ಉದ್ಯಮಿ ಪುತ್ರನ ಮೇಲೆ ಹಲ್ಲೆ: ಮಾಜಿ ಶಾಸಕ ಮಾನಪ್ಪ ವಜ್ಜಲ್ ಪುತ್ರನ ವಿರುದ್ಧ ಎಫ್ಐಆರ್
ಬೆಂಗಳೂರು, ಸೆ. 17: ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದು ಉದ್ಯಮಿ ಪುತ್ರನ ಮೇಲೆ ಹಲ್ಲೆ ಮಾಡಿದ ಸಂಬಂಧ ಮಾಜಿ ಶಾಸಕ ಮಾನಪ್ಪ ವಜ್ಜಲ್ ಅವರ ಪುತ್ರ ಆಂಜನೇಯ ವಜ್ಜಲ್ ವಿರುದ್ಧ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಅಕ್ರಮ ಕೂಟ ಕಟ್ಟಿಕೊಂಡು ಹಲ್ಲೆ ಮಾಡುವಂತಹ ಆಯುಧಗಳನ್ನು ಕಾರಿನಿಂದ ಹೊರ ತೆಗೆದು ಗಂಭೀರ ಸ್ವರೂಪದ ಹಲ್ಲೆ ಮಾಡಿರುವ ಆಂಜನೇಯ ವಜ್ಜಲ್ ವಿರುದ್ಧ ಐಪಿಸಿ ಸೆಕ್ಷನ್ 124, 324, 504, 506, 149 ಅಡಿ ಕೇಸು ದಾಖಲಿಸಿದ್ದಾರೆ. ಎಫ್ಐಆರ್ ದಾಖಲಾಗುತ್ತಿದ್ದಂತೆ ಆಂಜನೇಯ ವಜ್ಜಲ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹೈಗ್ರೌಂಡ್ಸ್ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಹಲ್ಲೆಗೆ ಒಳಗಾಗಿರುವ ಉದ್ಯಮಿ ದೇವದಾಸ್ ರೈ ಅವರ ಪುತ್ರ ವಿಕ್ರಮ್ ರೈಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ನೀಡಿದ ದೂರಿನ ಮೇರೆಗೆ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಹಟ್ಟಿ ಚಿನ್ನದ ಗಣಿ ಅಧ್ಯಕ್ಷರಾಗಿರುವ ಮಾಜಿ ಶಾಸಕ ಮಾನಪ್ಪ ವಜ್ಜಲ್ ಅವರ ಪುತ್ರ ವಸಂತನಗರದಲ್ಲಿರುವ ಎಂಬೆಸಿ ಹ್ಯಾಬಿಟೈಟ್ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದಾರೆ. ಸೆ. 12 ರಂದು ರಾತ್ರಿ ಹತ್ತು ಗಂಟೆ ಸುಮಾರಿನಲ್ಲಿ ವಿಕ್ರಮ್ ರೈ ತನ್ನ ಸ್ನೇಹಿತನಾದ ರೋಲ್ಟ್ ಮೆರೇನ್ ಎಂಬುವರನ್ನು ಎಂಬೆಸಿ ಹ್ಯಾಬಿಟೈಟ್ ಅಪಾರ್ಟ್ಮೆಂಟ್ಗೆ ಬಿಟ್ಟು ಹೋಗಲು ಬಂದಿದ್ದರು. ಈ ವೇಳೆ ಕಾರಿನ ಪಾರ್ಕಿಂಗ್ ಮಾಡುವ ವಿಚಾರದಲ್ಲಿ ಜಗಳ ತೆಗೆದಿರುವ ಆಂಜನೇಯ ವಜ್ಜಲ್, ಮತ್ತು ಮೌನೀಶ್ ಎಂಬುವರು, ಹಲ್ಲೆ ಮಾಡಿದ್ದಾರೆ. ಇದೇ ವೇಳೆ ಸುಮಾರು ಹದಿನೈದು ಜನ ಹುಡುಗರನ್ನು ಅಲ್ಲಿಗೆ ಕರೆಸಿದ್ದಾರೆ.
