ರಾಜ್ಯ ಸರಕಾರದ 'ಲಿಂಗಾಯತ ರಾಜಕೀಯ'ಕ್ಕೆ ಭಾರೀ ಹಿನ್ನಡೆ
ನಡೆದಾಡುವ ದೇವರು ತುಮಕೂರು ಸಿದ್ದಗಂಗಾ ಶ್ರೀಗಳ ನಿರ್ಧಾರ ನಮಗೆಲ್ಲಾ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಎಂದು ಬಹುತೇಕ ಎಲ್ಲಾ ಲಿಂಗಾಯತ/ವೀರಶೈವ ಮಠಾಧೀಶರು ಹೇಳಿಕೆ ನೀಡುವ ಮೂಲಕ 'ಪ್ರತ್ಯೇಕ ಧರ್ಮ'ದ ಕೂಗು ನೆನೆಗುದಿಗೆ ಬೀಳುವ ಸಾಧ್ಯತೆ
ನಡೆದಾಡುವ ದೇವರು ತುಮಕೂರು ಸಿದ್ದಗಂಗಾ ಶ್ರೀಗಳ ನಿರ್ಧಾರ ನಮಗೆಲ್ಲಾ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಎಂದು ಬಹುತೇಕ ಎಲ್ಲಾ ಲಿಂಗಾಯತ/ವೀರಶೈವ ಮಠಾಧೀಶರು ಹೇಳಿಕೆ ನೀಡುವ ಮೂಲಕ 'ಪ್ರತ್ಯೇಕ ಧರ್ಮ'ದ ಕೂಗು ನೆನೆಗುದಿಗೆ ಬೀಳುವ ಸಾಧ್ಯತೆ ದಟ್ಟವಾಗಿದೆ.
ಪ್ರತ್ಯೇಕ ಧರ್ಮದ ಕೂಗಿಗೂ ನಮಗೂ ಸಂಬಂಧವಿಲ್ಲವೆಂದು ರಾಜ್ಯ ಸರಕಾರ ಈಗ ಕೈತೊಳೆಯುತ್ತಿದ್ದರೂ, ಎಲ್ಲರೂ ಒಟ್ಟಾಗಿ ಬಂದರೆ ಈ ವಿಚಾರದಲ್ಲಿ ಕೇಂದ್ರಕ್ಕೆ ಮನವಿ ಸಲ್ಲಿಸುತ್ತೇನೆಂದು ವಿವಾದಕ್ಕೆ ತುಪ್ಪ ಸುರಿಯುವ ಕೆಲಸವನ್ನು ಮಾಡಿದ್ದೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು.
ಮೌನವಾಗಿದ್ದು ಲಿಂಗಾಯತ ಸ್ವತಂತ್ರ ಧರ್ಮದ ಯುದ್ಧ ಗೆದ್ದರೆ ಬಿಎಸ್ ವೈ
ಚುನಾವಣಾ ವರ್ಷದಲ್ಲಿ ಪ್ರತ್ಯೇಕ ಧರ್ಮದ ಕೂಗು ಆರಂಭವಾಗಿದ್ದೇ, ರಾಜ್ಯದಲ್ಲಿ ಜನಸಂಖ್ಯೆಯ ಆಧಾರದಲ್ಲಿ ಮೊದಲ ಸ್ಥಾನದಲ್ಲಿರುವ ಲಿಂಗಾಯಿತ ಧರ್ಮದ ವೋಟ್ ಬ್ಯಾಂಕ್ ಗಮನದಲ್ಲಿ ಇಟ್ಟುಕೊಂಡು ಎಂದು ವ್ಯಾಖ್ಯಾನಿಸಲಾಗುತ್ತಿತ್ತು.
