ಹೊರರಾಜ್ಯದ ಕನ್ನಡಿಗರನ್ನು ಕರೆ ತರಲು ಕಾಸು ಕೊಡುತ್ತಂತೆ ಕೆಪಿಸಿಸಿ!
ಬೆಂಗಳೂರು, ಮೇ.11: ನೊವೆಲ್ ಕೊರೊನಾ ವೈರಸ್ ಹಾವಳಿಗೆ ಲಾಕ್ ಡೌನ್ ಆಗಿರುವ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರ ನೆರವು ನೀಡುವುದಾಗಿ ಕೆಪಿಸಿಸಿ ಹೇಳಿದೆ. ಹೊರರಾಜ್ಯದಿಂದ ಕರ್ನಾಟಕಕ್ಕೆ ಮರಳಲು ಇಚ್ಛಿಸುವವರರಿಗೆ ಅಗತ್ಯ ರೈಲು ಸೇವೆ ಕಲ್ಪಿಸಲು ತಗಲುವ ವೆಚ್ಚವನ್ನು ಕಾಂಗ್ರೆಸ್ ಭರಿಸುವುದಾಗಿ ತಿಳಿಸಿದೆ.
ಕಳೆದೊಂದು ವಾರದಿಂದ ಭಾರತ ಲಾಕ್ ಡೌನ್ ನಿಂದ ಹೊರರಾಜ್ಯದಲ್ಲಿ ಸಂಕಷ್ಟಕ್ಕೀಡಾಗಿರುವ ಕನ್ನಡಿಗರಿಗೆ ನೆರವು ನೀಡುವಂತೆ ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಒತ್ತಾಯಿಸುತ್ತಿದೆ. ಸರ್ಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪಕ್ಷದ ನಾಯಕರು ಮಹತ್ವದ ಸಭೆ ನಡೆಸಿದರು.
ಲಾಕ್ ಡೌನ್ ಭಾರತದಲ್ಲಿ ದುಗ್ಗಾಣಿ ಇಲ್ಲದೇ ದಕ್ಕಿದ್ದು ದುಃಖ ಮಾತ್ರ!
ರಾಜ್ಯದಲ್ಲಿ ವಿಪಕ್ಷಗಳೊಂದಿಗೆ ಸೇರಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದ ಪರಿಣಾಮ ವಿಶೇಷ ಪ್ಯಾಕೇಜ್ ಘೋಷಣೆಯಾಗಿದೆ. ಅಗಸ, ಮಡಿವಾಳ, ಸವಿತಾ ಸಮಾಜಕ್ಕೆ ಆಟೋ ಟ್ಯಾಕ್ಸಿ ಚಾಲಕರಿಗೆ ಸಹಾಯಧನ ಘೋಷಿಸಿದೆ. ಇತರೆ ಅಸಂಘಟಿತ ಕಾರ್ಮಿಕರ ಸಮಸ್ಯೆಗಳ ಬಗ್ಗೆಯೂ ಹಾಗೂ ರೈತರ ಸಂಕಷ್ಟಗಳ ಕುರಿತು ಸರ್ಕಾರಕ್ಕೆ ಗಮನ ಸೆಳೆಯಲಾಗಿದೆ.
ಹೊರರಾಜ್ಯದಲ್ಲಿರುವ ಕನ್ನಡಿಗರ ಕರೆ ತರಲು ಒತ್ತಡ:
ಹೊರರಾಜ್ಯದಲ್ಲಿರುವ ಕರ್ನಾಟಕದ ಕಾರ್ಮಿಕರು ಕನ್ನಡಿಗರನ್ನು ರಾಜ್ಯಕ್ಕೆ ವಾಪಸ್ ಕರೆಯಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ. ವಲಸೆ ಕಾರ್ಮಿಕರ ಪ್ರಯಾಣ ವೆಚ್ಚ ಭರಿಸಲು ಕಾಂಗ್ರೆಸ್ ಸಿದ್ಧವಾದಂತೆ ಇದೀಗ ಹೊರರಾಜ್ಯದ ಕನ್ನಡಿಗರ ವೆಚ್ಚವನ್ನು ಭರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರು ಸಭೆಯಲ್ಲಿ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅಶೋಕ್ ವರ್ಮಾರನ್ನು ಭೇಟಿ ಮಾಡಿ ಪ್ರಯಾಣದ ವೆಚ್ಚ ಭರಿಸುವುದಾಗಿ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ ಬಾವಾ, ಸಂಸದ ಡಿಕೆ ಸುರೇಶ್, ರಾಜ್ಯಸಭೆ ಸದಸ್ಯ ಎಲ್.ಹನುಮಂತಯ್ಯ, ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್ ಸುದರ್ಶನ್, ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಅವರು ಉಪಸ್ಥಿತರಿದ್ದರು ಎಂದು ತಿಳಿದು ಬಂದಿದೆ.