ಒಡಲು ಬಗೆದು ಮರಳು ಮಾರಿದ್ದೀರಲ್ಲ, ಬಂದಿದೆ ನೋಡಿ ಹೊಳೆ ಮನೆ ಬಾಗಿಲಿಗೆ
"ಒಡಲು ಬಗೆದು ಮರಳು ತೆಗೆದು ಮಾರಿದ್ದೀರಲ್ಲ, ಬಂದಿದೆ ನೋಡಿ ನದಿ ಮನೆ ಬಾಗಿಲಿಗೆ ಮರಳಿ ಕೇಳಲು ಮರಳನ್ನು" ಈ ಅರ್ಥಗರ್ಭಿತ ಸಾಲು ಕಳೆದ ಕೆಲವು ದಿನಗಳಿಂದ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ರಾಜ್ಯದ ಜಲಪ್ರಳಯವನ್ನು ಉಲ್ಲೇಖಿಸಿ ಹರಿದಾಡುತ್ತಿದ್ದ ಸಾಲುಗಳಿವು.
ಕಂಡು ಕೇಳರಿಯದ ಅತಿವೃಷ್ಟಿಯಿಂದ ರಾಜ್ಯದ ಬಹುತೇಕ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ನದಿದಂಡೆ ಪ್ರದೇಶದ ಜನರು ಅಕ್ಷರಶಃ ಕಂಗಾಲಾಗಿದ್ದಾರೆ. ದುಡ್ಡಿನ ದುರಾಸೆಗೆ ಬಿದ್ದು, ಭೂಗರ್ಭವನ್ನೇ ಲೂಟಿ ಮಾಡಿದ ದುರುಳರು ಸುಪ್ಪತ್ತಿಗೆಯಲ್ಲಿದ್ದರೆ, ಅಮಾಯಕರು ಬೀದಿಗೆ ಬಂದಿದ್ದಾರೆ.
ಅಜ್ಜನ ಅಂತ್ಯಕ್ರಿಯೆಗೂ ಹೋಗದೆ ಸಂತ್ರಸ್ತರಿಗಾಗಿ ಮಿಡಿದ ಡಿಸಿ
ಮರಳುಗಾರಿಕೆಗೆ ಎನ್ನುವುದು ಇಂತದ್ದೇ ನದಿ ಪ್ರದೇಶ, ಇಂತದ್ದೇ ರಾಜ್ಯ ಎನ್ನುವುದಕ್ಕೆ ಸೀಮಿತವಾಗಿಲ್ಲ. ಇದೊಂದು ದೇಶವ್ಯಾಪಿ ಹಣಪಿಪಾಸುಗಳ ದಂಧೆ. ಆಯಾಯ ಪ್ರದೇಶಗಳ ರಾಜಕಾರಣಿಗಳ, ಪೊಲೀಸರ ಕಣ್ತಪ್ಪಿಸಿ ಈ ದಂಧೆ ನಡೆಯಲು ಸಾಧ್ಯವೇ? ಈ ಪ್ರಶ್ನೆಗೆ ಉತ್ತರ ಸಾಮಾನ್ಯ ಜನರಿಗೂ ಗೊತ್ತೇ ಇದೆ.
ಮಾನವೀಯತೆ ಮೆರೆಯಬೇಕಾದ ಸಮಯದಲ್ಲಿ 'ಹಗಲು ದರೋಡೆ'ಗೆ ಇಳಿದ ವಿಮಾನಯಾನ ಸಂಸ್ಥೆಗಳು
ಮರಳುಗಾರಿಕೆ ತಡೆಯಲು ಹೋದ ಅಧಿಕಾರಿಯ ಮೇಲೆ ಲಾರಿ ಹತ್ತಿಸಿ ಹತ್ಯೆಗೈದ ಉದಾಹರಣೆ ಇರುವ ದೇಶ ನಮ್ಮದು. ಮರಳುಗಾರಿಕೆಯ ವಿರುದ್ದ ಹೋರಾಡುತ್ತಿದ್ದ ಕಾರ್ಯಕರ್ತನೊಬ್ಬನನ್ನು ಕೃಷ್ಣಾ ನದಿಯಲ್ಲಿ ಮುಳುಗಿಸಿ ಸಾಯಿಸಿದ ಇತಿಹಾಸವೂ ಇದೆ. ಉಡುಪಿಯ ಹಿಂದಿನ ಜಿಲ್ಲಾಧಿಕಾರಿಯನ್ನೂ ಬಿಡಲಿಲ್ಲ ಈ ಸ್ಯಾಂಡ್ ಮಾಫಿಯಾ ಜಗತ್ತು.
