ಕೊರೊನಾ 3ನೇ ಅಲೆ ನಿರ್ವಹಣೆಗೆ ಮಾನವ ಸಂಪನ್ಮೂಲ ಹೆಚ್ಚಿಸವಂತೆ ಆಸ್ಪತ್ರೆಗಳ ಮನವಿ
ಬೆಂಗಳೂರು, ಆಗಸ್ಟ್ 25: ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಎದುರಿಸಲು ಸಿದ್ಧತೆಗಳು ನಡೆಯುತ್ತಿವೆ. ಸಂಭಾವ್ಯ ಕೊರೊನಾ ಮೂರನೇ ಅಲೆ ಎದುರಿಸಲು ಮಾನವ ಸಂಪನ್ಮೂಲವನ್ನು ಹೆಚ್ಚಿಸಬೇಕು ಎಂದು ಆಸ್ಪತ್ರೆಗಳು ಸರ್ಕಾರದ ಬಳಿ ಮನವಿ ಮಾಡಿವೆ.
ಮಾನವಶಕ್ತಿ ಜೊತೆಗೆ ಆಸ್ಪತ್ರೆ ಇದೀಗ ಮತ್ತೊಂದು ಸಮಸ್ಯೆಯನ್ನೂ ಎದುರಿಸುತ್ತಿದೆ. ಒಂದು ವರ್ಷದ ವೈದ್ಯಕೀಯ ಸೇವೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕಾಗಿರುವುದರಿಂದ ಸಾಕಷ್ಟು ಎಂಬಿಬಿಎಸ್ ವಿದ್ಯಾರ್ಥಿಗಳು ರಜೆ ಪಡೆದುಕೊಂಡು ಪಿಜಿ ಪರೀಕ್ಷೆಗಳನ್ನು ಬರೆಯಲು ಹೋಗಿದ್ದಾರೆ.
ಬೆಂಗಳೂರಿಗೆ ಸದ್ಯಕ್ಕಿಲ್ಲ ಕೋವಿಡ್ 3ನೇ ಅಲೆಯ ಭೀತಿ
ಎಂಬಿಬಿಎಸ್ ಪ್ರಮಾಣಪತ್ರವಿಲ್ಲದೆ ಪಿಜಿ ಸೀಟು ಪಡೆಯುವುದು (ಸಮಸ್ಯೆಯಾಗಿದೆ. ಸೇವೆಯನ್ನು ನಂತರ ಪೂರ್ಣಗೊಳಿಸುತ್ತೇವೆಂದು ಹೇಳುತ್ತಿದ್ದಾರೆ. ಆದರೆ, ಅದರ ಅಗತ್ಯತೆ ಈಗ ಹೆಚ್ಚಾಗಿದೆ. ಈ ಕುರಿತು ಸರ್ಕಾರ ಮಾರ್ಗಸೂಚಿ ಹೊರಡಿಸುವ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ.
ಬೌರಿಂಗ್ ಆಸ್ಪತ್ರೆಯ ವೈದ್ಯರು ಮಾತನಾಡಿ, ಚರಕ ಆಸ್ಪತ್ರೆಯಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ವೈದ್ಯರಿಗೆ ಆಹ್ವಾನ ನೀಡಿದಾಗ, ಅತ್ಯಂತ ಕಡಿಮೆ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಗುತ್ತಿಗೆಯ ಅವಧಿ ಕಡಿಮೆಯಾಗಿರುವುದು ಹಾಗೂ ವೇತನ ಕಡಿಮೆ, ಕೋವಿಡ್ ಸೋಂಕಿನ ಭಯದಿಂದ ಹೆಚ್ಚು ಮಂದಿ ಮುಂದಕ್ಕೆ ಬರಲಿಲ್ಲ ಎಂದು ತಿಳಿಸಿದ್ದಾರೆ.
