'100 ಕೋಟಿ ಹಿಂದೂಗಳಿಗಿಂತ 15 ಕೋಟಿ ನಾವೇ ಹೆಚ್ಚು': ಎಐಎಂಐಎಂ ಮುಖಂಡನ ವಿರುದ್ಧ ಎಫ್ಐಆರ್
ಬೆಂಗಳೂರು, ಫೆಬ್ರವರಿ 22: ದೇಶದ 100 ಕೋಟಿ ಹಿಂದೂಗಳಿಗಿಂತಲೂ 15 ಕೋಟಿ ಮುಸ್ಲಿಮರೇ ಹೆಚ್ಚು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಎಐಎಂಐಎಂ ನಾಯಕ ವಾರಿಸ್ ಪಠಾಣ್ ವಿರುದ್ಧ ರಾಜ್ಯದ ಕಲಬುರಗಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಖಾಸಗಿ ವಕೀಲರೊಬ್ಬರು ನೀಡಿದ್ದ ದೂರಿನ ಅನ್ವಯ ಪಠಾಣ್ ವಿರುದ್ಧ ಐಪಿಸಿ ಸೆಕ್ಷನ್ 117 (ಸಾರ್ವಜನಿಕರಿಂದ ದುಷ್ಕೃತ್ಯಕ್ಕೆ ಪ್ರೇರಣೆ), 153 (ಧಂಗೆ ಎಬ್ಬಿಸುವ ಉದ್ದೇಶದಿಂದ ಪ್ರಚೋದನೆ) ಮತ್ತು 153 ಎ (ವಿಭಿನ್ನ ಗುಂಪುಗಳ ನಡುವೆ ದ್ವೇಷ ಬಿತ್ತುವುದು) ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಹಿಂದೂಗಳು 100 ಕೋಟಿ ಇರಬಹುದು. ಆದರೆ, 15 ಕೋಟಿಯಷ್ಟು ಇರುವ ಮುಸ್ಲಿಮರಿ ಅವರಿಗಿಂತ ಹೆಚ್ಚು ಎಂದು ಪಠಾಣ್ ನೀಡಿದ್ದ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿತ್ತು.
ಪಾಕಿಸ್ತಾನ ಪರ ಅಮೂಲ್ಯ ಲಿಯೋನಾ ಘೋಷಣೆ: ಯಾರು, ಏನು ಹೇಳಿದರು?
'ನಾವು ಒಟ್ಟಿಗೆ ಸಾಗಬೇಕು. ನಾವು ಸ್ವಾತಂತ್ರ್ಯ ಪಡೆದುಕೊಳ್ಳಬೇಕು. ನಾವು ಕೇಳುವುದರಿಂದ ಯಾವುದೂ ನಮಗೆ ಸಿಗುವುದಿಲ್ಲ. ನಾವು ಅವುಗಳನ್ನು ಬಲವಂತವಾಗಿ ಕಿತ್ತುಕೊಳ್ಳಬೇಕು. ನೆನಪಿಡಿ... ನಾವು 15 ಕೋಟಿಯಷ್ಟು ಇರಬಹುದು. ಆದರೆ ಅದು 100 ಕೋಟಿಗಿಂತಲೂ ಹೆಚ್ಚು, ಇದನ್ನು ನೆನಪಿಟ್ಟುಕೊಳ್ಳಿ' ಎಂದು ಪಠಾಣ್ ಹೇಳಿದ್ದ ಭಾಷಣದ ವಿಡಿಯೋ ವೈರಲ್ ಆಗಿತ್ತು.
