ಧ್ಜಜ ಸಂಹಿತೆ ಉಲ್ಲಂಘನೆ: ಬಿ. ಸಿ. ನಾಗೇಶ್ ವಿರುದ್ಧ ಅಸಮಾಧಾನ
ಬೆಂಗಳೂರು ಆಗಸ್ಟ 11: "ತ್ರಿವರ್ಣ ಧ್ವಜದ ಮೇಲೆ ಭಾಗವಧ್ವಜ ಹಾರಿಸುವ ಮೂಲಕ ಧ್ವಜ ಸಂಹಿತೆಯನ್ನು ಉಲ್ಲಂಘನೆ ಮಾಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಕಾಲ ಖಾತೆ ಸಚಿವ ಬಿ. ಸಿ. ನಾಗೇಶ್ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು" ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ. ಕೆ. ಹರಿಪ್ರಸಾದ್ ಆಗ್ರಹಿಸಿದ್ದಾರೆ.
ಸಚಿವ ಬಿ. ಸಿ. ನಾಗೇಶ್ ಪಾಲ್ಗೊಂಡಿದ್ದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಧ್ವಜಕ್ಕಿಂತ ಎತ್ತರವಾಗಿ ಭಾಗಧ್ವಜ ಹಿಡಿದುಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿದ ವಿಧಾನಪರಿಷತ್ ಪ್ರತಿಪ್ರಕ್ಷ ನಾಯಕ ಬಿ. ಕೆ. ಹರಿಪ್ರಸಾದ್ ಸಚಿವರ ವಿರುದ್ಧ ಕಿಡಿಕಾರಿದ್ದಾರೆ. ಈ ಸಂಬಂಧ ಅವರು ಟ್ವೀಟ್ ಮಾಡಿದ್ದಾರೆ.
75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಗುರುವಾರ ತಿಪಟೂರಿನಲ್ಲಿ 'ತಿರಂಗ ಯಾತ್ರೆ' ಹಮ್ಮಿಕೊಂಡಿತ್ತು. ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವ ಬಿ. ಸಿ. ನಾಗೇಶ್ ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆ ನಡೆಸಿದ್ದಾರೆ. ಇದೇ ಯಾತ್ರೆಯಲ್ಲಿ ತ್ರಿವರ್ಣ ಧ್ವಜಕ್ಕಿಂತಲೂ ಎತ್ತರವಾಗಿ ಭಾಗಧ್ವಜ ಹಾರಿಸಿರುವ ಫೋಟೋ ವೈರಲ್ ಆಗಿದೆ.
ಬಿ. ಸಿ. ನಾಗೇಶ್ ಕನಿಷ್ಠ ಜ್ಞಾನವಿಲ್ಲ; ಈ ಮೂಲಕ ಸಚಿವರು ತ್ರಿವರ್ಣ ಧ್ವಜಕ್ಕಿಂತ ಎತ್ತರವಾಗಿ ಬೇರೊಂದು ಭಾವುಟ ಹಾರಿಸುವ ಮೂಲಕ ಧ್ವಜ ಸಂಹಿತೆ ಉಲ್ಲಂಘಿಸಿದ್ದಾರೆ. ಶಿಕ್ಷಣ ಸಚಿವರಾದವರಿಗೆ ಕನಿಷ್ಠ ಜ್ಞಾನವು ಹಾಗೂ ಕಾನೂನಿನ ತಿಳುವಳಿಕೆ ಇಲ್ಲದೇ ತ್ರಿವರ್ಣ ಧ್ವಜ ವಿಚಾರದಲ್ಲಿ ಅಪರಾಧ ಎಸಗಿದ್ದಾರೆ.
Recommended Video
ಇದು ಆರ್ಎಸ್ಎಸ್ ಮನಸ್ಥಿತಿ ಎಂತದ್ದುಎಂಬುದನ್ನು ತೋರಿಸುತ್ತದೆ ಎಂದು ಬಿ. ಕೆ. ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತಪ್ಪು ಯಾರೇ ಮಾಡಿದರು ತಪ್ಪೆ. ಆದ್ದರಿಂದ ಧ್ಜಜ ಸಂಹಿತೆ ಉಲ್ಲಂಘನೆಯಡಿ ಸಚಿವ ಬಿ. ಸಿ. ನಾಗೇಶ್ ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಅವರು ಒತ್ತಾಯಿಸಿದ್ದಾರೆ.