ಪೇಜಾವರ ವಿಶ್ವೇಶತೀರ್ಥ ಶ್ರೀಗಳ ಪ್ರಥಮ ಆರಾಧನೆ: ಸಾರ್ವಜನಿಕ ಕಾರ್ಯಕ್ರಮವಿಲ್ಲ
ಬೆಂಗಳೂರು, ಡಿ 13: ಉಡುಪಿ ಪೇಜಾವರ ಅಧೋಕ್ಷಜ ಮಠದ 34ನೇ ಯತಿಗಳಾಗಿದ್ದ ವಿಶ್ವೇಶತೀರ್ಥ ಶ್ರೀಗಳ ಪ್ರಥಮ ಮಹಾಸಮಾರಾಧನಾ ಮಹೋತ್ಸವ, ಅವರ ಮೂಲ ಬೃಂದಾವನವಿರುವ ನಗರದ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಆರಂಭವಾಗಿದೆ.
ಶ್ರೀಪಾದರ ಆರಾಧಾನ ಮಹೋತ್ಸವ ಡಿಸೆಂಬರ್ ಹದಿನೆಂಟರ ವರೆಗೆ ನಡೆಯಲಿದೆ. "ಆರಾಧನಾ ಪ್ರಯುಕ್ತದ ಎಲ್ಲಾ ಕಾರ್ಯಕ್ರಮಗಳು ಆನ್ಲೈನ್ /ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿದೆ" ಎಂದು ಪೂರ್ಣಪ್ರಜ್ಞ ವಿದ್ಯಾಪೀಠದ ಗೌರವ ಕಾರ್ಯದರ್ಶಿಗಳಾದ ವಿದ್ವಾನ್ ಕೇಶವಾಚಾರ್ಯ ಹೇಳಿದ್ದಾರೆ.
ಸರಕಾರದ ಆದೇಶದನ್ವಯ ಕೋವಿಡ್ - 19 ಪ್ರಯುಕ್ತ ಸಾರ್ವಜನಿಕ ಕಾರ್ಯಕ್ರಮವಿರುವುದಿಲ್ಲ. ಭಕ್ತರು ಸಾರ್ವಜನಿಕವಾಗಿ ಸೇರದೇ, ಮನೆಯಲ್ಲೇ ಕೂತು ಈ ಕಾರ್ಯಕ್ರಮಗಳನ್ನು ವೀಕ್ಷಿಸಬೇಕಾಗಿ ಪೇಜಾವರ ಮಠ ವಿನಂತಿಸಿಕೊಂಡಿದೆ.
ಆರಾಧನೆಯ ಎಲ್ಲಾ ಕಾರ್ಯಕ್ರಮಗಳು ಮಠದ ಈಗಿನ ಪೀಠಾಧಿಪತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥರ ನೇತೃತ್ವದಲ್ಲಿ ನಡೆಯಲಿದ್ದು, ಡಿಸೆಂಬರ್ ಹದಿನೆಂಟರ ವರೆಗೆ ವಿವಿಧ ಇತಿಹಾಸ ಗೋಷ್ಠಿ, ಪ್ರವಚನ ಕಾರ್ಯಕ್ರಮಗಳು ನಡೆಯಲಿವೆ.
ಡಿಸೆಂಬರ್ ಹದಿನಾಲ್ಕರಂದು ಮಂತ್ರಾಲಯ ರಾಘವೇಂದ್ರ ಮಠದ ಸುಭುದೇಂದ್ರ ತೀರ್ಥ ಶ್ರೀಗಳು, ಹದಿನೈದರಂದು ಉತ್ತರಾದಿ ಮಠದ ಸತ್ಯಾತ್ಮತೀರ್ಥ ಶ್ರೀಗಳು, ಹದಿನಾರರಂದು ಸುಬ್ರಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥರು, ಹದಿನೇಳರಂದು ಪಲಿಮಾರು ಮಠದ ವಿದ್ಯಾಧೀಶ ತೀರ್ಥರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಡಿಸೆಂಬರ್ ಹದಿನೇಳರಂದು ನಡೆಯುವ ಗುರುಗಣಸ್ತವನ ಕಾರ್ಯಕ್ರಮದಲ್ಲಿ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು, ಸೋದೆ ಮಠದ ವಿಶ್ವವಲ್ಲಭ ತೀರ್ಥರು ಪಾಲ್ಗೊಳ್ಳಲಿದ್ದಾರೆ. ಇನ್ನು ಅದೇ ದಿನ 'ಯತಿಕುಲ ಚಕ್ರವರ್ತಿ' ಸ್ಮರಣ ಸಂಚಿಕೆ ಲೋಕಾರ್ಪಣೆಗೊಳ್ಳಲಿದೆ.
Recommended Video
ಡಿಸೆಂಬರ್ 16,17,18ರಂದು ಪೂರ್ವಾರಾಧನೆ, ಮಧ್ಯಾರಾಧನೆ, ಉತ್ತರಾರಾಧನೆ ನಡೆಯಲಿದೆ. ಉತ್ತರಾರಾಧನೆ ಕಾರ್ಯಕ್ರಮದಲ್ಲಿ ಕಾಣಿಯೂರು, ಭೀಮನಕಟ್ಟೆ ಮತ್ತು ಚಿತ್ತಾಪುರ ಮಠದ ಶ್ರೀಗಳು ಪಾಲ್ಗೊಳ್ಳಲಿದ್ದಾರೆ.