ರಾಜಕೀಯ ಜೀವನದ ಅಂತಿಮ ದಿನಗಳಲ್ಲಿ ತೀವ್ರ ಮನನೊಂದಿದ್ದ ಜಾಫರ್ ಷರೀಫ್
ರಾಜಕೀಯ ಜೀವನದ ಅಂತಿಮ ದಿನಗಳಲ್ಲಿ ತೀವ್ರ ಮನನೊಂದಿದ್ದ ಜಾಫರ್ ಷರೀಫ್
ರಾಜ್ಯ ಮತ್ತು ದೇಶ ರಾಜಕಾರಣದ ಮತ್ತೊಂದು ಪ್ರಮುಖ ಕೊಂಡಿ ಕಳಚಿಕೊಂಡಿದೆ. ಮಾಜೀ ಕೇಂದ್ರ ರೈಲ್ವೇ ಸಚಿವ ಸಿ ಕೆ ಜಾಫರ್ ಷರೀಫ್, ಭಾನುವಾರ (ನ 25) ನಿಧನಹೊಂದಿದ್ದಾರೆ. ಬ್ರಾಡ್ ಗೇಜ್ ರೈಲನ್ನು ದೇಶಕ್ಕೆ ಪರಿಚಯಿಸಿದ ಖ್ಯಾತಿಯ ಷರೀಫ್, ಕೊಂಕಣ ರೈಲ್ವೇಯ ಕಾರಣಕರ್ತರಲ್ಲಿ ಒಬ್ಬರು ಕೂಡಾ.
ಮಾಜಿ ಸಿಎಂ ನಿಜಲಿಂಗಪ್ಪ ಅವರ ಗರಡಿಯಲ್ಲಿ ರಾಜಕೀಯ ಜೀವನ ಆರಂಭಿಸಿದ್ದ ಷರೀಫ್ ಸಾಹೇಬ್ರು, ರೈಲ್ವೇ ವಿಚಾರದಲ್ಲಿ ಕರ್ನಾಟಕಕ್ಕೆ ನೀಡಿದ ಕೊಡುಗೆ ಅಪಾರ. ಎಂಟು ಬಾರಿಯ ಸಂಸದರಾಗಿದ್ದ ಷರೀಫ್, ಇತ್ತೀಚಿನ ಕೆಲವು ವರ್ಷಗಳಲ್ಲಿ ಸಕ್ರಿಯ ರಾಜಕಾರಣದಿಂದ ದೂರವಿದ್ದರು. (ಕೇಂದ್ರದ ಮಾಜಿ ಸಚಿವ ಜಾಫರ್ ಷರೀಫ್ ನಿಧನ)
ಮೊಮ್ಮಗ, ಅಬ್ದುಲ್ ರೆಹಮಾನ್ ಷರೀಫ್ ಅವರಿಗೆ ಸೂಕ್ತವಾದ ರಾಜಕೀಯ ವೇದಿಕೆಯನ್ನು ರೂಪಿಸಲಾಗಲಿಲ್ಲ ಎನ್ನುವ ನೋವು, ಜಾಫರ್ ಷರೀಫ್ ಅವರಲ್ಲಿ ಕಾಡುತ್ತಿತ್ತು. ಇದನ್ನು, ಹಲವು ಬಾರಿ ಷರೀಫ್ ಅವರು ಬಹಿರಂಗವಾಗಿಯೇ ಹೇಳಿಕೊಂಡಿದ್ದರು.
ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಮುಖಂಡರಾಗಿದ್ದ ಜಾಫರ್ ಷರೀಫ್, ಇಂದಿರಾ ಗಾಂಧಿಯವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದವರು. ಕಾಂಗ್ರೆಸ್ ಪಕ್ಷ ಇತ್ತೀಚಿನ ದಿನಗಳಲ್ಲಿ ಬದಲಾಗಿದೆ ಎಂದೂ ದೂರಿದ್ದ ಷರೀಫ್ ಅವರು, ಇನ್ನೇನು ಜೆಡಿಎಸ್ ಪಕ್ಷಕ್ಕೆ ಸೇರುವವರಿದ್ದರು. (ಮಾಜಿ ಸಚಿವ ಜಾಫರ್ ಷರೀಫ್ ಅಗಲಿಕೆಗೆ ಗಣ್ಯರ ಕಂಬನಿ)
2014ರ ಲೋಕಸಭಾ ಚುನಾವಣೆಯ ವೇಳೆ, ಪಕ್ಷದ ಟಿಕೆಟ್ ಸಿಗಲಿಲ್ಲ ಎನ್ನುವ ವಿಚಾರದಲ್ಲಿ, ದೇವೇಗೌಡರನ್ನು ಭೇಟಿಯಾಗಿದ್ದ ಷರೀಫ್, ಪಕ್ಷ ತೊರೆಯಲು ಸಜ್ಜಾಗಿದ್ದರು. ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಷರೀಫ್ ಬಯಸಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಮುಖಂಡರು, ಷರೀಫ್ ಅವರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಸಿದ್ದರಾಮಯ್ಯನವವರ ಜೊತೆ ಹಳಸಿದ್ದ ಸಂಬಂಧ, ಮುಂದೆ ಓದಿ..
ಸಿದ್ದರಾಮಯ್ಯನವರ ವಿರುದ್ದ ತೀವ್ರ ಸಿಟ್ಟಾಗಿದ್ದ ಷರೀಫ್
2014ರ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದ ನಂತರ, ಕಾಂಗ್ರೆಸ್ ಹೈಕಮಾಂಡ್ ಜೊತೆ ಸಿಟ್ಟಾಗಿದ್ದ ಜಾಫರ್ ಷರೀಫ್ ನಂತರ, ರಾಜ್ಯ ರಾಜಕಾರಣದಲ್ಲಿ ಅಷ್ಟಾಗಿ ಸಕ್ರಿಯವಾಗಿರಲಿಲ್ಲ. ಮೊಮ್ಮಗನಿಗೆ ಸೂಕ್ತ ರಾಜಕೀಯ ವೇದಿಕೆ ಕಲ್ಪಿಸಲು ತಮ್ಮನ್ನು ತೊಡಗಿಸಿಕೊಂಡಿದ್ದಾಗ ಮತ್ತು ಅದೂ ಆಗದಿದ್ದಾಗ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ತೀವ್ರ ಸಿಟ್ಟಾಗಿದ್ದರು.
ಸಿದ್ದರಾಮಯ್ಯ ಜಾತಿ ರಾಜಕಾರಣ ಮಾಡುತ್ತಿದ್ದಾರೆ
ಸಿದ್ದರಾಮಯ್ಯ ಜಾತಿ ರಾಜಕಾರಣ ಮಾಡುತ್ತಿದ್ದಾರೆಂದು ಬಹಿರಂಗವಾಗಿಯೇ ಇತ್ತೀಚಿನ ಅಸೆಂಬ್ಲಿ ಚುನಾವಣೆಯ ವೇಳೆ ಆಕ್ರೋಶ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷ ನನ್ನ ಮೊಮ್ಮಗನನ್ನು ಸಂಪೂರ್ಣ ಕಡೆಗಣಿಸುತ್ತಿದೆ. ಇಷ್ಟು ದುರಂಹಕಾರವಿರುವ ಮುಖ್ಯಮಂತ್ರಿಯನ್ನು ಇದುವರೆಗಿನ ನನ್ನ ರಾಜಕೀಯ ಜೀವನದಲ್ಲಿ ನೋಡಿರಲಿಲ್ಲ ಎಂದು ಸಿದ್ದರಾಮಯ್ಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು.
