ವಿಶ್ವಾಸ ಮತ ಯಾಚನೆ: ದಿನದ 14 ಪ್ರಮುಖ ಬೆಳವಣಿಗೆ
ಬೆಂಗಳೂರು, ಮೇ 19: ಸದನದಲ್ಲಿ ಇಂದು ಸಂಜೆ 4 ಗಂಟೆಗೆ ಕ್ಲೈಮ್ಯಾಕ್ಸ್. ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಬೃಹನ್ನಾಟಕಕ್ಕೆ ತೆರೆ ಎಳೆಯುವ ಸಮಯ ಬಂದಿದೆ. ಇದಕ್ಕೂ ಮೊದಲು ಇಂದು ದಿನಪೂರ್ತಿ ಹಲವು ಬೆಳವಣಿಗೆಗಳು ನಡೆದವು. ಅವುಗಳ ಸಂಕ್ಷಿಪ್ತ ವಿವರ ಇಲ್ಲಿದೆ.
ಹೈದರಾಬಾದ್ ನಿಂದ ಇಂದು ಬೆಳಿಗ್ಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಬೆಂಗಳೂರಿಗೆ ವಾಪಾಸಾದರು. ನಂತರ ಪ್ರಮಾಣ ವಚನ ಸ್ವೀಕಾರ, ಆನಂದ್ ಸಿಂಗ್ ಮತ್ತು ಪ್ರತಾಪ್ ಗೌಡ ಪಾಈಲ್ ಹೈಡ್ರಾಮ ಸೇರಿದಂತೆ ಸರಣಿ ಬೆಳವಣಿಗೆಗಳು ನಡೆದವು.
ಕರ್ನಾಟಕ ವಿಶ್ವಾಸಮತ LIVE: ಯಡಿಯೂರಪ್ಪ ಭಾಷಣ
ಇವುಗಳ ಸಮಗ್ರ ಚಿತ್ರಣ ಇಲ್ಲಿದೆ.
ಬೆಂಗಳೂರಿಗೆ ಆಗಮಿಸಿದ ಶಾಸಕರು
ಹೈದರಾಬಾದ್ ನ ರೆಸಾರ್ಟ್ ಗಳಲ್ಲಿ ಬೀಡು ಬಿಟ್ಟಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಇಂದು ಬೆಳಿಗ್ಗೆ ಬೆಂಗಳೂರಿಗೆ ವಾಪಸಾದರು. ಬೆಂಗಳೂರಿನ ಹಿಲ್ಟನ್ ಹೋಟೆಲ್ ನಲ್ಲಿ ಬಂದು ಉಳಿದುಕೊಂಡ ಶಾಸಕರು ನಂತರ ನೇರವಾಗಿ ವಿಧಾನಸಭೆಗೆ ತೆರಳಿದರು.
ಬಿಗಿ ಭದ್ರತೆ
ಬಹುನಿರೀಕ್ಷಿತ ವಿಶ್ವಾಸ ಮತ ಯಾಚನೆ ಹಿನ್ನೆಲೆಯಲ್ಲಿ, ವಿಧಾನಸೌಧದ ಸುತ್ತಮುತ್ತ ಇಂದು ಭಾರೀ ಬಿಗಿ ಬಂದೋಬಸ್ತ್ ಆಯೋಜಿಸಲಾಗಿದೆ. 3 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಐವರು ಡಿಸಿಪಿ, 100 ಇನ್ ಸ್ಪೆಕ್ಟರ್, 200 ಪಿಎಸ್ಐಗಳು, 30 ಕೆಎಸ್ಆರ್ಪಿ ತುಕುಡಿಗಳು ಭದ್ರತೆಯ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಸಾರ್ವಜನಿಕರಿಗೆ ವಿಧಾನಸೌಧ ಪ್ರವೇಶವನ್ನು ನಿಷೇಧಿಸಲಾಗಿದೆ. ವಿಶ್ವಾಸ ಮತದ ಹಿನ್ನೆಲೆಯಲ್ಲಿ ಸದನದ ಭದ್ರತೆಗೆ 200 ಮಾರ್ಶಲ್ ಗಳನ್ನು ನೇಮಿಸಲಾಗಿದ್ದು ವಿಶೇಷ ಭದ್ರತೆ ಕಲ್ಪಿಸಲಾಗಿದೆ.
