ಕರ್ನಾಟಕ ಬಂದ್ ಮಕ್ಕಳಾಟ ಆಗೋಯ್ತಾ?
ಮಹದಾಯಿ ನದಿನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ಮತ್ತೊಂದು ಬಂದ್ ಗೆ ಸಜ್ಜಾಗಬೇಕಾಗಿದೆ. ವಿವಿಧ ಕನ್ನಡಪರ ಸಂಘಟನೆಗಳು ಶನಿವಾರ (ಜುಲೈ 30) ಕರ್ನಾಟಕ ಬಂದ್ ಗೆ ಕರೆನೀಡಿದೆ. ಸಾರಿಗೆ ಸಂಸ್ಥೆ ಸಿಬ್ಬಂದಿಗಳ ಬಂದ್ ನಿಂದ ಈಗಾಗಲೇ ಸುಸ್ತಾಗಿದ್ದ ಸಾರ್ವಜನಿಕರಿಗೆ ಮತ್ತೊಂದು ಬಂದ್ ನ ಬಿಸಿಮುಟ್ಟಲಿದೆ.
ಬಂದ್ ನಡೆಸುವುದು ತಪ್ಪು ಎನ್ನುವ ಉದ್ದೇಶವಲ್ಲದಿದ್ದರೂ ಕಾವೇರಿ, ಡಿ ಕೆ ರವಿ, ಕೃಷ್ಣಾ, ಎತ್ತಿನಹೊಳೆ, ಪರಭಾಷಾ ಚಿತ್ರ ಪ್ರದರ್ಶನ, ತೈಲಬೆಲೆ ಏರಿಕೆ, ಮಹದಾಯಿ ಮುಂತಾದ ವಿಚಾರಗಳಲ್ಲಿ ನಡೆದ ಬಂದ್ ನಿಂದಾಗಿ ಬೇಡಿಕೆ ಈಡೇರಿತು ಎನ್ನುವುದಕ್ಕಿಂತ ಹೆಚ್ಚಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು ಎನ್ನುವುದು ವಾಸ್ತವತೆ. (ಮಹದಾಯಿ ಹೋರಾಟ, ಅನ್ನದಾತರ ಬಂಧನ)
ಪ್ರಮುಖವಾಗಿ ನದಿನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ಸತತ ಸೋಲು ಅನುಭವಿಸುತ್ತಿರುವ ಹಿನ್ನಲೆಯಲ್ಲಿ, ಎಲ್ಲಿ ನಾವು ಎಡವುತ್ತಿದ್ದೇವೆ ಎನ್ನುವುದನ್ನು ಪರಾಮರ್ಶಿಸುವ ಗೋಜಿಗೇ ಹೋಗದ ನಮ್ಮ ಸಂಘಟನೆಗಳು ಬಂದ್ ಗೆ ಕರೆನೀಡಿ, ರಸ್ತೆತಡೆ ನಡೆಸುತ್ತಿರುವುದು ದು:ಖದ ವಿಚಾರ.
ನಮ್ಮ ಜನಪ್ರತಿನಿಧಿಗಳು ಒಟ್ಟಾಗಿ ಪ್ರಧಾನಮಂತ್ರಿಗಳ ಬಳಿ ನಿಯೋಗ ಕರೆದುಕೊಂಡು ಹೋಗಿ ಮನವಿ ಪತ್ರವನ್ನು ಸಲ್ಲಿಸುವ ಕಣ್ಣೊರೆಸುವ ತಂತ್ರವನ್ನು ಮಾತ್ರ ಮಾಡುತ್ತಿದೆ.
