ಶಾಲಾ ಕಾಲೇಜುಗಳು ಅಗ್ನಿ ಸುರಕ್ಷತೆ ಪಡೆಯಲು ಆಗುವ ಖರ್ಚು ಎಷ್ಟು?
ಬೆಂಗಳೂರು, ಜೂ. 29: ರಾಜ್ಯದ ಎಲ್ಲಾ ಶಾಲಾ ಕಾಲೇಜು ಕಟ್ಟಡಗಳಿಗೆ ಅವುಗಳಿಗೆ ಎತ್ತರಕ್ಕೆ ಅನುಗುಣವಾಗಿ ಸರ್ಕಾರಿ ಶುಲ್ಕವನ್ನು ನಿಗದಿಪಡಿಸಿ ರಾಜ್ಯ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಮಹಾ ನಿರ್ದೇಶಕ ಯೂನಸ್ ಆಲಿ ಕೌಸರ್ ಆದೇಶ ಹೊರಡಿಸಿದ್ದಾರೆ.
ಶಾಲಾ ಕಾಲೇಜುಗಳಿಗೆ ಅಗ್ನಿ ಶಾಮಕ ಅಧಿಕಾರಿಗಳು ಭೇಟಿ ನೀಡಿದಾಗ ಕಟ್ಟಡಗಳ ಎತ್ತರಕ್ಕೆ ಅನುಗುಣವಾಗಿ ಶುಲ್ಕವನ್ನು ಪಾವತಿಸಿ ಸಲಹಾ ಮತ್ತು ಸಮಾಪನಾ ಪತ್ರಗಳನ್ನು ಪಡೆಯುವಂತೆ ಸೂಚಿಸಿ ಆದೇಶ ಹೊರಡಿಸಿದ್ದಾರೆ. ಈ ಆದೇಶವನ್ನು ಜಿಲ್ಲಾ ಅಗ್ನಿ ಶಾಮಕ ಅಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣ ಅಧಿಕಾರಿಗಳಿಗೆ ರವಾನಿಸಲಾಗಿದೆ.
ಈ ಆದೇಶದ ಪ್ರಕಾರ ಒಂದ ರಿಂದ 7 ಮೀಟರ್ ಎತ್ತರದ ಗ್ರಾಮಾಂತರ ಪ್ರದೇಶದ ಶಾಲಾ ಕಟ್ಟಡಗಳಿಗೆ 1000 ರೂ. ಶುಲ್ಕ ನಿಗದಿ ಪಡಿಸಲಾಗಿದೆ. ಇದೇ ಎತ್ತರದ ನಗರ ಮತ್ತು ಪಟ್ಟಣ ಪ್ರದೇಶದ ಕಟ್ಟಡಗಳಿಗೆ 5,000 ರೂ. ನಿಗದಿ ಮಾಡಲಾಗಿದೆ.
ಏಳು ಮೀಟರ್ನಿಂದ 14 ಮೀಟರ್ ಎತ್ತರದ ಶಾಲಾ ಕಾಲೇಜು ಕಟ್ಟಡಗಳಿಗೆ ಅಗ್ನಿ ಸುರಕ್ಷತಾ ಸಲಹಾ ಹಾಗೂ ಸಮಾಪನಾ ಪತ್ರ ಪಡೆಯಲು ಗ್ರಾಮಾಂತರ ಭಾಗದ ಶಾಲೆಗಳಿಗೆ 5 ಸಾವಿರ ರೂ. ನಿಗದಿ ಮಾಡಲಾಗಿದೆ. ನಗರ ಪ್ರದೇಶದ ಶಾಲಾ ಕಟ್ಟಡಗಳಿಗೆ 20 ಸಾವಿರ ರೂ. ನಿಗದಿ ಮಾಡಲಾಗಿದೆ. ಹದಿನೈದು ಮೀಟರ್ ಎತ್ತರ ಮೀರಿದ ಕಟ್ಟಡಗಳಿಗೆ ಚದರಡಿ 60 ರೂ. ನಂತೆ ಶುಲ್ಕ ವಿಧಿಸಲಾಗಿದೆ. ಜು. 29 ರಿಂದಲೇ ಈ ಆದೇಶ ರಾಜ್ಯದಲ್ಲಿ ಜಾರಿಗೆ ಬರಲಿದೆ.
ಅಗ್ನಿ ಶಾಮಕ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಅಗ್ನಿ ಸುರಕ್ಷತಾ ನಿಯಮ ಅಳವಡಿಕೆ ಬಗ್ಗೆ ಸಲಹಾ ಸಮಾಪನಾ ಪತ್ರ ನೀಡಲಿದ್ದಾರೆ. ಈ ಪತ್ರಗಳನ್ನು ನೀಡಿದ ಬಳಿಕ ಶುಲ್ಕವನ್ನು ಪಾವತಿಸಲು ಸೂಚಿಸಲಾಗಿದೆ.
