ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ 2014 : ಸುದ್ದಿ, ಸದ್ದು ಮಾಡಿದ ಹಗರಣಗಳು

|
Google Oneindia Kannada News

2014 ಕರ್ನಾಟಕದ ಪಾಲಿಗೆ ಹಗರಣಗಳ ವರ್ಷವಾಯಿತು. ಸರಣಿ ಅತ್ಯಾಚಾರ ಪ್ರಕರಣಗಳು, ಸ್ವಾಮೀಜಿಗಳ ಸುದ್ದಿಯ ನಡುವೆ ಹಲವಾರು ಹಗರಣಗಳು ಬೆಳಕಿಗೆ ಬಂದವು. ಪ್ರತಿಪಕ್ಷ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧವೇ ಅಕ್ರಮ ಡಿನೋಟಿಫಿಕೇಶನ್ ಆರೋಪ ಮಾಡಿತು.

ಕರ್ನಾಟಕ ಈ ವರ್ಷ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿತು ಎಂದು ನಾವು ಎದೆಯುಬ್ಬಿಸಿ ಹೇಳಿಕೊಂಡರೂ, ಹಗರಗಳನ್ನು ಮರೆಯುವಂತಿಲ್ಲ. ಸಿಎಂ ಸಿದ್ದರಾಮಯ್ಯ ಅವರ ಸಂಪುಟದ ಸಹೋದ್ಯೋಗಿಗಳ ಮೇಲೆ ಹಲವಾರು ಆರೋಪಗಳು ಕೇಳಿಬಂದಿದ್ದು ಅವುಗಳ ತನಿಖೆ ನಡೆಯುತ್ತಿದೆ. [ಕರ್ನಾಟಕ 2014 : ಪ್ರಮುಖ ಘಟನಾವಳಿಗಳ ಹಿನ್ನೋಟ]

ಅರ್ಕಾವತಿ ಡಿನೋಟಿಫಿಕೇಶನ್, ಕೆಪಿಎಸ್‌ಸಿ, ವಕ್ಫ್ ಆಸ್ತಿ ಕಬಳಿಕೆ, ನಿವೇಶನ ಖರೀದಿ, ಭೂ ಒತ್ತುವರಿ ಹಗರಣಗಳು ಪ್ರಮಖವಾದವು. ಉಳಿದಂತೆ ಸ್ವಾಮೀಜಿಗಳು ವಂಚನೆ ಮಾಡಿದರು ಮತ್ತು ಕೇಂದ್ರ ಸಚಿವರ ಪುತ್ರ ವಂಚನೆ ಮಾಡಿದ್ದಾರೆ ಎಂಬ ಸುದ್ದಿಗಳು ರಾಜ್ಯದಲ್ಲಿ ಸದ್ದು ಮಾಡಿದವು. 2014ರ ಹಗರಣ ಮತ್ತು ವಂಚನೆ ಪ್ರಕರಣಗಳ flashback ಇಲ್ಲಿದೆ

ಬೆಳಕಿಗೆ ಬಂತು ರಾಮದಾಸ್ ವಂಚನೆ ಪ್ರಕರಣ

ಬೆಳಕಿಗೆ ಬಂತು ರಾಮದಾಸ್ ವಂಚನೆ ಪ್ರಕರಣ

ಮೈಸೂರು ಬಿಜೆಪಿ ಮುಖಂಡ ಮತ್ತು ಮಾಜಿ ಸಚಿವ ಎಸ್.ಎ.ರಾಮದಾಸ್ ಅವರ ವಂಚನೆ ಪ್ರಕರಣ ಫೆಬ್ರವರಿಯಲ್ಲಿ ಬೆಳಕಿಗೆ ಬಂದಿತು. ಪ್ರೇಮಕುಮಾರಿ ಎಂಬುವವರು ರಾಮದಾಸ್ ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಿದ್ದಾರೆ ಎಂದು ಪತ್ರಿಕಾಗೋಷ್ಠಿ ನಡೆಸಿದರು. ಇದರಿಂದ ನೊಂದ ರಾಮದಾಸ್ ಆತ್ಮಹತ್ಯೆಗೆ ಯತ್ನಿಸಿದರು. ಈ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ. [ವಿವರ ಇಲ್ಲಿದೆ]

