ರಾಗಿ ಹಗರಣ: ಸರ್ಕಾರಕ್ಕೆ ವಂಚಿಸಿದನೇ ಮಂಡ್ಯ ಉಗ್ರಾಣಾಧಿಕಾರಿ?
ಮಂಡ್ಯ,ಫೆಬ್ರವರಿ,16: ರೈಸ್ ಮಿಲ್ ಗಳಲ್ಲಿ ಅಕ್ರಮವಾಗಿ ರಾಗಿ ದಾಸ್ತಾನನ್ನು ಸಂಗ್ರಹಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಪೊಲೀಸರು ಉಗ್ರಾಣದ ವ್ಯವಸ್ಥಾಪಕನನ್ನು ಸೋಮವಾರ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಕೆ.ಆರ್.ಪೇಟೆ ಉಗ್ರಾಣದ ವ್ಯವಸ್ಥಾಪಕ ಎಚ್.ಟಿ. ವೆಂಕಟರಂಗಯ್ಯ ಎಂಬಾತನೇ ಪ್ರಮುಖ ಆರೋಪಿ. ರಾಗಿ ಹಗರಣದ ಬಗ್ಗೆ ಕರ್ನಾಟಕ ಆಹಾರ ನಾಗರಿಕ ಮತ್ತು ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ಬಸವರಾಜು ಕೆ.ಆರ್.ಪೇಟೆ ನಗರ ಠಾಣೆಯಲ್ಲಿ ಫೆ.7ರಂದು ನೀಡಿದ ದೂರಿನ ಆಧಾರದ ಮೇಲೆ ಈತನನ್ನು ಬಂಧಿಸಲಾಗಿದೆ.[ಮದುವೆಗೆ ಬಂದವನು ಮುದ್ದೆ ತಿಂದು ಬಹುಮಾನ ಗೆದ್ದ]
ಏನಿದು ರಾಗಿ ಹಗರಣ?
ರೈತರ ಅನುಕೂಲದ ದೃಷ್ಠಿಯಿಂದ ರಾಜ್ಯ ಸರ್ಕಾರ ಜಿಲ್ಲೆಯ 165 ಸ್ಥಳಗಳಲ್ಲಿ ಕಳೆದ ವರ್ಷ ಧಾನ್ಯ ಖರೀದಿ ಕೇಂದ್ರಗಳನ್ನು ತೆರೆಯಲಾಗಿತ್ತು. ಖರೀದಿ ಪ್ರಕ್ರಿಯೆಗಾಗಿ ನಿಗಮವನ್ನು ನೋಡಲ್ ಏಜೆನ್ಸಿಯಾಗಿ ನೇಮಕ ಮಾಡಲಾಗಿತ್ತು.
ಖರೀದಿಸಿದ್ದ ಧಾನ್ಯಗಳನ್ನು ಜಿಲ್ಲೆಯ ನಾನಾ ಉಗ್ರಾಣಗಳಲ್ಲಿ ಸಂಗ್ರಹಿಸಿಡಲಾಗಿತ್ತು. ಎಚ್.ಟಿ. ವೆಂಕಟರಂಗಯ್ಯ ಅವರು ತಾಲೂಕಿನ ರೈತರಿಂದ ಖರೀದಿಸಿದ ಒಟ್ಟು 92,425.50 ಕ್ವಿಂಟಾಲ್ ರಾಗಿಯನ್ನು ತಾಲೂಕಿನ ವಿವಿಧ ಗೋದಾಮುಗಳಲ್ಲಿ ಸಂಗ್ರಹಿಸಿ ತಮ್ಮ ವಶದಲ್ಲಿಟ್ಟುಕೊಂಡಿದ್ದರು.[ಮೈಸೂರಿನಲ್ಲಿ ಬಿಸಿ ಊಟಕ್ಕೆ ಬಿಸಿಬಿಸಿ ರಾಗಿ ಮುದ್ದೆ]
ಸರ್ಕಾರದ ಹಂಚಿಕೆ ಆದೇಶದಂತೆ 2015ರ ನವೆಂಬರ್ ವರೆಗೆ ಸಂಗ್ರಹಿಸಿದ 14,527.76 ಕ್ವಿಂಟಾಲ್ ರಾಗಿಯನ್ನು ವಿವಿಧ ಸಗಟು ನಾಮಿನಿದಾರರಿಗೆ ವಿತರಿಸಿ, 77,897.74 ಕ್ವಿಂಟಾಲ್ ರಾಗಿ ದಾಸ್ತಾನಿನಲ್ಲಿ ಇರಬೇಕಿತ್ತು.
2016ರ ಜನವರಿ ತಿಂಗಳಲ್ಲಿ 75,667.76 ಕ್ವಿಂಟಾಲ್ ರಾಗಿಯನ್ನು ಸಾರ್ವಜನಿಕ ವಿತರಣೆಗೆ ವಿವಿಧ ಜಿಲ್ಲೆಗಳ ಸಗಟು ನಾಮಿನಿದಾರರಿಗೆ ವಿತರಿಸಲು ಬಿಡುಗಡೆಗೆ ಆದೇಶ ನೀಡಲಾಗಿತ್ತು. ಇದರಲ್ಲಿ ಅಂದಾಜು 57,359 ಕ್ವಿಂಟಲ್ ನಷ್ಟು ರಾಗಿಯನ್ನು ವಿವಿಧ ಸಗಟು ನಾಮಿನಿದಾರರಿಗೆ ವಿತರಿಸಿದ್ದಾರೆ.
ಉಳಿಕೆ ದಾಸ್ತಾನಿನಲ್ಲಿ ಸುಮಾರು 18,308.54 ಕ್ವಿಂಟಾಲ್ ರಾಗಿಯನ್ನು ವಿವಿಧ ಜಿಲ್ಲೆಗಳಿಗೆ ವಿತರಣೆ ಮಾಡಿ ಅಂತಿಮವಾಗಿ 2,229.98 ಕ್ವಿಂಟಾಲ್ ರಾಗಿ ಉಳಿಯಬೇಕಿತ್ತು. ಆದರೆ ವೆಂಕಟರಂಗಯ್ಯ ಅವರು ಸರ್ಕಾರಕ್ಕೆ ವಂಚಿಸಿದ್ದಾರೆ.[ಕೃಷಿಯನ್ನೇ ಬದುಕಾಗಿಸಿಕೊಂಡ ಮೈಸೂರಿನ ಎಂ.ಕಾಂ ಪದವೀಧರೆ]
ರಾಗಿ ದಾಸ್ತಾನನ್ನು ಸರ್ಕಾರದ ಹಂಚಿಕೆ ಆದೇಶದಂತೆ ವಿತರಣೆ ಮಾಡದೆ ಜನವರಿ 4ರಂದು ಕರ್ತವ್ಯಕ್ಕೆ ಗೈರುಹಾಜರಾಗಿ ನಾಪತ್ತೆಯಾದ ವೆಂಕಟರಂಗಯ್ಯ ಅವರನ್ನು ವಶಕ್ಕೆ ಪಡೆದಿರುವ ಕೆ.ಆರ್.ಪೇಟೆ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ವಿಚಾರಣೆ ಬಳಿಕ ಸತ್ಯಾಸತ್ಯತೆ ಹೊರಬೀಳಲಿದೆ