ಅತೃಪ್ತರಿಗೆ 5 ಸ್ಟಾರ್ ಹೊಟೇಲ್, ಪ್ರವಾಹ ಸಂತ್ರಸ್ತರಿಗೆ ಗಂಜಿ ಕೇಂದ್ರವೂ ಇಲ್ಲ
ಬೆಂಗಳೂರು, ಆ 8: ಕಳೆದ ಸುಮಾರು ನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿಗೆ ರಾಜ್ಯದೆಲ್ಲಡೆ (ಆರೇಳು ಜಿಲ್ಲೆಗಳನ್ನು ಹೊರತು ಪಡಿಸಿ) ಕುಂಭದ್ರೋಣ ಮಳೆ ಸುರಿಯುತ್ತಿದೆ.
ಆದರೆ, ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು, ಯಡಿಯೂರಪ್ಪನವರ ಸರಕಾರದ ಸಂಪುಟ ಇನ್ನೂ ರಚನೆಯಾಗಿಲ್ಲ. ಈ ಬಗ್ಗೆ, ಜಾತ್ಯಾತೀತ ಜನತಾದಳ ಸಾಲುಸಾಲು ಟ್ವೀಟ್ ಮಾಡಿ, ಸರಕಾರವನ್ನು ಟೀಕಿಸಿದೆ.
ಬೆಳಗಾವಿಯ ಐತಿಹಾಸಿಕ ಪ್ರವಾಹಕ್ಕೆ ವೈಜ್ಞಾನಿಕ ಕಾರಣಗಳನ್ನು ಹುಡುಕುತ್ತಾ...
ಜೆಡಿಎಸ್ ಮಾಡಿರುವ ಟ್ವೀಟ್, ' ಅತೃಪ್ತ ಶಾಸಕರನ್ನು ಮುಂಬೈಗೆ ಕಳುಹಿಸಲು ವಿಶೇಷ ವಿಮಾನ ವ್ಯವಸ್ಥೆ ಕಲ್ಪಿಸಿದವರು, ಇಂದು ಬಡ ಜನರು ಪ್ರವಾಹದಲ್ಲಿ ಸಾಯುತ್ತಿದ್ದರೂ ಒಂದು ಹೆಲಿಕಾಪ್ಟರ್ ವ್ಯವಸ್ಥೆ ಕೂಡ ಮಾಡಿಲ್ಲ! ಅತೃಪ್ತ ಶಾಸಕರಿಗೆ ಮುಂಬೈನಲ್ಲಿ ಉಳಿಯಲು 5 ಸ್ಟಾರ್ ಹೋಟೆಲ್ ವ್ಯವಸ್ಥೆ ಮಾಡಿದವರು ಇಂದು ಬಡ ಜನರಿಗೆ ಗಂಜಿ ಕೇಂದ್ರವನ್ನೂ ಸ್ಥಾಪಿಸಿಲ್ಲ!
ಇನ್ನೊಂದು ಟ್ವೀಟ್, ' ಪ್ರವಾಹದಿಂದ ಉತ್ತರ ಕರ್ನಾಟಕದ ನೂರಾರು ಹಳ್ಳಿಗಳು ಮುಳುಗಿ ಹೋಗಿವೆ. ಸರ್ಕಾರ ನಮ್ಮನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ರವಾನಿಸಬಹುದು ಎಂಬ ನಿರೀಕ್ಷೆಯಲ್ಲಿ ಜನರು ಸಹಾಯಕ್ಕಾಗಿ ಅಧಿಕಾರಿಗಳ ಬಳಿ ಅಂಗಲಾಚುತ್ತಿದ್ದಾರೆ, ಆದರೆ ಸರ್ಕಾರ ಇವರ ನೆರವಿಗೂ ಬಾರದೇ, ಸೇನಾ ಹೆಲಿಕಾಪ್ಟರ್ ನೆರವು ಕೂಡ ಕೇಳದೇ ಇರುವುದು ದುರದೃಷ್ಟಕರ'.
ಮತ್ತೊಂದು ಟ್ವೀಟ್, 'ಅಜ್ಜಿಗೆ ಅರಿವೆ ಚಿಂತೆ ಆದ್ರೆ ಮೊಮ್ಮಗಳಿಗೆ ಮದುವೆ ಚಿಂತೆಯಂತೆ ಹಾಗೆಯೇ ಉತ್ತರ ಕರ್ನಾಟಕದ ಜನ ಪ್ರವಾಹದಿಂದ ತತ್ತರಿಸುತ್ತಿದ್ದಾರೆ ಇತ್ತ ಯಡಿಯೂರಪ್ಪ ನವರು ತಂಗಿ ಮಗನಿಗೆ ಹಾಲು ಉತ್ಪಾದಕರ ಒಕ್ಕೂಟಕ್ಕೆ ನೇಮಕಾತಿ ಮಾಡೋದ್ರಲ್ಲಿ ನಿರತರಾಗಿದ್ದಾರೆ'.
ಬೆಳಗಾವಿಯಲ್ಲಿ ಭಯಂಕರ ಮಳೆ; ಚಿತ್ರ ನೋಡಿ...
ಮಗುದೊಂದು ಟ್ವೀಟ್, ' ಕರ್ನಾಟಕದ ಹಲವಾರು ಪ್ರದೇಶಗಳಲ್ಲಿ ಅದರಲ್ಲೂ ಉತ್ತರ ಕರ್ನಾಟಕದ ಭಾಗದಲ್ಲಿ ಅತಿವೃಷ್ಟಿಯಿಂದ ಜನರು ನರಳುತ್ತಿದ್ದಾರೆ. ಇದುವರೆಗೂ ಸರ್ಕಾರ ಗಂಜಿ ಕೇಂದ್ರಗಳನ್ನು ಸ್ಥಾಪಿಸಿಲ್ಲ, ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸಿಲ್ಲ. ಮುಖ್ಯಮಂತ್ರಿ ಇಲ್ಲ, ಮಂತ್ರಿಗಳೂ ಇಲ್ಲ. ಜೆಡಿಎಸ್ ಪಕ್ಷದ ಕಾರ್ಯಕರ್ತರು ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡಲು ಕೋರಲಾಗಿದೆ'.