ರಾಜಕೀಯ ಪಕ್ಷಗಳ ನಡುವೆ ಕೆಪಿಎಸ್‌ಸಿ ಕಲಹ

ರಾಜಕೀಯ ಪಕ್ಷಗಳ ನಡುವೆ ಕೆಪಿಎಸ್‌ಸಿ ಕಲಹ

ಹಣ ನೀಡಿದರೆ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಮಾಡುತ್ತೇವೆ ಎಂದು ಮೂವರು ಅಧಿಕಾರಿಗಳು ಲಂಚ ಕೇಳುವುದು ಖಾಸಗಿ ಸುದ್ದಿ ವಾಹಿನಿಯ ರಹಸ್ಯ ಕಾರ್ಯಾಚರಣೆಯಲ್ಲಿ ಬೆಳಕಿಗೆ ಬಂದಿತ್ತು. ನೇಮಕಾತಿ ಹಗರಣ ಬೆಳಕಿಗೆ ಬಂದಿದ್ದರಿಂದ 2011ರ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಆಯ್ಕೆಯಾದ 362 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯನ್ನು ಸರ್ಕಾರ ರದ್ದುಗೊಳಿಸಿ ಆದೇಶ ಹೊರಡಿಸಿತು. ಆದರೆ, ಅಕ್ರಮದಲ್ಲಿ ಏಳು ಅಭ್ಯರ್ಥಿಗಳು ಮಾತ್ರ ಭಾಗಿಯಾಗಿದ್ದಾರೆ. ಇದಕ್ಕಾಗಿ ಉಳಿದ ಅಭ್ಯರ್ಥಿಗಳ ಆಯ್ಕೆಯನ್ನು ಏಕೆ ರದ್ದುಗೊಳಿಸಬೇಕು? ಎಂದು ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದರು.[ಹೆಚ್ಚಿನ ಮಾಹಿತಿ ಇಲ್ಲಿದೆ]

ಆಗಸ್ಟ್‌ನಲ್ಲಿ ಅರ್ಕಾವತಿ ಹಗರಣದ ಸದ್ದು

ಆಗಸ್ಟ್‌ನಲ್ಲಿ ಅರ್ಕಾವತಿ ಹಗರಣದ ಸದ್ದು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಮಾಡಿದ ಅರ್ಕಾವತಿ ಡಿ ನೋಟಿಫಿಕೇಷನ್ ಆರೋಪ ರಾಜ್ಯದಲ್ಲಿ ಸದ್ದು ಮಾಡಿತು. ಕೋರ್ಟ್ ಮಾರ್ಗಸೂಚಿ ಅನ್ವಯ ಬೆಂಗಳೂರಿನ ಅರ್ಕಾವತಿ ನಿರ್ಮಾಣದ ಸ್ಥಳದಲ್ಲಿ 422.25 ಎಕರೆ ಜಮೀನನ್ನು ಅಧಿಸೂಚನೆಯಿಂದ ಕೈಬಿಡಲು 2013ರ ಫೆ.12ರಂದು ನಡೆದ ಬಿಡಿಎ ಆಡಳಿತ ಮಂಡಳಿ ಸಭೆ ನಿರ್ಣಯ ಕೈಗೊಂಡಿತ್ತು. ಆಗ ಸಿಎಂ ಆಗಿದ್ದ ಜಗದೀಶ್ ಶೆಟ್ಟರ್ ಈ ಕಡತಕ್ಕೆ ಸಹಿ ಹಾಕಿರಲಿಲ್ಲ. ಚುನಾವಣೆ ನಂತರ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿತು. ಆಗ 422.25 ಎಕರೆ ಜೊತೆಗೆ ಸಿದ್ದರಾಮಯ್ಯ ಅವರು ಹೆಚ್ಚುವರಿಯಾಗಿ 119 ಎಕರೆ ಸೇರಿಸಿ 541.25 ಎಕರೆ ಜಮೀನು ಡಿನೋಟಿಫಿಕೇಶನ್ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿತು.[ವಿವರ ಇಲ್ಲಿದೆ ನೋಡಿ]