ಬಿಜೆಪಿ ಶಾಸಕಾಂಗ ಪಕ್ಷದ ಸಭೆ
ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ ನಲ್ಲಿ ಬೆಳಿಗ್ಗೆ 9 ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷಸ ಸಭೆ ನಡೆಯಿತು. ಬಿಜೆಪಿ ಮುಖಂಡರಾದ ಪ್ರಕಾಶ್ ಜಾವ್ಡೇಕರ್, ಮುರಳೀಧರ ರಾವ್, ಮುಖ್ಯಮಂತ್ರಿ ಯಡಿಯೂರಪ್ಪ ಇದರಲ್ಲಿ ಭಾಗಿಯಾಗಿದ್ದರು.
ಬೋಪಯ್ಯ ನೇಮಕಕ್ಕೆ ಸುಪ್ರೀಂ ಅಸ್ತು
ಸುಪ್ರೀಂ ಕೋರ್ಟ್ ನಲ್ಲಿ ಹಂಗಾಮಿ ಸ್ಪೀಕರ್ ಕೆಜಿ ಬೋಪಯ್ಯ ನೇಮಕ ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯಿತು. ಅಭಿಷೇಕ್ ಮನು ಸಿಂಘ್ವಿ ಮತ್ತು ಕಪಿಲ್ ಸಿಬಲ್ ಕಾಂಗ್ರೆಸ್ ಪರ ವಾದ ಮಂಡಿಸಿದರು. ಬೋಪಯ್ಯ ನೇಮಕಾತಿ ರದ್ದಾದರೆ ವಿಶ್ವಾಸಮತವನ್ನೂ ಮುಂದೂಡಬೇಕಾಗುತ್ತದೆ ಎಂದು ಸುಪ್ರೀಂ ಅಭಿಪ್ರಾಯ ವ್ಯಕ್ತಪಡಿಸಿತ್ತು. ಕೊನೆಗೆ ಹಂಗಾಮಿ ಸ್ಪೀಕರ್ ಆಗಿ ಕೆ.ಜಿ. ಬೋಪಯ್ಯ ನೇಮಕಕ್ಕೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿತು. ವಿಶ್ವಾಸಮತ ಪ್ರಕ್ರಿಯೆ ಲೈವ್ ಪ್ರಸಾರವಾಗುತ್ತಿರುವುದರಿಂದ ಹಂಗಾಮಿ ಸ್ಪೀಕರ್ ಆಯ್ಕೆ ಕುರಿತು ವಿರೋಧ ವ್ಯಕ್ತಪಡಿಸುವಂತಿಲ್ಲ ಎಂದು ಸುಪ್ರೀಂ ಹೇಳಿತು.
ಪ್ರಮಾಣ ವಚನ ಸ್ವೀಕಾರ
ನಿಗದಿಯಂತೆ ಬೆಳಿಗ್ಗೆ 11 ಗಂಟೆಗೆ ಸದನ ಆರಂಭವಾಯಿತು. ವಂದೇ ಮಾತರಂ ಗಾಯನದೊಂದಿಗೆ ಸದನ ಆರಂಭವಾಯಿತು. ನಂತರ ವಿಧಾನಸಭೆಗೆ ಹಂಗಾಮಿ ಸ್ಪೀಕರ್ ಕೆ.ಜಿ. ಬೋಪಯ್ಯ ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಮೊದಲಿಗೆ ಶಾಸಕರಾಗಿ ಪ್ರಮಾಣ ವಚನ ಬೋಧಿಸಿದರು. ನಂತರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಚ್. ಡಿ. ಕುಮಾರಸ್ವಾಮಿ ಮೊದಲಾದವರು ಪ್ರಮಾಣವಚನ ಸ್ವೀಕರಿಸಿದರು.
ಸಂಸದ ಸ್ಥಾನಕ್ಕೆ ರಾಜೀನಾಮೆ
ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಶ್ರೀರಾಮುಲು ಶಾಸಕರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ತಮ್ಮ ಸಂಸದ ಸ್ಥಾನಕ್ಕೆ ಇಂದು ರಾಜೀನಾಮೆ ಸಲ್ಲಿಸಿದರು. ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ರಾಜೀನಾಮೆ ಸಲ್ಲಿಸಿದರು.