ಕಲಬುರಗಿಯಲ್ಲಿ ನಡೆದಿದ್ದ ಪ್ರತಿಭಟನೆ
ಫೆ. 16ರಂದು ಉತ್ತರ ಕರ್ನಾಟದ ಭಾಗದ ಕಲಬುರಗಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಮಾತನಾಡಿದ್ದ ಪಠಾಣ್, ಈ ವಿವಾದ ಸೃಷ್ಟಿಸಿದ್ದರು. ತಮ್ಮ ಹೇಳಿಕೆಯನ್ನು ಬೇರೆಯದೇ ರೀತಿಯಲ್ಲಿ ಅರ್ಥೈಸಿಕೊಳ್ಳಲಾಗಿದೆ ಎಂದು ಅವರು ಸ್ಪಷ್ಟೀಕರಣ ನೀಡಿದ್ದರು. ಈ ಹೇಳಿಕೆ ನೀಡಿ ಆರು ದಿನಗಳ ಬಳಿಕ ಕಲಬುರಗಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಪಠಾಣ್ರಿಂದ ವಿವರಣೆ
ಈ ಹೇಳಿಕೆಯಿಂದ ಮುಜುಗರಕ್ಕೆ ಒಳಗಾದ ಎಐಎಂಐಎಂ, ಅವರ ಅಭಿಪ್ರಾಯದಿಂದ ಅಂತರ ಕಾಯ್ದುಕೊಂಡಿತ್ತು. ವಾರಿಸ್ ಪಠಾಣ್ ಹೇಳಿಕೆಯನ್ನು ನಮ್ಮ ಪಕ್ಷ ಬೆಂಬಲಿಸುವುದಿಲ್ಲ. ಅವರ ಹೇಳಿಕೆಗೆ ಅವರಿಂದ ವಿವರಣೆಯನ್ನು ಕೇಳಲಾಗುವುದು ಎಂದು ಪಕ್ಷದ ಮಹಾರಾಷ್ಟ್ರ ಘಟಕದ ಮುಖ್ಯಸ್ಥ ಇಮ್ತಿಯಾಜ್ ಜಲೀಲ್ ಹೇಳಿದ್ದಾರೆ.
'ಪಾಕಿಸ್ತಾನ್ ಜಿಂದಾಬಾದ್' ಎಂದವಳಿಗೆ ವೇದಿಕೆಯಲ್ಲೇ ಓವೈಸಿ ಪ್ರತಿಕ್ರಿಯೆ ಏನು?
ಬಿಜೆಪಿ ನಾಯಕರೂ ಮಾತನಾಡಿದ್ದರು
'ಅಗತ್ಯಬಿದ್ದರೆ, ಭಾಷಣಗಳನ್ನು ಮಾಡುವಾಗ ಯಾವುದನ್ನು ಹೇಳಬೇಕು, ಯಾವುದನ್ನು ಹೇಳಬಾರದು ಎಂದು ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡುವ ಪಟ್ಟಿಯನ್ನು ಸಿದ್ಧಪಡಿಸುತ್ತೇವೆ. ಬಿಜೆಪಿ ನಾಯಕರಾದ ಯೋಗಿ ಆದಿತ್ಯನಾಥ್ ಮತ್ತು ಅನುರಾಗ್ ಠಾಕೂರ್ ಕೂಡ ಕೆಲವು ದ್ವೇಷಪೂರಿತ ಹೇಳಿಕೆಗಳನ್ನು ನೀಡಿದ್ದರು. ಆದರೆ ಯಾರೂ ಅವರ ಬಗ್ಗೆ ಪ್ರಶ್ನೆ ಎತ್ತಲಿಲ್ಲ' ಎಂದು ಜಲೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಓವೈಸಿ ಎದುರೇ ಘೋಷಣೆ
ಗುರುವಾರ ಬೆಂಗಳೂರಿನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆ ವೇಳೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಎದುರೇ ಅಮೂಲ್ಯ ಲಿಯೋನಾ ಎಂಬ ಯುವತಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದು ವಿವಾದ ಸೃಷ್ಟಿಸಿದೆ. ಈ ಪ್ರತಿಭಟನೆಯನ್ನು ಎಐಎಂಐಎಂ ಆಯೋಜಿಸಿರಲಿಲ್ಲ. ಇದನ್ನು ಜೆಡಿಎಸ್ ಮುಖಂಡರು ಆಯೋಜಿಸಿದ್ದರು. ಮತ್ತು ಎಲ್ಲ ಪಕ್ಷಗಳ ಮುಖಂಡರೂ ಅಲ್ಲಿದ್ದರು. ವಾಸ್ತವವಾಗಿ ಯುವತಿ ಮಾತನಾಡುವುದನ್ನು ತಡೆದಿದ್ದೇ ನಾನು. ಆದರೆ ಅದು ಎಐಎಂಐಎಂನ ವೇದಿಕೆ ಎಂದೇ ಬಿಂಬಿಸಲಾಗುತ್ತಿದೆ' ಎಂದು ಓವೈಸಿ ಹೇಳಿದ್ದರು.