ಮಲೆನಾಡಿನಲ್ಲಿ ಭಾರೀ ಮಳೆ-ಗಾಳಿ, ಓಮಿನಿ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ
ಚಿಕ್ಕಮಗಳೂರು, ಆಗಸ್ಟ್ 13: ಮಲೆನಾಡಿನಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಕಳೆದ ರಾತ್ರಿ ಚಲಿಸುತ್ತಿದ್ದ ಓಮಿನಿ ಮೇಲೆ ಮರ ಬಿದ್ದು ಇಬ್ಬರು ಗಾಯಗೊಂಡಿದ್ದಾರೆ. ಎನ್.ಆರ್.ಪುರ ತಾಲೂಕಿನ ಗುಡ್ಡೇಹಳ್ಳ ಗ್ರಾಮದ ಬಳಿ ಭಾನುವಾರ ರಾತ್ರಿ ಈ ಘಟನೆ ಸಂಭವಿಸಿದೆ.
ಗಾಯಗೊಂಡವರು ಮಹಮ್ಮದ್ ಮತ್ತು ನಾಗಾರಾಜು ಎಂದು ಗುರುತಿಸಲಾಗಿದ್ದು, ಇವರನ್ನು ಕೊಪ್ಪ ಸರ್ಕಾರಿ ಆಸ್ಪತ್ರೆ ದಾಖಲು ಮಾಡಲಾಗಿದೆ. ಗಾಯಾಳುಗಳು ಎನ್.ಆರ್.ಪುರ ಮೂಲದವರು ಎಂದು ತಿಳಿದು ಬಂದಿದೆ.
ಮಂಗಳೂರು ಹೊರವಲಯದ ಅಡ್ಯಾರ ಬಳಿ ಬಸ್ ಪಲ್ಟಿ: 20 ಜನರಿಗೆ ಗಾಯ
ಕೊಪ್ಪದಿಂದ ಎನ್.ಆರ್.ಪುರಕ್ಕೆ ಬರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದ್ದು, ಎನ್.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮಲೆನಾಡಲ್ಲಿ ಮಳೆ-ಗಾಳಿ ಅಬ್ಬರ ಇನ್ನು ಮುಂದವರೆದಿದೆ. ಐದು ದಿನದಿಂದ ನಿರಂತರವಾಗಿ ಸುರಿಯುತ್ತಿರುವ ದೈತ್ಯ ಮಳೆಗೆ ಮಲೆನಾಡಿಗರ ಬದುಕು ಅಸ್ತವ್ಯಸ್ತವಾಗಿದೆ. ಜಿಲ್ಲೆಯ ನಾಲ್ಕು ತಾಲೂಕಿನಲ್ಲೂ ಕಳೆದ ರಾತ್ರಿ ಜೋರು ಮಳೆ ಸುರಿದ ಪರಿಣಾಮ ಭದ್ರಾ, ತುಂಗಾ, ಹೇಮಾವತಿ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ.
ಕುದುರೆಮುಖ, ಕಳಸ, ಬಾಳೆಹೊನ್ನೂರು, ಕೆರೆಕಟ್ಟೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಮಳೆ ಹಿನ್ನೆಲೆಯಲ್ಲಿ ನಾಲ್ಕು ತಾಲೂಕಿನ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಶ್ರೀರಂಗಯ್ಯ ರಜೆ ಘೋಷಿಸಿದ್ದಾರೆ.