ಮೋದಿಯನ್ನು ಹುಚ್ಚನಿಗೆ ಹೋಲಿಸಿದ ಸಿಎಂ ಇಬ್ರಾಹಿಂ ಮೇಲೆ ಎಫ್ಐಆರ್
ದೇಶದ ಪ್ರಧಾನಿ ನರೇಂದ್ರ ಮೋದಿಯನ್ನು ಹುಚ್ಚನಿಗೆ ಹೋಲಿಸಿದ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ಮೇಲೆ ಎಫ್ಐಆರ್ ದಾಖಲಾಗಿದೆ.
ಬೆಂಗಳೂರು, ಮಾರ್ಚ್ 3: ದೇಶದ ಪ್ರಧಾನಿ ನರೇಂದ್ರ ಮೋದಿಯನ್ನು ಹುಚ್ಚನಿಗೆ ಹೋಲಿಸಿದ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ಮೇಲೆ ಎಫ್ಐಆರ್ ದಾಖಲಾಗಿದೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರಣಯ್ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.[ಪ್ರಶಾಂತ್ ಕಿಶೋರ್ ವಿರುದ್ಧ ಸೇಡು ತೀರಿಸಿಕೊಂಡ ಅಮಿತ್ ಶಾ]
ಸದ್ಯದಲ್ಲೇ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಭಾನುವಾರ ಕಾಂಗ್ರೆಸ್ ಗುಂಡ್ಲುಪೇಟೆಯಲ್ಲಿ ಕಾರ್ಯಕರ್ತರ ಸಭೆ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಎಂದಿನಂತೆ ಹಾಸ್ಯ, ವಿಡಂಬನಾತ್ಮಕವಾಗಿ ಮಾತು ಆರಂಭಿಸಿದ್ದ ಸಿ.ಎಂ ಇಬ್ರಾಹಿಂ, 'ಮೋದಿ ಕೈಗೆ ಅಧಿಕಾರ ಕೊಟ್ಟಿರುವುದು ಹುಚ್ಚನ ಕೈಗೆ ಕತ್ತಿ ಕೊಟ್ಟು ಶೇವಿಂಗ್ ಗೆ ಕೂರಿಸಿದಂತಾಗಿದೆ. ಆ ಹುಚ್ಚ ಕತ್ತಿಯನ್ನು ಗಡ್ಡಕ್ಕೆ ಹಿಡಿಯುತ್ತಾನೋ ಕುತ್ತಿಗೆಗೆ ಹಿಡಿಯುತ್ತಾನೋ ಗೊತ್ತಿಲ್ಲ,' ಎಂದು ಲೇವಡಿ ಮಾಡಿದ್ದರು.[ಪರಿಕ್ಕರ್ ರಕ್ಷಣಾ ಹುದ್ದೆಗೆ ರಾಜೀನಾಮೆ, ಯಾರು ನೆಕ್ಸ್ಟ್?]
ಸಿಎಂ ಇಬ್ರಾಹಿಂ ಪ್ರಧಾನಿಯನ್ನು ಹುಚ್ಚನಿಗೆ ಹೋಲಿಸುತ್ತಿದ್ದಂತೆ ಭಾರೀ ಟೀಕೆ ಕೇಳಿ ಬಂದಿತ್ತು. ಇದೀಗ ಇದರ ವಿರುದ್ಧ ದೂರು ಸಲ್ಲಿಕೆಯಾದ ಹಿನ್ನಲೆಯಲ್ಲಿ ಎಫ್ಐಆರ್ ಕೂಡಾ ದಾಖಲಾಗಿದೆ.
ತಮ್ಮ ಹೇಳಿಕೆಯ ಮೂಲಕ ಜನರಿಂದ ಆಯ್ಕೆಯಾದ ಪ್ರಧಾನಿಗೆ ಇಬ್ರಾಹಿಂ ಅವಮಾನಿಸಿದ್ದಾರೆ. ಜತೆಗೆ ಸವಿತಾ ಸಮಾಜಕ್ಕೂ ಅವಮಾನ ಮಾಡಿದ್ದಾರೆ. ಹಾಗಾಗಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಮ್ಮ ದೂರಿನಲ್ಲಿ ಪ್ರಣಯ್ ತಿಳಿಸಿದ್ದಾರೆ.