ಕನ್ನಡ ದಿನಪತ್ರಿಕೆಗಳು ಕಂಡಂತೆ ಪಂಚ ರಾಜ್ಯ ಚುನಾವಣೆ ಫಲಿತಾಂಶ
ಬೆಂಗಳೂರು, ಡಿಸೆಂಬರ್ 12: ನಿನ್ನೆ (ಡಿಸೆಂಬರ್ 11) ಹೊರಬಿದ್ದ ಪಂಚ ರಾಜ್ಯ ಚುನಾವಣಾ ಫಲಿತಾಂಶವು ಸದ್ಯದ ಅತಿ ಮಹತ್ವದ ಘಟನೆ. ಲೋಕಸಭೆ ಚುನಾವಣೆಗೆ ಮುನ್ನಾ ಬಿಜೆಪಿಯ ಕಮಲ ಕಮರಿರುವುದು ಅದಕ್ಕೆ ಬಹು ಮುಖ್ಯ ಕಾರಣ.
ಭಾರತದ ಬಹುತೇಕ ಪತ್ರಿಕೆಗಳು, ಟಿವಿಗಳು ಚುನಾವಣೆಯನ್ನು ಪ್ರಥಮ ಆದ್ಯತೆಯ ವಿಷಯವನ್ನಾಗಿ ಪ್ರಕಟಿಸಿವೆ. ಕನ್ನಡದ ದಿನಪತ್ರಿಕೆಗಳೆಲ್ಲವೂ ಸಹ ಪಂಚ ರಾಜ್ಯ ಚುನಾವಣೆಗೆ ಹೆಚ್ಚಿನ ಮಹತ್ವ ನೀಡಿವೆ.
ಕನ್ನಡ ದಿನಪತ್ರಿಕೆಗಳು ಪಂಚ ರಾಜ್ಯ ಚುನಾವಣೆ ತೀರ್ಪನ್ನು ಹೇಗೆ ಗಮನಿಸಿವೆ. ಯಾವ ಪತ್ರಿಕೆ ಯಾವುದಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಇನ್ನೂ ಹಲವು ವಿಚಾರಗಳು ಇಲ್ಲಿ ನೀಡಲಾಗಿದೆ.
ಕನ್ನಡ ದಿನಪತ್ರಿಕೆಗಳು ನೀಡಿರುವ ತಲೆಬರೆಹ, ಫಲಿತಾಂಶವನ್ನು ಕವರ್ ಮಾಡಿರುವ ರೀತಿಯ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ...
ಮುದುಡಿದ ತಾವರೆ: ಪ್ರಜಾವಾಣಿ
ಪ್ರಜಾವಾಣಿ ಪತ್ರಿಕೆಯು ಮುಖಪಟದ ಅರ್ಧ ಭಾಗವನ್ನು ಚುನಾವಣೆ ಫಲಿತಾಂಶದ ವರದಿಗೆ ಮೀಸಲಿಟ್ಟಿದೆ. ಆರು ಕಾಲಂಗಳಲ್ಲಿ 'ಮುದುಡಿದ ತಾವರೆ, 'ಕೈ'ಗೆ ಆಸರೆ' ಎಂಬ ಆಕರ್ಷಕ ತಲೆಬರೆಹ ನೀಡಿದೆ. ಇದರ ಹೊರತಾಗಿ 4 ಮತ್ತು 5 ನೇ ಪುಟದಲ್ಲಿ ಪೂರ್ತಿಯಾಗಿ ಚುನಾವಣಾ ಫಲಿತಾಂಶದ ಸುದ್ದಿಗಳನ್ನೇ ನೀಡಿದೆ. ಆಕರ್ಷಕ ಚಿತ್ರಗಳು ಜೊತೆಗೆ ರಾಜಕೀಯ ಮುಖಂಡರ ಹೇಳಿಕೆಗಳನ್ನು ನೀಡಿದೆ. ರಾಜ್ಯದ ಮೇಲೆ ಚುನಾವಣೆಯ ಫಲಿತಾಂಶದ ಪ್ರಭಾವವನ್ನು ವಿಶ್ಲೇಷಿಸಿದೆ.
