ಪ್ರವಾಹ, ಪರಿಹಾರ; ಪರ-ವಿರೋಧ; ಪ್ರತಾಪ್ ಸಿಂಹ ಹೇಳಿಕೆ
ಬೆಂಗಳೂರು, ಅಕ್ಟೋಬರ್ 02 : "ಬಿಜೆಪಿ ಸಂಸದರನ್ನು ಬೈದು ಬೈದು ಸಾಕಾಯಿತು. ಈಗ ಮೋದಿ ಅವರನ್ನು ಬೈಯಲು ಶುರು ಮಾಡಿದ್ದಾರೆ. ಈ ರೀತಿಯ ಪ್ರಯತ್ನಕ್ಕೆ ಕೈ ಹಾಕದಿರುವುದು ಒಳ್ಳೆಯದು. ಇದೊಂದು ರೀತಿ ಆಕಾಶ ನೋಡಿಕೊಂಡು ಉಗುಳಿದಂತೆ ಅವರ ಮುಖಕ್ಕೆ ಬಂದು ಬೀಳುತ್ತದೆ ಎಂಬುದು ನನ್ನ ಭಾವನೆ"
ಬುಧವಾರ ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ನೀಡಿದ ಹೇಳಿಕೆ ಇದು. ಪ್ರವಾಹ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ಪರಿಹಾರ ನೀಡಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ ಮಾತಿನ ಕೊನೆಯಲ್ಲಿ ಇದನ್ನು ಹೇಳಿದರು.
ಪ್ರವಾಹ ಸಂತ್ರಸ್ತರಿಗೆ ಪರಿಹಾರ ವಿಳಂಬ; ಅ.3ಕ್ಕೆ ಪ್ರತಿಭಟನೆ
ಕರ್ನಾಟಕದ ಬಿಜೆಪಿ ಸಂಸದರನ್ನು ಟೀಕಿಸುವ ಮುನ್ನ ವಾಸ್ತವ ಅರಿತುಕೊಳ್ಳುವಂತೆ ಪ್ರತಾಪ್ ಸಿಂಹ ಹೇಳಿದ್ದರು. ರಾಜ್ಯದ ಕಾಂಗ್ರೆಸ್ ನಾಯಕರು ಪ್ರತಾಪ್ ಸಿಂಹ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಪ್ರಧಾನಿ ಮೋದಿ ನಿಮ್ಮ ದೇವರಾದರೆ ನೀವೇ ಪೂಜೆ ಮಾಡಿ" ಎಂದು ತಿರುಗೇಟು ನೀಡಿದರು.
ಕರ್ನಾಟಕ ಪ್ರವಾಹ : ನಷ್ಟದ ಲೆಕ್ಕ ಕೊಟ್ಟ ಸರ್ಕಾರ
ತಮ್ಮ ಹೇಳಿಕೆ ವೈರಲ್ ಆಗುತ್ತಿದ್ದಂತೆ ಪ್ರತಾಪ್ ಸಿಂಹ ತಮ್ಮ ಫೇಸ್ ಬುಕ್ ಪುಟದಲ್ಲಿ "ನಾನು ಹೇಳಿದ್ದಿಷ್ಟು" ಎಂದು ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಪ್ರತಾಪ್ ಸಿಂಹ ಹೇಳಿಕೆಗೆ ಯಾರು, ಏನು ಹೇಳಿದರು?.
ಉತ್ತರ ಕರ್ನಾಟಕ ಭಾರತಕ್ಕೆ ಸೇರಿದೆ, ಮೋದಿಜೀ ಇತ್ತ ನೋಡಿ!
ಮೋದಿ ದೇವರಾಗಿರಬಹುದು
"ಮೋದಿ ಅವರು ದೇವರಾಗಿರಬಹುದು. ಅವರ ಭಾವನೆಗೆ ನಾನು ತಪ್ಪು ಎಂದು ಹೇಳುವುದಿಲ್ಲ. ಅವರೇ ಅವರಿಗೆ ದೇವರು. ಆದರೆ, ಕರ್ನಾಟಕದ ಜನರಿಗೆ ಆಗಿರುವ ಅನ್ಯಾಯದ ಬಗ್ಗೆ ಮಾತನಾಡಬೇಕಲ್ಲ. ನಾವು ಕೇಳುತ್ತಿರುವುದು ನೆರೆಗೆ ಪರಿಹಾರ ಕೊಡಿ, ಬೇರೇನು ಕೇಳುತ್ತಿಲ್ಲ. ಲಕ್ಷಾಂತರ ಜನರು ಇವತ್ತು ಮನೆ ಕಳೆದುಕೊಂಡಿದ್ದಾರೆ. ದನ-ಕರುಗಳು ಸತ್ತು ಹೋಗಿವೆ. ನಿಮಗೆ ಕರ್ನಾಟಕದ ಮೇಲೆ ಕರುಣೆ ಇಲ್ಲವೇ ಎಂಬುದನ್ನು ಪ್ರತಾಪ್ ಸಿಂಹ ಅವರು ಕೇಳಬೇಕು. ಅದನ್ನು ಬಿಟ್ಟು ಅವರ ದೇವರನ್ನು ಅವರು ಪೂಜೆ ಮಾಡಿಕೊಳ್ಳಲಿ ನಾವು ಬೇಡ ಎನ್ನುವುದಿಲ್ಲ. ಆದರೆ, ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ಮಾತನಾಡಬೇಕು ಎಂದು ತಿಳಿಸಲು ಬಯಸುತ್ತೇನೆ" ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹೇಳಿದ್ದಾರೆ.
