ಕರ್ನಾಟಕದಲ್ಲಿ ಮುಂಗಾರು ಚುರುಕು, ಮಳೆ ಸೃಷ್ಟಿಸಿದ ಅವಾಂತರಗಳು
ಬೆಂಗಳೂರು, ಜೂನ್ 24: ಮುಂಗಾರು ರಾಜ್ಯಾದ್ಯಂತ ಭಾನುವಾರದಿಂದ ಚುರುಕುಗೊಂಡಿದ್ದು, ಸದಾ ಬಿಸಿಲಿನಿಂದ ಕಂಗೆಟ್ಟಿದ್ದ ಉತ್ತರ ಕರ್ನಾಟಕದಲ್ಲೂ ವಿಪರೀತ ಮಳೆಯಾಗಿದೆ.
ಇತ್ತ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಭಾನುವಾರ ರಾತ್ರಿ ಧಾರಾಕಾರ ಮಳೆ ಸುರಿದಿದ್ದು, ಕಲ್ಲೂರ ಗ್ರಾಮದ ನಾಲೆಯಲ್ಲಿ ಭಾರೀ ಪ್ರಮಾಣದ ನೀರು ಶೇಖರಣೆಯಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಗ್ರಾಮದ ಜನ ಅದನ್ನು ನೋಡಲು ಇದೀಗ ಬ್ರಿಡ್ಜ್ ನತ್ತ ಹೋಗುತ್ತಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ಈ ಪ್ರಮಾಣದ ಮಳೆ ಬಂದಿರುವುದರಿಂದ ರೈತಾಪಿ ವರ್ಗ ತೀವ್ರ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರಲ್ಲಿ ಮಳೆ ಬಂದರೆ ಈ ರಸ್ತೆಗಳಲ್ಲಿ ಮಾತ್ರ ಹೋಗ್ಬೇಡಿ
ಚಿಕ್ಕೋಡಿಯಲ್ಲಿ ಮನೆಗೆ ನೀರು ನುಗ್ಗಿ ವೃದ್ಧೆ ಚಂಪಾಭಾಯಿ ಮೃತಪಟ್ಟಿದ್ದು, ಇನ್ನಿಬ್ಬರನ್ನು ಹಗ್ಗದ ಸಹಾಯದಿಂದ ರಕ್ಷಣ ಮಾಡಲಾಗಿದೆ. ಆಂಧ್ರ ಸೇರಿದಂತೆ ಬಳ್ಳಾರಿ ಗಡಿಭಾಗದಲ್ಲಿ ಧಾರಾಕಾರ ಮಳೆಯಾಗಿದ್ದು, ಸಿರಗುಪ್ಪ ತಾಲೂಕಿನ ರಾರಾವಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ.
ಸೇತುವೆಯ ಮೇಲೆ ತಡೆ ಗೋಡೆ ಇಲ್ಲದ ಕಾರಣ ರಸ್ತೆ ಕಾಣದೆ ಎರಡು ಲಾರಿ ಒಂದು ಬಸ್ ಪಲ್ಟಿ ಹೊಡೆದಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇನ್ನೂ ಚಿಕ್ಕೋಡಿ ತಾಲೂಕಿನಲ್ಲಿ ಮಳೆರಾಯನ ಅಬ್ಬರ ಜೋರಾಗಿದ್ದು, ಎಕ್ಸಂಬಾ ಪಟ್ಟಣದಲ್ಲಿ ಮಳೆ ನೀರಿಗೆ ಒಂದು ಟ್ರಾಕ್ಟರ್ ಮೂರು ಕಾರುಗಳು ಕೊಚ್ಚಿ ಹೋಗಿವೆ.
ಪಟ್ಟಣದ ಸರ್ಕಾರಿ ಆಸ್ಪತ್ರೆ ಹತ್ತಿರ ಕಾರುಗಳನ್ನು ನಿಲ್ಲಿಸಲಾಗಿತ್ತು. ಆದರೆ ಕಳೆದ ದಿನ ಸುರಿದ ಮಳೆಗೆ ಕಾರ್ ಕೊಚ್ಚಿಕೊಂಡು ಹೋಗಿದೆ. ಮಳೆ ನೀರಿಗೆ ಸುಮಾರು 200 ಮೀಟರ್ ನಷ್ಟು ದೂರ ಕೊಚ್ಚಿಕೊಂಡು ಹೋಗಿವೆ. ಆದರೆ ಮಳೆಯಿಂದಾಗಿ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.
ಉತ್ತರ ಕನ್ನಡದಲ್ಲಿ 12 ಸೆಂ.ಮೀ, ಕೊಲ್ಲೂರಿನಲ್ಲಿ 10 ಸೆಂ.ಮೀ, ಕುಂದಾಪುರದಲ್ಲಿ 10 ಸೆಂ.ಮೀ, ಕುಮಟಾ 5 ಸೆಂ.ಮೀ, ಹೊಸನಗರ 5 ಸೆಂ.ಮೀ, ಕೋಟಾ 4 ಸೆಂ.ಮೀ, ಮಂಗಳೂರು 3 ಸೆಂ.ಮೀ, ಧರ್ಮಸ್ಥಳ 3 ಸೆಂ.ಮೀನಷ್ಟು ಮಳೆಯಾಗಿದೆ. ಇನ್ನು ಎರಡು ದಿನ ಮಳೆ ಮುಂದುವರೆಯಲಿದೆ.