೋದಾಗ ಪ್ರಧಾನಿ ರಾಜೀವ್ ಗಾಂಧಿಯವರನ್ನು ಭೇಟಿ ಮಾಡುತ್ತಾ ಇದ್ದೆ. ರಾಜೀವ್ ಗಾಂಧಿಯವರು ನನ್ನನ್ನು ಎಸ್ಎಂ ಎಂದೇ ಕರೆಯುತ್ತಿದ್ದರು. ಶ್ರೀಮತಿ ಇಂದಿರಾ ಗಾಂಧಿಯವರ ಜೊತೆಗೆ ಒಡನಾಟ ವಿದ್ದಾಗ ರಾಜೀವ್ ಗಾಂಧಿಯವರು ಅಷ್ಟು ಪರಿಚಿತರಾಗಿರಲಿಲ್ಲ. 1966ರಲ್ಲಿಅವರ ಮದುವೆ ಆಮಂತ್ರಣ ಪತ್ರಿಕೆ ಬಂದಿದ್ದ ನೆನಪು.
ಹೀಗೆ ಪ್ರಧಾನಮಂತ್ರಿಗಳಾದ ಮೇಲೆ ರಾಜೀವ್ ಗಾಂಧಿಯವರು 'ಎಸ್.ಎಂ. ನನ್ನದೊಂದು ಚಿಂತನೆಯಿದೆ. ಭಾರತ ಸರ್ಕಾರದ ವಾರ್ತಾ ಇಲಾಖೆ ವಿಶೇಷವಾಗಿ ದೂರದರ್ಶನ ಜನರ ವಿಶ್ವಾಸವನ್ನುಗಳಿಸುವಲ್ಲಿ ಪರಿಣಾಕಾರಿಯಾದಂತಹ ಕೆಲಸ ಮಾಡುತ್ತಿಲ್ಲ. ಅದು ಸರ್ಕಾರದ ಪರವಾಗಿದೆ ಎಂದು ಪ್ರಜ್ಞಾವಂತ ಜನರು ಅದರ ಸುದ್ದಿಯನ್ನು ನಂಬುತ್ತಿಲ್ಲ. ನಾನು ಇದನ್ನು ಬದಲಾವಣೆ ಮಾಡಬೇಕೆಂದುಕೊಂಡಿದ್ದೇನೆ. ಇದಕ್ಕಾಗಿ ಒಮದು ಉತ್ತನಮಟ್ಟದ ಸಮಿತಿಯನ್ನು ನೇಮಕ ಮಾಡುತ್ತೇನೆ, ನೀವು ಅದರ ಅಧ್ಯಕ್ಷರಾಗಲಿಕ್ಕೆ ಸಾಧ್ಯಾನಾ' ಎಂದು ಕೇಳಿದರು.
ನಾನು ಯೋಚಿಸಿ ಹೇಳುತ್ತೇನೆ ಎಂದ್ಹೇಳಿ ಬೆಂಗಳೂರಿಗೆ ಬಂದು ಸಮಾನ ಮನಸ್ಕರುಗಳೊಡನೆ ಚರ್ಚಿಸಿ ಮತ್ತೆ ದೆಹಲಿಗೆಬ ಹೋದಾಗ 'ನನ್ನ ಒಪ್ಪಿಗೆ' ತಿಳಿಸಿದೆ. ಅದಕ್ಕೆ ಪ್ರಧಾನ ಮಂತ್ರಿಗಳು All right, I will come bakc to you ಅಂಥ ಹೇಳಿದರು. ಹತ್ತು ಹನ್ನೆರಡು ದಿನವಾದರೂ ಎನ್ ಸಮಾಚಾರವಿಲ್ಲ. ಒಂದು ತಿಂಗಳಾಯಿತು, ಎರಡು ತಿಂಗಳಾಯಿತು ಬ್ಯಾಕೂ ಇಲ್ಲ, ಫ್ರಂಟೂ ಇಲ್ಲ, ನಾನು ಮತ್ತೆ ದೆಹಲಿಗೆ ಹೋದಾಗ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ 'ಸರ್, ಹಿಂದೆ ತಾವು ಹೇಳಿದ ಪ್ರಸ್ತಾವನೆಗೆ ನಾನು ಒಪ್ಪಿಗೆ ಕೊಟ್ಟಿದ್ದೆ. ಅದೇನಾಯಿತು' ಎಂದು ಕೇಳಿದೆ.
ಅದಕ್ಕೆ ರಾಜೀವಗಾಂಧಿಯವರು 'ಓಹೋ ಉನ್ನತಾಧಿಕಾರಿಗಳಿಂದ ಅದರ ಬಗ್ಗೆ ವಿರೋಧವಿದೆ ಅವರ ವಿರೋಧವನ್ನು ಕಟ್ಟಿಕೊಂಡು ನಿಮ್ಮನ್ನು ಅಧ್ಯಕ್ಷರು ಮಾಡಿದರೂ ನಿಮ್ಮ ಸಮಿತಿ ಏನೂ ಕೆಲಸ ಮಾಡಲಾಗದೆಂದು ನನಗನ್ನಿಸಿತು, ಅದಕ್ಕಾಗಿ ನಾನು ಆ ಪ್ರಸ್ತಾವನೆಯನ್ನು ಕೈಬಿಟ್ಟಿದ್ದೇನೆ' ಎಂದರು. ಹಿರಿಯ ಅಧಿಕಾರಿಗಳು ಎಂದಿಗೂ ತಮ್ಮ ವ್ಯಪ್ತಿಗೆ ರಾಜಕೀಯ ವ್ಯಕ್ತಿಗಳು ಬರುವುದನ್ನು ಒಪ್ಪುವುದಿಲ್ಲ ಎಂದು ಎಸ್ಎಂಕೆ ಬರೆದುಕೊಂಡಿದ್ದಾರೆ.
ಒಟ್ಟಾರೆ ಎರಡು ಬಾರಿ ದೊಡ್ಡ ಹುದ್ದೆಗಳಿಂದ ಮಾಜಿ ಸಿಎಂ ಎಸ್.ಎಂ. ಕೃಷ್ಣ ವಂಚಿತರಾಗಿದ್ದರ ಕುರಿತು ತಮ್ಮ ಆತ್ಮಕಥನದಲ್ಲಿ ವಿವರಿಸಿದ್ದಾರೆ.