ಕರ್ನಾಟಕ ಸರ್ಕಾರಕ್ಕೆ ಸವಾಲಾದ ಸ್ವಾತಂತ್ರ್ಯ ಹೋರಾಟಗಾರರ ಹುಡುಕಾಟ!
ಬೆಂಗಳೂರು, ಆಗಸ್ಟ್, 07: ಭಾರತದ 75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮಾಚರಣೆ ಈಗಾಗಲೇ ದೇಶಾದ್ಯಂತ ಶುರುವಾಗಿದೆ. ಈ ವೇಳೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಹುಡುಕುವುದೇ ಸರ್ಕಾರಕ್ಕೆ ಕಷ್ಟವಾಗಿದೆ.
'ಆಜಾದಿ ಕಾ ಅಮೃತ್ ಮಹೋತ್ಸವ' ಆಚರಣೆಗೆ ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸುವುದು ಮತ್ತು ಆಹ್ವಾನಿಸುವುದು ಹಲವು ಜಿಲ್ಲಾಡಳಿತಗಳಿಗೆ ಕಠಿಣವಾಗಿದೆ ಎಂದು ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರನ್ನು ಹುಡುಕಲು ಮತ್ತು ಅವರನ್ನು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಆಹ್ವಾನಿಸುವ ಬದಲು ಅವರ ಮನೆಗೆ ತೆರಳಿ ಅವರನ್ನು ಗೌರವಿಸಲು ಸೂಚಿಸಿದ್ದಾರೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವ: ಕರ್ನಾಟಕದ ವೀರರಾಣಿ ಕಿತ್ತೂರಿನ ಚೆನ್ನಮ್ಮ ಅಜಾರಾಮರ
ರಾಜ್ಯಪಾಲರ ನಿರ್ದೇಶನದಂತೆ ಸ್ವಾತಂತ್ರ್ಯ ಹೋರಾಟಗಾರರನ್ನು ಹುಡುಕಲು ಹಲವು ಜಿಲ್ಲಾಡಳಿತಗಳಿಗೆ ಸಾಧ್ಯವಾಗುತ್ತಿಲ್ಲ.
ಬೆಂಗಳೂರು ನಗರ ವಿಭಾಗದ ಉಪ ಆಯುಕ್ತ ಕೆ.ಶ್ರೀನಿವಾಸ್ ಮಾತನಾಡಿ, "ನಾವು ಬಹಳ ಕಷ್ಟಪಟ್ಟು ಹಲವು ದಿನಗಳ ಹುಡುಕಾಟದ ನಂತರ ಶತಾಯುಷಿಯಾದ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದೇವೆ. ಸಾಂಕ್ರಾಮಿಕ ಭಯ ಮತ್ತು ಆರೋಗ್ಯದ ಕಾರಣಗಳಿಂದಾಗಿ, ಅವರನ್ನು ಆಚರಣೆಗಳಿಗೆ ಆಹ್ವಾನಿಸುವುದು ಕಷ್ಟಕರವಾಗಿತ್ತು ಮತ್ತು ನಾವು ಅವರನ್ನು ಅವರ ಮನೆಗಳಲ್ಲಿ ಗೌರವಿಸಲು ನಿರ್ಧರಿಸಿದ್ದೇವೆ." ಎಂದು ಹೇಳಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರಿಗೆ ಮನೆಯಲ್ಲೇ ಸನ್ಮಾನ
ಹಲಸೂರಿನಲ್ಲಿ ನೆಲೆಸಿರುವ ಸ್ವಾತಂತ್ರ್ಯ ಹೋರಾಟಗಾರ ನಾರಾಯಣಪ್ಪ ಅವರಿಗೆ 100 ವರ್ಷ, ಮಲ್ಲೇಶ್ವರದ ವಿ ನಾಗಭೂಷಣ ರಾವ್ ಅವರಿಗೆ 102 ವರ್ಷ. ರಾಜ್ಯಪಾಲರು ಆಗಸ್ಟ್ 9 ರಂದು ಅವರ ಮನೆಗೆ ಭೇಟಿ ನೀಡಿ ಸನ್ಮಾನಿಸಲಿದ್ದಾರೆ ಎಂದು ರಾಜಭವನದ ಪ್ರಕಟಣೆ ತಿಳಿಸಿದೆ.
ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್, ''ರಾಜ್ಯದ ಯಾವುದೇ ಭಾಗದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಪತ್ತೆ ಹಚ್ಚಿ, ಜಿಲ್ಲಾಡಳಿತಗಳು ಅವರನ್ನು ಭೇಟಿ ಮಾಡಿ ಅವರ ಮನೆಗಳಿಗೆ ತೆರಳಿ ಸನ್ಮಾನಿಸುವಂತೆ ಮುಖ್ಯ ಕಾರ್ಯದರ್ಶಿಗೆ ರಾಜ್ಯಪಾಲರು ಸೂಚಿಸಿದ್ದಾರೆ'' ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ಗುರುತಿಸುವುದೇ ಕಷ್ಟ
ಕುಮಾರ ಪಾರ್ಕ್ನ ಗಾಂಧಿ ಭವನದ ಗೌರವ ಕಾರ್ಯದರ್ಶಿ ಇಂದಿರಾ ಮಾತನಾಡಿ, "ಸ್ವಾತಂತ್ರ್ಯ ಹೋರಾಟಗಾರರನ್ನು ಹುಡುಕುವುದು ತುಂಬಾ ಕಷ್ಟ, ಯಾರೂ ಡೇಟಾಬೇಸ್ ಅನ್ನು ಸರಿಯಾಗಿ ನಿರ್ವಹಿಸಿಲ್ಲ. ನಾವು ಯಾವುದೇ ಕಾರ್ಯಕ್ರಮವನ್ನು ಆಯೋಜಿಸುವಾಗ ಮತ್ತು ಅವರಿಗೆ ಆಹ್ವಾನಗಳನ್ನು ಕಳುಹಿಸುವಾಗ ಅದು ಯಾವಾಗಲೂ ತುಂಬಾ ಕಷ್ಟಕರವಾಗಿದೆ. ಸಾಂಕ್ರಾಮಿಕ ಸಮಯದಲ್ಲಿ ನಾವು ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಕಳೆದುಕೊಂಡಿದ್ದೇವೆ ಮತ್ತು ಕೆಲವು ಬದುಕುಳಿದವರು ಪ್ರಯಾಣಿಸಲು ಅಥವಾ ಕಾರ್ಯಕ್ರಮಗಳಿಗೆ ಹಾಜರಾಗುವ ಸ್ಥಿತಿಯಲ್ಲಿಲ್ಲ" ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರು
ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವುಡೆ ಪಿ. ಕೃಷ್ಣ ಮಾತನಾಡಿ, ಗಾಂಧಿ ಮೌಲ್ಯಗಳ ಮಾರ್ಗದಲ್ಲಿ ನಮ್ಮನ್ನು ಮುನ್ನಡೆಸಬಲ್ಲ ಪೀಳಿಗೆಯನ್ನು ಕಳೆದುಕೊಂಡಿರುವುದು ದುಃಖಕರವಾಗಿದೆ. "ಬೆಂಗಳೂರಿನಲ್ಲಿ ಮಾತ್ರ, ನಮ್ಮಲ್ಲಿ ಒಬ್ಬರು ಅಥವಾ ಇಬ್ಬರು ಅಂತಹ ಹೋರಾಟಗಾರರು ಇದ್ದಾರೆ. ಆದರೆ, ನಾವು ಮುಂದುವರಿದಂತೆ, ಕೆಲವೇ ವರ್ಷಗಳಲ್ಲಿ, ಇಡೀ ಪೀಳಿಗೆಯು ಕಣ್ಮರೆಯಾಗುತ್ತದೆ ಎನ್ನುವುದು ಅರ್ಥವಾಗಿದೆ. ಆದಾಗ್ಯೂ, ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾದದ್ದು ಅವರೆಲ್ಲರೂ ಅನುಸರಿಸಿದ ಗಾಂಧಿ ಸಿದ್ಧಾಂತಗಳನ್ನು" ಎಂದು ಹೇಳಿದರು.
ದೇಶಾದ್ಯಂತ ಅದ್ದೂರಿ ಸಂಭ್ರಮಾಚರಣೆ
ದೇಶದ 75ನೇ ಸ್ವಾತಂತ್ರ್ಯದ ದಿನಾಚರಣೆಯನ್ನು ಸ್ಮರಣೀಯವಾಗಿ ಆಚರಿಸಲು ಕೇಂದ್ರ ಸರ್ಕಾರ ತೀರ್ಮಾನಸಿದೆ. ಹರ್ ಘರ್ ತಿರಂಗ ಎನ್ನುವ ಕಾರ್ಯಕ್ರಮದ ಮೂಲಕ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಲು ಮುಂದಾಗಿದೆ.
ದೇಶದ ಪ್ರಮುಖ 75 ರೈಲ್ವೆ ನಿಲ್ದಾಣಗಳನ್ನು ವಿಶೇಷವಾಗಿ ಅಲಂಕರಿಸಲು ತೀರ್ಮಾನಸಿಲಾಗಿದೆ. ದೇಶದ ಇತಿಹಾಸವನ್ನು ಬಿಂಬಿಸುವ ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಈಗಾಗಲೇ ದೇಶಾದ್ಯಂತ ರಾಷ್ಟ್ರಧ್ವಜ ರ್ಯಾಲಿ ನಡೆಸಲಾಗುತ್ತಿದೆ.