ಕಾಂಗ್ರೆಸ್ ಸದಸ್ಯತ್ವ ಅಭಿಯಾನ: 5 ರೂ. ಕೊಟ್ಟು ಪಕ್ಷ ಸೇರಬಹುದು
ಬೆಂಗಳೂರು, ನ.9: ಭಾರತೀಯ ಕಾಂಗ್ರೆಸ್ 12 ವರ್ಷಗಳ ನಂತರ ಸದಸ್ಯತ್ವ ಅಭಿಯಾನ ಆರಂಭಿಸಿದೆ. ಸದಸ್ಯತ್ವ ಪಡೆಯಲು 5 ರೂ. ಶುಲ್ಕ ನಿಗದಿಪಡಿಸಿದೆ.
ಈ ಕುರಿತು ಮಂಗಳವಾರ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, " ಭಾರತೀಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಎಲ್ಲರಿಗೂ ಮುಕ್ತ ಸದಸ್ಯತ್ವ ನೀಡಲು ನಿರ್ಧರಿಸಲಾಗಿದೆ. 12 ವರ್ಷಗಳ ಬಳಿಕ ಸದಸ್ಯತ್ವ ಹಮ್ಮಿಕೊಳ್ಳಲಾಗಿದೆ" ಎಂದು ಹೇಳಿದರು.
ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಚುನಾವಣೆ ಸೋತ ಖರ್ಗೆ, ಸಿದ್ದರಾಮಯ್ಯ!
ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಜನ್ಮದಿನದ ಅಂಗವಾಗಿ ನ.14ರಂದು ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ. ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಅಭಿಯಾನ ಆರಂಭಿಸುತ್ತಿದ್ದು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಚಾಲನೆ ನೀಡಲಿದ್ದಾರೆ. ರಾಜ್ಯದ ಎಲ್ಲ ನಾಯಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
5 ರೂ. ಶುಲ್ಕ ನಿಗದಿ:
ಪ್ರತಿಯೊಬ್ಬರೂ 5 ರೂ. ನೀಡಿ ಸದಸ್ಯತ್ವ ಪಡೆಯಬೇಕು. ಆನ್ಲೈನ್ ಮತ್ತು ಆಫ್ಲೈನ್ನಲ್ಲಿಯೂ ಸದಸ್ಯತ್ವ ನೋಂದಣಿಗೆ ವ್ಯವಸ್ಥೆ ಮಾಡಲಾಗಿದೆ. ಸಕ್ರಿಯ ಸದಸ್ಯರಾಗಲು 100 ಜನರನ್ನು ಸದಸ್ಯರನ್ನಾಗಿ ಮಾಡಬೇಕು ಮತ್ತು 100 ರೂ. ಶುಲ್ಕ ಕಟ್ಟಬೇಕು ಎಂದು ಹೇಳಿದರು.
ಹಳೆಯ ಸದಸ್ಯರು ಕೂಡ ಈಗ ತಮ್ಮ ಸದಸ್ಯತ್ವ ನವೀಕರಣ ಮಾಡಿಸಿಕೊಳ್ಳಬಹುದು. ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಎನ್ಎಸ್ಯುಐ, ರೈತ ಘಟಕ ಸೇರಿದಂತೆ ಎಲ್ಲ ಘಟಕಗಳಲ್ಲಿ ಮತ್ತೆ ಸದಸ್ಯತ್ವ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತಿದ್ದೇವೆ. ದೇಶಕ್ಕೆ ಕಾಂಗ್ರೆಸ್ ಅನಿವಾರ್ಯ. ಕಾಂಗ್ರೆಸ್ ಇತಿಹಾಸವೇ ದೇಶದ ಇತಿಹಾಸ ಎಂದು ಮನದಟ್ಟು ಮಾಡಬೇಕಾಗಿದೆ. ತ್ರಿವರ್ಣ ಧ್ವಜ ಹಾಕಿಕೊಳ್ಳುವ ಅವಕಾಶ ನೀಡಲಾಗಿದೆ. ಕಾಂಗ್ರೆಸ್ ಸಿದ್ಧಾಂತದ ಮೇಲೆ ನಂಬಿಕೆ ಇರುವವರು ಈ ಸದಸ್ಯತ್ವ ಪಡೆಯಬಹುದು ಎಂದು ಶಿವಕುಮಾರ್ ಹೇಳಿದರು.
ಬಾಂಬೆ ಫ್ರೆಂಡ್ಸ್ ಕಾಂಗ್ರೆಸ್ ಸೇರ್ತಾರ?:
ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿದವರಲ್ಲಿ ಮತ್ತೆ ಕೆಲವರು ಕಾಂಗ್ರೆಸ್ಗೆ ಬರಲು ಸಿದ್ಧರಾಗಿದ್ದಾರೆ. ಅಂತವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುತ್ತೀರಾ? ಎಂಬ ಪ್ರಶ್ನೆಗೆ, "ಪಕ್ಷ ಸೇರಲು ಬಯಸುವವರು ಅರ್ಜಿ ಹಾಕಲಿ. ಅಲ್ಲಂ ವೀರಭದ್ರಪ್ಪ ಅವರ ನೇತೃತ್ವದ ಸಮಿತಿ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ'' ಎಂದರು.
