ಕೊನೆಗೂ ಅಂತ್ಯವಾದ ಮುಷ್ಕರ: ಸರ್ಕಾರಕ್ಕೆ ಗಡುವು ಕೊಟ್ಟ ಸಿಬ್ಬಂದಿ!
ಬೆಂಗಳೂರು, ಡಿ. 14: ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಸಾರಿಗೆ ಸಿಬ್ಬಂದಿಯ ಮುಷ್ಕರ ಕೊನೆಗೂ ಅಂತ್ಯವಾಗಿದೆ. ತಮ್ಮನ್ನು ಸರ್ಕಾರಿ ನೌಕರರು ಎಂದು ಪರಿಗಣಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ನಾಲ್ಕೂ ಸಾರಿಗೆ ನಿಗಮಗಳ ನೌಕರರು ಮುಷ್ಕರ ಆರಂಭಿಸಿದ್ದರು. ಹೀಗಾಗಿ ಇಡೀ ರಾಜ್ಯಾದ್ಯಂತ ಸಾರ್ವಜನಿಕ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು. ಇದೀಗ ಸಾರಿಗೆ ಇಲಾಖೆ ಸಿಬ್ಬಂದಿ ತಮ್ಮ ಮುಷ್ಕರವನ್ನು ಹಿಂದಕ್ಕೆ ಪಡೆದಿದ್ದು, ಸರ್ಕಾರಿ ಬಸ್ಗಳು ರಸ್ತೆಗೆ ಇಳಿದಿವೆ.
ಸಾರಿಗೆ ನೌಕರರ ಬಹುತೇಕ ಬೇಡಿಕೆಗಳಿಗೆ ಸರ್ಕಾರ ಲಿಖಿತ ಭರವಸೆ ನೀಡಿದ ಹಿನ್ನೆಲೆ ಮುಷ್ಕರ ವಾಪಾಸ್ ಪಡೆಯಲಾಗಿದ್ದು, ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಗಡುವು ಕೊಡಲಾಗಿದೆ. ಒಂದು ಹಂತದಲ್ಲಿ ಮುಷ್ಕರ ಕೋಡಿಹಳ್ಳಿ ಚಂದ್ರಶೇಖರ್ ಅವರ ಹಿಡಿತವನ್ನೂ ತಪ್ಪಿದಂತೆ ಕಂಡು ಬಂದಿತ್ತು. ಇದೀಗ ಮುಷ್ಕರ ಅಂತ್ಯಗೊಂಡಿದ್ದನ್ನು ಅಧಿಕೃತವಾಗಿ ಪ್ರಕಟಿಸುವ ಮೂಲಕ ಎಲ್ಲ ಗೊಂದಲಗಳಿಗೆ ಕೋಡಿಹಳ್ಳಿ ಚಂದ್ರಶೇಖರ್ ಅವರು ತೆರೆ ಎಳೆದಿದ್ದಾರೆ. ಆದರೂ ಸರ್ಕಾರಕ್ಕೆ ಸಾರಿಗೆ ಇಲಾಖೆ ಸಿಬ್ಬಂದಿ ಗಡುವು ಕೊಟ್ಟಿದ್ದಾರೆ.
ದಾವಣಗೆರೆ; ಮುಷ್ಕರ, ರಸ್ತೆಗಿಳಿದಿದ್ದು 6 ಸರ್ಕಾರಿ ಬಸ್ ಮಾತ್ರ!
ಪಟ್ಟು ಹಿಡಿದಿದ್ದ ಸಿಬ್ಬಂದಿ
ಸಾರಿಗೆ ಇಲಾಖೆ ನೌಕರರು ಮುಷ್ಕರವನ್ನು ಹಿಂದಕ್ಕೆ ಪಡೆದಿದ್ದಾರೆ. ಕಳೆದ ನಾಲ್ಕು ದಿನಗಳಿಂದ ನಡೆಸಿದ್ದ ಮುಷ್ಕರ ತಾರ್ಕಿಕ ಅಂತ್ಯ ಕಂಡಿದ್ದರೂ ಸರ್ಕಾರಕ್ಕೆ ಸಿಬ್ಬಂದಿ ಸರ್ಕಾರಕ್ಕೆ ಗಡುವು ಕೊಟ್ಟಿದ್ದಾರೆ. 6ನೇ ವೇತನ ಆಯೋಗದ ಕುರಿತು ಸರ್ಕಾರದ ಭರವಸೆಯಲ್ಲಿ ಗೊಂದಲವಿದೆ. ಹೀಗಾಗಿ ಫ್ರೀಡಂ ಪಾರ್ಕ್ಗೆ ಸಾರಿಗೆ ಸಚಿವರು ಬಂದು ಸ್ಪಷ್ಟನೆ ಕೊಡಬೇಕು ಎಂದು ಮುಷ್ಕರ ನಿರತರು ಪಟ್ಟು ಹಿಡಿದಿದ್ದರು.