ಶಾಸಕರಿಗೆ ಬಿಜೆಪಿ ಆಫರ್
ಬಿಜೆಪಿ ನಾಯಕ, ಯಡಿಯೂರಪ್ಪ ಆಪ್ತ ಬಿಜೆ ಪುಟ್ಟಸ್ವಾಮಿ ಕಾಂಗ್ರೆಸ್ ಶಾಸಕರೊಬ್ಬರ ಪತ್ನಿಗೆ ಕರೆ ಮಾಡಿ 15 ಕೋಟಿ ರೂ. ಆಫರ್ ಮತ್ತು ಶಾಸಕರಿಗೆ ಮಂತ್ರಿ ಸ್ಥಾನ ನೀಡುವ ಆಫರ್ ನೀಡಿದ್ದಾರೆಂದು ಕಾಂಗ್ರೆಸ್ ಮುಖಂಡ ಉಗ್ರಪ್ಪ ಆರೋಪ ಮಾಡಿದರು. ಪುಟ್ಟಸ್ವಾಮಿ ಕರೆ ಮಾಡಿದ ನಂತರ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಕರೆ ಮಾಡಿದ್ದರು ಎಂದು ಹೇಳಿದ ಉಗ್ರಪ್ಪ ಈ ಸಂಬಂಧ ಆಡಿಯೋ ಒಂದನ್ನು ಬಿಡುಗಡೆಯೂ ಮಾಡಿದರು.
ರಾಮನಗರ ಬಿಟ್ಟು ಚನ್ನಪಟ್ಟಣ ಉಳಿಸಿಕೊಂಡ ಎಚ್ಡಿಕೆ
ಎಚ್.ಡಿ. ಕುಮಾರಸ್ವಾಮಿ ಅವರು ಚನ್ನಪಟ್ಟಣ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಹೀಗಾಗಿ ಅವರು ರಾಮನಗರ ಕ್ಷೇತ್ರವನ್ನು ಬಿಟ್ಟುಕೊಡಲಿದ್ದಾರೆ.
ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕ್ಷೇತ್ರದಿಂದ ಅವರು ಆಯ್ಕೆಯಾಗಿದ್ದರು. ಇದೀಗ ರಾಮನಗರದಲ್ಲಿ ಉಪಚುನಾವಣೆ ನಡೆಯಬೇಕಾಗಿದೆ.
ಆನಂದ್ ಸಿಂಗ್, ಪ್ರತಾಪ್ ಗೌಡ ಹೈಡ್ರಾಮ
"ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್ ಮತ್ತು ಪ್ರತಾಪ್ ಗೌಡ ಪಾಟೀಲ್ ಜನಾರ್ದನ ರೆಡ್ಡಿ ಅವರೊಂದಿಗಿದ್ದಾರೆ," ಸಂಸದ ಡಿ.ಕೆ. ಸುರೇಶ್ ಹೇಳಿದ್ದರು. ಇದಾದ ನಂತರ ಸದನದಿಂದ ಎಚ್.ಡಿ. ರೇವಣ್ಣ ಮತ್ತು ಡಿ.ಕೆ. ಸುರೇಶ್ ಇಬ್ಬರು ಶಾಸಕರನ್ನು ಕರೆ ತರಲು ಹೊರ ಹೋಗಿದ್ದರು.
ಮಿಸ್ಸಿಂಗ್ ಶಾಸಕರು ಗೋಲ್ಡ್ ಪಿಂಚ್ ಹೋಟೆಲ್ ನಲ್ಲಿರುವ ಕುರಿತು ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಹೋಟೆಲ್ ಗೆ ಬೆಂಗಳೂರು ನಗರ ಪೊಲೀಸ್ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಮತ್ತು ಡಿಐಜಿ ನೀಲಮಣಿ ರಾಜು ತೆರಳಿ ಭದ್ರತೆ ನೀಡಿದರು.
ಭೋಜನ ವಿರಾಮ
ಕಲಾಪಕ್ಕೆ 1.30ರ ವೇಳೆಗೆ ಭೋಜನ ವಿರಾಮ ಘೋಷಿಸಲಾಯಿತು. ಕಲಾಪವನ್ನು 3:30 ಕ್ಕೆ ಹಂಗಾಮಿ ಸ್ಪೀಕರ್ ಬೋಪಯ್ಯ ಮುಂದೂಡಿದರು. 210 ಶಾಸಕರ ಪ್ರಮಾಣ ವಚನ ಮುಕ್ತಾಯಗೊಂಡಿದೆ. ಮೈಸೂರು, ಚಾಮರಾಜನಗರ ಭಾಗದ ಶಾಸಕರ ಪ್ರಮಾಣ ವಚನ ಮಾತ್ರ ಬಾಕಿ ಇದೆ.