ಪಕ್ಷ ಬಿಟ್ಟು ಹೋಗಿರುವವರು, ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಮೇಲೆ ನಂಬಿಕೆ ಇರುವವರು, ಪಕ್ಷ ಸೇರಲು ಬಯಸುವವರು ಹೀಗೆ ಎಲ್ಲರಿಗೂ ಮುಕ್ತ ಅವಕಾಶ ಮಾಡಿಕೊಡಲಾಗುತ್ತದೆ. ಅಧಿಕಾರಕ್ಕಾಗಿ ಯಾವುದೇ ರೀತಿಯ ಷರತ್ತು ಹಾಕುವಂತಿಲ್ಲ. ಷರತ್ತು ಹಾಕುವವರಿಗೆ ನಮ್ಮಲ್ಲಿ ಅವಕಾಶವೂ ಇಲ್ಲ ಎಂದು ಹೇಳಿದರು.
ಜಾತ್ಯಾತೀತ ಜನತಾದಳ ತೊರೆದು ಕಾಂಗ್ರೆಸ್ ಸೇರಿದ ಬಿ. ದೇವೇಂದ್ರಪ್ಪ ಹಾಗೂ ಇತರ ಮುಖಂಡರನ್ನು ಡಿ.ಕೆ. ಶಿವಕುಮಾರ್ ಇದೇ ಸಂದರ್ಭದಲ್ಲಿ ಪಕ್ಷಕ್ಕೆ ಬರ ಮಾಡಿಕೊಂಡರು.
ಬಿಟ್ಕಾಯಿನ್: ಕಾಂಗ್ರೆಸ್ನವರು ಭಾಗಿಯಾಗಿದ್ದರೆ ಬಂಧಿಸಲಿ
ಬಿಟ್ಕಾಯಿನ್ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್, 'ಕಾಂಗ್ರೆಸ್ ಪಕ್ಷದ ನಾಯಕರು ಯಾವುದೇ ಅವ್ಯವಹಾರದಲ್ಲಿ ತೊಡಗಿದ್ದರೆ ಅವರನ್ನು ಕಾನೂನು ಪ್ರಕಾರ ಗಲ್ಲಿಗೆ ಹಾಕಲಿ. ನಮ್ಮಿಂದ ಯಾವುದೇ ಅಭ್ಯಂತರವಿಲ್ಲ. ಬಿಟ್ಕಾಯಿನ್ ವಿಚಾರವಾಗಿ ಪೊಲೀಸ್ ದಾಖಲೆ ಮಾಡಿರುವ ಎಫ್ಐಆರ್, ಮಾಧ್ಯಮಗಳಲ್ಲಿ ಕೇಳಿ ಬಂದಿರುವ ಹೆಸರುಗಳು, ಪ್ರಧಾನಮಂತ್ರಿಗಳಿಗೆ ಹೋಗಿರುವ ದೂರುಗಳು, ಯಾರನ್ನು ವಿವಿಧ ಪ್ರಕರಣದಲ್ಲಿ ಬಂಧಿಸಿ ವಿಚಾರಣೆ ಮಾಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಬಹಿರಂಗ ಮಾಡಲಿ. ಕಾಂಗ್ರೆಸ್ ಪಕ್ಷದ ನಾಯಕರು ಇದರಲ್ಲಿ ಭಾಗಿಯಾಗಿದ್ದರೆ ಅವರನ್ನು ಕೂಡ ಬಂಧಿಸಿ ವಿಚಾರಣೆ ನಡೆಸಲಿ. ನಾವು ಯಾರ ಬೆಂಬಲಕ್ಕೂ ನಿಲ್ಲುವುದಿಲ್ಲ ಎಂದು ಹೇಳಿದರು.
ಜಾಮೀನು ಪಡೆದಿದ್ದ ಶ್ರೀಕಿ ಅವರನ್ನು ಮತ್ತೆ ಬಂಧಿಸಿರುವುದರ ಹಿಂದೆ ಬೇರೆಯವರ ಕೈವಾಡ ಇದೆಯೇ ಎಂಬ ಪ್ರಶ್ನೆಗೆ, 'ಈ ಪ್ರಕರಣದಲ್ಲಿ ಎಷ್ಟು ಎಫ್ಐಆರ್ ಬಂದಿದೆ. ಯಾರ ಮೇಲೆ ಪ್ರಕರಣ ದಾಖಲಾಗಿದೆ, ಹೈಕೋರ್ಟ್ ನಲ್ಲಿದ್ದ ಪ್ರಕರಣ ಹಿಂಪಡೆದಿದ್ದು ಯಾಕೆ ಎಂಬ ವಿಚಾರಗಳನ್ನು ಬಹಿರಂಗ ಪಡಿಸಲಿ. ಸಮಯ ಬಂದಾಗ ಪಕ್ಷ ಚರ್ಚೆ ಮಾಡಿ ತನ್ನ ತೀರ್ಮಾನ ಕೈಗೊಳ್ಳಲಿದೆ. ಸರ್ಕಾರ ಈ ಪ್ರಕರಣದಲ್ಲಿ ಪಂಚನಾಮದಿಂದ ಹಿಡಿದು ಇಡಿಗೆ ಪ್ರಕರಣ ವಹಿಸಿರುವವರೆಗೂ ಸಂಪೂರ್ಣ ಮಾಹಿತಿ ನೀಡಲಿ' ಎಂದು ಉತ್ತರಿಸಿದರು.
Recommended Video