ಸಿದ್ದರಾಮಯ್ಯ ಆರೋಪಕ್ಕೆ ʼಪಂಚ್ʼ ಕೊಟ್ಟ ಐದು ಸಚಿವರು!
ಬೆಂಗಳೂರು, ಜು. 23: ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷಗಳ ನಾಯಕರಿಂದ ಇವತ್ತು ನಾಡಿನ ಜನತೆಗೆ ಮತ್ತೊಮ್ಮೆ ಮಹಾಭಾರತ ಕಥೆ ಕೇಳುವ ಅವಕಾಶ ಒದಗಿ ಬಂದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ಸರ್ಕಾರವನ್ನು ಕೌರವರಿಗೆ ಹೋಲಿಕೆ ಮಾಡಿದರೆ, ಕಾಂಗ್ರೆಸ್ ನಾಯಕರಿಗೆ ಸಚಿವರು ಮಹಾಭಾರತದ ಕಥೆ ಹೇಳುವ ಮೂಲಕ ತಿರುಗೇಟು ಕೊಟ್ಟರು.
ವೆಂಟಿಲೇಟರ್ಸ್ ಸೇರಿದಂತೆ ಕೋವಿಡ್ ಕಾಲದಲ್ಲಿ ಮಾಡಲಾದ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಹಗರಣದ ನಡದಿದೆ ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರು ದಾಖಲೆ ಬಿಡುಗಡೆ ಮಾಡಿದರು. ಅದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರದ ಐವರು ಸಚಿವರು ಜಂಟಿ ಸುದ್ದಿಗೋಷ್ಠಿ ನಡೆಸಿ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ದಾಖಲೆ ಬಿಡುಗಡೆ ಮಾಡಿದರು.
2000 ಕೋಟಿ ರೂ. ನುಂಗಿ ಹಾಕಿತಾ ಬಿಜೆಪಿ ಸರ್ಕಾರ?
ರಾಜ್ಯದ ಜನತೆ ಮಾತ್ರ ಜೀವ ಉಳಿಸಿಕೊಳ್ಳಲು ಮನೆಯಲ್ಲಿದ್ದುಕೊಂಡೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ಆರೋಪ ಪ್ರತ್ಯಾರೋಪಗಳನ್ನು ಮೂಕವಿಸ್ಮಿತರಾಗಿ ಆಲಿಸಿದರು. ಸಚಿವರಾದ ಆರ್. ಅಶೋಕ್, ಡಾ. ಸುಧಾಕರ್, ಶ್ರೀರಾಮುಲು, ಡಾ. ಅಶ್ವಥ್ ನಾರಾಯಣ ಹಾಗೂ ಶಿವರಾಂ ಹೆಬ್ಬಾರ್ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಾಗಾದರೆ ಪಂಚ ಸಚಿವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ವಿವರ.
ವಿಶ್ವ ನಂ. 1 ವೆಂಟಿಲೇಟರ್
ವಿಶ್ವದ ನಂಬರ್ 1 ವೆಂಟಿಲೇಟರ್ನ್ನು ಕೇವಲ 13 ಲಕ್ಷ ರೂಪಾಯಿಗಳಿಗೆ ತಂದಿದ್ದೇವೆ. ಕಡಿಮೆ ಬೆಲೆಗೆ ವೆಂಟಿಲೇಟರರ್ಸ್ ಖರೀದಿಸಿದ್ದಕ್ಕೆ ನೀವು ನಮ್ಮ ಬೆನ್ನು ತಟ್ಟಬೇಕಾಗಿತ್ತು. ಆದರೆ ಅದನ್ನು ಮಾಡದೇ ಯಾವ ಬಾಯಲ್ಲಿ ಆಪಾದನೆ ಮಾಡುತ್ತಿದ್ದೀರಿ? ಏನು ದಾಖಲೆ ಇದೆ ನಿಮ್ಮಲ್ಲಿ? ಭ್ರಷ್ಟಾಚಾರ ಆದರೆ ನಮ್ಮನ್ನು ನೇಣಿಗೆ ಹಾಕಿ ಅಂತ ಅವತ್ತೇ ಹೇಳಿದ್ದೆ ಎಂದು ವೈದ್ಯಕೀಯ ಶಿಕ್ಷಣ ಡಾ.ಕೆ. ಸುಧಾಕರ್ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.
ಬಿಜೆಪಿ ಸರ್ಕಾರದಿಂದ ಭ್ರಷ್ಟಾಚಾರ: ಹೇಗಿದೆ ಸಿದ್ದರಾಮಯ್ಯ ಲೆಕ್ಕಾಚಾರ?
ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಈವರೆಗೆ 33 ಕೋಟಿ ರೂಪಾಯಿಗಳು ಮಾತ್ರ ಖರ್ಚಾಗಿದೆ. ಪ್ರಸ್ತಾವನೆ ಸಲ್ಲಿಸಿರುವುದಕ್ಕು ಖರೀದಿಗೂ ವ್ಯತ್ಯಾಸ ಗೊತ್ತಿಲ್ವಾ?
ನನ್ನ ಇಲಾಖೆಯಲ್ಲಿ 815 ಕೋಟಿ ರೂ ವೆಚ್ಚದ ಖರೀದಿ ಆಗಿದೆ ಅಂತೀರಲ್ಲಾ? 815 ಕೋಟಿ ರೂ ಪ್ರಸ್ತಾವನೆ ಮಾತ್ರ ಬಂದಿದೆ. ಆದರೆ ಮಂಜೂರಾಗಿಲ್ಲ. ಕೊರೊನಾದಿಂದ ಕಾಂಗ್ರೆಸ್ ಪುನಶ್ಚೇತನ ಮಾಡಬೇಕು ಅಂದರೆ ಖಂಡಿತ ಜನ ನಿಮ್ಮನ್ನು ಕ್ಷಮಿಸಲ್ಲ ಎಂದು ಮಾಜಿ ಗುರುವಿಗೆ ಡಾ. ಸುಧಾಕರ್ ಅವರು ತಿರುಗೇಟು ಕೊಟ್ಟಿದ್ದಾರೆ.
2016-17ರ ಸಿಎಜಿ ವರದಿಯಲ್ಲಿ 538 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಗುಣಮಟ್ಟವಲ್ಲದ ಔಷಧಿ ಖರೀದಿ ಮಾಡಲಾಗಿದೆ. ಆಗ ಯಾವ ಸರ್ಕಾರ ಇತ್ತು? ಎಂದು ಸಿದ್ದರಾಮಯ್ಯ ಅವರನ್ನು ಸುಧಾಕರ್ ಪ್ರಶ್ನೆ ಮಾಡಿದ್ದಾರೆ.
ಗೃಹ ಸಚಿವ ಬೊಮ್ಮಾಯಿ
ಕಾಂಗ್ರೆಸ್ ಆರೋಪದ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಕೋವಿಡ್ ನಿರ್ವಹಣೆಯಲ್ಲಿ ಈವರೆಗೆ ಒಟ್ಟಾರೆ ಖರ್ಚಾಗಿರುವುದು 2,118 ಕೋಟಿ ರೂಪಾಯಿಗಳು ಮಾತ್ರ. ಆರೋಗ್ಯ ಇಲಾಖೆ, ವೈದ್ಯಕೀಯ ಇಲಾಖೆ, ಸಾರಿಗೆ ಇಲಾಖೆ, ಗೃಹ ಇಲಾಖೆ, ಬಿಬಿಎಂಪಿ ಸೇರಿದಂತೆ ಎಲ್ಲ ಇಲಾಖೆಗಳಲ್ಲಿ ಈವರೆಗೆ ಸಲಕರಣೆಗಳ ಖರೀದಿಗೆ ಖರ್ಚಾಗಿರುವುದು ಒಟ್ಟು 506 ಕೋಟಿ ರೂಪಾಯಿಗಳು ಮಾತ್ರ.
ಜೊತೆಗೆ ಸಂಕಷ್ಟಕ್ಕೆ ಒಳಗಾದವರ ಪರಿಹಾರಕ್ಕಾಗಿ ಒಟ್ಟು 11,611 ಕೋಟಿ ರೂಪಾಯಿಗಳು ಖರ್ಚಾಗಿವೆ ಎಂದು ಬಸವರಾಜ್ ಬೊಮ್ಮಾಯಿ ಸಮಜಾಯಿಸಿ ಕೊಟ್ಟಿದ್ದಾರೆ.
ಆರ್. ಅಶೊಕ್ ಸ್ಪಷ್ಟನೆ
ಸರ್ಕಾರದ ಮೇಲೆ 2000 ಕೋಟಿ ರೂಪಾಯಿಗಳಿಗೂ ಹೆಚ್ಚು ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. 50ವರ್ಷಗಳ ಕಾಲ ರಾಜ್ಯವನ್ನಾಳಿದ, ರಾಜ್ಯವನ್ನು ಲೂಟಿ ಹೊಡೆದ ಪಕ್ಷದ ನಾಯಕರು ದಾಖಲೆಗಳಿಲ್ಲದೆ ಬರೀ ಆರೋಪವನ್ನು ಮಾಮಾಡುತ್ತಿದ್ದಾರೆ. ಕೋವಿಡ್ ವೇಳೆ ಉರಿವ ಮನೆಯಲ್ಲಿ ಗಳ ಹಿರಿಯುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹರಿಹಾಯ್ದರು.
