ಕರ್ನಾಟಕ 2014 : ಕಾಫಿಶಾಪ್, ಕೆಪಿಎಸ್ಸಿ, ಮೈತ್ರಿಯಾ ಗೌಡ ವಿವಾದ
ಮೇ 26, ಕಾಫಿಶಾಪ್ನಲ್ಲಿ ಫೋಟೋ ವಿವಾದ : ಕರ್ನಾಟಕದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಸುದ್ದಿ ಮಾಡಿದರು. ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಕಾಫಿ ಶಾಪೊಂದರಲ್ಲಿ ತಮ್ಮ ಮೊಬೈಲ್ನಲ್ಲಿ ಯುವತಿಯರ ಫೋಟೋ ತೆಗೆದು ಎಡಿಜಿಪಿ ರವೀಂದ್ರ ನಾಥ್ ಸಿಕ್ಕಿಬಿದ್ದರು. ತಮ್ಮ ತಪ್ಪಿಗಾಗಿ ರಾಜೀನಾಮೆ ನೀಡುತ್ತೇನೆ ಎಂದು ಒಂದು ವಾರಗಳ ಕಾಲ ಸುದ್ದಿ ಮಾಡಿದರು. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಬಂದು ತಮ್ಮನ್ನು ಲಾಕಪ್ ಒಳಕ್ಕೆ ಕೂಡಿಹಾಕುವಂತೆ ಅಧಿಕಾರಿಗಳಿಗೆ ಹೇಳಿದರು.
ಜುಲೈ 1, ಬಾರ್ನಲ್ಲಿ ಶಾಸಕರ ಗುಂಡಾವರ್ತನೆ : ಹುನಗುಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ವಿರುದ್ಧ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಕಾಶಪ್ಪನವರ್ ಮತ್ತು ಅವರ ಬೆಂಬಲಿಗರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬುದು ಆರೋಪವಾಗಿತ್ತು. ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯ ಯುಬಿ ಸಿಟಿಯ ಸ್ಕೈ ಬಾರ್ ನಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ್ ಮತ್ತು ಅವರ ಬೆಂಬಲಿಗರು ದಾಂಧಲೆ ನಡೆಸಿದ್ದರು.
ಆಗಸ್ಟ್ 7, ಕೆಪಿಎಸ್ಸಿ ಬಗ್ಗೆ ಖಡಕ್ ನಿರ್ಧಾರ : ಕರ್ನಾಟಕ ಲೋಕಸೇವಾ ಆಯೋಗದ ಅಕ್ರಮಗಳ ಬಗ್ಗೆ ಸರ್ಕಾರ ಖಟಕ್ ನಿರ್ಧಾರ ಕೈಗೊಂಡಿತು. 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯನ್ನು ರದ್ದುಪಡಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. 2011ರಲ್ಲಿ ನಡೆದ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎನ್ನುವ ಕಾರಣಕ್ಕೆ ಸರ್ಕಾರ ನೇಮಕಾತಿ ರದ್ದುಪಡಿಸಿತ್ತು. [ಲೋಕಸೇವಾ ಆಯೋಗದ ವಿವಾದವೇನು?]
ಆಗಸ್ಟ್ 16, ಬಿಎಸ್ವೈ ರಾಷ್ಟ್ರೀಯ ಉಪಾಧ್ಯಕ್ಷ : ಮಾಜಿ ಮುಖ್ಯಮಂತ್ರಿ ಮತ್ತು ಶಿವಮೊಗ್ಗ ಸಂಸದ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕ ಮಾಡಲಾಯಿತು. ಯಡಿಯೂರಪ್ಪ ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ-ಮಾನ ನೀಡಬೇಕು ಎಂಬ ರಾಜ್ಯ ಬಿಜೆಪಿ ನಾಯಕರ ಬೇಡಿಕೆಯೂ ಈಡೇರಿತು.
ಆಗಸ್ಟ್ 22, ಅನಂತಮೂರ್ತಿ ವಿಧಿವಶ : ಕರ್ನಾಟಕ ಹೆಮ್ಮೆಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಯು.ಆರ್ ಅನಂತಮೂರ್ತಿ ವಿಧಿವಶರಾದರು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅನಂತಮೂರ್ತಿ ಅವರು 15 ದಿನಗಳಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅ.22ರಂದು ಸಂಜೆ 6 ಗಂಟೆ ವೇಳೆಗೆ ಅವರಿಗೆ ಲಘು ಹೃದಯಾಘಾತವಾಗಿತ್ತು, ನಂತರ ಚೇತರಿಕೆ ಕಾಣದೆ ಕೊನೆಯುಸಿರೆಳೆದರು.