ಶೆಟ್ಟರ್ ಕೊರಳಿಗೆ ಸುತ್ತಿಕೊಂಡ ಭೂ ಹಗರಣ

ಶೆಟ್ಟರ್ ಕೊರಳಿಗೆ ಸುತ್ತಿಕೊಂಡ ಭೂ ಹಗರಣ

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿರುದ್ಧ ಭೂ ಹಗರಣದ ಆರೋಪ ಕೇಳಿಬಂದಿತು. ಶ್ರೀಗಂಧ ಕಾವಲ್‌ನಲ್ಲಿನ 4 ಎಕರೆ ಭೂಮಿಯನ್ನು ಶೆಟ್ಟರ್ ಸಿಎಂ ಆಗಿದ್ದಾಗ ಅಕ್ರಮವಾಗಿ ಮಂಜೂರು ಮಾಡಿದ್ದಾರೆ ಎಂದು ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರೊ.ನಾಗರಾಜ್ ಆರೋಪಿಸಿದರು. 25 ವರ್ಷಗಳ ಹಿಂದೆಯೇ ನಿಧನರಾಗಿರುವ ಸ್ವಾತಂತ್ರ್ಯ ಹೋರಾಟಗಾರ ಸೂರ್ಯ ನಾರಾಯಣರಾವ್ ಅವರ ಪುತ್ರ ಎಸ್.ಸುಂದರೇಶ್ ಎಂಬುವವರಿಗೆ ಸಂಘದ ಸ್ವಾಧೀನದಲ್ಲಿರುವ 4 ಎಕರೆ ಜಮೀನನ್ನು ನೀಡಲಾಗಿದೆ. ಇದರ ಹಿಂದೆ ಭೂ ಮಾಫಿಯಾ ಕೈವಾಡವಿದೆ ಎಂದು ದೂರಿದ್ದರು. ಈ ಕುರಿತು ಬಿಎಂಟಿಎಫ್‌ಗೆ ಅವರು ದೂರನ್ನು ನೀಡಿದ್ದರು. [ವಿವರ ಇಲ್ಲಿದೆ ನೋಡಿ]

ದಿನೇಶ್ ಗುಂಡೂರಾವ್ ಭೂ ಹಗರಣ

ದಿನೇಶ್ ಗುಂಡೂರಾವ್ ಭೂ ಹಗರಣ

ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿರುವ ದಿನೇಶ್‌ ಗುಂಡೂರಾವ್‌ ಕುಟುಂಬದಿಂದ ಭೂಕಬಳಿಕೆ ಆಗಿದೆ ಎಂಬ ಆರೋಪ ಕೇಳಿಬಂದಿತು. ಭೂ ಕಬಳಿಕೆ ಕುರಿತು ಐದು ವಾರದೊಳಗೆ ವಾಸ್ತವಾಂಶ ವರದಿ ನೀಡುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಲೋಕಾಯುಕ್ತ ವೈ.ಭಾಸ್ಕರರಾವ್ ಸೂಚನೆ ನೀಡಿದರು. ಬೆಂಗಳೂರು ಉತ್ತರ ತಾಲೂಕಿನ ಜಾಲ ಹೋಬಳಿಯ ನವರತ್ನ ಅಗ್ರಹಾರ ಗ್ರಾಮದ ಸರ್ವೆ ನಂ.3 ಹಾಗೂ 13ರಲ್ಲಿ ಇರುವ 10.9 ಎಕರೆ ಸರ್ಕಾರಿ ಜಮೀನನ್ನು ಸಚಿವ ದಿನೇಶ್‌ ಗುಂಡೂರಾವ್‌ ಹಾಗೂ ಅವರ ಕುಟುಂಬ ಸದಸ್ಯರು ಕಬಳಿಸಿದ್ದಾರೆ ಎಂಬುದು ಆರೋಪ. ಸಚಿವ ದಿನೇಶ್ ಗುಂಡೂರಾವ್ ಕುಟುಂಬ ಭೂ ಕಬಳಿಕೆ ಮಾಡಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಅವರು ಮೊದಲು ಆರೋಪಿಸಿದ್ದರು.

ಅಂಬರೀಶ್ ವಿರುದ್ಧ ಅಕ್ರಮ ನಿವೇಶನ ಪಡೆದ ಆರೋಪ

ಅಂಬರೀಶ್ ವಿರುದ್ಧ ಅಕ್ರಮ ನಿವೇಶನ ಪಡೆದ ಆರೋಪ

ವಸತಿ ಸಚಿವ ಅಂಬರೀಶ್ ಬೆಂಗಳೂರು ಹಾಗೂ ಮೈಸೂರಿರು ಅಭಿವೃದ್ಧಿ ಪ್ರಾಧಿಕಾರಗಳಿಂದ ನಿವೇಶನಗಳನ್ನು ಪಡೆದುಕೊಂಡಿದ್ದಾರೆ ಎಂದು ಆರ್ ಟಿಐ ಕಾರ್ಯಕರ್ತ ರವೀಂದ್ರ ಆರೋಪಿಸಿದರು. ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ನಿವೇಶನವನ್ನು ಪಡೆದಿರುವ ಸಚಿವ ಅಂಬರೀಶ್ ಅವರು, ಮೈಸೂರು ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಗಳ ಮೂಲಕವೂ ನಿವೇಶನಗಳನ್ನು ಪಡೆದುಕೊಂಡಿದ್ದಾರೆ. ಒಂದು ಪ್ರಾಧಿಕಾರದಿಂದ ನಿವೇಶನ ಪಡೆದ ಮೇಲೆ ಮತ್ತೊಂದರಲ್ಲಿ ಪಡೆಯುವಂತಿಲ್ಲ ಎಂಬುದು ರವೀಂದ್ರ ಅವರ ಆರೋಪವಾಗಿದೆ.