'ಕೈ ಪಂಚ್ಗೆ ಬಿಜೆಪಿ ಥಂಡಾ!'
ವಿಜಯಕರ್ನಾಟಕವು 'ಕೈ ಪಂಚ್ಗೆ ಬಿಜೆಪಿ ಥಂಡಾ!' ಎಂದು ಸ್ಲಾಗ್ ಮಾದರಿಯ ಹೆಡ್ಲೈನ್ ಪ್ರಕಟಿಸಿದೆ. ಐದೂ ರಾಜ್ಯಗಳ ಫಲಿತಾಂಶವನ್ನು ಮೊದಲ ಪುಟದಲ್ಲಿ ನೀಡಿದೆ. 10 ಮತ್ತು 11 ನೇ ಪುಟದಲ್ಲಿ ಸಹ ಚುನಾವಣಾ ಫಲಿತಾಂಶದ ವರದಿಗಳನ್ನು ನೀಡಿದೆ. ಗೆದ್ದು 'ರಾಜ'ಸ್ಥಾನಕ್ಕೇರಿದ ಕಾಂಗ್ರೆಸ್ ಹೆಡ್ಲೈನ್ ಸೆಳೆಯುತ್ತದೆ. ಐದೂ ರಾಜ್ಯಗಳ ಫಲಿತಾಂಶದ ಬಗ್ಗೆ ವಿಶ್ಲೇಷಣಾತ್ಮಕ ವರದಿ ನೀಡಲಾಗಿದೆ.
ಕಾಂಗ್ರೆಸ್ 'ತ್ರಿ'ವಿಕ್ರಮ: ವಿಜಯವಾಣಿ
ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಗೆದ್ದಿರುವುದನ್ನು ಸೂಚ್ಯಗೊಳಿಸುವ 'ಕಾಂಗ್ರೆಸ್ 'ತ್ರಿ'ವಿಕ್ರಮ, ಕಮಲ ಕಂಪನ' ಹೆಡ್ಲೈನ್ ನೀಡಿದೆ ವಿಜಯವಾಣಿ. ಐದೂ ರಾಜ್ಯಗಳ ಫಲಿತಾಂಶ, ಯಾವ ರಾಜ್ಯದಲ್ಲಿ ಸಿಎಂ ಯಾರಾಗಲಿದ್ದಾರೆಂಬ ಮಾಹಿತಿ, ಸಂಭ್ರಮಾಚರಣೆಯ ಚಿತ್ರ, ರಾಹುಲ್-ಮೋದಿ ಹೇಳಿಕೆಗಳು ಮೊದಲ ಪುಟದಲ್ಲಿವೆ. ಎಂಟನೇ ಪುಟದಲ್ಲಿ ಐದೂ ರಾಜ್ಯಗಳ ಫಲಿತಾಂಶದ ವಿಶ್ಲೇಷಣಾತ್ಮಕ ಸುದ್ದಿಗಳಿವೆ. ಆರನೇ ಪುಟದಲ್ಲಿ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ಬೀರುವ ಪರಿಣಾಮದ ವರದಿ ಇದೆ.
ಐದು ಪುಟ ಮೀಸಲಿಟ್ಟಿದೆ ಕೆಪಿ
'ಕೈಗೆ ಅಚ್ಛೇ ದಿನ್!' ಎಂದು ಕುಟುಕು ಹೆಡ್ಲೈನ್ ನೀಡಿದೆ ಕನ್ನಡ ಪ್ರಭ. ಮೊದಲ ಪುಟದಲ್ಲಿ ಪಂಚ ರಾಜ್ಯಗಳ ಫಲಿತಾಂಶದ ಅಂಕಿ-ಅಂಶದ ಜೊತೆಗೆ, ಈ ಮುಂಚೆ ಬಿಜೆಪಿ ಆಡಳಿತವಿದ್ದ ರಾಜ್ಯಗಳು ಈಗ ಇರುವ ರಾಜ್ಯಗಳ ನಕ್ಷೆಯನ್ನು ನೀಡಿರುವುದು ಮಾಹಿತಿಪೂರ್ಣವಾಗಿದೆ. 6,7,8,9 ನೇ ಪುಟಗಳಲ್ಲಿ ಫಲಿತಾಂಶದ ವಿಶ್ಲೇಷಣೆಯ ಸುದ್ದಿಗಳು ಇವೆ. 8 ನೇ ಪುಟದಲ್ಲಿ ಫಲಿತಾಂಶ ರಾಜ್ಯಸರ್ಕಾರದ ಮೇಲೆ ಬೀರಲಿರುವ ಪರಿಣಾಮದ ಬಗ್ಗೆ ವರದಿ ಇದೆ.