ಆ ಬಳಿಕ ವಿಕ್ರಮ್ ರೈ ಮೇಲೆ ಹಲ್ಲೆ ಮಾಡಿದ್ದು, ಬೆಂಜ್, ಕಿಯೋ, ಫಾರ್ಚುನರ್ ಲೆಜೆಂಡರ್ ಕಾರುಗಳಲ್ಲಿ ಇಟ್ಟಿದ್ದ ಪಂಚ್ ಮಾಡುವ ಆಯುಧಗಳನ್ನು ಹೊರ ತೆಗೆದು ವಿಕ್ರಮ್ ರೈ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಅವಾಚ್ಯ ಪದಗಳಿಂದಲೂ ನಿಂದಿಸಿದ್ದಾರೆ. ಮಾರಕಾಸ್ತ್ರಗಳಿಂದ ಹಲ್ಲೆಗೆ ಒಳಗಾಗಿರುವ ವಿಕ್ರಮ್ ರೈ ಅವರ ತಲೆ, ಕಣ್ಣಿನ ಮೇಲೆ ರಕ್ತದ ಗಾಯವಾಗಿದ್ದು, ಹಲ್ಲೆಕೋರ ಗುಂಪಿನಿಂದ ತಪ್ಪಿಸಿಕೊಂಡು ಹೊರಗೆ ಬಂದಿದ್ದಾರೆ.
''ನೀನು ಎಲ್ಲಿಗೆ ಬಿಡುವುದಿಲ್ಲ. ನೀನು ಪೊಲೀಸ್ ಠಾಣೆಗೆ ಹೋದ್ರೂ ನಮ್ಮನ್ನು ಏನೂ ಮಾಡೋಕೆ ಸಾಧ್ಯವಿಲ್ಲ'' ಎಂದು ಮಾನಪ್ಪ ವಜ್ಜಲ್ ಪುತ್ರ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಗಾಯಗೊಂಡಿದ್ದ ವಿಕ್ರಮ್ ರೈ, ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಆರೋಪಿತ ಆಂಜನೇಯ ವಜ್ಜಲ್ ಹಾಗೂ ಮೌನೀಶ್ ಎಂಬುವರಿಗಾಗಿ ಶೋಧ ನಡೆಸಲಾಗುತ್ತಿದೆ. ಎಫ್ಐಆರ್ ಆಗಿರುವ ಮಾಹಿತಿ ತಿಳಿದ ಮಾನಪ್ಪ ವಜ್ಜಲ್ ಪುತ್ರ ನಿರೀಕ್ಷಣಾ ಜಾಮೀನು ಪಡೆಯಲು ಅರ್ಜಿ ಸಲ್ಲಿಸಿದ್ದಾರೆ ಎಂದು ಅವರ ಆಪ್ತ ವರ್ಗದಿದ ಕೇಳಿ ಬಂದಿದೆ.
Recommended Video
ಮಾಜಿ ಪುತ್ರನ ಪುಂಡಾಟದ ವಿರುದ್ಧ ಕಿಡಿ: ಮಾಜಿ ಶಾಸಕ ಮಾನಪ್ಪ ವಜ್ಜಲ್ ಪುತ್ರನ ಪುಂಡಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹತ್ತು ಹುಡುಗರನ್ನು ಸೇರಿಸಿ ಜಗಳ ತೆಗೆದು ಹಲ್ಲೆ ಮಾಡಿ ಉದ್ದಟತನ ಮೆರೆದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಈ ಹಿಂದೆ ಶಾಸಕ ಹ್ಯಾರೀಸ್ ಪುತ್ರ ನಲಪಾಡ್ ಉದ್ಯಮಿಯ ಪುತ್ರ ವಿದ್ವತ್ ಮೇಲೆ ಇದೇ ರೀತಿ ಹಲ್ಲೆ ಮಾಡಿ ಜೈಲು ಪಾಲಾಗಿದ್ದ. ಕಣ್ಣು ಕಳೆದುಕೊಳ್ಳುವಂತೆ ಹಲ್ಲೆ ಮಾಡಿದ್ದ ನಲಪಾಡ್ನನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಇದೀಗ ಮಾನಪ್ಪ ವಜ್ಜಲ್ ಪುತ್ರ ಆಂಜನೇಯ ವಜ್ಜಲ್ ಕೂಡ ಅದೇ ರೀತಿ ಉದ್ಯಮಿ ಪುತ್ರನ ಮೇಲೆ ಹಲ್ಲೆ ಮಾಡಿ ತಲೆ ಮರೆಸಿಕೊಂಡಿದ್ದಾನೆ.