ಕನಕಪುರ: ಗುಜರಿ ಅಂಗಡಿಯಲ್ಲಿ ಅಗ್ನಿಅನಾಹುತ
ಕನಕಪುರದಲ್ಲಿ ಗುಜರಿ ಅಂಗಡಿಯನ್ನಾವರಿಸಿದ್ದ ಬೆಂಕಿಯಿಂದಾಗಿ ಸಂಗ್ರಹಿಸಿಟ್ಟಿದ್ದ ವಸ್ತುಗಳೆಲ್ಲ ಬೆಂಕಿಗೆ ಆಹುತಿಯಾಗಿದೆ.
ಕನಕಪುರ, ಮಾರ್ಚ್ 18: ಗುಜರಿ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಗ್ರಹಿಸಿಟ್ಟಿದ್ದ ಗುಜರಿ ಸಾಮಾನುಗಳು ನಾಶವಾಗಿರುವ ಘಟನೆ ಕನಕಪುರ ದ ಅಜೀಜ್ ನಗರದ ತೋಟಿ ಹೊಲದ ಬಳಿ ಇಂದು ನಡೆದಿದೆ.
ಗುಜರಿ ಅಂಗಡಿ ಮಾಜಿ ನಗರಸಭೆ ಅಧ್ಯಕ್ಷ ಅಮೀರ್ ಖಾನ್ ಅವರ ಪುತ್ರ ಖಾಲಿದ್ ಖಾನ್ ಎಂಬುವವರಿಗೆ ಸೇರಿದ್ದಾಗಿದೆ. ಶುಕ್ರವಾರ ಯಾರೂ ಇಲ್ಲದ ಸಂದರ್ಭದಲ್ಲಿ ಗುಜರಿ ಅಂಗಡಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ಭಾರೀ ಪ್ರಮಾಣದಲ್ಲಿ ಉರಿಯಲಾರಂಭಿಸಿತು. ದಟ್ಟವಾಗಿ ಹೊರಬಂದ ಹೊಗೆ ಇಡೀ ನಗರವನ್ನೇ ಆವರಿಸಿತ್ತು. ಕ್ಷಣಕಾಲ ಸ್ಥಳೀಯರಲ್ಲಿ ಗಾಬರಿ ಮಡುಗಟ್ಟಿತ್ತು.[ಬೆಂಕಿ ಹಚ್ಚಿಕೊಂಡು, ರೈಲಿಗೆ ತಲೆಕೊಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ]
ಗುಜರಿ ಅಂಗಡಿಯನ್ನಾವರಿಸಿದ್ದ ಬೆಂಕಿಯಿಂದಾಗಿ ಸಂಗ್ರಹಿಸಿಟ್ಟಿದ್ದ ವಸ್ತುಗಳೆಲ್ಲ ಬೆಂಕಿಗೆ ಆಹುತಿಯಾಗಿದೆ. ಬೆಂಕಿ ಹೊತ್ತಿ ಉರಿಯುವುದನ್ನು ಕಂಡ ಜನ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಆರಿಸಿದರಾದರೂ ಅಷ್ಟರಲ್ಲೇ ಹಲವು ವಸ್ತುಗಳು ಬೆಂಕಿಗಾಹುತಿಯಾಗಿದ್ದವು.[ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು: ಬೈಕ್ ಭಸ್ಮ]
ಬೆಂಕಿ ಪಕ್ಕದ ಮನೆಗಳಿಗೆ ಆವರಿಸಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು. ಘಟನೆಯಿಂದ ಸುಮಾರು 5ಲಕ್ಷ ರೂ. ನಷ್ಟವಾಗಿರಬಹುದೆಂದು ಅಂದಾಜಿಸಲಾಗಿದೆ. ಈ ಸಂಬಂಧ ಕನಕಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.