ಪ್ರಧಾನಿಯನ್ನು ಮೆಚ್ಚಿಸುವ ಕೆಲಸ
"ಉತ್ತರ ಕರ್ನಾಟಕದ 20 ಲಕ್ಷ ಜನ ಪ್ರವಾಹಕ್ಕೆ ತುತ್ತಾಗಿ ನೆಲೆ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಇಂತಹ ಕಷ್ಟಕರ ಸನ್ನಿವೇಶದಲ್ಲಿ ಸಂಸದ ಪ್ರತಾಪ್ ಸಿಂಹ ಜನರ ಕಷ್ಟಕ್ಕೆ ಸ್ಪಂದಿಸದೆ ಬೇಜವಾಬ್ದಾರಿ ಹೇಳಿಕೆ ಕೊಡುವ ಮೂಲಕ ಪ್ರಧಾನಿಯನ್ನು ಮೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ" ಎಂದು ಮಾಜಿ ಸಚಿವ ಎಚ್. ಕೆ. ಪಾಟೀಲ್ ಆರೋಪಿಸಿದರು.
ಬಕೆಟ್ ಪಾಲಿಟಿಕ್ಸ್
"ಉತ್ತರ ಕರ್ನಾಟಕ 20 ಲಕ್ಷ ಜನ ಪ್ರವಾಹಕ್ಕೆ ತುತ್ತಾಗಿ ಮನೆಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಆದರೆ, ಇಂತಹ ಕಷ್ಟಕರ ಸನ್ನಿವೇಶದಲ್ಲಿ ಜನರ ಜೊತೆ ನಿಲ್ಲದೆ ಸಂಸದ ಪ್ರತಾಪ್ ಸಿಂಹ ಮೋದಿಯನ್ನು ಮೆಚ್ಚಿಸಲು ರಾಜ್ಯದಲ್ಲಿ ಬಕೆಟ್ ಪಾಲಿಟಿಕ್ಸ್ ಮಾಡುತ್ತಿರುವುದು ಖಂಡನೀಯ" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.
ಪ್ರತಾಪ್ ಸಿಂಹ ಹೇಳಿದ್ದೇನು?
"ಮೋದಿ ಕರ್ನಾಟಕದ ಪ್ರವಾಹದ ಕುರಿತು ಟ್ವೀಟ್ ಮಾಡಿಲ್ಲ ಎನ್ನುತ್ತಾರೆ. ಆದರೆ, ಮೋದಿ ಅಮಿತ್ ಶಾ ಅವರನ್ನು ಕಳುಹಿಸಿದ್ದು ನಿಮಗೆ ಕಾಣುವುದಿಲ್ಲವೇ?. ಯಾರೂ ಸಹ ಕಿಸೆಯಿಂದ ನೆರೆ ಪರಿಹಾರ ಕೋಡುವುದಕ್ಕೆ ಆಗಲ್ಲ. ಯಾವ ರಾಜ್ಯಕ್ಕೂ ಕೇಂದ್ರ ಕೊಡುವುದು ಪರಿಹಾರವಲ್ಲ, ಅದು ಸಹಾಯಧನ. ಈ ಬಾರಿ 11 ರಾಜ್ಯದಲ್ಲಿ ಪ್ರವಾಹ ಬಂದಿದೆ. ಎಲ್ಲರಿಗೂ ಪರಿಹಾರ ಬಿಡುಗಡೆಯಾಗಿಲ್ಲ" ಎಂದು ಪ್ರತಾಪ್ ಸಿಂಹ ಹೇಳಿದರು.
ಪ್ರತಾಪ್ ಸಿಂಹ ಫೇಸ್ ಬುಕ್ ಪೋಸ್ಟ್
ತಮ್ಮ ಹೇಳಿಕೆಯ ವಿಡಿಯೋವನ್ನು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಫೇಸ್ಬುಕ್ ನಲ್ಲಿ ಹಾಕಿದ್ದಾರೆ.