ಸವದಿಗೆ ಕೋಡಿಹಳ್ಳಿ ದೂರವಾಣಿ ಕರೆ
ಸರ್ಕಾರದಿಂದ ಲಿಖಿತ ರೂಪದಲ್ಲಿ ಭರವಸೆ ಕೊಡುವಂತೆ ಮುಷ್ಕರ ನಿರತರು ಪಟ್ಟು ಹಿಡಿದಿದ್ದರು ಅದಕ್ಕೆ ಸರ್ಕಾರ ಕೂಡ ಲಿಖಿತ ರೂಪದಲ್ಲಿಯೇ ಭರವಸೆಯನ್ನು ಕೊಟ್ಟಿತು. ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಅವರು ಫ್ರೀಡಂ ಪಾರ್ಕ್ಗೆ ತೆರಳಿ ಲಿಖಿತವಾಗಿ ಸರ್ಕಾರದ ಭರವಸೆಗಳನ್ನು ಕೊಟ್ಟು ಬಂದರು. ಆದರೂ ಮುಷ್ಕರ ನಿರತರು ಒಪ್ಪಲಿಲ್ಲ. ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ದೂರವಾಣಿ ಕರೆ ಮಾಡಿ ಮುಷ್ಕರ ನಿರತರ ಗೊಂದಲವನ್ನು ಪರಿಹರಿಸಿದರು.
ಮೂರು ತಿಂಗಳುಗಳ ಗಡುವು
6ನೇ ವೇತನ ಆಯೋಗ ಸೇರಿದಂತೆ ಸರ್ಕಾರ ಕೊಟ್ಟಿರುವ ಲಿಖಿತ ಭರವಸೆಗಳಲ್ಲಿಯೂ ಸಾಕಷ್ಟು ಗೊಂದಲಗಳಿವೆ ಎಂದು ಮುಷ್ಕರ ನಿರತರು ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಸರ್ಕಾರಕ್ಕೆ ಸ್ವಲ್ಪ ಕಲಾವಕಾಶವನ್ನು ಕೊಡೋಣ ಎಂದು ನೇತೃತ್ವ ವಹಿಸಿಕೊಂಡಿದ್ದ ಕೋಡಿಹಳ್ಳಿ ಚಂದ್ರಶೇಖರ್ ಅವರು, ಸರ್ಕಾರಕ್ಕೆ ಗಡುವು ಕೊಡೋಣ ಎಂದು ಮನವೊಲಿಸಿದರು. ಆ ಬಳಿಕ ಮೂರು ತಿಂಗಳುಗಳ ಒಳಗೆ ಸರ್ಕಾರ ಎಲ್ಲ ಭರವಸೆಗಳನ್ನು ಈಡೇರಿಸಬೇಕು ಎಂಬ ಗಡುವು ಕೊಡುವ ಮೂಲಕ ಮುಷ್ಕರ ಹಿಂದಕ್ಕೆ ಪಡೆದಿದ್ದಾರೆ.
ಬಸ್ ಸಂಚಾರ ಆರಂಭ
ನಾಲ್ಕು ದಿನಗಳ ಬಳಿಕ ಇದೀಗ ನಾಲ್ಕೂ ನಿಗಮಗಳ ಬಸ್ಗಳು ರಸ್ತೆಗೆ ಇಳಿದಿವೆ. ಹೀಗಾಗಿ ಇಡೀ ರಾಜ್ಯಾದ್ಯಂತ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಬೆಂಗಳೂರಿನಲ್ಲಿಯೂ ಬಿಎಂಟಿಸಿ ಸೇವೆ ಪುನಾರಂಭವಾಗಿದ್ದು, ಹೆಚ್ಚಿನ ಬಸ್ಗಳನ್ನು ಓಡಿಸಲು ಸಿಬ್ಬಂದಿ ಮುಂದಾಗಿದ್ದಾರೆ. ಉಳಿದಂತೆ ಈಶಾನ್ಯ ಸಾರಿಗೆ, ವಾಯವ್ಯ ಸಾರಿಗೆ ಹಾಗೂ ಕೆಸ್ಆರ್ಟಿಸಿ ಬಸ್ಗಳು ಕೂಡ ರಸ್ತೆಗೆ ಇಳಿದಿವೆ.
Recommended Video