ಶಾಲಾ ಕಾಲೇಜುಗಳಲ್ಲಿ ಅಗ್ನಿ ಸುರಕ್ಷತೆ ನಿಯಮ ಅಳವಡಿಸಬೇಕು ಎಂಬ ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲಿ ರಾಜ್ಯದಲ್ಲಿ ಶಾಲಾ ಕಟ್ಟಡಗಳಿಗೆ ಅಗ್ನಿ ಸುರಕ್ಷತಾ ನಿಯಮ ಪಾಲಿಸಲು ಹಿಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮುಂದಾಗಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷ ಈ ಆದೇಶ ಜಾರಿಗೆ ಬಂದಿಲ್ಲ. ಶಾಲೆಗಳ ಅಗ್ನಿ ಸುರಕ್ಷತಾ ನಿಯಮ ಸಂಬಂಧ ಅಗ್ನಿ ಶಾಮಕ ಅಧಿಕಾರಿಗಳು ಅಗ್ನಿ ಸಲಹಾ ಮತ್ತು ಸಮಾಪನ ಪತ್ರ ನೀಡಲಿದ್ದಾರೆ. ಪ್ರತಿ ವರ್ಷವೂ ಈ ಸರ್ಟಿಫಿಕೇಟನ್ನು ಶಾಲೆಗಳು ಪಡೆಯಬೇಕಾಗಿದೆ.
ಈ ಅದೇಶ ಅವೈಜ್ಞಾನಿಕ ಎಂದ ಶಿಕ್ಷಣ ಸಂಸ್ಥೆಗಳು: ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಇದೀಗ ಶಾಲೆಗಳಲ್ಲಿ ಅಗ್ನಿ ಶಾಮಕ ಇಲಾಖೆಯೂ ವಸೂಲಿಗೆ ದಾರಿ ಮಾಡಿಕೊಟ್ಟಂತಾಗಿದೆ. ರಾಜ್ಯದಲ್ಲಿ 2018 ಕ್ಕಿಂತಲೂ ಮೊದಲೇ ಪ್ರಾರಂಭವಾಗಿರುವ ಶಾಲೆಗಳಿಗೆ ಕನಿಷ್ಠ ಅಗ್ನಿ ಸುರಕ್ಷತಾ ನಿಯಮಗಳನ್ನು ಪಾಲಿಸುವ ಸಂಬಂಧ ಹೊಸ ನೀತಿಯನ್ನು ರೂಪಿಸಬೇಕಿತ್ತು. ಹೊಸ ಶಾಲೆಗಳಿಗೆ ಅನ್ವಯ ಆಗುವ ಅಗ್ನಿ ಸುರಕ್ಷತಾ ನಿಯಮಗಳನ್ನು ಪಾಲಿಸಲು ಹಳೇ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಓದುತ್ತಿರುವ ಶಾಲೆಗಳಿಗೆ ಸಾಧ್ಯವಾಗುವುದಿಲ್ಲ.
ಅಗ್ನಿ ಸುರಕ್ಷತೆ ನಿಯಮ ಪಾಲಿಸುವುದು ಮಕ್ಕಳ ಹಿತದೃಷ್ಟಿಯಿಂದ ಒಳಿತು. ಆದರೆ, ಅದಕ್ಕೆ ಸರಿಯಾದ ನೀತಿಯೇ ಇಲ್ಲ. ಹೀಗಾಗಿ ಅಗ್ನಿ ಶಾಮಕ ಅಧಿಕಾರಿಗಳು ಈ ವೈಫಲ್ಯವನ್ನೇ ಮುಂದಿಟ್ಟುಕೊಂಡು ಅಗ್ನಿ ಸಲಹಾ ಹಾಗೂ ಸಮಾಪನ ಪತ್ರ ನೀಡುವ ವಿಚಾರದಲ್ಲಿ ಶಾಲಾ ಆಡಳಿತ ಮಂಡಳಿಗಳಿಗೆ ಕಿರುಕುಳ ನೀಡುವ ಸಾಧ್ಯತೆಯಿದೆ.
ಈ ಬಗ್ಗೆ ಸರ್ಕಾರಕ್ಕೆ ಅನೇಕ ಬಾರಿ ಮನವಿ ನೀಡಿದರೂ ಏನೂ ಪ್ರಯೋಜನ ಆಗಿಲ್ಲ. 2018 ಕ್ಕಿಂತಲೂ ಮೊದಲು ಅರಂಭವಾಗಿರುವ ಶಾಲೆಗಳಿಗೆ ಪ್ರತ್ಯೇಕ ಹಾಗೂ ಪಾರದರ್ಶಕ, ಪಾಲಿಸಲು ಆಗುವಂತಹ ಅಗ್ನಿ ಸುರಕ್ಷತಾ ನೀತಿಯನ್ನು ಜಾರಿಗೆ ತರಬೇಕಿತ್ತು ಎಂದು ಕರ್ನಾಟಕ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳು ತಮ್ಮ ಅಳಲು ತೋಡಿಕೊಂಡಿವೆ.
Recommended Video