ಆಸ್ಪತ್ರೆಗಳಿಗೆ ಈಗಾಗಲೇ ಎರಡು ಅಲೆಗಳ ಅನುಭವಗಳಾಗಿದ್ದು, ಇದರ ಆಧಾರದ ಮೇಲೆ ಕೆಲವು ಆಸ್ಪತ್ರೆಗಳು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದಾರೆ. ಜಯನಗರ ಜನರಲ್ ಆಸ್ಪತ್ರೆಗೆ 30 ಮಂದಿ ಇನ್ಟೆನ್ಸಿವಿಸ್ಟ್, ಫಿಜಿಶಿಯನ್, ಅರಿವಳಿಕೆ ತಜ್ಞರ ಅಗತ್ಯವಿದೆ. ಇನ್ನು ಕೆಸಿ ಜನರಲ್ ಆಸ್ಪತ್ರೆಯಲ್ಲಿ ಪ್ರಸ್ತುತ ಇಬ್ಬರು ಫಿಜಿಶಿಯನ್ ಮತ್ತು ಒಬ್ಬ ಅರಿವಳಿಕೆ ತಜ್ಞರಿದ್ದು, ಇನ್ನೂ ಐವರು ಫಿಜಿಶಿಯನ್, ಅರಿವಳಿಕೆ ತಜ್ಞರು ಮತ್ತು ಮಕ್ಕಳ ತಜ್ಞರ ಅಗತ್ಯವಿದೆ ಎಂದು ತಿಳಿದುಬಂದಿದೆ.
ಕೊರೊನಾ ಎರಡನೇ ಅಲೆ ತೀವ್ರತೆ ಕಡಿಮೆಯಾದ ಹಿನ್ನೆಲೆಯಲ್ಲಿ ಅನೇಕ ಆಸ್ಪತ್ರೆಗಳು ಸಿಬ್ಬಂದಿಗಳ ಸಂಖ್ಯೆಯನ್ನು ಇಳಿಸಿಕೊಂಡಿತ್ತು. ಆದರೆ, ಮೂರನೇ ಅಲೆ ಆತಂಕ ಶುರುವಾಗಿರುವ ಹಿನ್ನೆಲೆಯಲ್ಲಿ ಇದೀಗ ಮತ್ತೆ ಸಿಬ್ಬಂದಿಗಳ ನೇಮಕಾತಿಯನ್ನು ಆರಂಭಿಸಲು ಮುಂದಾಗಿವೆ ಎಂದು ವರದಿಗಳು ತಿಳಿಸಿವೆ.
ಕೊರೋನಾ ಎರಡನೇ ಅಲೆ ಮರೆಯಲಾಗದ್ದು, ಸಾಕಷ್ಟು ಆಸ್ಪತ್ರೆಗಳು ಸಂಕಷ್ಟಕ್ಕೆ ಸಿಲುಕಿದ್ದವು ಎಂದು 10ಕ್ಕೂ ಹೆಚ್ಚು ಸಿಬ್ಬಂದಿಗಳ ಆಗತ್ಯವಿರುವ ಸಿವಿ ರಾಮನ್ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದ್ದಾರೆ.
ಕೋವಿಡ್ ರೋಗಿಗಳು ಕೊರೊನಾ ಸೋಂಕು ಅಷ್ಟೇ ಅಲ್ಲದೆ, ಇತರೆ ಸಮಸ್ಯೆಗಳಿಂದಲೂ ಬಳಲುತ್ತಿರುತ್ತಾರೆ. ಡಯಾಲಿಸಿಸ್ ಅಗತ್ಯವಿರುವ ಸೋಂಕು ಪೀಡಿತ ರೋಗಿಗಳಿಗೆ ಇನ್ಸ್ಟಿಟ್ಯೂಟ್ ಆಫ್ ನೆಫ್ರೋ ಯೂರೋಲಾಜಿಯಲ್ಲಿ 50 ಹಾಸಿಗೆಗಳು, ನಿಮ್ಹಾನ್ಸ್ನಲ್ಲಿ 50 ಹಾಸಿಗೆಗಳು ಮತ್ತು ಸೋಂಕು ಪೀಡಿತ ಹೃದಯ ರೋಗಿಗಳಿಗೆ ಜಯದೇವ ಆಸ್ಪತ್ರೆಯಲ್ಲಿ 50 ಹಾಸಿಗೆಗಳ ಅಗತ್ಯವಿದೆ.
ಜನರಲ್ ಆಸ್ಪತ್ರೆಗಳಲ್ಲಿ ತಜ್ಞರ ವೈದ್ಯರ ಕೊರತೆಗಳಿದ್ದು, ತಜ್ಞರ ವೈದ್ಯರ ನೇಮಕಾತಿ ಅಗತ್ಯವಿದೆ ಎಂದು ಜಯನಗರ ಜನರಲ್ ಆಸ್ಪತ್ರೆಯ ವೈದ್ಯರು 'ಇಂಡಿಯನ್ ಎಕ್ಸ್ಪ್ರೆಸ್'ಗೆ ತಿಳಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿಶೇಷ ಆಯುಕ್ತ (ಆರೋಗ್ಯ) ಡಿ. ರಂದೀಪ್ ಈ ಕುರಿತು ಮಾತನಾಡಿದ್ದಾರೆ, "ಮೂರನೇ ಅಲೆ ಬಂದರೆ ಅದು ಕೊರೊನಾ ವೈರಾಣುವಿನ ಹೊಸ ರೂಪಾಂತರ ತಳಿಯಿಂದ ಎಂದು ತಜ್ಞರು ಹೇಳಿದ್ದಾರೆ. ಬೆಂಗಳೂರಲ್ಲಿ ಸದ್ಯಕ್ಕೆ ಮೂರನೇ ಅಲೆಯ ನಿರೀಕ್ಷೆ ಸದ್ಯಕ್ಕೆ ಇಲ್ಲ" ಎಂದರು.
