ಇದಕ್ಕೋ, ನಾನ್ಯಾಕೆ ರಾಜೀನಾಮೆ ನೀಡಲಿ ಎಂದು ಕುಮಾರಸ್ವಾಮಿ ಹೇಳಿದ್ದು?
Recommended Video
ಜುಲೈ ಹದಿನಾರರ ವರೆಗೆ ಯಾರನ್ನೂ ಅನರ್ಹಗೊಳಿಸಬಾರದು, ಯಾರ ರಾಜೀನಾಮೆಯನ್ನೂ ಆಂಗೀಕರಿಸಬಾರದು ಎನ್ನುವ ಸರ್ವೋಚ್ಚ ನ್ಯಾಯಾಲಯದ ತೀರ್ಪು ಸಮ್ಮಿಶ್ರ ಸರಕಾರದ ಮುಖಂಡರಿಗೆ ಮರುಭೂಮಿಯಲ್ಲಿ ನೀರು ಸಿಕ್ಕಹಾಗಾಗಿದೆ.
ತಡರಾತ್ರಿ ಎನ್ನದೇ, ಬೆಳ್ಳಂಬೆಳಗ್ಗೆ ಎನ್ನದೇ ಮೈತ್ರಿ ಪಕ್ಷದ ಮುಖಂಡರು, ಅದರಲ್ಲೂ ಪ್ರಮುಖವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಜಲಸಂಪನ್ಮೂಲ ಖಾತೆಯ ಸಚಿವ ಡಿ ಕೆ ಶಿವಕುಮಾರ್ ಅವರು ಸಿಕ್ಕ ಅವಕಾಶವನ್ನು ಭರ್ಜರಿಯಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ.
ಮೊದಲಿಗೆ ಬೇಕಾಗಿರುವ ಐದು ಶಾಸಕರನ್ನು ಪಕ್ಷದ ವಿರುದ್ದ ಮತಚಲಾಯಿಸದಂತೆ ಮತ್ತು ವಿಶ್ವಾಸಮತದಂದು ಗೈರಾಗದಂತೆ ನೋಡಿಕೊಳ್ಳುವುದು ಅವಶ್ಯಕತೆವಾಗಿರುವದರಿಂದ, ಆ ಬಗ್ಗೆ ಮೈತ್ರಿಪಕ್ಷಗಳು ಕಾರ್ಯತಂತ್ರ ರೂಪಿಸುತ್ತಿವೆ. ಕೆಲವೊಂದು ಮೂಲಗಳ ಪ್ರಕಾರ, ಅದನ್ನು ಪಡೆಯಲು ಬಹುತೇಕ ಯಶಸ್ವಿಯಾಗುವತ್ತ ಸಾಗುತ್ತಿದ್ದಾರೆ.
ಸಾ.ರಾ.ಮಹೇಶ್ - ಬಿಜೆಪಿ ಮುಖಂಡರ ಭೇಟಿಯ ನಂತರದ ಬೆಳವಣಿಗೆಗಳು
ಬೆಳಗ್ಗಿನ ಸೂರ್ಯೋದಯಕ್ಕೂ ಮೊದಲೇ ವಸತಿ ಸಚಿವ ಎಂಟಿಬಿ ನಾಗರಾಜ್ ಮನೆಯಲ್ಲಿ ಠಿಕಾಣಿ ಕೂತಿದ್ದ ಡಿ ಕೆ ಶಿವಕುಮಾರ್, ಅವರನ್ನು ಒಂದು ಹಂತಕ್ಕೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವ ಸುದ್ದಿಯಿದೆ.
ಡಿ ಕೆ ಶಿವಕುಮಾರ್, ಸೌಮ್ಯಾ ರೆಡ್ಡಿ ಮಾತುಕತೆ
ಮುಂಗಾರು ಅಧಿವೇಶನದ ಮೊದಲ ದಿನ, ಸುಮಾರು ನಲವತ್ತು ನಿಮಿಷಕ್ಕೂ ಹೆಚ್ಚುಹೊತ್ತು ಡಿ ಕೆ ಶಿವಕುಮಾರ್, ಜಯನಗರದ ಶಾಸಕಿ ಸೌಮ್ಯಾ ರೆಡ್ಡಿಯವರ ಜೊತೆಗೆ ಮಾತುಕತೆ ನಡೆಸಿದ್ದರು. ಇದರ ಜೊತೆಗೆ, ಅಂಜಲಿ ನಿಂಬಾಳ್ಕರ್ ಜೊತೆಗೂ ಚರ್ಚಿಸಿದ್ದರು. ಇವರಿಬ್ಬರ ಹೆಸರು ಅತೃಪ್ತರ ಪಟ್ಟಿಗೆ ಹೋಗುವ ಸಾಧ್ಯತೆಯಿತ್ತು ಎಂದು ಹೇಳಲಾಗುತ್ತಿತ್ತು.
