ಲಾಕ್ಡೌನ್: ಸರ್ಕಾರದಿಂದ ಸಾಹಿತಿ, ಕಲಾವಿದರಿಗೆ ಆರ್ಥಿಕ ನೆರವು
ಬೆಂಗಳೂರು, ಏಪ್ರಿಲ್ 21: ಕೋವಿಡ್-19 ಕೊರೊನಾ ರೋಗಾಣುವಿನ ನಿಯಂತ್ರಣಕ್ಕೆ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಅಶಕ್ತ ಕಲಾವಿದರು, ಸಾಹಿತಿಗಳಿಗೆ ಆರ್ಥಿಕ ಸಹಾಯ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅರ್ಜಿ ಆಹ್ವಾನಿಸಿದೆ.
ಮಾರ್ಗಸೂಚಿಗಳು: ಆರ್ಥಿಕ ಸಂಕಷ್ಟದಲ್ಲಿರುವ ಎಲ್ಲಾ ಕಲಾ ಪ್ರಕಾರದ ಕಲಾವಿದರು, ಸಾಹಿತಿಗಳು 10 ವರ್ಷ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರಬೇಕು. ವೃತ್ತಿನಿರತರ ಕಲಾವಿದರಾಗಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿ ಇರುವವರಾಗಿರಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಸಾಶನ ಪಡೆಯುತ್ತಿರುವವರು ಇದಕ್ಕೆ ಅರ್ಹರಿರುವುದಿಲ್ಲ.
ವಲಸೆ ಕಾರ್ಮಿಕರಿಗೆ ಪ್ರತಿದಿನ ಎರಡು ಲಕ್ಷ ದಿನಸಿ ಕಿಟ್ ವಿತರಣೆ
ಸರ್ಕಾರಿ ನೌಕರರಾಗಿರಬಾರದು. ರಾಜ್ಯ, ಕೇಂದ್ರ, ನಿಗಮ ಮಂಡಳಿ, ಸರ್ಕಾರಿ ಅನುದಾನಿತ ಸಂಸ್ಥೆಗಳು ಮತ್ತು ಅರೆ ಸರ್ಕಾರಿ ಸಂಸ್ಥೆಗಳ ನೌಕರರಾಗಿರಬಾರದು. ಅರ್ಹ ಕಲಾವಿದರು, ಸಾಹಿತಿಗಳು ತಮ್ಮ ಹೆಸರು, ವಿಳಾಸ, ಆಧಾರ ಸಂಖ್ಯೆ, ದೂರವಾಣಿ ಸಂಖ್ಯೆ ಮತ್ತು ಬ್ಯಾಂಕ್ ವಿವರಗಳೊಂದಿಗೆ ಮಾಹಿತಿಯನ್ನು ಆಯಾ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಗೆ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ತಪ್ಪು ಅಥವಾ ಸುಳ್ಳು ಮಾಹಿತಿ ನೀಡಿ ಇದರ ಲಾಭ ಪಡೆಯಲು ಯತ್ನಿಸುವವರ ಮೇಲೆ ವಿಪತ್ತು ನಿರ್ವಹಣಾ ಅಧಿನಿಯಮದನ್ವಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.