ಮಾರ್ಚ್ 3ರಂದು ರೈತರಿಂದ ವಿಧಾನಸೌಧಕ್ಕೆ ಮುತ್ತಿಗೆ
ಬೆಂಗಳೂರು, ಮಾರ್ಚ್. 02: ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ರಾಜ್ಯ ರೈತ ಸಂಘ ಮಾರ್ಚ್ 3 ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ದಿನಾಂಕ ಮಾರ್ಚ್ ಮೂರು ಗುರುವಾರ ಬೆಳಗ್ಗೆ ಮುತ್ತಿಗೆ ಹಾಕಲಿದ್ದೇವೆ ಎಂದು ತಿಳಿಸಿದ್ದಾರೆ.[ಸದನದಲ್ಲಿ ವಾಚ್ ಸದ್ದು, ಕಲಾಪ ಮುಂದೂಡಿಕೆ]
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಿಂದ ಹೊರಡುವ ರೈತರ ಮೆರವಣಿಗೆ ವಿಧಾನಸೌಧವನ್ನು ತಲುಪಲಿದೆ. ಟ್ರ್ಯಾಕ್ಟರ್ ಮತ್ತು ಲಾರಿಗಳಲ್ಲಿ ರೈತರು ವಿಧಾನಸೌಧಕ್ಕೆ ತೆರಳಲಿದ್ದಾರೆ. 10 ಸಾವಿರಕ್ಕೂ ಅಧಿಕರ ರೈತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.[ವಿಧಾನ ಸೌಧ ಹಾಗೇ ಇದೆ, ವಿಧಾನ ವೀಧಿ ಬದಲಾಗಿದೆ!]
ವಿಧಾನಸಭೆ ಅಧಿವೇಶನ ಆರಂಭವಾಗಿದ್ದು ಇದೇ ಸಮಯದಲ್ಲಿ ರೈತರು ಮುತ್ತಿಗೆ ಹಾಕಲು ಮುಂದಾಗಿದ್ದಾರೆ. ಅತ್ತ ವಿಧಾನಸೌಧದೊಳಗೆ ಕೈಗಡಿಯಾರದ ಪ್ರಕರಣ ಪ್ರತಿಧ್ವನಿಸುತ್ತಿದ್ದರೆ ಇತ್ತ ರೈತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಲಿದ್ದಾರೆ.
ಬೆಳೆಗಳಿಗೆ ನಿರ್ದಿಷ್ಟ ಬೆಲೆ, ಬರ ಪರಿಹಾರ, ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳ ಸದ್ಯದ ಪರಿಸ್ಥಿತಿ ಎಲ್ಲವನ್ನು ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತರು ಸರ್ಕಾರದ ಗಮನಕ್ಕೆ ಮತ್ತೆ ತರಲಿದ್ದಾರೆ. ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ವಿಧಾನಸೌಧ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.