ಕೆಂಪುಕೋಟೆಗೆ ನುಗ್ಗಿದ ರೈತರು; ಯಾರು, ಏನು ಹೇಳಿದರು?
ಬೆಂಗಳೂರು, ಜನವರಿ 27; ಮಂಗಳವಾರ ಟ್ರಾಕ್ಟರ್ ಜಾಥಾ ಸಂದರ್ಭದಲ್ಲಿ ದೆಹಲಿಯಲ್ಲಿ ರೈತರು ನಡೆದುಕೊಂಡ ರೀತಿ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ರೈತರ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದಲ್ಲಿ ಹಲವಾರು ಪೊಲೀಸರು ಗಾಯಗೊಂಡರು, ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿ-ಪಾಸ್ತಿಗೆ ನಷ್ಟವಾಗಿದೆ.
ಸ್ವರಾಜ್ ಇಂಡಿಯಾ ಅಧ್ಯಕ್ಷ ಯೋಗೇಂದ್ರ ಯಾದವ್ ಈ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. "ಟ್ರಾಕ್ಟರ್ ಪರೇಡ್ ಸಂದರ್ಭದಲ್ಲಿ ರೈತರು ನಡೆದುಕೊಂಡ ರೀತಿಗೆ ನಾನು ತಲೆ ತಗ್ಗಿಸುತ್ತೇನೆ. ಹಿಂಸಾಚಾರದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೇನೆ" ಎಂದು ಹೇಳಿದರು.
ಯಾರಿದು ದೀಪ್ ಸಿಧು? ರೈತ ಹೋರಾಟದಲ್ಲಿ ಹೇಗೆ, ಏಕೆ ಭಾಗಿ?
"ಹಿಂಸಾಚಾರ ಯಾವುದೇ ಪ್ರತಿಭಟನೆ ಮೇಲೆ ತಪ್ಪಾದ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಯಾರು ಹಿಂಸಾಚಾರ ನಡೆಸಿದರು ಎಂದು ನಾನು ಹೇಳುವುದಿಲ್ಲ. ಆದರೆ, ನಾವು ಹಿಂಸಾಚಾರವನ್ನು ಪ್ರತಿಭಟನೆಯಿಂದ ಹೊರಗಿಟ್ಟಿದ್ದೇವೆ ಎಂದು ಭಾವಿಸಿದ್ದೇವೆ" ಎಂದರು.
ರೈತ ದಂಗೆ: ದೆಹಲಿಯಲ್ಲಿ 18 ಪೊಲೀಸರಿಗೆ ಗಾಯ, ಒಬ್ಬರ ಸ್ಥಿತಿ ಗಂಭೀರ
ಕರ್ನಾಟಕದ ವಿವಿಧ ರಾಜಕೀಯ ನಾಯಕರು ಸಹ ಮಂಗಳವಾರ ನಡೆದ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಯಾರು, ಏನು ಹೇಳಿದರು? ನೋಡೋಣ ಬನ್ನಿ.
ಸಿಖ್ಖರ ಧರ್ಮ ಧ್ವಜಕ್ಕೂ, ರೈತ ಚಳವಳಿಗೂ ಸಂಬಂಧವಿಲ್ಲ
ನಳಿನ್ ಕುಮಾರ್ ಕಟೀಲ್
ಚಿತ್ರದುರ್ಗದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, "ರೈತರ ಹೆಸರಿನಲ್ಲಿ ರಾಜಕೀಯ, ಪುಂಡಾಟ ಸರಿಯಲ್ಲ. ರೈತರ ಹೆಸರಿನಲ್ಲಿ ದಾಂಧಲೆ ಮಾಡುವುದು ರಾಷ್ಟ್ರಘಾತಕ ಶಕ್ತಿಗಳ ಕೃತ್ಯ. ಕೆಂಪುಕೋಟೆ ಮೇಲೆ ದಾಳಿ, ರಾಷ್ಟ್ರಧ್ವಜ ಕೀಳುವುದು ಸರಿಯಲ್ಲ. ಕೆಲವು ರಾಜಕೀಯ ಪಕ್ಷ ರೈತರ ದಿಕ್ಕು ತಪ್ಪಿಸಿವೆ. ದೆಹಲಿ ದಾಂಧಲೆ ಪ್ರಕರಣದ ಬಗ್ಗೆ ತನಿಖೆಯಾಗಬೇಕು, ಅಗತ್ಯ ಕ್ರಮ ಕೈಗೊಳ್ಳಬೇಕು. ಅಧಿಕಾರ ಇಲ್ಲದಾಗ ಕಾಂಗ್ರೆಸ್ ಪಕ್ಷದಿಂದ ಅಶಾಂತಿ, ಗಲಭೆ ಸೃಷ್ಟಿಸುವ ಕೆಲಸ ಆಗುತ್ತದೆ. ಸಿಎಎ ಜಾರಿ ಸಂದರ್ಭದಲ್ಲೂ ಕಾಂಗ್ರೆಸ್ನಿಂದ ಗಲಾಟೆ ನಡೆದಿತ್ತು, ಪಿಸ್ತೂಲ್ ಹಿಡಿದು ತಿರುಗಿದ್ದರು, ನಿನ್ನೆ ತಲವಾರ್ ಪ್ರದರ್ಶಿಸಿದ್ದಾರೆ" ಎಂದು ದೂರಿದರು.