"ಬೆಂಗಳೂರು ನಗರದಲ್ಲಿ ಡೆಲ್ಟಾ ಪ್ಲಸ್ ತಳಿಯಿಂದ ಸೋಂಕು ಹರಡುವಿಕೆ ಹೆಚ್ಚಾದರೆ ಅದು ಮೂರನೇ ಅಲೆ ಎಂದರ್ಥ. ಎಲ್ಲಾ ವಲಯಗಳಲ್ಲಿ ಕೋವಿಡ್ ಪರೀಕ್ಷೆಗೆ ಬಂದ ಶೇ 10ರಷ್ಟು ಮಾದರಿಗಳ ವೈರಾಣುವಿನ ರೂಪಾಂತರಿ ತಳಿ ಪತ್ತೆ ಹಚ್ಚುವ ಸಲುವಾಗಿ ಜೀನೋಮ್ ಸೀಕ್ವೆನ್ಸಿಂಗ್ಗೆ ಒಳಪಡಿಸಲಾಗುತ್ತಿದೆ" ಎಂದು ಆಯುಕ್ತರು ವಿವರಣೆ ನೀಡಿದರು.
"ಜೀನೋಮ್ ಸೀಕ್ವೆನ್ಸಿಂಗ್ ವೇಳೆ ಶೇ 75ರಷ್ಟು ವೈರಾಣುವಿನ ಡೆಲ್ಟಾ ರೂಪಾಂತರಿ ಕಂಡುಬಂದಿದೆ. ಡೆಲ್ಟಾ ಪ್ಲಸ್ ರೂಪಾಂತರಿ ಮೂರು ಪ್ರಕರಣದಲ್ಲಿ ಮಾತ್ರ ಲಭಿಸಿದೆ. ಇದರ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದರೆ ಮೂರನೇ ಅಲೆ ಕಂಡುಬಂದಿದೆ ಎನ್ನಬಹುದು. ಸದ್ಯಕ್ಕೆ ಮೂರನೇ ಅಲೆ ಶುರುವಾಗಿದೆ ಎನ್ನಲು ಯಾವುದೇ ಆಧಾರವಿಲ್ಲ" ಎಂದು ಆಯುಕ್ತರು ಸ್ಪಷ್ಟಪಡಿಸಿದರು.
Recommended Video
ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಿ. ರಂದೀಪ್, "ಕೋವಿಡ್ 3ನೇ ಅಲೆ ಕಾಣಿಸಿಕೊಳ್ಳುವ ಸಮಯದ ಖಚಿತತೆ ಇಲ್ಲ. ಅಕ್ಟೋಬರ್ ಅಥವ ನವೆಂಬರ್ನಲ್ಲಿ ಕಂಡುಬರಬಹುದು. ಸೆಪ್ಟೆಂಬರ್ ಅಂತ್ಯದಲ್ಲೂ ಕಾಣಿಸಿಕೊಳ್ಳಬಹುದು. ನಾವು ಮೂರನೇ ಅಲೆ ಬಂದರೆ ಬೇಕಾದ ಸಿದ್ಧತೆಗಳ ಕಡೆ ಗಮನಹರಿಸಿದ್ದೇವೆ. ಮಕ್ಕಳ ಚಿಕಿತ್ಸೆಗೆ ಎಷ್ಟು ಹಾಸಿಗೆ ಲಭ್ಯವಿದೆ?, ಆಕ್ಸಿಜನ್ ಪೂರೈಕೆ ಇರುವ ಬೆಡ್ಗಳು ಎಷ್ಟು?, ಕೋವಿಡ್ ಆರೈಕೆ ಕೇಂದ್ರಗಳು ಸಿದ್ಧವಾಗಿದೆಯೇ? ಮುಂತಾದವುಗಳನ್ನು ಪರಿಶೀಲಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.