ಚಿಂತಾಮಣಿ ತಾಲ್ಲೂಕಿನ ಪೆದ್ದೂರಿನಲ್ಲಿ ’ಜನಪದ ಸಂಭ್ರಮ’
ಬೆಂಗಳೂರು, ಜೂನ್ 22 : ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಪೆದ್ದೂರಿನಲ್ಲಿ ಜೂನ್ 25 ಹಾಗೂ 26ರಂದು ಹಮ್ಮಿಕೊಳ್ಳಲಾಗಿರುವ 'ಜನಪದ ಸಂಭ್ರಮ'ದಲ್ಲಿ ಹೆಚ್ಚು ಕಲಾಸಕ್ತರು, ಸಾರ್ವಜನಿಕರು ಭಾಗವಹಿಸುವಂತೆ ಸರ್ವೋಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳಾದ ವಿ. ಗೋಪಾಲಗೌಡ ಕರೆ ನೀಡಿದ್ದಾರೆ.
ಅವರು ಬುಧವಾರ ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದರು. ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತ ಚಿಕ್ಕಬಳ್ಳಾಪುರ ಮತ್ತು ಕೋಲಾರ, ದೂರದರ್ಶನ ಇವುಗಳ ಸಹಯೋಗದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜನಪದ ಕಲೆಗಳ ಸಿರಿಯನ್ನು ಜನತೆಗೆ ತೋರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಲವತ್ತು ವರ್ಷಗಳಿಂದ ಕಂಡ ಕನಸು ಈಗ ನನಸಾಗಿದೆ. ರಾಜ್ಯದ ವಿವಿಧೆಡೆಗಳಿಂದ ಕಲಾವಿದರು ಆಗಮಿಸಿ ಜಾನಪದ ಕಲಾ ಸೊಬಗನ್ನು ಪ್ರದರ್ಶಿಸಲಿದ್ದಾರೆ. ಕಲಾವಿದರಿಗೆ ವಸತಿ, ಸಾರ್ವಜನಿಕರಿಗೆ ಜನಪದ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದೇ ರೀತಿಯಲ್ಲಿ ತುಮಕೂರು ಮುಂತಾದ ಜಿಲ್ಲೆಗಳಲ್ಲೂ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ನ್ಯಾ.ಗೋಪಾಲಗೌಡ ವಿವರಣೆ ನೀಡಿದರು. [ಬೆಂಗಳೂರಲ್ಲಿ 'ಫಕೀರಿ ಫೋಕ್ ಫೆಸ್ಟಿವಲ್', ಉಚಿತ ಪ್ರವೇಶ]
ಕರ್ನಾಟಕ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅವರು, ಜನಪದ ಕಲೆಗಳಿಗೆ ನೂರಾರು ವರ್ಷಗಳ ಇತಿಹಾಸವಿದೆ. ಇವು ಪ್ರದರ್ಶನಗೊಂಡರೆ ಮಾತ್ರ ಇದರ ಸಿರಿತನ ಜನರಿಗೆ ಮುಟ್ಟುತ್ತದೆ. ಪೆದ್ದೂರಿನಲ್ಲಿ ನಡೆಯುವ ಈ ಜನಪದ ಸಂಭ್ರಮ ದೇಶಾದ್ಯಂತ ದೂರದರ್ಶನದ ಮೂಲಕ ನೇರ ಪ್ರಸಾರವಾಗುತ್ತದೆ. ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಜನರು ಪ್ರೋತ್ಸಾಹಿಸಬೇಕೆಂದು ಕೋರಿದರು.
ಪ್ರಾಸ್ತಾವಿಕ ಭಾಷಣ ಮಾಡಿದ ಮಾಜಿ ಸಚಿವ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಮುಖ್ಯ ಆಯುಕ್ತರಾದ ಪಿ.ಜಿ.ಆರ್. ಸಿಂಧ್ಯಾ, ಜನಪದ ವೈಶಿಷ್ಟ್ಯಗಳಾದ ತಮಟೆ ವಾದನ, ಡೊಳ್ಳುಕುಣಿತ, ಮಣಿಪುರಿ ನೃತ್ಯ, ತೊಗಲು ಗೊಂಬೆಯಾಟ ಮುಂತಾದ ಪ್ರಕಾರಗಳನ್ನು ಸಾರ್ವಜನಿಕರು ಈ ಜಾನಪದ ಕಲಾಮೇಳದಲ್ಲಿ ನೋಡಿ ಆನಂದಿಸಬಹುದು ಎಂದರು. [ಜಾತ್ರೆಗೆ ಜೀವ ತುಂಬಿದ ಸೀರೆಯುಟ್ಟ ಸುಂದರಿಯರು!]
ನಂತರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್. ಆರ್. ವಿಶುಕುಮಾರ್ ಮಾತನಾಡಿ, ಜಾನಪದ ಸಂಭ್ರಮ ಒಂದು ವಿಶಿಷ್ಟ ಕಾರ್ಯಕ್ರಮವಾಗಿರುವುದರಿಂದ ರಾಜ್ಯದ ವಿವಿಧೆಡೆಯಿಂದ ಕಲಾವಿದರು, ಸಾರ್ವಜನಿಕರು ಆಗಮಿಸಲಿದ್ದಾರೆ. ನಮ್ಮ ಇಲಾಖೆಯಿಂದ ಕರ್ನಾಟಕದ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಲೇಸರ್ ಪ್ರದರ್ಶನವನ್ನು ಸಹ ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮಗಳ ವಿವರ ನೀಡಿದರು.