ವಿಪಕ್ಷ ನಾಯಕ ಸಿದ್ದರಾಮಯ್ಯ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ಇದೆಂತಹ ಮಾತು?
ಬೆಂಗಳೂರು, ಸೆ. 27: ವಿಪಕ್ಷ ನಾಯಕ ಸಿದ್ದರಾಮಯ್ಯ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಕ್ಸಮರ ಮುಂದುವರೆಸಿದ್ದಾರೆ. ಜನತಾ ಪರಿವಾರದ ಹಿನ್ನೆಲೆಯ ಸಿದ್ದರಾಮಯ್ಯ ಅವರು ಇತ್ತೀಚೆಗೆ ಜೆಡಿಎಸ್ ಮೇಲೆ ತೀವ್ರವಾಗಿ ವಾಗ್ದಾಳಿಯನ್ನು ಮಾಡುತ್ತಿದ್ದಾರೆ. ಜೆಡಿಎಸ್ ನಾಯಕರ ಮೇಲೆ ಸಿದ್ದರಾಮಯ್ಯ ನಡೆಸುವ ವಾಗ್ದಾಳಿಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತೀವ್ರ ಗರಂ ಆಗಿದ್ದಾರೆ.
ಅದರಲ್ಲಿಯೂ ಭಾನುವಾರದಂದು ಸಿದ್ದರಾಮಯ್ಯ ಆಡಿರುವ ಮಾತುಗಳು ಜೆಡಿಎಸ್ ನಾಯಕರನ್ನು ಕೆರಳಿಸಿದೆ. ಒಂದು ಕಾಲದಲ್ಲಿ ಅತ್ಯಾಪ್ತರಾಗಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಕುರಿತು ಸಿದ್ದರಾಮಯ್ಯ ಟೀಕೆಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಜೊತೆಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮೇಲೆಯೂ ಸಿದ್ದರಾಮಯ್ಯ ವಾಗ್ದಾಳಿಯನ್ನು ಮಾಡಿದ್ದರು. ಇದೇ ವೇಳೆ ಜೆಡಿಎಸ್ ಪಕ್ಷದ ಕುರಿತು ಸಿದ್ದರಾಮಯ್ಯ ಮಾಡಿದ್ದ ಟೀಕೆಗೆ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ. ತಮ್ಮ ಹೇಳಿಕೆಯಲ್ಲಿ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಮೂಲಕ್ಕೆ 'ಕೈ' ಹಾಕಿದ್ದಾರೆ. ಅಷ್ಟಕ್ಕೂ ಸಿದ್ದರಾಮಯ್ಯ ಮಾಡಿದ್ದ ಆರೋಪ ಏನು? ಅದಕ್ಕೆ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದು ಹೇಗೆ? ಮುಂದಿದೆ.
ಜೆಡಿಎಸ್ ಕುರಿತು ಸಿದ್ದರಾಮಯ್ಯ ಆಡಿದ್ದ ಮಾತು!
ಜೆಡಿಎಸ್ ಪಕ್ಷಕ್ಕೆ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ, ಅದೊಂದು ಪರಾವಲಂಬಿ ಪಕ್ಷ ಎಂದು ಹೇಳಿಕೆ ನೀಡಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ರಾಜಕೀಯ ನೆಲೆಯನ್ನು ಒದಗಿಸಿದ್ದು ಜೆಡಿಎಸ್. ಪಕ್ಷೇತರ ಶಾಸಕರಾಗಿದ್ದ ಸಿದ್ದರಾಮಯ್ಯ ಅವರಿಗೆ ರಾಜಕೀಯ ಭದ್ರಬುನಾದಿ ಹಾಕಿದ್ದು ಕೂಡ ಜೆಡಿಎಸ್. ಹೀಗಾಗಿ ತಮ್ಮ ಪಕ್ಷದ ಬಗ್ಗೆ ಸಿದ್ದರಾಮಯ್ಯ ಮಾಡುತ್ತಿರುವ ಟೀಕೆಗಳ ಸುರಿಮಳೆಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತೀರಾ ಖಾರವಾಗಿ ಉತ್ತರ ಕೊಟ್ಟಿದ್ದಾರೆ. ಅವರು ಕೊಟ್ಟಿರುವ ಹೇಳಿಕೆ ಹೀಗಿದೆ.
ಸಿದ್ದರಾಮಯ್ಯ ಬಂದಿದ್ದು ಎಲ್ಲಿಂದ?