ಮಹದಾಯಿ ವಿಚಾರದಲ್ಲಿ ಸರ್ವಪಕ್ಷಗಳ ನಿಯೋಗ ಪ್ರಧಾನಿ ಬಳಿ ಹೋಗಿದ್ದಾಗ, ಗೋವಾ ಸಿಎಂ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಪಿಎಂ ಹೇಳಿದ್ದರು. (ವಾಟಾಳ್ ನಾಗರಾಜ್ ಸಂದರ್ಶನ)
ಅಲ್ಲಿನ ಮುಖ್ಯಮಂತ್ರಿ ಪೂರಕವಾಗಿ ಸ್ಪಂದಿಸದಿದ್ದರೂ, ಗೋವಾ ಸಿಎಂ ಜೊತೆ ಪತ್ರ ವ್ಯವಹಾರ ನಡೆಸಿದ್ದನ್ನು ಬಿಟ್ಟರೆ, ರಾಜ್ಯದ ಮುಖಂಡರು ಸಮಸ್ಯೆ ಪರಿಹಾರಕ್ಕೆ ಗೋವಾದ ಜೊತೆ ಪ್ರಯತ್ನವನ್ನು ಮುಂದುವರಿಸಲೇ ಇಲ್ಲ. (ಮಹದಾಯಿ: ಕನ್ನಡಿಗರು ಗಮನಿಸಬೇಕಾಗಿದ್ದು)
ರಾಜಕೀಯ ನಾಯಕರ ಇಚ್ಚಾಶಕ್ತಿಯ ಕೊರತೆಯಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ, ರಾಜ್ಯಕ್ಕೆ ದಿನೇ ದಿನೇ ಸೋಲಾಗುತ್ತಿದೆ. ಮಾತೆತ್ತಿದರೆ ಬಂದ್ ಗೆ ಕರೆನೀಡುವ ನಮ್ಮ ಸಂಘಟನೆಗಳಲ್ಲಿ, ರಾಜಕೀಯ ಮುಖಂಡರಿಗೆ ಐದು ಪ್ರಶ್ನೆಗಳು
ಸಚಿವರ, ಶಾಸಕ, ಸಂಸದರ ನಿವಾಸದ ಮುಂದೆ ಪ್ರತಿಭಟನೆ
ಬಂದ್ ನಿಂದ ತೊಂದರೆಯಾಗುವುದು ಜನಸಾಮಾನ್ಯರಿಗೆ ಹೊರತು, ಜನಪ್ರತಿನಿಧಿಗಳಿಗಲ್ಲ. ಸಂಸತ್ತಿನಲ್ಲಿ ಎಲ್ಲೋ ಒಮ್ಮೊಮ್ಮೆ ಧ್ವನಿ ಎತ್ತಿದ್ದನ್ನು ಬಿಟ್ಟರೆ, ಇವರಿಂದ ಬೇರೇನೂ ಆಗಿಲ್ಲ. ಹಾಗಿದ್ದರೂ, ಇವರ ನಿವಾಸ ಅಥವಾ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಯಾಕೆ ಇವರಿಗೆ ಬಿಸಿ ಮುಟ್ಟಿಸುತ್ತಿಲ್ಲ?
ವಾಟಾಳ್ ಪ್ರತಿಭಟನೆ
ವಾಟಾಳ್ ನಾಗರಾಜ್ ಪ್ರತಿಭಟನೆ ಅನ್ನೋದು 'ತಮಾಷೆ' ಎಂತಾಗಿದೆ. ಮೆಜೆಸ್ಟಿಕ್ ಪ್ರದೇಶಕ್ಕೆ ಸೀಮಿತವಾಗಿರುವ ಇವರ ಹೋರಾಟದಿಂದ ಟ್ರಾಫಿಕ್ ಜಾಮ್ ಆಗುವುದು ಬಿಟ್ಟರೆ, ಬೇರೇನೂ ಆಗುತ್ತಿಲ್ಲ. ಪದೇಪದೇ ಬಂದ್ ಗೆ ಕರೆನೀಡಿ, ಹೋರಾಟ ಮಾಡುತ್ತಿರುವುದರಿಂದ ರಾಜ್ಯಕ್ಕೆ ಏನಾದರೂ ಉಪಯೋಗವಾಗುತ್ತಿದೆಯೇ ಎಂದು ವಾಟಾಳರು ಆತ್ಮವಿಮರ್ಶೆ ಮಾಡಿಕೊಳ್ಳುವುದು ಯಾವಾಗ?