ಕೊವಿಡ್-19 ನಿರ್ವಹಣೆಗೆ ಯಾವ ಇಲಾಖೆಯಲ್ಲಿ ಎಷ್ಟು ಖರ್ಚು?
ಜನರಲ್ಲಿ ವಿಷಬೀಜ ಬಿತ್ತುವ ಪಿತೂರಿಯನ್ನ ಕಾಂಗ್ರೆಸ್ ಸರ್ಕಾರ ಮಾಡಿದೆ. ಜಿಲ್ಲಾಧಿಕಾರಿಗಳಿಗೆ 232 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ಅದರಲ್ಲಿ 159 ಕೋಟಿ ರೂ. ಖರ್ಚಾಗಿದೆ ಎಂದಿದ್ದಾರೆ.
ಪ್ರತಿ ಯೂನಿಟ್ಗೆ 14.51 ಲಕ್ಷ ರೂಪಾಯಿಗಳಂತೆ 8-01-2019ರಲ್ಲಿ 9 ಯೂನಿಟ್ ವೆಂಟಿಲೇಟರ್ಸ್ ಖರೀದಿ ಮಾಡಿದ್ದಾರೆ. ನಂತರ 8-7-2019ರಲ್ಲಿ ಪ್ರತಿ ಯುನಿಟ್ಗೆ 15.12 ಲಕ್ಷ ರೂಪಾಯಿಗಳಂತೆ 28 ಯೂನಿಟ್ ಖರೀದಿ ಮಾಡಿದ್ದಾರೆ. ಅದೇ ಜನವರಿಯಲ್ಲಿ ಮತ್ತೆ ಪ್ರತಿ ಯುನಿಟ್ಗೆ 21.73 ಲಕ್ಷ ರೂಪಾಯಿಗಳಂತೆ 9 ಯೂನಿಟ್ ಖರೀದಿ ಮಾಡಿದ್ದಾರೆ. ಆಗ ಯಾವ ಆರೋಗ್ಯ ತುರ್ತು ಪರಿಸ್ಥಿತಿಯಿತ್ತು? ಅಷ್ಟು ಹೆಚ್ಚು ಮೊತ್ತ ವ್ಯಯಿಸಿ ಯಾಕೆ ವೆಂಟಿಲೇಟರ್ಸ್ ಖರೀದಿ ಮಾಡಿದರು ಎಂದು ಅಶೋಕ್ ಪ್ರಶ್ನೆ ಮಾಡಿದರು.
ಡಾ. ಅಶ್ವಥ್ ನಾರಾಯಣ
ಕಾಂಗ್ರೆಸ್ ನಾಯಕರ ಆರೋಪಗಳಿಗೆ ಸ್ಪಷ್ಟನೆ ಕೊಟ್ಟ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಅವರು, ಪಿಪಿಇ ಕಿಟ್ ಬಗ್ಗೆ ಆರೋಪ ಮಾಡಿದ್ದಾರೆ. ಕಳೆದ ಮಾರ್ಚ್ ತಿಂಗಳಿನಲ್ಲಿ 330 ರೂಪಾಯಿಗೆ ಒಂದೂವರೆ ಲಕ್ಷ, 2,100 ರೂಪಾಯಿಗಳಿಗೆ 3 ಲಕ್ಷ ಪಿಪಿಇ ಕಿಟ್ಗಳನ್ನು ಖರೀದಿ ಮಾಡಿದ್ದೇವೆ. ಈಗಲೂ ಅವುಗಳ ಬೆಲೆ 3,900 ರೂಪಾಯಿಗಳಿವೆ.
ಆಗ ಇಂಪೋರ್ಟ್ ಮಾಡಿಕೊಂಡಾಗ ಚೀನಾ ಜೊತೆಗೆ ಯುದ್ಧದ ಆತಂಕ ಇತ್ತಾ? ಎಂದು ಡಿಸಿಎಂ ಅಶ್ವಥ್ ನಾರಾಯಣ್ ಪ್ರಶ್ನೆ ಮಾಡಿದ್ದಾರೆ. ಆರೋಗ್ಯ ಇಲಾಖೆಯಲ್ಲಿ 750 ಕೋಟಿ ರೂ. ಖರ್ಚಾಗಿದೆ ಎಂದು ಆರೋಪಿಸಿದ್ದಾರೆ. ಆದರೆ ಈವರೆಗೆ ಖರ್ಚಾಗಿರುವುದು 290 ಕೋಟಿ ರೂ.ಗಳು ಮಾತ್ರ ಎಂದಿದ್ದಾರೆ.
