ಉನ್ನತ ಶಿಕ್ಷಣ ಖಾತೆಯ ಸಚಿವ ಸ್ಥಾನ ಖಾಲಿಯಿದೆ, ನೀವೇ ಇಟ್ಕೊಳ್ಳಿ!
Recommended Video
ಬೆಂಗಳೂರು, ಜೂ 14: ಚಾಮುಂಡೇಶ್ವರಿ ಶಾಸಕ, ಸಚಿವ ಜಿ ಟಿ ದೇವೇಗೌಡರ ಖಾತೆ ಹಂಚಿಕೆ ಸಂಬಂಧದ ಕೋಪ ಇನ್ನೂ ಶಮನಗೊಂಡಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಉನ್ನತ ಶಿಕ್ಷಣ ಇಲಾಖೆಯ ಮಹತ್ವದ ಸಭೆಗೆ ಜಿಟಿಡಿ ಗೈರಾಗಿದ್ದಾರೆ.
ಎಂಟನೇ ಕ್ಲಾಸ್ ಓದಿರುವ ಸಚಿವರೊಬ್ಬರಿಗೆ ಉನ್ನತ ಶಿಕ್ಷಣ ಇಲಾಖೆಯ ಸಚಿವ ಸ್ಥಾನ ನೀಡಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಜೊತೆಗೆ, ಖುದ್ದು ಜಿ ಟಿ ದೇವೇಗೌಡರೇ ಆ ಖಾತೆ ವಹಿಸಿಕೊಳ್ಳಲು ಯಾವುದೇ ಆಸಕ್ತಿ ತೋರಿರಲಿಲ್ಲ.
ಉನ್ನತ ಶಿಕ್ಷಣ ಇಲಾಖೆ ಸಭೆಗೆ ಶಿಕ್ಷಣ ಸಚಿವ ದೇವೇಗೌಡ ಗೈರು
ತನಗೆ ಸಿಕ್ಕ ಖಾತೆಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದ ಜಿಟಿಡಿ, ಕುಮಾರಸ್ವಾಮಿ ಮತ್ತು ಎಚ್ ಡಿ ದೇವೇಗೌಡರ ಜೊತೆ ಅಂತರ ಕಾಯ್ದುಕೊಂಡು 'ನಾಟ್ ರೀಚೇಬಲ್' ಆಗಿದ್ದರು. ಆಗೂಹೀಗೂ ಕುಮಾರಸ್ವಾಮಿ ಜಿಟಿಡಿ ಅವರನ್ನು ಸಮಾಧಾನ ಪಡಿಸಿದ್ದಾಗಿತ್ತು.
ಪ್ರಸಕ್ತ ವರ್ಷದ ಇಂಜಿನಿಯರಿಂಗ್ ಶುಲ್ಕ ನಿಗದಿ ಸಂಬಂಧ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆದಿತ್ತು. ಆ ಸಭೆಯಲ್ಲಿ ಜಿ ಟಿ ದೇವೇಗೌಡರು ಗೈರಾಗಿದ್ದಕ್ಕೆ ಮಾಧ್ಯಮದವರು, 'ಜಿಟಿಡಿ ಉನ್ನತ ಶಿಕ್ಷಣ ಖಾತೆ ನಿರಾಕರಿಸಿದ್ದಾರೆ ಎನ್ನುವ ಮಾಹಿತಿ ಇದೆಯಲ್ವಾ ಸರ್' ಎಂದು ಸಿಎಂ ಅವರನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸುತ್ತಾ ಮುಖ್ಯಮಂತ್ರಿ ಕುಮಾರಸ್ವಾಮಿ, ' ಹೌದು, ಆ ಖಾತೆಯನ್ನು ನಿಮಗೆ ಕೊಡುತ್ತೇನೆ, ನೀವೇ ಇಟ್ಟುಕೊಳ್ಳಿ' ಎಂದು ಮಾಧ್ಯಮದವರನ್ನು ಕಿಚಾಯಿಸಿದ್ದಾರೆ.
ಮಾತು ಮುಂದುವರಿಸುತ್ತಾ ಸಿಎಂ, ಆ ಖಾತೆಯನ್ನು ಸದ್ಯ ನಾನೇ ನಿಭಾಯಿಸುತ್ತೇನೆ. ಜಿ ಟಿ ದೇವೇಗೌಡರಿಗೆ ಯಾವ ಖಾತೆ ನೀಡಬೇಕು ಎನ್ನುವುದನ್ನು ಸದ್ಯದಲ್ಲೇ ಚರ್ಚಿಸಿ, ಅಂತಿಮಗೊಳಿಸಲಾಗುವುದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಖಾತೆ ಬದಲಾವಣೆಗೆ ಜಿಟಿಡಿ ಕ್ಯಾತೆ! ಸರಿಯೇ? ತಪ್ಪೇ?
ವಿದ್ಯಾರ್ಹತೆಯೇ ಒಂದು ಮಾನದಂಡವಲ್ಲ, ಖಾತೆ ನಿಭಾಯಿಸುವ ಆಡಳಿತಾತ್ಮಕ ಶಕ್ತಿ ಇದ್ದರೆ ಸಾಲುವುದಿಲ್ಲವೇ ಎಂದು ಕುಮಾರಸ್ವಾಮಿ, ಜಿಟಿಡಿಯವರಿಗೆ ಉನ್ನತ ಶಿಕ್ಷಣ ಖಾತೆ ವಹಿಸಿದ್ದನ್ನು ಸಮರ್ಥಿಸಿಕೊಂಡಿದ್ದರು.