ಕೈ ಪುಳಕ, ಕಮಲ ನಡುಕ: ಸಂಯುಕ್ತ ಕರ್ನಾಟಕ
ಭಿನ್ನವಾದ ಪುಟ ವಿನ್ಯಾಸ ಹಾಗೂ ದೊಡ್ಡ ಫಾಂಟ್ ಹೆಡ್ಲೈನ್ ಹಾಗೂ ಸಬ್ಹೆಡ್ಲೈನ್ನಿಂದ ಸಂಯುಕ್ತಕರ್ನಾಟದ ಪಂಚ ರಾಜ್ಯ ಫಲಿತಾಂಶವನ್ನು ಹೇಳಿದೆ. 'ಕೈ ಪುಳಕ, ಕಮಲ ನಡುಕ' ಇದು ಸಂಕ ದ ಹೆಡ್ಲೈನ್. ಇದನ್ನು ಹೊರತುಪಡಿಸಿ 6 ಮತ್ತು 7 ನೇ ಪುಟದಲ್ಲಿ ಫಲಿತಾಂಶದ ವಿವರಗಳನ್ನು, ಚಿತ್ರಗಳನ್ನು ಪ್ರಕಟಿಸಿದೆ. ಪುಟಗಳ ವಿನ್ಯಾಸ ವಿನೂತನವಾಗಿದೆ.
ಕಾಂಗ್ರೆಸ್ಗೆ ಅಚ್ಛೆ ದಿನ್!: ವಿಶ್ವವಾಣಿ
ವಿಶ್ವವಾಣಿಯು 'ಕಾಂಗ್ರೆಸ್ಗೆ ಅಚ್ಛೆದಿನ್' ಎಂಬ ಹೆಡ್ಲೈನ್ ನೀಡಿದೆ. ಇದೇ ರೀತಿಯ ಹೆಡ್ಲೈನ್ ಅನ್ನು ಕನ್ನಡಪ್ರಭ ಸಹ ನೀಡಿದೆ. ಮೊದಲ ಪುಟದಲ್ಲಿ ದೊಡ್ಡ ಚಿತ್ರಗಳ ಬದಲಿಗೆ ಸಣ್ಣ ಅಂಕಿ-ಅಂಶದ ಬಾಕ್ಸ್ ಬಳಸಿ ಫಲಿತಾಂಶದ ಮಾಹಿತಿ ನೀಡಿದೆ. ಮೊದಲ ಪುಟ ಬಿಟ್ಟರೆ ಒಳಗಿನ ಪುಟಗಳಲ್ಲಿ ಚುನಾವಣೆ ಬಗ್ಗೆ ವರದಿಗಳಿಲ್ಲ. ವಿಶ್ವವಾಣಿಯು ಇತರ ಪತ್ರಿಕೆಗಳಿಗಿಂತಲೂ ಕಡಿಮೆ ಪ್ರಾಸ್ತ್ಯವನ್ನು ಚುನಾವಣೆಗೆ ನೀಡಿದೆ.
ಬಿಜೆಪಿ 'ಪಂಚ'ರ್: ವಾರ್ತಾಭಾರತಿ
ವಾರ್ತಾಭಾರತಿಯು 'ಬಿಜೆಪಿ 'ಪಂಚ'ರ್' ಎಂದು ಪವರ್ಫುಲ್ ಹೆಡ್ಲೈನ್ ಕೊಟ್ಟಿದೆ. ಪುಟ 7 ಮತ್ತು 8 ರಲ್ಲಿ ಚುನಾವಣೆಯ ಪೂರ್ಣ ವರದಿಗಳು, ಚಿತ್ರಗಳು, ಮಾಹಿತಿ ನೀಡಲಾಗಿದೆ.