ವೆಂಟಿಲೇಟರ್ ಖರೀದಿಯಲ್ಲಿ ಲೋಪ ಆಗಿಲ್ಲ ಎಂದು ಡಾ. ಅಶ್ವಥ್ ನಾರಾಯಣ್ ಸ್ಪಷ್ಟಪಡಿಸಿದ್ದಾರೆ. 2019ರಲ್ಲಿ ಪ್ರತಿ ಯೂನಿಟ್ ಗೆ 21.73 ಲಕ್ಷ ರೂಪಾಯಿ ಕೊಟ್ಟು 9 ಯೂನಿಟ್ ವೆಂಟಿಲೇಟರ್ಗಳನ್ನು ಹೋಮ್ ಮೆಡಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನಿಂದ ಖರೀದಿ ಮಾಡಿದ್ದಾರೆ. ಅದೇ ಕಂಪನಿ ನಮಗೆ ಪ್ರತಿ ಯೂನಿಟ್ಗೆ 13.44 ಲಕ್ಷ ರೂ. ಪ್ರತಿ ಯುನಿಟ್ನಂತೆ 5 ವೆಂಟಿಲೇಟರ್ ಸಪ್ಲೈ ಮಾಡಿದ್ದಾರೆ ಎಂದು ಹಿಂದಿನ ಸರ್ಕಾರದ ಹಗರಣವನ್ನು ಹೇಳಿದರು.
ಶ್ರೀರಾಮುಲು ಹೇಳಿಕೆ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಳೆದ ಬಾರಿ ಆರೋಗ್ಯ ಇಲಾಖೆ ಮೇಲೆ ಎತ್ತಿದ್ದ ಆಕ್ಷೇಪಣೆಗಳಿಗೆ ಈಗಾಗಲೇ ಉತ್ತರ ಕೊಟ್ಟಿದ್ದೇನೆ. ಮೊನ್ನೆ ನಾನು ಆರೋಗ್ಯ ಇಲಾಖೆ ಖರ್ಚು ಮಾಡಿದ್ದು 290 ಕೋಟಿ ರೂಪಾಯಿಗಳು ಅಂತಾ ಸ್ಪಷ್ಟವಾಗಿ ಹೇಳಿದ್ದೇನೆ. ಕೆಲವು ಬಾರಿ ಬೇಡಿಕೆ ಹೆಚ್ಚಿಗೆ ಇದ್ದಾಗ ಸರಬರಾಜು ಇಲ್ಲದೆ ಇಲ್ಲದೇ ಬೆಲೆಯಲ್ಲಿ ಏರುಪೇರು ಆಗಿಬಹುದು. ಆರೋಗ್ಯ ಇಲಾಖೆಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ ಅಂತಾ ಸ್ಪಷ್ಟವಾಗಿ ಅವತ್ತೂ ಹೇಳಿದ್ದೇನೆ, ಇವತ್ತೂ ಹೇಳುತ್ತಿದ್ದೇನೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಸ್ಪಷ್ಟನೆ ಕೊಟ್ಟಿದ್ದಾರೆ.
ಶಿವರಾಂ ಹೆಬ್ಬಾರ್
ಕಾರ್ಮಿಕ ಇಲಾಖೆಯ ಮೇಲೆ ಮಾಡಿರುವ ಆರೋಪಗಳಿಗೆ ಸಚಿವ ಶಿವರಾಂ ಹೆಬ್ಬಾರ್ ಅವರು ಸ್ಪಷ್ಟನೆ ಕೊಟ್ಟು, ಒಟ್ಟು 16.16 ಲಕ್ಷದ ಕಾರ್ಮಿಕರಿಗೆ ತಲಾ 5 ಸಾವಿರ ರೂಪಾಯಿಗಳಂತೆ ಹಾಕಿದ್ದೇವೆ. ಅದಕ್ಕೆ ಒಟ್ಟು 816.16 ಕೋಟಿ ರೂಪಾಯಿಗಳು ಖರ್ಚಾಗಿವೆ.
ಕೊವಿಡ್ 19 ಹಗರಣ: ಉತ್ತರ ಕೊಡಿ ಬಿಜೆಪಿ ಟ್ವಿಟ್ಟರಲ್ಲಿ ಟ್ರೆಂಡಿಂಗ್
76 ಕೋಟಿ ರೂ. ಇಲಾಖೆಯಲ್ಲಿ ಇತರೆ ಖರ್ಚು ಆಗಿದೆ. ಒಟ್ಟಾರೆ ಕಾರ್ಮಿಕ ಇಲಾಖೆಯಿಂದ 897 ಕೋಟಿ ಖರ್ಚಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಸ್ಪಷ್ಟನೆ ಕೊಟ್ಟಿದ್ದಾರೆ.