ಆಗಸ್ಟ್ 27, ಮೈತ್ರಿಯಾ ಗೌಡ ಪ್ರಕರಣ ಬೆಳಕಿಗೆ : ಕೇಂದ್ರ ಸಚಿವ ಡಿವಿ ಸದಾನಂದ ಗೌಡರ ಪುತ್ರ ಕಾರ್ತಿಕ್ ಅವರ ಮದುವೆ ನಿಶ್ಚಿತಾರ್ಥ ಮಡಿಕೇರಿಯಲ್ಲಿ ನಡೆಯಿತು. ಕಾರ್ತಿಕ್ ಜೊತೆ ನನ್ನ ಮದುವೆಯಾಗಿತ್ತು. ಮಾಧ್ಯಮಗಳಿಂದ ನಿಶ್ಚಿತಾರ್ಥದ ಸುದ್ದಿ ತಿಳಿದು ಶಾಕ್ ಆಯಿತು ಎಂದು ನಟಿ ಮೈತ್ರೀಯಾ ಗೌಡ ಆರೋಪಿಸಿದ್ದಾರೆ. ಮಾಧ್ಯಮಗಳ ಮುಂದೆ ಬಂದರು. ಆದರೆ, ಮೈತ್ರಿಯಾ ಗೌಡ ಆರೋಪವನ್ನು ಸದಾನಂದ ಗೌಡರ ಮನೆಯವರು ತಳ್ಳಿಹಾಕಿದರು. [ಮೈತ್ರಿಯಾ ಗೌಡ ವಿವಾದವೇನು?]
ಆ.27, ರಾಘವೇಶ್ವರ ಶ್ರೀಗಳ ವಿರುದ್ಧ ದೂರು : ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳು ನಡೆಸುವ ರಾಮಕಥಾ ಕಾರ್ಯಕ್ರಮಕ್ಕೆ ತೆರಳಬಾರದು ಎಂದು ಕಲಾವಿದರಿಗೆ ಬೆದರಿಕೆ ಹಾಕಿರುವ ಆರೋಪದ ಮೇಲೆ ಗಾಯಕಿ ಪ್ರೇಮಲತಾ ದಿವಾವಕರ್ ದಂಪತಿಗಳನ್ನು ಬಂಧಿಸಲಾಯಿತು. ಇತ್ತ ರಾಘವೇಶ್ವರ ಸ್ವಾಮೀಜಿಗಳು ಪ್ರೇಮಲತಾ ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪ್ರೇಮಲತಾ ಪುತ್ರಿ ಶ್ರೀಗಳ ವಿರುದ್ಧ ದೂರು ನೀಡಿದರು.
ಸೆ.1. ಕರ್ನಾಟಕಕ್ಕೆ ನೂತನ ರಾಜ್ಯಪಾಲರು : ಕರ್ನಾಟಕದ 18ನೇ ರಾಜ್ಯಪಾಲರಾಗಿ ಗುಜರಾತ್ ಮೂಲದ ವಜುಭಾಯ್ ರುಡಾಭಾಯ್ ವಾಲಾ ಅವರು ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಎಚ್.ವಘೇಲಾ ಅವರು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನವನ್ನು ಬೋಧಿಸಿದರು. [ನೂತನ ರಾಜ್ಯಪಾಲರ ಪರಿಚಯ]
ಸೆಪ್ಟೆಂಬರ್ 3, ಕನ್ನಡಿಗ ದತ್ತು ಸುಪ್ರೀಂಕೋರ್ಟ್ ಸಿಜೆ : ಕನ್ನಡಿಗರಾದ ಎಚ್.ಎಲ್.ದತ್ತು ಅವರು ಮುಖ್ಯ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ ಎಂಬ ಪ್ರಕಟಣೆ ಹೊರಬಿತ್ತು. ಮುಖ್ಯ ನ್ಯಾಯಮೂರ್ತಿಯಾಗಿದ್ದ ಆರ್.ಎಂ.ಲೋಧಾ ಅವರಿಂದ ತೆರವಾದ ಸ್ಥಾನವನ್ನು ಕರ್ನಾಟಕದ ಹಂದ್ಯಾಲ ಲಕ್ಷ್ಮೀನಾರಾಯಣಸ್ವಾಮಿ ದತ್ತು (ಎಚ್.ಎಲ್. ದತ್ತು) ಅವರು ಅಲಂಕರಿಸಿದರು.
ಸೆಪ್ಟೆಂಬರ್ 3. ಚೆನ್ನೈಗೆ ಜೀವಂತ ಹೃದಯ ಸಾಗಣೆ : ಬೆಂಗಳೂರಿನಿಂದ ಜೀವಂತ ಹೃದಯವನ್ನು ಚೆನ್ನೈನ ಪೋರ್ಟಿಸ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ವ್ಯಕ್ತಿಯೊಬ್ಬರಿಗೆ ಅಳವಡಿಸಲಾಯಿತು. ಬೆಂಗಳೂರಿನ ಬಿಜಿಎಸ್ ಆಸ್ಪತ್ರೆ ವೈದ್ಯರು ಇಂತಹ ಸಾಹಸವನ್ನು ಮಾಡಿದರು. ಬಿಜಿಎಸ್ ಆಸ್ಪತ್ರೆಯಿಂದ ಜೀವಂತ ಹೃದಯವನ್ನು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಂದ ವಿಮಾನದ ಮೂಲಕ ಚೆನ್ನೈಗೆ ತೆಗೆದುಕೊಂಡು ಹೋಗಲಾಯಿತು.