ಬಿಸಿ ಪಾಟೀಲ್ ಗೆ ಸಿಎಂ ಆಮಿಷ
ಹಿರೇಕೆರೂರು ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲ್ ಅವರಿಗೆ ಬಿ.ಎಸ್ ಯಡಿಯೂರಪ್ಪ ಆಮಿಷವೊಡ್ಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಆಡಿಯೋವನ್ನು ಕಾಂಗ್ರೆಸ್ ಬಿಡುಗಡೆ ಮಾಡಿತು. ಶುಕ್ರವಾರ ರಾತ್ರಿಯಿಂದ ಕಾಂಗ್ರೆಸ್ ಸರಣಿ ಕರೆ ಧ್ವನಿ ಮುದ್ರಣದ ಸಿಡಿಗಳನ್ನು ಬಿಡುಗಡೆ ಮಾಡುತ್ತಿದೆ.
ಕೆ.ಸಿ. ವೇಣುಗೋಪಾಲ್ ಪ್ರವೇಶಕ್ಕೆ ಅಡ್ಡಿ
ಕೆ.ಸಿ. ವೇಣುಗೋಪಾಲ್ ವಿಧಾನಸೌಧಕ್ಕೆ ಹೋಗದಂತೆ ಸಿಬ್ಬಂದಿಗಳು ತಡೆದ ಪ್ರಸಂಗವೂ ನಡೆಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ ಮಾರ್ಷಲ್ ಗಳ ಮೇಲೆ ಗರಂ ಆದರು. ಮುರಳೀಧರ್ ರಾವ್ ರನ್ನು ಒಳಗೆ ಬಿಡುತ್ತೀರಿ. ನಮಗೆ ಏಕೆ ಬಿಡುತ್ತಿಲ್ಲ ಎಂದು ಪ್ರಶ್ನಿಸಿದರು. ಇಂಗ್ಲೀಷ್ ಕನ್ನಡದಲ್ಲಿ ಉಗ್ರಪ್ಪ ಬೈಗುಳಕ್ಕೆ ತಬ್ಬಿಬ್ಬಾದ ಮಾರ್ಷಲ್ ಗಳು ಕೊನೆಗೆ ವೇಣುಗೋಪಾಲ್ ಅವರನ್ನು ಒಳಕ್ಕೆ ಬಿಟ್ಟರು.
ರಾಜೀನಾಮೆಗೆ ಸಿದ್ಧತೆ
1996 ರಲ್ಲಿ ವಿಶ್ವಾಸಮತ ಗೆಲ್ಲಲಾಗದೆ ಅಟಲ್ ಬಿಹಾರಿ ವಾಜಪೇಯಿ ಅವರು ರಾಜೀನಾಮೆ ನೀಡಿದಂತೆ ಬಿ.ಎಸ್. ಯಡಿಯೂರಪ್ಪ ಅವರೂ ರಾಜೀನಾಮೆ ನೀಡುವ ಸಾಧ್ಯತೆ. ಸದನದಿಂದ ಮಧ್ಯಾಹ್ನ ಹೊರ ಬಂದ ಯಡಿಯೂರಪ್ಪ ಆತಂಕದಲ್ಲಿರುವಂತೆ ಕಂಡು ಬರುತ್ತಿತ್ತು. ಅವರ ಮುಂದಿನ ನಡೆ ಇನ್ನೂ ನಿಗೂಢವಾಗಿದೆ. ಮೂಲಗಳ ಪ್ರಕಾರ ಸದನದಲ್ಲಿ ಭಾಷಣ ಮಾಡಿ ಅವರು ರಾಜೀನಾಮೆ ನೀಡಲಿದ್ದಾರೆ.
ಕಾಂಗ್ರೆಸ್ ಪಾಳಯ ಸೇರಿದ ಪ್ರತಾಪ್ ಗೌಡ ಪಾಟೀಲ್
ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್ ನಾಯಕರ ಕೈಯಿಂದ ತಪ್ಪಿಸಿಕೊಂಡಿದ್ದ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಇಂದು ವಿಧಾನಸೌಧಕ್ಕೆ ಆಗಮಿಸುತ್ತಿದ್ದಂತೆ ಡಿ.ಕೆ. ಶಿವಕುಮಾರ್ ಅವರನ್ನು ಕೈ ಹಿಡಿದು ಎಳೆದು ಕರೆದುಕೊಂಡು ಹೋದರು. ತಕ್ಷಣ ಅವರ ಕಿಸಿಗೆ ಡಿಕೆಶಿ ವಿಪ್ ಪ್ರತಿ ಹಾಕಿದರು.
ನಂತರ ಕಾಂಗ್ರೆಸ್ ಶಾಸಕರ ಜೊತೆಗೆ ಪ್ರತಾಪ್ ಗೌಡ ಪಾಟೀಲ್ ಕುಳಿತು ವಿಧಾನಸೌಧದಲ್ಲೇ ತಿಂಡಿ ಸೇವಿಸಿದರು.