ಜೂನ್ 5ರಿಂದ 16, ಜಿಎಸ್ಟಿಗಾಗಿ ಮುಂದುವರಿದ ಬಜೆಟ್ ಅಧಿವೇಶನ
ಜೂನ್ 30ರ ಮೊದಲು ಜಿಎಸ್ಟಿ ಕಾಯ್ದೆಗೆ ಅನುಮೋದನೆ ಪಡೆಯುವ ಅನಿವಾರ್ಯತೆ ಸರಕಾರದ ಮುಂದಿದೆ. ಇದಕ್ಕಾಗಿ ರಾಜ್ಯ ವಿಧಾನ ಮಂಡಲದ ಅಧಿವೇಶನವನ್ನು ಜೂನ್ 5 ರಿಂದ 16 ರವರೆಗೆ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಬೆಂಗಳೂರು, ಮೇ 18: ರಾಜ್ಯ ವಿಧಾನ ಮಂಡಲದ ಮುಂದುವರೆದ ಆಯವ್ಯಯ ಅಧಿವೇಶನವನ್ನು ಜೂನ್ 5 ರಿಂದ 16 ರವರೆಗೆ ನಡೆಸಲು ರಾಜ್ಯ ಸಚಿವ ಸಂಪುಟವು ತೀರ್ಮಾನಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.[5 ಸಾವಿರ ಡಿ ಗ್ರೂಪ್ ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್]
ಜೂನ್ 30ರವರೆಗಿನ ಬಜೆಟಿಗೆ ಮಾತ್ರ ಬಜೆಟ್ ಅಧಿವೇಶನದಲ್ಲಿ ಒಪ್ಪಿಗೆ ಪಡೆಯಲಾಗಿತ್ತು. ಇದರ ಜತೆಗೆ ಜೂನ್ 30ರ ಮೊದಲು ಜಿಎಸ್ಟಿ ಕಾಯ್ದೆಗೆ ಅನುಮೋದನೆ ಪಡೆಯುವ ಅನಿವಾರ್ಯತೆ ಸರಕಾರದ ಮುಂದಿದೆ. ಜತೆಗೆ ಇದರಲ್ಲೇ ರಿಯಲ್ ಎಸ್ಟೇಟ್ ಮಸೂದೆಯೂ ಅನುಮೋದನೆ ಪಡೆದುಕೊಳ್ಳುವ ಸಾಧ್ಯತೆ ಇದೆ.
ಸಂಪುಟ ಸಭೆಯ ಇತರ ಪ್ರಮುಖ ತೀರ್ಮಾನಗಳು ಹೀಗಿವೆ,
ಕೃಷಿ ವಿಶ್ವವಿದ್ಯಾಲಯಕ್ಕೆ ಜಮೀನು
ಇದೇ ವೇಳೆ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಕ್ಕೆ ಅದೇ ತಾಲ್ಲೂಕಿನ ಇರುವಕ್ಕಿ ಗ್ರಾಮದ ಸಮೀಪ 600 ಎಕರೆ ಜಮೀನು ಮಂಜೂರು ಮಾಡಿ 138.69 ಕೋಟಿ ರೂ ವೆಚ್ಚದಲ್ಲಿ ಎರಡು ವರ್ಷಗಳೊಳಗೆ ಸ್ವಂತ ಕಟ್ಟಡ ನಿರ್ಮಿಸಿಕೊಳ್ಳಲು ಸಚಿವ ಸಂಪುಟ ಸಮ್ಮತಿಸಿದೆ.
ಅಣೆಕಟ್ಟುಗಳ ಪುನಶ್ಚೇತನ
ಸುರಕ್ಷಾ ಮಾನದಂಡಗಳಿಗೆ ಅನುಗುಣವಾಗಿ ಅಮಾರ್ಥ್ಯ, ಆಲಮಟ್ಟಿ, ಕಬಿನಿ, ಕೃಷ್ಣರಾಜ ಸಾಗರ, ಭದ್ರಾ, ಬೆಣ್ಣೆತೊರಾ, ಹಾರಂಗಿ, ಹಿಡ್ಕಲ್ ಹಾಗೂ ಹೇಮಾವತಿ ಸೇರಿದಂತೆ ರಾಜ್ಯದ 22 ಅಣೆಕಟ್ಟುಗಳನ್ನು 571 ಕೋಟಿ ರೂ. ವೆಚ್ಚದಲ್ಲಿ ಪುನಶ್ಚೇತನಗೊಳಿಸಲು ಸಚಿವ ಸಂಪುಟ ನಿರ್ಧರಿಸಲಾಗಿದೆ.
ಪಿಕ್ಅಪ್ ಡ್ಯಾಂ
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕು ಗರ್ಭಗುಡಿ ಹತ್ತಿರ ತುಂಗಭದ್ರಾ ನದಿಗೆ ಅಡ್ಡಲಾಗಿ 51.40 ಕೋಟಿ ರೂ ವೆಚ್ಚದಲ್ಲಿ ಪಿಕ್ಅಪ್ ಡ್ಯಾಂ ಮತ್ತು ಸೇತುವೆ ನಿರ್ಮಿಸಿ 4,500 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಸಂಪುಟ ಅನುಮೋದನೆ ನೀಡಿದೆ.
ಸರ್ಕಾರಿ ಇಂಜಿನಿಯರಿಂಗ್ ಕಾಲೇಜು
ಬೀದರ್ನಲ್ಲಿ 58 ಕೋಟಿ ರೂ. ವೆಚ್ಚದಲ್ಲಿ ಹೊಸ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಅದರಲ್ಲಿ 20 ಕೋಟಿ ರೂ. ಅನುದಾನವನ್ನು ಹೈದರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ 38 ಕೋಟಿ ರೂ ಅನುದಾನವನ್ನು ರಾಜ್ಯ ಸರ್ಕಾರ ಭರಿಸಲಿದೆ.
ರಸ್ತೆ ಅಭಿವೃದ್ಧಿ
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ರಾಜ್ಯ ಹೆದ್ದಾರಿ ಸಂಖ್ಯೆ : 107 ರಲ್ಲಿ ವ್ಯಾಪ್ತಿಯ ಜನ್ನಾಪುರ-ವಣಗೂರು ರಸ್ತೆಯನ್ನು ಹಾನುಬಾಳು - ಆನೆಮಹಲ್ - ಜಾನಕೆರೆ - ಬ್ಯಾಕರವಳ್ಳಿ - ಹೆತ್ತೂರು ರಸ್ತೆಯ ಮಾರ್ಗವಾಗಿ 7 ಕಿ ಮೀ ನಿಂದ 57.84 ಕಿ. ಮೀ ವರೆಗೆ 29.64 ಕೋಟಿ ರೂ. ಪರಿಷ್ಕತ ಅಂದಾಜು ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಲು ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
ವಿಜಯಪುರದಲ್ಲಿ ಮೆಗಾ ಮಾರುಕಟ್ಟೆ
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪುರಸಭೆ ವ್ಯಾಪ್ತಿಯಲ್ಲಿ ಸುಸಜ್ಜಿತ ಮೆಗಾ ಮಾರುಕಟ್ಟೆ ಸಂಕೀರ್ಣವನ್ನು 32.73 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಟಿ. ಬಿ. ಜಯಚಂದ್ರ ಅವರು ವಿವರ ನೀಡಿದ್ದಾರೆ.