ಖಮರುಲ್‌ ಇಸ್ಲಾಂ ಕೊರಳಿಗೆ ಭೂ ಹಗರಣ

ಖಮರುಲ್‌ ಇಸ್ಲಾಂ ಕೊರಳಿಗೆ ಭೂ ಹಗರಣ

ವಕ್ಫ್ ಆಸ್ತಿ ಕಬಳಿಕೆ ಹಗರಣ ಸಚಿವ ಖಮರುಲ್‌ ಇಸ್ಲಾಂ ಕೊರಳಿಗೆ ಸುತ್ತಿಕೊಂಡಿತು. ಭೂ ಕಬಳಿಕೆಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆದೇಶ ನೀಡಿತು. ಕೋಲಾರದ ತಬ್ರೇಜ್‌ ಪಾಷಾ ಎಂಬುವವರು ನ್ಯಾಯಾಲಯದಲ್ಲಿ ಸಚಿವರ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು. ಗುಲ್ಬರ್ಗದ ಬಡೇಪುರ ಪ್ರದೇಶದ ಸರ್ವೆ ನಂಬರ್‌ 12ರಲ್ಲಿ ಖಾಜಾ ಬಂದೇನವಾಜ್‌ ದರ್ಗಾಕ್ಕೆ ಸೇರಿದ 8.34 ಎಕರೆ ಜಮೀನನ್ನು ಸಚಿವರು ಆಕ್ರಮವಾಗಿ ಕಬಳಿಸಿದ್ದಾರೆ ಎಂಬುದು ಆರೋಪ.

ಸಚಿವ ಮಹದೇವ ಪ್ರಸಾದ್ ಭೂ ಹಗರಣ

ಸಚಿವ ಮಹದೇವ ಪ್ರಸಾದ್ ಭೂ ಹಗರಣ

ಭೂ ಹಗರಣಕ್ಕೆ ಸಂಬಂಧಿಸಿದಂತೆ ಸಹಕಾರ ಸಚಿವ ಮಹದೇವ ಪ್ರಸಾದ್ ವಿರುದ್ಧ ತನಿಖೆ ನಡೆಸುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಕರ್ನಾಟಕ ಗೃಹ ಮಂಡಳಿ ಬಡವರಿಗೆಂದು ಮೀಸಲಾಗಿಟ್ಟಿದ್ದ ನಿವೇಶವನ್ನು ಮಹದೇವ ಪ್ರಸಾದ್ ಅಕ್ರಮವಾಗಿ ಖರೀದಿಸಿದ್ದಾರೆ ಎಂಬುದು ಆರೋಪ. ಈ ಕುರಿತು ಚಾಮರಾಜನಗರ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು. ಅದರ ತನಿಖೆ ವಿಳಂಬವಾಗುತ್ತಿದೆ ಎಂದು ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಗೃಹ ಮಂಡಳಿ ನಿವೇಶನ ಖರೀದಿ ಮಾಡಬೇಕಾದರೆ ಅರ್ಜಿದಾರರು ಬೇರೆಲ್ಲೂ ನಿವೇಶನ ಹೊಂದಿರಬಾರದು. ಆದರೆ, ಮಹದೇವ ಪ್ರಸಾದ್ ಮೈಸೂರು, ಗುಡ್ಲುಪೇಟೆ, ಹಾಲಹಳ್ಳಿ ಪ್ರದೇಶಗಳಲ್ಲಿ ನಿವೇಶನ ಹೊಂದಿದ್ದಾರೆ ಎಂದು ದೂರು ದಾಖಲಾಗಿತ್ತು.

