ನಾನು ನಂಬಿಕಸ್ತ ಗೆಳೆಯನನ್ನು ಕಳೆದುಕೊಂಡಿದ್ದೇನೆ: ಸಿದ್ದರಾಮಯ್ಯ!
ಬೆಂಗಳುರು, ನ. 25: ರಾಜಕೀಯದ ಹೊರತಾಗಿಯೂ ವೈಯಕ್ತಿಕ ಸಂಬಂಧಗಳಿಗೆ ಮಹತ್ವ ಕೊಡುವ ವ್ಯಕ್ತಿ ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರು. ತಮ್ಮ ರಾಜಕೀಯ ಜಿವನದಲ್ಲಿ ಹಲವು ಏಳು-ಬೀಳುಗಳನ್ನು ಕಂಡವರು. ಕಷ್ಟದ ಸಂದರ್ಭದಲ್ಲಿ ಕೈಹಿಡಿದವರನ್ನು ಮರೆಯುವ ಸ್ವಭಾವ ಸಿದ್ದರಾಮಯ್ಯ ಅವರದ್ದಲ್ಲ. ಹೀಗಾಗಿ ಅಗಲಿದ ಹಿರಿಯ ಗೆಳೆಯ ಕಾಂಗ್ರೆಸ್ ಹಿರಿಯ ನಾಯಕ, ಎಐಸಿಸಿ ಖಜಾಂಚಿ ಅಹ್ಮದ್ ಪಟೇಲ್ ಅವರನ್ನು ನೆನೆದೆ ಸಿದ್ದರಾಮಯ್ಯ ಅವರು ಭಾವುಕರಾಗಿದ್ದಾರೆ.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಮತ್ತು ನನಗೆ ಆತ್ಮೀಯ ಸ್ನೇಹಿತರಾಗಿದ್ದ ರಾಜ್ಯಸಭಾ ಸದಸ್ಯ ಅಹ್ಮದ್ ಪಟೇಲ್ ನಿಧನದಿಂದ ಆಘಾತಕ್ಕಿಡಾಗಿದ್ದೇನೆ. ನಮ್ಮ ಪಕ್ಷದ ಅಧ್ಯಕ್ಷರಾದ ಸೋನಿಯಾಗಾಂಧಿಯವರಿಗೆ ಸುದೀರ್ಘಕಾಲ ರಾಜಕೀಯ ಕಾರ್ಯದರ್ಶಿಯಾಗಿ ಪಕ್ಷವನ್ನು ಸೋಲು-ಗೆಲುವುಗಳ ಕಾಲದಗೆಖೆತನವನ್ನುಲ್ಲಿ ನಿರ್ವಾಜ್ಯ ನಿಷ್ಠೆಯಿಂದ ಮುನ್ನಡೆಸಿದ್ದ ಅಹ್ಮದ್ ಪಟೇಲ್ ತಮ್ಮ ಇಡೀ ಬದುಕನ್ನೇ ಪಕ್ಷಕ್ಕೆ ಮುಡಿಪಾಗಿಟ್ಟವರು ಎಂದು ಸಿದ್ದರಾಮಯ್ಯ ಅವರು ಪಟೇಲ್ ಅವರನ್ನು ನೆನೆದಿದ್ದಾರೆ.
ಪ್ರಚಾರದ ಬೆಳಕಿನಲ್ಲಿ ಹೆಚ್ಚು ಕಾಣಿಸಿಕೊಳ್ಳದೆ, ರಾಜಕೀಯ ಅಧಿಕಾರಕ್ಕಾಗಿ ಹೆಚ್ಚು ಆಸೆ ಪಡದೆ, ಪಕ್ಷವನ್ನೇ ತನ್ನ ಕುಟುಂಬವೆಂದು ತಿಳಿದುಕೊಂಡು ದುಡಿಯುತ್ತಿದ್ದ ಪಟೇಲ್ ಅವರ ರಾಜಕೀಯ ಬದುಕು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರಿಗೆಲ್ಲ ಮಾದರಿಯಾದದ್ದು. ಸೋನಿಯಾಗಾಂಧಿಯವರು ಮೊದಲ ಬಾರಿ ಪಕ್ಷದ ಅಧ್ಯಕ್ಷರಾದ ದಿನದಿಂದ ತನ್ನ ಕೊನೆದಿನದ ವರೆಗೆ ಅವರ ರಾಜಕೀಯ ಕಾರ್ಯದರ್ಶಿಯಾಗಿ ಅವರೆಲ್ಲ ದು:ಖ ದುಮ್ಮಾನಗಳನ್ನು ಹಂಚಿಕೊಂಡು ಬೆಂಗಾವಲಿಗೆ ನಿಂತಿದ್ದವರು ಅಹ್ಮದ್ ಪಟೇಲ್. ಈ ಸಾವಿನಿಂದಾಗಿ ಸೋನಿಯಾಗಾಂಧಿಯವರಿಗಾಗಿರುವ ದುಃಖವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ.
ಅಹ್ಮದ್ ಪಟೇಲ್ ಅವರ ನಿಧನದಿಂದ ವೈಯಕ್ತಿಕವಾಗಿ ನಾನು ನಂಬಿಕಸ್ತ ಗೆಳೆಯನನ್ನು, ಬಿಕ್ಕಟ್ಟಿನ ಸಂದರ್ಭದಲ್ಲಿ ಕೈಹಿಡಿದು ಧೈರ್ಯ ತುಂಬುತ್ತಿದ್ದ ಹಿತೈಷಿಯನ್ನು ಕಳೆದುಕೊಂಡಿದ್ದೇನೆ. ನನ್ನ ರಾಜಕೀಯ ಬದುಕಿನ ಪ್ರಮುಖ ನಿರ್ಧಾರಕ್ಕೆ ಕಾರಣಕರ್ತರಾಗಿದ್ದ ಅಹ್ಮದ್ ಪಟೇಲ್ ಕೊನೆಯ ವರೆಗೆ ನನ್ನ ಹಿತಚಿಂತಕರಾಗಿದ್ದರು.
ನನ್ನ ದು:ಖ ಮಾತುಗಳನ್ನು ಮೀರಿದ್ದು. ಅಹ್ಮದ್ ಪಟೇಲ್ ಅವರನ್ನು ಕಳೆದುಕೊಂಡಿರುವ ಅವರ ಕುಟುಂಬದ ಶೋಕದಲ್ಲಿ ನಾನು ಭಾಗಿಯಾಗಿದ್ದೇನೆ. ಕೊರೊನಾ ಸೋಂಕಿನ ನಿರ್ಬಂಧಗಳಿಂದಾಗಿ ಪಟೇಲ್ ಅವರ ಅಂತಿಮ ದರ್ಶನವನ್ನು ಮಾಡುವ ಅವಕಾಶ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಅಹ್ಮದ್ ಪಟೇಲ್ ಅವರಿಗೆ ನನ್ನ ಶ್ರದ್ದಾಂಜಲಿ ಎಂದು ಸಿದ್ದರಾಮಯ್ಯ ಅವರು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.