ಸಿದ್ದರಾಮಯ್ಯ ಅವರಿಗೆ ತಿರುಗೇಟು ಕೊಟ್ಟಿರುವ ಎಚ್.ಡಿ. ಕುಮಾರಸ್ವಾಮಿ, "ಸುಳ್ಳಿನ ಶೂರ, ಸಿದ್ದಕಲೆಯ ನಿಷ್ಣಾತ ಸಿದ್ದರಾಮಯ್ಯನವರಿಗೆ ರಾಜಕೀಯ ಶಕ್ತಿ ತುಂಬಿದವರು ಯಾರು? ನಾನು ಎಲ್ಲಿದ್ದೆ? ಎಲ್ಲಿಂದಾ ಬಂದೆ ಎಂದು ಸ್ವತಃ ಅವರೇ ರಾಜ್ಯದ ಜನತೆಗೆ ಹೇಳಿದರೆ ಚೆನ್ನಾಗಿರುತ್ತದೆ. ಸತ್ಯಕ್ಕೆ ಬೆನ್ನು ತಿರುಗಿಸಿ ಸದಾ ಸುಳ್ಳಿನೆಡೆಗೆ ಮುಖ ಮಾಡಿ ನಿಲ್ಲುವ 'ಸಿದ್ದಹಸ್ತರಿಗೆ' ಜೆಡಿಎಸ್ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ" ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಆ ಮೂಲಕ ನಿಮಗೆ ರಾಜಕೀಯ ನೆಲೆ ಸಿಗುವಂತೆ ಮಾಡಿದ್ದೇ ಜೆಡಿಎಸ್ ಎಂದು ನೇರವಾಗಿಯೇ ಕುಮಾರಸ್ವಾಮಿ ಹೇಳಿದ್ದಾರೆ.
ಉಂಡ ಮನೆಗೆ ಕನ್ನ ಕೊರೆಯುವ ಗುಣ
'ಯಾರೋ ಕಟ್ಟಿದ ಹುತ್ತಕ್ಕೆ ಹೊಕ್ಕು ರಾಜಕೀಯದ ಮರುಹುಟ್ಟು ಪಡೆದು, ಉಂಡ ಮನೆಗೆ ಕನ್ನ ಕೊರೆಯುವ ಗುಣ ಯಾರದ್ದು? ಎಂಬುದನ್ನು ಜನರೇ ಬಲ್ಲರು. ಪರಾವಲಂಬಿ ರಾಜಕಾರಣ ಅವರ ನೈಜಗುಣ. ನೇರ ರಾಜಕಾರಣ ಅವರ ರಕ್ತದಲ್ಲೇ ಇಲ್ಲ. ಜೆಡಿಎಸ್ ಅನ್ನ-ಗೊಬ್ಬರದಿಂದ ಬೆಳೆದ ಸಿದ್ದರಾಮಯ್ಯ, ಈಗ ಅದೇ ಬಲದಿಂದ ಕಾಂಗ್ರೆಸ್ ಪಕ್ಷವನ್ನೇ ನುಂಗುತ್ತಿದ್ದಾರೆ. ಆ ಪಕ್ಷದ ದಿಗ್ಗಜ ನಾಯಕರನ್ನೇ ಬಲಿ ತೆಗೆದುಕೊಳ್ಳುತ್ತಿದ್ದಾರೆ." ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೇಲೆ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ಜೆಡಿಎಸ್ ಕುರಿತು ಸಿದ್ದರಾಮಯ್ಯ ಆಡಿದ್ದ ಮತ್ತೊಂದು ಮಾತಿಗೂ ಎಚ್ಡಿಕೆ ತಿರುಗೇಟು ಕೊಟ್ಟಿರುವುದು ಮುಂದಿದೆ.
Recommended Video
ಮೈತ್ರಿ ಸರ್ಕಾರ ಕೆಡವಿದ್ದು ಸಿದ್ದರಾಮಯ್ಯ?
"ಜೆಡಿಎಸ್ ಅವರಿವರ ಜತೆ ಹೋಗುವ ಪಕ್ಷ ಎಂದು ಸಿದ್ದರಾಮಯ್ಯ ಹೇಳಿರುವುದು ಅವರ ರಾಜಕೀಯ ಪ್ರಜ್ಞೆಯ ದಿವಾಳಿತನವಷ್ಟೆ. 2018ರಲ್ಲಿ ದೇವೇಗೌಡರ ಮನೆ ಬಾಗಿಲಿಗೆ ಬಂದವರು ಯಾರು? ನನ್ನನ್ನು ಮುಖ್ಯಮಂತ್ರಿ ಮಾಡಿ, ಕೊನೆಗೆ ಕೈಕೊಟ್ಟು ಆ ಸರಕಾರದ ಪತನಕ್ಕೆ 'ಕಾರಣಪುರುಷರು' ಯಾರು? ಎಂಬುದು ಇಡೀ ರಾಜ್ಯಕ್ಕೆ ಗೊತ್ತಿರುವ ಸಂಗತಿ," ಎಂದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾಗಲು ಸಿದ್ದರಾಮಯ್ಯ ಅವರೇ ಕಾರಣ ಎಂದು ಕುಮಾರಸ್ವಾಮಿ ನೇರ ಆರೋಪವನ್ನು ಮಾಡಿದ್ದಾರೆ.