ನನ್ನ ನೋವನ್ನು ಧರ್ಮ ದೇವತೆಗಳಿಗೆ ಬಿಟ್ಟಿದ್ದೇನೆ:ಹೆಗ್ಗಡೆ
ಧರ್ಮಸ್ಥಳ, ನ 29: ಕ್ಷೇತ್ರದ ಮತ್ತು ನನ್ನ ವಿರುದ್ದ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಅಪವಾದ, ಆರೋಪಗಳು ಬರುತ್ತಿವೆ. ಇದರಿಂದ ನನ್ನ ಮನಸ್ಸಿಗೆ ತೀವ್ರ ನೋವುಂಟಾಗಿದೆ. ನನ್ನ ನೋವು ಮತ್ತು ಕ್ಷೇತ್ರದ ಭಕ್ತಾದಿಗಳ ನೋವನ್ನು ಮಂಜುನಾಥ, ಅಣ್ಣಪ್ಪಸ್ವಾಮಿ ಮತ್ತು ಧರ್ಮ ದೇವತೆಗಳಿಗೆ ಬಿಟ್ಟಿದ್ದೇನೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಗುರುವಾರ (ನ 28) ಲಕ್ಷದೀಪೋತ್ಸವದ ಪ್ರಯುಕ್ತ ಧರ್ಮಸ್ಥಳಕ್ಕೆ ಪಾದಯಾತ್ರೆಯ ಮೂಲಕ ಬಂದ ಸಾವಿರಾರು ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಹೆಗ್ಗಡೆ, ನಾನು ನನ್ನ ಆತ್ಮಸಾಕ್ಷಿಗೆ ವಿರುದ್ದವಾಗಿ ಎಂದೂ ನಡೆದು ಕೊಂಡಿಲ್ಲ. ಹಾಗಾಗಿ ನನಗೆ ಭಯವಿಲ್ಲ ಮತ್ತು ರಕ್ಷಣೆಯ ಅವಶ್ಯಕತೆಯಿಲ್ಲ ಎಂದಿದ್ದಾರೆ.
ಕ್ಷೇತ್ರದ ಪರಂಪರೆಯಂತೆ ದಾನ ಧರ್ಮಗಳನ್ನು ಮುಂದುವರಿಸಿಕೊಂಡು ಬಂದಿದ್ದೇನೆ. ಕ್ಷೇತ್ರಕ್ಕೆ ಕೆಟ್ಟ ಹೆಸರು ತರಲು ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ದಿಕ್ಕು ತಪ್ಪಿಸುವ ಅಪಪ್ರಚಾರ ನಡೆಸುವವರಿಗೆ ಕ್ಷೇತ್ರದ ಸ್ವಾಮಿ ಪಾಠ ಕಲಿಸುತ್ತಾನೆ ಎನ್ನುವ ನಂಬಿಕೆಯಲ್ಲಿರಿ ಎಂದು ಭಕ್ತಾದಿಗಳನ್ನು ಉದ್ದೇಶಿಸಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಕ್ಷೇತ್ರದ ಸೇವೆಯ ಬಗ್ಗೆ ಮತ್ತು ಸೇವೆಯಲ್ಲಿ ಏನಾದರೂ ಮಾರ್ಪಾಡು ಇದ್ದರೆ ಪ್ರತೀ ತಿಂಗಳು ಅಣ್ಣಪ್ಪ ಬೆಟ್ಟಕ್ಕೆ ಹೋಗಿ ಅಣ್ಣಪ್ಪಸ್ವಾಮಿಗೆ ವರದಿ ಒಪ್ಪಿಸಿ ಬರುತ್ತೇನೆ. ಕೀರ್ತಿ ಮತ್ತು ಅಪಕೀರ್ತಿಯನ್ನು ಸರಿಯಾಗಿ ತೆಗೆದುಕೋ ಎಂದು ಧರ್ಮ ದೇವತೆಗಳು ನನಗೆ ಆದೇಶ ನೀಡುತ್ತಾರೆಂದು ಹೆಗ್ಗಡೆ ಹೇಳಿದ್ದಾರೆ.
