ಕರ್ನಾಟಕ; ಕುಟುಂಬದ ಜಾಗದಲ್ಲೇ ಮೃತ ಕೊರೊನಾ ರೋಗಿಗಳ ಅಂತ್ಯಸಂಸ್ಕಾರಕ್ಕೆ ಒಪ್ಪಿಗೆ
ಬೆಂಗಳೂರು, ಏಪ್ರಿಲ್ 21: ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರವನ್ನು ಅವರಿಗೆ ಸೇರಿದ ಜಾಗದಲ್ಲಿ, ಅವರ ಕುಟುಂಬಕ್ಕೆ, ಸಂಬಂಧಿಗಳಿಗೆ ಸೇರಿದ ಜಮೀನಿನಲ್ಲಿ ನೆರವೇರಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.
ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿರುವವ ಸಂಖ್ಯೆ ಏರಿಕೆಯಾಗುತ್ತಿದ್ದು, ಚಿತಾಗಾರಗಳಲ್ಲಿಯೂ ಅಂತ್ಯಸಂಸ್ಕಾರ ನಡೆಸುವುದು ಸವಾಲಾಗುತ್ತಿದೆ. ಕೋವಿಡ್ ಬಲಿ ಪಡೆಯುತ್ತಿರುವ ದೇಹಗಳಿಗೆ ಅಂತ್ಯ ಸಂಸ್ಕಾರಕ್ಕೂ ಜಾಗ ವಿಲ್ಲದೇ ಪರದಾಡುವಂತಾಗಿದೆ. ಚಿತಾಗಾರಕ್ಕೆ ಬರುತ್ತಿರುವ ಮೃತದೇಹಗಳ ಸಂಖ್ಯೆ ಹೆಚ್ಚುತ್ತಿದ್ದು, ಸಿಬ್ಬಂದಿಯೂ ಹೈರಾಣಾಗಿದ್ದಾರೆ.
ಕರ್ನಾಟಕ; 23,558 ಹೊಸ ಕೋವಿಡ್ ಪ್ರಕರಣ ದಾಖಲು
ಬೆಂಗಳೂರಿನ ಯಲಹಂಕದ ಬಳಿ ಸರ್ಕಾರ ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಜಾಗ ನೀಡಿದೆ. ಯಲಹಂಕದಲ್ಲಿ 4 ಎಕರೆ ವಿಸ್ತೀರ್ಣದಲ್ಲಿ ತೆರೆದ ಚಿತಾಗಾರವನ್ನು ನಿರ್ಮಿಸಲು ಮುಂದಾಗಿರುವುದಾಗಿ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ. ಹೀಗಿದ್ದೂ ಪರಿಸ್ಥಿತಿ ಮಿತಿ ಮೀರುವ ಸೂಚನೆ ದೊರೆತಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರವನ್ನು ಅವರ ಕುಟುಂಬದವರ ಜಾಗದಲ್ಲಿಯೇ ಮಾಡಲು ಅನುಮತಿ ನೀಡಿದೆ.
ಈ ನಡುವೆ ಬೆಂಗಳೂರಿನಲ್ಲಿ ಕೊರೊನಾ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗುವುದೂ ಕಷ್ಟವಾಗಿದೆ. ತಮ್ಮ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಶೇ 50ರಷ್ಟು ಹಾಸಿಗೆಯನ್ನು ಮೀಸಲಿಡದ 66 ಆಸ್ಪತ್ರೆಗಳಿಗೆ ಬಿಬಿಎಂಪಿ ನೋಟೀಸ್ ನೀಡಿದೆ.
ಕರ್ನಾಟಕದಲ್ಲಿ ಬುಧವಾರ 23,558 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 12,22,202ಕ್ಕೆ ಏರಿಕೆಯಾಗಿದೆ. 24 ಗಂಟೆಯಲ್ಲಿ ರಾಜ್ಯದಲ್ಲಿ 116 ಜನರು ಸಾವನ್ನಪ್ಪಿದ್ದಾರೆ. ಆರೋಗ್ಯ ಇಲಾಖೆ ಬುಧವಾರದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. 24 ಗಂಟೆಯಲ್ಲಿ ರಾಜ್ಯದಲ್ಲಿ 6,412 ಜನರು ಡಿಸ್ಚಾರ್ಜ್ ಆಗಿದ್ದಾರೆ. 904 ಜನರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Recommended Video