ವಂಚನೆ ಆರೋಪ ಮಾಡಿದ ಮೈತ್ರಿಯಾ ಗೌಡ

ವಂಚನೆ ಆರೋಪ ಮಾಡಿದ ಮೈತ್ರಿಯಾ ಗೌಡ

ಕೇಂದ್ರ ಸಚಿವ ಡಿವಿ ಸದಾನಂದ ಗೌಡರ ಪುತ್ರ ಕಾರ್ತಿಕ್ ಗೌಡ ನಿಶ್ಚಿತಾರ್ಥ ಮಡಿಕೇರಿಯಲ್ಲಿ ನಡೆಯಿತು. ನಂತರ ಮಾಧ್ಯಮಗಳ ಮುಂದೆ ಬಂದ ನಟಿ ಮೈತ್ರಿಯಾ ಗೌಡ ಅವರು, ಕಾರ್ತಿಕ್ ಮತ್ತು ನನ್ನ ವಿವಾಹವಾಗಿದೆ. ಈಗ ಅವರು ಬೇರೆ ಯುವತಿಯೊಂದಿಗೆ ವಿವಾಹವಾಗುವ ಮೂಲಕ ನನಗೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು. ಆದರೆ, ಸಚಿವ ಡಿ.ವಿ ಸದಾನಂದಗೌಡ ಅವರ ಕುಟುಂಬ ಆರೋಪವನ್ನು ತಳ್ಳಿ ಹಾಕಿತು. "ನನಗೆ ಈಗ ಅನ್ಯಾಯವಾಗಿದೆ. ನನಗೆ ಬೇರೆ ಯಾವ ಉದ್ದೇಶನೂ ಇಲ್ಲ. ನನ್ನನ್ನು ಸೊಸೆ ಎಂದು ಒಪ್ಪಿಕೊಳ್ಳಿ. ನನಗೆ ಮೋಸ ಮಾಡಬೇಡಿ, ನಾನು ಈಗಲೂ ಕಾರ್ತಿಕ್ ನನ್ನು ಪ್ರೀತಿಸುತ್ತೇನೆ ಎಂದು ಮೈತ್ರಿಯಾ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರು.

ಧಾರವಾಡ ವಿಶ್ವವಿದ್ಯಾಲಯದ ಹಗರಣ

ಧಾರವಾಡ ವಿಶ್ವವಿದ್ಯಾಲಯದ ಹಗರಣ

ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ನಡೆದಿದೆ ಎನ್ನಲಾದ ಅಕ್ರಮ ನೇಮಕಾತಿ ಮತ್ತು ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿ ಕುಲಪತಿ ಡಾ.ಎಚ್‌.ಬಿ.ವಾಲೀಕಾರ ಸೇರಿದಂತೆ ಮೂವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದರು. ಡಾ.ಎಚ್.ಬಿ.ವಾಲೀಕಾರ ಅವರನ್ನು ವಿಚಾರಣೆ ನಡೆಸಿ, ವಿವಿ ಆಡಳಿತ ಕಟ್ಟಡದಲ್ಲಿರುವ ಕುಲಪತಿಗಳ ಕಚೇರಿಯಿಂದಲೇ ಅವರನ್ನು ಬಂಧಿಸಲಾಯಿತು.

ರಾಘವೇಶ್ವರ ಶ್ರೀಗಳ ವಿರುದ್ಧ ದೂರು

ರಾಘವೇಶ್ವರ ಶ್ರೀಗಳ ವಿರುದ್ಧ ದೂರು

ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳು ನಡೆಸುವ ರಾಮಕಥಾ ಕಾರ್ಯಕ್ರಮಕ್ಕೆ ತೆರಳಬಾರದು ಎಂದು ಕಲಾವಿದರಿಗೆ ಬೆದರಿಕೆ ಹಾಕಿರುವ ಆರೋಪದ ಮೇಲೆ ಗಾಯಕಿ ಪ್ರೇಮಲತಾ ದಿವಾವಕರ್ ದಂಪತಿಗಳನ್ನು ಬಂಧಿಸಲಾಯಿತು. ಇತ್ತ ರಾಘವೇಶ್ವರ ಸ್ವಾಮೀಜಿಗಳು ಪ್ರೇಮಲತಾ ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪ್ರೇಮಲತಾ ಪುತ್ರಿ ಶ್ರೀಗಳ ವಿರುದ್ಧ ದೂರು ನೀಡಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘವೇಶ್ವರ ಶ್ರೀಗಳ ವೈದ್ಯಕೀಯ ಪರೀಕ್ಷೆಯೂ ನಡೆಯಿತು. ಪ್ರಕರಣವ ವಿಚಾರಣೆಯನ್ನು ಸಿಐಡಿ ನಡೆಸುತ್ತಿದೆ.

English summary
In year 2014 Karnataka witnessed for Several Scams. Here is a look at the top scam that unfolded in Karnataka in 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X