ಕ್ಷೇತ್ರದ ಕಾರ್ಯಕ್ರಮಗಳನ್ನು ಹಾಳು ಮಾಡಬೇಕೆಂದು ಬಹಳಷ್ಟು ಜನ ಪ್ರಯತ್ನ ಪಟ್ಟರು. ನಾನು ಯಾರನ್ನೂ ರಕ್ಷಿಸುವ ಕೆಲಸ ಮಾಡುತ್ತಿಲ್ಲ. ಕ್ಷೇತ್ರದ ಬಗ್ಗೆ ಮತ್ತು ಇಲ್ಲಿನ ಕಾರ್ಯಕ್ರಮಗಳ ಬಗ್ಗೆ ಸುಳ್ಳು ವರದಿಯನ್ನು ಹಬ್ಬಿಸಲಾಗುತ್ತಿದೆ. ಆದರೆ ಭಕ್ತಾದಿಗಳು ಇದಕ್ಕೆ ತಲೆ ಕೆಡಿಸಿಕೊಳ್ಳಬಾರದೆಂದು ವೀರೇಂದ್ರ ಹೆಗ್ಗಡೆ ಮನವಿ ಮಾಡಿದ್ದಾರೆ.
ಐದು ದಿನಗಳ ಕಾರ್ತಿಕ ಲಕ್ಷ ದೀಪೋತ್ಸವ ಕಾರ್ಯಕ್ರಮ ಗುರುವಾರ ಧರ್ಮಸ್ಥಳದಲ್ಲಿ ಆರಂಭವಾಗಿದೆ. ಡಿಸೆಂಬರ್ ಮೂರರವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನ, ವಸ್ತು ಪ್ರದರ್ಶನ, ಶಾಸ್ತ್ರೀಯ ಮತ್ತು ಜಾನಪದ ಸಂಗೀತ, ಮ್ಯಾಜಿಕ್ ಶೋ ಮುಂತಾದ ಕಾರ್ಯಕ್ರಮ ನಡೆಯಲಿದೆ.
ದಕ್ಷಿಣ ಕನ್ನಡದಲ್ಲಿ ಮುಂದುವರಿದ ಪ್ರತಿಭಟನೆಗಳು
ವೀರೇಂದ್ರ ಹೆಗ್ಗಡೆ ಮನವಿ
ಕ್ಷೇತ್ರದ ಕಾರ್ಯಕ್ರಮಗಳನ್ನು ಹಾಳು ಮಾಡಬೇಕೆಂದು ಬಹಳಷ್ಟು ಜನ ಪ್ರಯತ್ನ ಪಟ್ಟರು. ನಾನು ಯಾರನ್ನೂ ರಕ್ಷಿಸುವ ಕೆಲಸ ಮಾಡುತ್ತಿಲ್ಲ. ಕ್ಷೇತ್ರದ ಬಗ್ಗೆ ಮತ್ತು ಇಲ್ಲಿನ ಕಾರ್ಯಕ್ರಮಗಳ ಬಗ್ಗೆ ಸುಳ್ಳು ವರದಿಯನ್ನು ಹಬ್ಬಿಸಲಾಗುತ್ತಿದೆ. ಆದರೆ ಭಕ್ತಾದಿಗಳು ಇದಕ್ಕೆ ತಲೆ ಕೆಡಿಸಿಕೊಳ್ಳಬಾರದೆಂದು ವೀರೇಂದ್ರ ಹೆಗ್ಗಡೆ ಮನವಿ ಮಾಡಿದ್ದಾರೆ.
ಕೇಮಾರು ಶ್ರೀ
ಯಾವುದೇ ಒತ್ತಡಗಳಿಗೆ ಮಣಿಯದೆ ಸೌಜನ್ಯ ಪರ ಹೋರಾಟದಲ್ಲಿ ತೊಡಗಿಸಿ ಕೊಂಡಿರುವ ನಾನು ಆಕೆಯ ಕುಟುಂಬಕ್ಕೆ ನ್ಯಾಯ ಸಿಕ್ಕ ದಿನವೇ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ತೆರಳಲು ಸಿದ್ದನಿದ್ದೇನೆ ಎಂದು ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದ್ದಾರೆ.