ಅಧಿಕಾರಿಯನ್ನು ಕೊಂದ ಕಟುಕರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಸುಮ್ಮನೆ ಬಿಡುವುದಿಲ್ಲ
"ಅಧಿಕಾರಿಯನ್ನು ಕೊಂದ ಕಟುಕರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ನಾನು ಸುಮ್ಮನೆ ಬಿಡುವುದಿಲ್ಲ" ಎಂದು ಮಾಜಿ ಮುಖ್ಯಮಂತ್ರಿಗಳು ಘರ್ಜಿಸಿದ ವೇಗದಲ್ಲೇ ಕೇಸ್ ತಣ್ಣಗಾಗಿ ಹೋಗಿತ್ತು. ಇದು ಮಾಫಿಯಾ ಜಗತ್ತಿನ ಪ್ರಭಾವ ಎಷ್ಟರಮಟ್ಟಿಗೆ ಇದೆ ಎಂಬುದಕ್ಕೆ ಒಂದು ನಿದರ್ಶನ ಅಷ್ಟೆ.
ಲೆಕ್ಕಕ್ಕಿಂತ, ಲೆಕ್ಕಕ್ಕಿಲ್ಲದ ಹೆಣಗಳು ಬೀಳುವ ಉದಾಹರಣೆಗಳೇ ಜಾಸ್ತಿ
ರಕ್ತಸಿಕ್ತ ಇತಿಹಾಸವಿರುವ ಕರ್ನಾಟಕ - ಮಹಾರಾಷ್ಟ ಗಡಿಭಾಗದ ಕೃಷ್ಣಾ ಮತ್ತು ಭೀಮಾ ನದಿ ತೀರ ಪ್ರದೇಶದಲ್ಲಿ, ಲೆಕ್ಕಕ್ಕಿಂತ, ಲೆಕ್ಕಕ್ಕಿಲ್ಲದ ಹೆಣಗಳು ಬೀಳುವ ಉದಾಹರಣೆಗಳೇ ಜಾಸ್ತಿ. ಈ ವ್ಯಾಪ್ತಿಯಲ್ಲಿ ಹರಿಯುವ ನದಿ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆಯ ಸರಾಸರಿ ದಿನದ ಆದಾಯ ಸುಮಾರು 10-12 ಲಕ್ಷ. ಅದರಲ್ಲೂ, ಭೀಮಾ ನದಿಯ ಭಾಗದಲ್ಲಿ ಕಳೆದ ಒಂದು ವರ್ಷದಲ್ಲಿ ಮಳೆ ಅಷ್ಟೇನೂ ಸುರಿಯದ ಹಿನ್ನಲೆಯಲ್ಲಿ ಮರಳುಗಳ್ಳರು ಕೋಟ್ಯಾಧಿಪತಿಗಳಾದರು. ಇವರ ದೈನಂದಿನ ಅಕ್ರಮ ಆದಾಯ, ಸರಕಾರೀ ಮಟ್ಟದಲ್ಲಿ ಕೈಕೈ ಬದಲಾಗದೇ ಇದ್ದರೆ, ಇಷ್ಟು ರಾಜಾರೋಷವಾಗಿ ಇವರು ಮರಳುಗಾರಿಕೆ ನಡೆಸಲು ಸಾಧ್ಯವೇ?