ಸಚಿವ ಬೈರತಿ ಬಸವರಾಜ
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಮಾತನಾಡಿದ್ದು, "ದೆಹಲಿಯಲ್ಲಿ ನಡೆದ ಘಟನೆ ಖಂಡನಾರ್ಹವಾಗಿದೆ. ಕೆಂಪು ಕೋಟೆ ಮೇಲೆ ರಾಷ್ಟ್ರ ಧ್ವಜಕ್ಕೆ ಅಪಮಾನವಾಗಿದೆ. ರೈತರ ಪರವಾಗಿ ಕಾನೂನುಗಳ ತಿದ್ದುಪಡಿಯಾಗಿದೆ. ಈ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರ ಮುಕ್ತವಾಗಿದೆ. ಪ್ರತಿಭಟನೆ ಹೆಸರಲ್ಲಿ ದೊಂಬಿ, ಸಾರ್ವಜನಿಕ ಆಸ್ತಿಗೆ ಹಾನಿ, ಪೊಲೀಸರ ಮೇಲೆ ಹಲ್ಲೆ ನಡೆದಿದೆ. ರಕ್ಷಣೆ ಮಾಡುವ ಪೊಲೀಸರ ಮೇಲೆ ಹಲ್ಲೆಯಾಗಿದೆ ಈ ಕುರಿತು ಸಮಗ್ರ ತನಿಖೆಗೆ ಕೈಗೊಳ್ಳಲಾಗಿದೆ" ಎಂದರು.
ಶೋಭಾ ಕರಂದ್ಲಾಜೆ ಹೇಳಿಕೆ
ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. "ಪ್ರತಿಭಟನೆಯ ನೇತೃತ್ವವನ್ನು ರೈತರು ವಹಿಸಿಲ್ಲ ಅನ್ನೋದಕ್ಕೆ ನಿನ್ನೆ ಘಟನೆ ಸಾಕ್ಷಿ. ಆರಂಭದಿಂದಲೂ ಹೇಳುತ್ತಿದ್ದೆ, ಹೋರಾಟವನ್ನು ರೈತರು ವಹಿಸಿಲ್ಲ. ದೇಶದ್ರೋಹಿ ಶಕ್ತಿಗಳು ವಹಿಸಿವೆ. ಗಣರಾಜ್ಯದ ದಿನ ತ್ರಿವರ್ಣ ಧ್ವಜ ಹಾರಿಸುವ ದಿನ ಕೆಟ್ಟ ಘಟನೆ ನಡೆದಿದೆ. ಕೆಂಪು ಕೋಟೆಗೆ ನುಗ್ಗಿ ರೈತರು ಕೆಟ್ಟ ಪದ್ಧತಿಯನ್ನ ಹಾಕಿಕೊಟ್ಟಿದ್ದಾರೆ, ಕೆಂಪು ಕೋಟೆ ಹತ್ತಿದವರು ಯಾರೂ ರೈತರಲ್ಲ. ಕೆನಡಾದ ಖಲಿಸ್ತಾನ್ ಮೂವ್ಮೆಂಟ್ನವರು ಈ ಹೋರಾಟಕ್ಕೆ ಬೆಂಬಲ ಕೊಟ್ಟಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಭಾರತ ವಿರೋಧಿ ಚಟುವಟಿಕೆ ಮಾಡುತ್ತಿದ್ದರು ಕೈ ಜೋಡಿಸಿದ್ದಾರೆ. ಜೆಎನ್ಯುನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದವರು ಇದರಲ್ಲಿ ಸೇರಿಕೊಂಡಿದ್ದಾರೆ. ನಾವು ಆರಂಭದಿಂದಲೂ ಹೇಳಿಕೊಂಡು ಬಂದಿದ್ದು ಈಗ ಸಾಬೀತಾಗಿದೆ" ಎಂದರು.
ಸಾ. ರಾ. ಮಹೇಶ್ ಹೇಳಿಕೆ
ಜೆಡಿಎಸ್ ಶಾಸಕ ಸಾ. ರಾ. ಮಹೇಶ್ ಮಾತನಾಡಿದ್ದು, "ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆದ ರೈತರ ಪ್ರತಿಭಟನೆಯ ವೇಳೆ ನಡೆದ ಹಿಂಸಾಚಾರವನ್ನು ಖಂಡಿಸುತ್ತೇನೆ. ತಿಂಗಳುಗಳಿಂದ ಹೋರಾಟ ಮಾಡುತ್ತಿರುವ ಕೆಲವು ರೈತರು ನಿನ್ನೆ ತಮ್ಮ ವ್ಯಾಪ್ತಿಯನ್ನು ಮೀರಿದ್ದಾರೆ. ಇದು ಪೊಲೀಸರ ವೈಫಲ್ಯ ಅಥವಾ ರೈತರ ದುಡುಕು ನಿರ್ಧಾರ ಅಂತಲೂ ಹೇಳಬಹುದು. ಪ್ರಧಾನಿ, ರಾಷ್ಟ್ರಪತಿ ಇರುವ ಜಾಗದಲ್ಲಿ ಪೊಲೀಸರು ಮತ್ತು ರೈತರು ಇಬ್ಬರಿಗೂ ನೋವಾಗಿದೆ. ಘಟನೆಗೆ ಯಾರೇ ಕಾರಣವಾಗಿದ್ದರೂ ಸರಿಯಲ್ಲ. ಹೋರಾಟದ ಸಂದರ್ಭದಲ್ಲೂ ಪ್ರತಿಭಟನಾಕಾರರು ನಮ್ಮ ಆಸ್ತಿ ನಮ್ಮ ಸರ್ಕಾರ ಅನ್ನೋದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಪೊಲೀಸರು ಪ್ರತಿನಿತ್ಯ ನಮ್ಮ ಕೆಲಸವನ್ನು ಮಾಡುವವರು. ಈ ಘಟನೆ ನಿಜಕ್ಕೂ ಖಂಡನೀಯ, ತನಿಖೆಯಿಂದ ಸತ್ಯ ಹೊರಬರಬೇಕು" ಎಂದರು.
Recommended Video