ತಮ್ಮವರಿಗೇ ಟಿಕೆಟ್ ನೀಡಲು ಸಿದ್ದರಾಮಯ್ಯ ಫೈನಲ್ ಮಾಡಿದ್ದಾರೆ
ರಾಜ್ಯ ರಾಜಕೀಯದಲ್ಲಿ ಸಿದ್ದರಾಮಯ್ಯನವರೇ ಹೈಕಮಾಂಡ್, ತಮ್ಮ ಜಾತಿಯವರಿಗೇ ಸಿದ್ದರಾಮಯ್ಯ ಟಿಕೆಟ್ ನೀಡುತ್ತಿದ್ದಾರೆ. ಹೊಸಕೋಟೆಯಲ್ಲಿ ಎಂಟಿಬಿ, ಹೆಬ್ಬಾಳದಲ್ಲಿ ಭೈರತಿ, ಸುರೇಶ್, ಕೆ ಆರ್ ಪುರಂನಲ್ಲಿ ಭೈರತಿ ಬಸವರಾಜ್ ಎಲ್ಲರೂ ಕುರುಬರು. ತಮ್ಮವರಿಗೇ ಟಿಕೆಟ್ ನೀಡಲು ಸಿದ್ದರಾಮಯ್ಯ ಫೈನಲ್ ಮಾಡಿದ್ದಾರೆ ಎನ್ನುವ ಹೇಳಿಕೆಯನ್ನು ಜಾಫರ್ ಷರೀಫ್ ನೀಡಿದ್ದರು. ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾದಾಗ, ತಮ್ಮ ಹೇಳಿಕೆಯನ್ನು ಷರೀಫ್ ಹಿಂದಕ್ಕೆ ಪಡೆದಿದ್ದರು.
ಜಾಫರ್ ಷರೀಫ್ ಅವರ ಮೊಮ್ಮಗ ಅಬ್ದುಲ್ ರೆಹಮಾನ್ ಷರೀಫ್
ಜಾಫರ್ ಷರೀಫ್ ಅವರ ಮೊಮ್ಮಗ ಅಬ್ದುಲ್ ರೆಹಮಾನ್ ಷರೀಫ್ ಬೆಂಗಳೂರು ನಗರ ವ್ಯಾಪ್ತಿಯ ಹೆಬ್ಬಾಳ ಕ್ಷೇತ್ರದ ಟಿಕೆಟ್ ಬಯಸಿದ್ದರು. ಆದರೆ, ಕಾಂಗ್ರೆಸ್ ಭೈರತಿ ಸುರೇಶ್ ಅವರಿಗೆ ಟಿಕೆಟ್ ನೀಡಿತ್ತು. ಇದಕ್ಕೂ ಮೊದಲು, 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧಿಸಿದ್ದ ಷರೀಫ್ ಮೊಮ್ಮಗ ಸೋಲು ಅನುಭವಿಸಿದ್ದರು. ಇದಾದ ನಂತರ, ಬಿಜೆಪಿ ಶಾಸಕರಾಗಿದ್ದ ಜಗದೀಶ್ ಕುಮಾರ್ ನಿಧನದ ನಂತರ ನಡೆದ ಉಪಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಿ, ಷರೀಫ್ ಮೊಮ್ಮಗ ಸೋಲು ಅನುಭವಿಸಿದ್ದರು.
ಅಧಿಕಾರ ರಚಿಸಲು ಆಗದೇ ಇದ್ದಿದ್ದಕ್ಕೆ ಸಿದ್ದರಾಮಯ್ಯನವರನ್ನೇ ದೂರಿದ್ದರು
ಒಟ್ಟಾರೆಯಾಗಿ, ತಮ್ಮ ರಾಜಕೀಯ ಜೀವನದ ಕೊನೆಯ ದಿನಗಳನ್ನು ಜಾಫರ್ ಷರೀಫ್ ನೆಮ್ಮದಿಯಿಂದ ಕಳೆದಿರಲಿಲ್ಲ. ಬದಲಾಗುತ್ತಿರುವ ಕಾಂಗ್ರೆಸ್ ಹೈಕಮಾಂಡ್ ಕಾರ್ಯಶೈಲಿ, ಸಿದ್ದರಾಮಯ್ಯನವರ ವರ್ತನೆಯ ಬಗ್ಗೆ ಸಿಟ್ಟಾಗಿದ್ದ ಜಾಫರ್ ಷರೀಫ್, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ತಮ್ಮ ಸ್ವಂತ ಬಲದಿಂದ ಅಧಿಕಾರ ರಚಿಸಲು ಆಗದೇ ಇದ್ದಿದ್ದಕ್ಕೆ ಸಿದ್ದರಾಮಯ್ಯನವರನ್ನೇ ದೂರಿದ್ದರು.