ಆ ಮೂಲಕ ಬಿಜೆಪಿ ಮತಬ್ಯಾಂಕಿಗೆ ಲಗ್ಗೆಯಿಟ್ಟು, ಆ ಸಮುದಾಯದ ಪ್ರಭಾವಿ ಮುಖಂಡರಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರನ್ನು ಮಣಿಸುವುದು ರಾಜಕೀಯ ತಂತ್ರಗಾರಿಕೆಯಾಗಿತ್ತು. ಈಗ ಸಿದ್ದಗಂಗಾ ಶ್ರೀಗಳ ಒಂದೇ ಒಂದು ಪತ್ರಿಕಾ ಪ್ರಕಟಣೆಯಿಂದಾಗಿ ಈ ಕೂಗಿಗೆ ಪೂರ್ಣವಿರಾಮ ಬೀಳುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
ಪ್ರತ್ಯೇಕ ಧರ್ಮದ ವಿಚಾರದಲ್ಲಿ ರಾಜ್ಯದೆಲ್ಲಡೆ ಸುತ್ತಾಡಿ, ವಿವಿಧ ಪೀಠಾಧಿಪತಿಗಳನ್ನು ಭೇಟಿಯಾಗಿ, ಧಾರ್ಮಿಕ ಸಭೆಗಳನ್ನು ನಡೆಸಿ, ಆ ಸಮುದಾಯದ ಮಂಚೂಣಿ ನಾಯಕ ಎಂದು ಕೆಲವೊಂದು ಮುಖಂಡರನ್ನು ಓವರ್ ಟೇಕ್ ಮಾಡಲು ಹೊರಟ ರಾಜ್ಯ ಸಚಿವ ಎಂ ಬಿ ಪಾಟೀಲರಿಗೆ, ಸಿದ್ದಗಂಗಾ ಶ್ರೀಗಳ ನಿಲುವು ತೀವ್ರ ಮುಖಭಂಗವನ್ನುಂಟು ಮಾಡಿದೆ. ಮುಂದೆ ಓದಿ..
ಸಿದ್ದಗಂಗಾ ಶ್ರೀಗಳನ್ನು ಭೇಟಿಯಾದ ಎಂ ಬಿ ಪಾಟೀಲ್
ಸೆ.10ರಂದು ಸಚಿವರಾದ ಎಂ.ಬಿ.ಪಾಟೀಲ್ ಮಠಕ್ಕೆ ಭೇಟಿ ನೀಡಿದ್ದರು. ವೀರಶೈವ ಮತ್ತು ಲಿಂಗಾಯತ ಇವೆರಡೂ ಒಂದೇ, ಒಂದು ವೇಳೆ ಭಿನ್ನಾಭಿಪ್ರಾಯವಿದ್ದಿದ್ದೇ ಆದರೆ ಎಲ್ಲರೊಂದಿಗೆ ಚರ್ಚಿಸಿ ತೀರ್ಮಾನಿಸುವುದು ಒಳಿತು ಎಂದು ತಿಳಿಸಿದ್ದೆವು. ಆದರೆ ಸಚಿವರು ನಮ್ಮ ಹೇಳಿಕೆಯನ್ನು ತಿರುಚಿ ಲಿಂಗಾಯತ ಧರ್ಮದ ಪರವಾಗಿದ್ದಾರೆ ಎಂದು ಹೇಳಿಕೆ ಕೊಟ್ಟಿರುವುದು ದುರದೃಷ್ಟಕರ ಮತ್ತು ಅಪ್ರಸ್ತುತ. ವೀರಶೈವ-ಲಿಂಗಾಯತ ಸಮಾಜವನ್ನು ಇಬ್ಭಾಗ ಮಾಡಲು ಯಾರೇ ಪ್ರಯತ್ನ ಮಾಡಿದರೂ ಅದು ಸಮಾಜಕ್ಕೆ ಒಳಿತಲ್ಲ, ವೀರಶೈವ-ಲಿಂಗಾಯತ ಎರಡೂ ಒಂದೇ ಎಂದು ಈ ಮೂಲಕ ಸ್ಪಷ್ಟಪಡಿಸುತ್ತೇವೆ ಎಂದು ಸಿದ್ದಗಂಗಾ ಶ್ರೀಗಳು ಪತ್ರಿಕಾ ಪ್ರಕಟಣೆಯ ಮೂಲಕ ಸ್ಪಷ್ಟ ಪಡಿಸಿದ್ದರು.
ಸಿದ್ದಗಂಗಾ ಮಠದ ಪತ್ರಿಕಾ ಪ್ರಕಟಣೆಯಲ್ಲಿ ಏನಿದೆ?
ರಂಭಾಪುರಿ ಶ್ರೀಗಳ ಸ್ವಾಗತ
ಸಿದ್ದಗಂಗಾ ಶ್ರೀಗಳ ಮಾತಿಗೆ ಹೆಚ್ಚಿನ ಧಾರ್ಮಿಕ ಮುಖಂಡರು ಸಹಮತ ಸೂಚಿಸಿದ್ದು, ಶ್ರೀಗಳ ನಿರ್ಧಾರ ನಮಗೆ ಸುಪ್ರೀಂಕೋರ್ಟ್ ಆದೇಶದಂತೆ. ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಎನ್ನುವ ಸಿದ್ಧಗಂಗಾ ಸ್ವಾಮೀಜಿಯವರ ಹೇಳಿಕೆಯಿಂದ ಗೊಂದಲ ನಿವಾರಣೆ ಯಾಗಿದೆ. ಸಿದ್ಧಗಂಗಾ ಶ್ರೀಗಳ ಹೇಳಿಕೆ ಸ್ವಾಗತಾರ್ಹ ಎಂದು ರಂಭಾಪುರಿ ಶ್ರೀಗಳು ಹೇಳಿದ್ದಾರೆ.
ಅಖಿಲ ಭಾರತ ವೀರಶೈವ ಲಿಂಗಾಯತ ಸಮುದಾಯ ಹೇಳಿಕೆ
ಪ್ರತ್ಯೇಕ ಧರ್ಮದ ವಿಚಾರದಲ್ಲಿ ಸಿದ್ದಗಂಗಾ ಶ್ರೀಗಳ ಹೇಳಿಕೆಯೇ ಅಂತಿಮ. ಅವರ ಮಾತೇ ಸಮುದಾಯದಕ್ಕೆ ಫೈನಲ್ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಸಮುದಾಯದ ಪ್ರಮುಖರಾದ ಶಾಮನೂರು ಶಿವಶಂಕರಪ್ಪ ಮತ್ತು ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಪಾಟೀಲರದ್ದು ವಿನಾಶಕಾಲೇ ವಿಪರೀತ ಬುದ್ಧಿ
ಸಚಿವ ಎಂ.ಬಿ. ಪಾಟೀಲರದ್ದು ವಿನಾಶಕಾಲೇ ವಿಪರೀತ ಬುದ್ಧಿ. ಈ ವಿಚಾರದಲ್ಲಿ ಸಿದ್ದಗಂಗಾ ಶ್ರೀಗಳ ಹೆಸರನ್ನು ಪಾಟೀಲರು ತರಬಾರದಿತ್ತು ಎಂದು ಯಡಿಯೂರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರೆ, ಪೂಜ್ಯ ಶ್ರೀಗಳ ಹೆಸರನ್ನು ನಿಮ್ಮ ಜಾತಿ ರಾಜಕಾರಣಕ್ಕೆ ತಂದಿದ್ದು ಅಪರಾಧ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಸಚಿವ ಎಂ ಬಿ ಪಾಟೀಲರನ್ನು ತರಾಟೆಗೆ ತೆಗೆದುಕೊಂಡಿದ್ದರೆ.
ಎಂ.ಬಿ.ಪಾಟೀಲರ ಜೀವನದಲ್ಲೇ ಇದು ಹೀನ ಕೃತ್ಯ: ಎಚ್ ಡಿಕೆ ತರಾಟೆ
ಸಿದ್ದಗಂಗಾ ಮಠಕ್ಕೆ ತೆರಳಿ ಪ್ರಮಾಣ ಮಾಡುತ್ತೇನೆ
ನಾನು ಸಿದ್ದಗಂಗಾ ಮಠಕ್ಕೆ ತೆರಳಿ ಪ್ರಮಾಣ ಮಾಡುತ್ತೇನೆ, ನಾನು ಸುಳ್ಳು ಹೇಳಿದ್ದೇ ಆದಲ್ಲಿ ನನ್ನ ಕುಟುಂಬವೇ ಸರ್ವನಾಶವಾಗಲಿ ಎಂದು ಎಂ ಬಿ ಪಾಟೀಲ್ ಪ್ರತಿಕ್ರಿಯಿಸಿ, ಮಂಗಳವಾರ (ಸೆ 12) ಸಂಜೆಯ ಹೊತ್ತಿಗೆ ಕೂಡಲಸಂಗಮದಲ್ಲಿ ಧ್ಯಾನದಲ್ಲಿ ಪಾಟೀಲರು ಕುಳಿತಿದ್ದರು.