ರಕ್ಕಸರು ಮಾನನಷ್ಟ ಕೇಳಲು ಮನೆಗೆ ಬರಲಿ
ನನ್ನ ಮಗಳನ್ನು ಕೊಂದ ರಕ್ಕಸರು ನನ್ನ ಕುಟುಂಬದ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಮಗಳ ಸಾವಿನ ನೋವಿಂದ ನನಗೆ ಇನ್ನೂ ಹೊರ ಬರಲಾಗುತ್ತಿಲ್ಲ. ಪ್ರತೀ ದಿನ ಕಣ್ಣೀರು ಹಾಕುತ್ತಿದ್ದೇವೆ. ಈ ರಕ್ಕಸರು ಮಾನನಷ್ಟ ಕೇಳಲು ನನ್ನ ಮನೆಗೆ ಬರಲಿ ಅವರಿಗೆ ಕೊಡುತ್ತೇನೆ - ಕುಸುಮಾವತಿ (ಸೌಜನ್ಯ ತಾಯಿ)
ಸಾಕ್ಷಿಗಳನ್ನು ಕೊಲ್ಲುತ್ತಿದ್ದಾರೆ
ಸೌಜನ್ಯ ಕೊಲೆ ಹಿಂದಿನ ಸಾಕ್ಷಿಗಳನ್ನು ದುಷ್ಟರು ಕೊಲೆಗೈಯುತ್ತಾ ಬರುತ್ತಿದ್ದಾರೆ. ಹೋರಾಟದಲ್ಲಿ ಸಕ್ರಿಯನಾಗಿದ್ದ ಕಾರ್ಯಕರ್ತನನ್ನು ಅಪಘಾತದ ಮೂಲಕ ಸಾಯಿಸಿದ್ದಾರೆ. ಇದನ್ನೆಲ್ಲಾ ಪೊಲೀಸ್ ವ್ಯವಸ್ಥೆ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎನ್ನುವುದು ನಮ್ಮ ನೋವು - ಪ್ರಜಾ ಪ್ರಭುತ್ವ ವೇದಿಕೆಯು ಮಹೇಶ್ ಶೆಟ್ಟಿ ತಿಮರೋಡು
ದೈವಗಳ ಬೆಂಬಲವಿದೆ
ನಮ್ಮ ಹೋರಾಟ ಸತ್ಯ ಮತ್ತು ನ್ಯಾಯಕ್ಕಾಗಿ. ಹಾಗಾಗಿ ನಮಗೆ ತುಳುನಾಡಿನ ಸತ್ಯ ದೇವತೆಗಳ ಶ್ರೀರಕ್ಷೆ ಇದೆ. ಅಣ್ಣಪ್ಪಸ್ವಾಮಿ ನಮ್ಮ ಹೋರಾಟಕ್ಕೆ ಶಕ್ತಿ ತುಂಬುತ್ತಿದ್ದಾನೆ. ಇಂದಲ್ಲಾ ನಾಳೆ ನಮ್ಮ ಹೋರಾಟಕ್ಕೆ ಜಯ ಸಿಕ್ಕೇ ಸಿಗುತ್ತದೆ - ಆತ್ರಾಡಿ ಅಮೃತಾ ಶೆಟ್ಟಿ.
ಸಿಪಿಎಂ
ಸೌಜನ್ಯ ಕೊಲೆ ಪ್ರಕರಣದ ನಿಜವಾದ ಅಪರಾಧಿಗಳ ಬಗ್ಗೆ ಇನ್ನೂ ಸುಳಿವಿಲ್ಲ. ಸಿಬಿಐ ಯಾವುದೇ ಒತ್ತಡಕ್ಕೆ ಮಣಿಯದೇ ತನಿಖೆ ನಡೆಸಲಿ - ಸಿಪಿಎಂ