ಮರಳಿನ ಬೆಲೆ 50-60ಸಾವಿರದ ತನಕವೂ ಏರಿದ್ದಿದೆ
ಕಟ್ಟಡ ಕಾಮಗಾರಿಗಳು ರಾಜ್ಯಾದ್ಯಂತ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮರಳು ಬೇಡಿಕೆಯೂ ಹೆಚ್ಚಿನ ಮಟ್ಟದಲ್ಲಿದೆ. ಎಂಟತ್ತು ಸಾವಿರ ಲೋಡ್ ವೊಂದಕ್ಕೆ ಸಿಗುತ್ತಿದ್ದ ಮರಳಿನ ಬೆಲೆ 50-60ಸಾವಿರದ ತನಕವೂ ಏರಿದ್ದಿದೆ. ಇದರಿಂದ ದುಡ್ಡಿನ ರುಚಿಯನ್ನು ಅರಿತ ಮಾಫಿಯಾ, ಇನ್ನಷ್ಟು ಅಕ್ರಮ ಮರಳುಗಾರಿಕೆ ನಡೆಸುತ್ತಿವೆ. ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶದ ನಂತರ, ಅತಿಹೆಚ್ಚು ಅಕ್ರಮ ಮರಳುಗಾರಿಕೆ ನಡೆಯುವುದು ಕರ್ನಾಟಕದಲ್ಲೇ. ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 21 ಸಾವಿರ ದೂರುಗಳು ಸ್ಯಾಂಡ್ ಮಾಫಿಯಾದ ವಿರುದ್ದ ದಾಖಲಾಗಿವೆ ಮತ್ತು ಸುಮಾರು ಎಂಟು ಸಾವಿರ FIR ದಾಖಲಾಗಿವೆ.
ಕಳೆದ ಹತ್ತು ದಿನಗಳಿಂದ ಪ್ರಕೃತಿ ಪಾಠ ಮಾಡುತ್ತಿದೆ
ಭೂಗರ್ಭವನ್ನೇ ಅಗೆದು ಅಗೆದು ಲಕ್ಷಲಕ್ಷ ದೋಚಿದರೆ ಏನಾಗುತ್ತದೆ ಎನ್ನುವುದಕ್ಕೆ ಕಳೆದ ಹತ್ತು ದಿನಗಳಿಂದ ಪ್ರಕೃತಿ ಪಾಠ ಮಾಡುತ್ತಿದೆ. ವರ್ಷಗಳಿಂದ ನೀರಿಗೆ ಹಾಹಾಕಾರ ಪಡುತ್ತಿದ್ದ ಜನತೆಗೆ ಇದೇನು ಪ್ರಳಯವೇ ಎನ್ನುವಂತೆ, ವರುಣನ ರುದ್ರನರ್ತನ ಪ್ರದರ್ಶಿತವಾಗುತ್ತಿದೆ. ನೀರಿಲ್ಲದೇ ಇದ್ದಾಗ ಬಗೆದು ಬಗೆದು ಮರಳನ್ನು ಅಗೆದವರಿಗೆ ನದಿ, ಜನರ ಮನೆಬಾಗಿಲಿಗೆ ಮರಳನ್ನು ಕೇಳಲು ಬರುತ್ತಿದೆ.
ಸಂತ್ರಸ್ತರ ಬದುಕನ್ನು ನೋಡಿದರೆ ಛೇ...ಜೀವನವೇ ಎಂದನಿಸುತ್ತದೆ
ಒಟ್ಟಾರೆ ಆಡಳಿತ ವ್ಯವಸ್ಥೆಯ ವೈಫಲ್ಯ, ಸ್ವಹಿತಾಶಕ್ತಿ, ಪೊಲೀಸ್, ರಾಜಕಾರಣಿಗಳ ಶಾಮೀಲಿನಿಂದ ಈ ದಂಧೆಗೆ ಬ್ರೇಕ್ ಬೀಳುತ್ತಿಲ್ಲ. 'ಸಮಗ್ರ ಮರಳು ನೀತಿ'ಯಿಂದ ಇದಕ್ಕೆ ಪರಿಹಾರ ಸಿಗಬಹುದಾದರೂ, ಅದನ್ನು ಜಾರಿ ತರುವ ಇಚ್ಚಾಶಕ್ತಿ ಬೇಕಲ್ಲವೇ? ತಾನೊಂದು ಬಗೆದರೆ ಮಾನವ, ಬೇರೊಂದು ಬಗೆಯುವುದು ದೈವ ಎನ್ನುವಂತೆ, ನೆರೆ ಸಂತ್ರಸ್ತರ ಬದುಕನ್ನು ನೋಡಿದರೆ ಛೇ...ಜೀವನವೇ ಎಂದನಿಸುತ್ತದೆ.