ನಾವು ಈಗ ನೋಡುತ್ತಿರುವ ಡಿಕೆ ಶಿವಕುಮಾರ್ ಅವರೇ ಬೇರೆ: ವಿ ಸೋಮಣ್ಣ
ನನ್ನದು ಮತ್ತು ರಾಮಲಿಂಗ ರೆಡ್ಡಿದ್ದು ನಲವತ್ತು ವರ್ಷದ ಸ್ನೇಹ
ಸೌಮ್ಯಾ ಜೊತೆ ಮಾತುಕತೆಯ ವೇಳೆ, ಅವರ ತಂದೆ ರಾಮಲಿಂಗ ರೆಡ್ಡಿಗೂ ಅವರ ಮೂಲಕ ಸಂದೇಶವನ್ನು ಕಳುಹಿಸುವಲ್ಲಿ ಡಿಕೆಶಿ ಯಶಸ್ವಿಯಾದರು ಎನ್ನುವ ಮಾತಿದೆ. ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ, ನನ್ನದು ಮತ್ತು ರಾಮಲಿಂಗ ರೆಡ್ಡಿದ್ದು ನಲವತ್ತು ವರ್ಷದ ಸ್ನೇಹ, ಮನೆ ಎಂದ ಮೇಲೆ ಡಿಫರೆನ್ಸಸ್ ಸಾಮಾನ್ಯ, ನಾವೆಲ್ಲಾ ಒಂದೇ ಕುಟುಂಬದವರು ಎಂದು ತಮ್ಮ ಎಂದಿನ ಡೈಲಾಗ್ ಅವನ್ನು ಡಿ ಕೆ ಶಿವಕುಮಾರ್ ಹೊಡೆದಿದ್ದರು. ಅಧಿವೇಶನಕ್ಕೆ ಹಾಜರಾಗುವುದಾಗಿ ರೆಡ್ಡಿ ಹೇಳಿರುವುದರಿಂದ, ಸಮ್ಮಿಶ್ರ ಸರಕಾರ ನಿಟ್ಟುಸಿರು ಬಿಟ್ಟಂತಾಗಿದೆ
ಎಂಟಿಬಿ ನಾಗರಾಜ್ ಜೊತೆ ಮಾತುಕತೆ
ಇನ್ನು, ಎಂಟಿಬಿ ನಾಗರಾಜ್ ಜೊತೆ ಮಾತುಕತೆಯ ವೇಳೆ, ರೇವಣ್ಣ ವಿರುದ್ದ ಎಂಟಿಬಿ ಕಿಡಿಕಾರಿದ್ದರು. ರೇವಣ್ಣನ ಜವಾಬ್ದಾರಿಯನ್ನು ನಾನು ವಹಿಸಿಕೊಂಡು ಎಲ್ಲಾ ಸರಿದಾರಿಗೆ ತರುತ್ತೇನೆಂದು ಕುಮಾರಸ್ವಾಮಿ ಎಂಟಿಬಿಗೆ ವಾಗ್ದಾನ ಮಾಡಿದ್ದಾರೆ ಎನ್ನುವ ಸುದ್ದಿಯಿದೆ. ಎಂಟಿಬಿ ನಾಗರಾಜ್ ಅವರನ್ನು ಮಾಧ್ಯಮದರ ಮುಂದೆ ತಬ್ಬಿಕೊಂಡ ಡಿಕೆಶಿ ನಂತರ ಅವರನ್ನು ಸಿದ್ದರಾಮಯ್ಯನವರ ನಿವಾಸಕ್ಕೆ ಬಿಟ್ಟು ಬಂದಿದ್ದಾರೆ.
ಸಿದ್ದರಾಮಯ್ಯ ಮಾತನ್ನು ಸುಧಾಕರ್ ಮೀರುವುದಿಲ್ಲ
ಎಂಟಿಬಿ ನಾಗರಾಜ್ ಜೊತೆಗಿನ ಮಾತುಕತೆ ಒಂದು ಹಂತಕ್ಕೆ ಯಶಸ್ವಿಯಾದ ನಂತರ ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಅವರನ್ನು ಮನವೊಲಿಸಲು ಅವರ ಮನೆಗೆ ತೆರಳಿದಾಗ, ಅವರು ಮನೆಯಲ್ಲಿರಲಿಲ್ಲ. ಮತ್ತೆ ಅವರನ್ನು ಇಂದೇ ಡಿ ಕೆ ಶಿವಕುಮಾರ್ ಭೇಟಿಯಾಗುವ ಸಾಧ್ಯತೆಯಿದೆ. ಸುಧಾಕರ್ ಅವರನ್ನೂ ಮನವೊಲಿಸುವಲ್ಲಿ ಸಮ್ಮಿಶ್ರ ಸರಕಾರ ಯಶಸ್ವಿಯಾಗಬಹುದು, ಯಾಕೆಂದರೆ ಸಿದ್ದರಾಮಯ್ಯ ಮಾತನ್ನು ಸುಧಾಕರ್ ಮೀರುವುದಿಲ್ಲ ಎನ್ನುವ ಮಾತಿದೆ.
ನಾನ್ಯಾಕೆ ರಾಜೀನಾಮೆ ನೀಡಲಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿರಬಹುದು
ರೋಷನ್ ಬೇಗ್ ಕೂಡಾ ಕುಮಾರಸ್ವಾಮಿ ಜೊತೆಗಿನ ಮಾತುಕತೆಯ ನಂತರ ಸಮಾಧಾನಗೊಂಡಿದ್ದಾರೆ ಎನ್ನುವ ಸುದ್ದಿಯಿದೆ. ಬುಧವಾರ (ಜುಲೈ 17) ವಿಶ್ವಾಸಮತ ಪಡೆಯುವ ಸಾಧ್ಯತೆಯಿದೆ. ಹೀಗಾಗಿ, ಇನ್ನುಳಿದಿರುವ ಎರಡ್ಮೂರು ದಿನಗಳನ್ನು ಪ್ರಮುಖವಾಗಿ ಡಿ ಕೆ ಶಿವಕುಮಾರ್ ಭರ್ಜರಿಯಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ, ಶುಕ್ರವಾರದಿಂದ ಮೈತ್ರಿಪಕ್ಷದ ಮುಖಂಡರು ವಿಶ್ವಾಸಮತ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಹಾಗಾಗಿಯೇ, ನಾನ್ಯಾಕೆ ರಾಜೀನಾಮೆ ನೀಡಲಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿರಬಹುದು.