ಸಮ್ಮಿಶ್ರ ಸರಕಾರದ ಅಸ್ಥಿರತೆ: ಗುಪ್ತಚರ ಇಲಾಖೆ ನೀಡಿದ ಸ್ಪೋಟಕ ವರದಿಯಲ್ಲಿ ಏನಿದೆ?
Recommended Video
ಜೆಡಿಎಸ್ - ಕಾಂಗ್ರೆಸ್ ಸರಕಾರವನ್ನು ಉರುಳಿಸಲು ಕ್ರಿಮಿನಲ್ ಹಿನ್ನಲೆಯುಳ್ಳವರು ಸಂಚು ನಡೆಸುತ್ತಿದ್ದಾರೆ ಎನ್ನುವ ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿರುವ ಹೇಳಿಕೆ ಸಮ್ಮಿಶ್ರ ಸರಕಾರದ ಅಸ್ಥಿರತೆಯ ವಿಚಾರದಲ್ಲಿ ಸ್ಪೋಟಕ ತಿರುವನ್ನು ಪಡೆದುಕೊಂಡಿದೆ.
ನಮ್ಮ ಸರಕಾರವನ್ನು ಉರುಳಿಸಲು ಯಾರು ಏನು ಮಾಡುತ್ತಿದ್ದಾರೆ, ಎಲ್ಲಿ ಕೋಟ್ಯಾಂತರ ರೂಪಾಯಿ ಕೈಬದಲಾಗುತ್ತಿದೆ ಎನ್ನುವ ಎಲ್ಲಾ ವಿಚಾರದ ಬಗ್ಗೆ ನನಗೆ ಅರಿವಿದೆ, ಸೋಮವಾರದಿಂದ (ಸೆ 17) ನೋಡುತ್ತಿರಿ, ನಮ್ಮ ವರ್ಕಿಂಗ್ ಸ್ಟೈಲ್ ಎಂದು ಶುಕ್ರವಾರ, ಬೆಳಗಾವಿಗೆ ಹೋಗುವ ಮುನ್ನ ಕುಮಾರಸ್ವಾಮಿ ಹೇಳಿದ್ದರು.
ಬಿಜೆಪಿಯ ಯಾವ ಮುಖಂಡರು, ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸುತ್ತಿದ್ದಾರೆ ಎನ್ನುವುದನ್ನು ಹೆಸರು ಸಮೇತ ಕಾಂಗ್ರೆಸ್ ಪಟ್ಟಿ ಬಿಡುಗಡೆ ಮಾಡಿದೆ. ಈ ಎಲ್ಲಾ ಬೆಳವಣಿಗೆಗಳು, ಗುಪ್ತಚರ ಇಲಾಖೆ ಸರಕಾರಕ್ಕೆ ಸಲ್ಲಿಸಿದ ವರದಿಯ ನಂತರ ನಡೆಯುತ್ತಿದೆ ಎನ್ನುವುದು ಗಮನಿಸಬೇಕಾದ ಅಂಶ.
ಇಂಡಿಯಾ ಟುಡೇ ಸಮೀಕ್ಷೆ : ಕುಮಾರಸ್ವಾಮಿ ಸರಕಾರಕ್ಕೆ ಥಂಬ್ಸ್ ಡೌನ್!
ಬಿಜೆಪಿ ನಾಯಕರ ಜೊತೆಗೆ ಸರಕಾರದ ಅಧಿಕಾರಿಗಳನ್ನು, ಪೊಲೀಸ್ ಇಲಾಖೆಯವರಿಗೂ ಕುಮಾರಸ್ವಾಮಿ ಶುಕ್ರವಾರ ಬಿಸಿಮುಟ್ಟಿಸಿದ್ದರು. ಕಿಂಗ್ ಪಿನ್ ಗಳಿಗೆ ಸಹಕಾರ ನೀಡುತ್ತಿರುವ ಎಲ್ಲರ ಹೆಸರನ್ನೂ ಬಯಲುಗೆಳೆಯುತ್ತೇನೆ ಎಂದು ಕುಮಾರಸ್ವಾಮಿ ಎಚ್ಚರಿಸಿದ್ದು, ಗುಪ್ತಚರ ವರದಿಯನ್ನು ಆಧರಿಸಿ ಎನ್ನುವ ಮಾಹಿತಿಯಿದೆ.