ಕನ್ನಡಪರ ಸಂಘಟನೆಗಳ ಹೋರಾಟ
ರಾಜ್ಯ, ಭಾಷೆಯ ವಿಚಾರದಲ್ಲಿ ಕನ್ನಡದ ಎಲ್ಲಾ ಸಂಘಟನೆಗಳು ಒಟ್ಟಾದ ಉದಾಹರಣೆಗಳು ಕಮ್ಮಿ. ಕನ್ನಡಪರ ಸಂಘಟನೆಗಳಲ್ಲಿ ಒಗ್ಗಟ್ಟಿಲ್ಲ ಎನ್ನುವುದು ಎಷ್ಟೋ ಬಾರಿ ಜಗಜ್ಜಾಹೀರಾಗಿದೆ. ಬಂದ್ ಗೆ ಕರೆನೀಡುವ ಮೊದಲು, ನಿಮ್ಮಲ್ಲಿರುವ ಭಿನ್ನಾಭಿಪ್ರಾಯವನ್ನು ಮೊದಲು ಸರಿಪಡಿಸಿಕೊಳ್ಳಬಹುದಲ್ಲವೇ?
ರಾಜ್ಯ ವಕೀಲ ಪ್ರತಿನಿಧಿಗಳು
ಕಾವೇರಿ ಅಥವಾ ಮಹದಾಯಿ ನದಿನೀರಿನ ಹಂಚಿಕೆ ವಿಚಾರದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ವಕೀಲರು ಸಮರ್ಥರಾಗಿದ್ದಾರೆಯೇ. ನಾರಿಮನ್, ಜೇಠ್ಮಲಾನಿ ಮುಂತಾದ ಹಿರಿಯ ವಕೀಲರು ರಾಜ್ಯದ ಪರವಾಗಿ ವಾದ ಮಂಡಿಸಿದ್ದರೂ, ರಾಜ್ಯಕ್ಕೆ ಯಾಕೆ ಹಿನ್ನಡೆಯಾಗುತ್ತಿದೆ. ಬಂದ್ ಗೆ ಕರೆ ನೀಡುವ ಬದಲು ಸಮರ್ಥ ವಕೀಲರನ್ನು ನೇಮಿಸುವಂತೆ ಸರಕಾರಕ್ಕೆ ಒತ್ತಡ ತರುವ ಕೆಲಸ ಮಾಡಬಹುದಿತ್ತಲ್ಲವೇ?
ನ್ಯಾಯಾಧಿಕರಣ ಮಂಡಳಿ
ಪದೇ ಪದೇ ಬಂದ್ ಗೆ ಕರೆ ನೀಡುವ ಬದಲು ನದಿನೀರು ಟ್ರಿಬ್ಯುನಲ್ ಸದಸ್ಯರನ್ನು ಭೇಟಿಯಾಗಿ ಅಹವಾಲು ಸಲ್ಲಿಸುವ ಕೆಲಸ ಕನ್ನಡ ಸಂಘಟನೆಗಳಿಂದ ಯಾಕಾಗುತ್ತಿಲ್ಲ? ಮಂಡಳಿಯ ಸದಸ್ಯರು ವೀಕ್ಷಣೆಗೆಂದು ಬಂದಾಗ, ವಸ್ತುಸ್ಥಿತಿಯನ್ನು ವಿವರಿಸುವ ಕೆಲಸಕ್ಕೆ ಯಾವ ಸಂಘಟನೆಯ ಸದಸ್ಯರು ಯಾಕೆ ಮುಂದಾಗಲಿಲ್ಲ?