ಕಾಂಗ್ರೆಸ್ ವೈಚಾರಿಕವಾಗಿ ದಿವಾಳಿಯಾಗಿದೆ ಎನ್ನುವ ಯಡಿಯೂರಪ್ಪ ಹೇಳಿಕೆಯ ನಂತರವೂ, ಸಮ್ಮಿಶ್ರ ಸರಕಾರದ ಸಚಿವರುಗಳು ಬಿಜೆಪಿ ವಿರುದ್ದ ವಾಗ್ದಾಳಿ ಮುಂದುವರಿಸಿದ್ದಾರೆ. ಗುಪ್ತಚರ ಇಲಾಖೆ, ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಏನಿದೆ, ಮುಂದೆ ಓದಿ..
ಕ್ರಿಮಿನಲ್ ದಂಧೆಯಿಂದಲೇ ಸಮ್ಮಿಶ್ರ ಸರಕಾರದಲ್ಲಿ ಅಸ್ಥಿರತೆ
ಕೆಲವು ಪೊಲೀಸ್ ಅಧಿಕಾರಿಗಳ ಶ್ರೀರಕ್ಷೆಯಲ್ಲಿ ನಡೆಯುತ್ತಿರುವ ಕ್ರಿಮಿನಲ್ ದಂಧೆಯಿಂದಲೇ ಸಮ್ಮಿಶ್ರ ಸರಕಾರದಲ್ಲಿ ಅಸ್ಥಿರತೆ ಮೂಡಲು ಕಾರಣ ಎನ್ನುವ ಮಾಹಿತಿಯನ್ನು ಗುಪ್ತಚರ ಇಲಾಖೆ, ರಾಜ್ಯ ಗೃಹ ಸಚಿವರಿಗೆ ನೀಡಿದೆ. ನಾನಾ ಮೂಲಗಳಿಂದ ಸಮ್ಮಿಶ್ರ ಸರಕಾರವನ್ನು ಉರುಳಿಸಲು ಹಣ ಕ್ರೋಡೀಕರಿಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳೇ ಹೇಳಿದ್ದರು.
ಬೆಳಗಾವಿ ಒಡೆದು ಜಾರಕಿಹೊಳಿ ಸಹೋದರರ ಕಟ್ಟಿ ಹಾಕ್ತಾರಾ ಸಿಎಂ?
ಕುಮಾರಸ್ವಾಮಿ ಮತ್ತು ಪರಮೇಶ್ವರ್ ಗಣೇಶ ಹಬ್ಬದ ದಿನ ಮಾತುಕತೆ
ಗುಪ್ತಚರ ಇಲಾಖೆ ನೀಡಿದ ವರದಿಯ ಬೆನ್ನಲ್ಲೇ, ಕುಮಾರಸ್ವಾಮಿ ಮತ್ತು ಪರಮೇಶ್ವರ್ ಗಣೇಶ ಹಬ್ಬದ ದಿನ ಮಾತುಕತೆ ನಡೆಸಿದ್ದಾರೆ. ಜೊತೆ ಜೊತೆಗೆ, ಹಬ್ಬದ ಊಟವನ್ನು ಸವಿಯುತ್ತಾ, ವರದಿಯ ಬಗ್ಗೆ ತಾಸುಗಟ್ಟಲೆ ಮಾತುಕತೆ ನಡೆಸಿದ್ದಾರೆ. ಜೆಡಿಎಸ್ ವರಿಷ್ಠ ದೇವೇಗೌಡರ ಸಲಹೆಯನ್ನೂ ಸಿಎಂ, ಡಿಎಸಿಂ ಕೇಳಿದ್ದಾರೆ ಎನ್ನಲಾಗುತ್ತಿದೆ. ಸೋಮವಾರದ ನಂತರ ಪೊಲೀಸ್ ಇಲಾಖೆಯಲ್ಲಿ ಭಾರೀ ಸರ್ಜರಿ ಆಗುವ ಸಾಧ್ಯತೆ ದಟ್ಟವಾಗಿದೆ.
ನನ್ನ ಸಂಪರ್ಕದಲ್ಲಿರುವ ಬಿಜೆಪಿ ಶಾಸಕರ ಪಟ್ಟಿಯೇ ಬೇರೆ: ಎಚ್ಡಿಕೆ ಹೊಸ ಬಾಂಬ್
ಮಟ್ಕಾ, ಬೆಟ್ಟಿಂಗ್, ರಿಯಲ್ ಎಸ್ಟೇಟ್, ಮೀಟರ್ ಬಡ್ಡಿ ದಂಧೆ
ಗುಪ್ತಚರ ವರದಿಯ ಪ್ರಕಾರ, ಮಟ್ಕಾ, ಬೆಟ್ಟಿಂಗ್, ರಿಯಲ್ ಎಸ್ಟೇಟ್, ಮೀಟರ್ ಬಡ್ಡಿ ದಂಧೆಯ ಮೂಲಕ ಕೋಟ್ಯಾಂತರ ರೂಪಾಯಿ ಕೈಕೈಬದಲಾಗುತ್ತದೆ. ಇದೆಲ್ಲವೂ, ಪೊಲೀಸರ ರಕ್ಷೆಯಿಂದಲೇ ನಡೆಯುತ್ತಿದೆ. ಒಂದೆಡೆ ಇದು ಕ್ರಿಮಿನಲ್ ಕೇಸ್, ಇನ್ನೊಂದು ಈ ಅಕ್ರಮ ಹಣವನ್ನು ಕ್ರೋಡೀಕರಿಸಿ, ಸರಕಾರ ಉರುಳಿಸಲು ಸಂಚು ರೂಪಿಸಲಾಗಿದೆ ಎನ್ನುವ ಮಾಹಿತಿಯನ್ನು ಇಲಾಖೆ, ಸರಕಾರಕ್ಕೆ ನೀಡಿದೆ.
ಸರಕಾರದ ಸ್ಥಿರತೆಗೇ ಸವಾಲಾಗಬಹುದು ಎನ್ನುವ ವರದಿ
ತುರ್ತಾಗಿ ಆಯಕಟ್ಟಿನ ಅಧಿಕಾರಿಗಳು ಮತ್ತು ಪೊಲೀಸ್ ಪ್ರಮುಖರನ್ನು ವರ್ಗಾವಣೆ ಮಾಡದೇ ಇದ್ದಲ್ಲಿ, ಸರಕಾರದ ಸ್ಥಿರತೆಗೇ ಸವಾಲಾಗಬಹುದು ಎನ್ನುವ ವರದಿಯ ನಂತರ, ಸಿಎಂ ಮತ್ತು ಡಿಸಿಎಂ ದಿಢೀರ್ ಆಗಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆ ಕಾರಣಕ್ಕಾಗಿಯೇ, ಸೋಮವಾರದಿಂದ ನಮ್ಮ ವರ್ಕಿಂಗ್ ಸ್ಟೈಲ್ ಬದಲಾಗಲಿದೆ ಎನ್ನುವ ಮಾತನ್ನು ಮುಖ್ಯಮಂತ್ರಿಗಳು ನೀಡಿದ್ದು.
ಯಾವಯಾವ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎನ್ನುವ ಪಟ್ಟಿ ರೆಡಿ
ಸೋಮವಾರದಿಂದ ಸತತವಾಗಿ ಅಧಿಕಾರಿಗಳ ಸಭೆಯನ್ನು ನಡೆಸಿ ಎಲ್ಲರ ಚಳಿ ಬಿಡಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಕೆಲವೊಂದು ಮೂಲಗಳ ಪ್ರಕಾರ, ಯಾವಯಾವ ಅಧಿಕಾರಿಗಳನ್ನು ಎಲ್ಲಿಗೆ ವರ್ಗಾವಣೆ ಮಾಡಬೇಕು ಎನ್ನುವ ಪಟ್ಟಿಯೂ ರೆಡಿಯಾಗಿದ್ದು, ಸೋಮವಾರ ಪ್ರಕಟವಾಗುವ ಸಾಧ್ಯತೆಯಿದೆ. ಈ ಎಲ್ಲಾ ವಿದ್ಯಮಾನಗಳನ್ನು ಗಮನಿಸಿದರೆ, ಮುಂದಿನ ದಿನಗಳಲ್ಲಿ ಸಮ್ಮಿಶ್ರ ಸರಕಾರದ ಅಳಿವು, ಉಳಿವು ವಿಚಾರದಲ್ಲಿ ತೀವ್ರ ರಾಜಕೀಯ ಮೇಲಾಟವಾಗುವ ಸಾಧ್ಯತೆಯಿಲ್ಲದಿಲ್ಲ.