ಲಾಕ್ ಡೌನ್ ಸಂಕಷ್ಟ; ಒನ್ ಇಂಡಿಯಾ ಜೊತೆ ಸಮಸ್ಯೆ ಹಂಚಿಕೊಂಡ ರೈತರು
ಬೆಂಗಳೂರು, ಏಪ್ರಿಲ್ 10 : ಕೊರೊನಾ ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. 21 ದಿನಗಳ ಲಾಕ್ ಡೌನ್ ವಿಸ್ತರಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಸಮಯದಲ್ಲಿ ಹೆಚ್ಚು ಸಂಕಷ್ಟಕ್ಕೆ ಸಿಲುಕಿರುವುದು ರೈತರು.
ಅಕಾಲಿಕ ಮಳೆ, ಬೆಲೆ ಕುಸಿತ, ಮಧ್ಯವರ್ತಿಗಳ ಹಾವಳಿ ಹೀಗೆ ರೈತರು ಯಾವಾಗಲೂ ಸಂಕಷ್ಟ ಎದುರಿಸುತ್ತಾರೆ. ಆದರೆ, ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಕೊರೊನಾದಿಂದಾಗಿ ಅವರಿಗೆ ನಷ್ಟ ಉಂಟಾಗುತ್ತಿದೆ.
ಲಾಕ್ ಡೌನ್; ಕೃಷಿ ಚುಟವಟಿಕೆಗಳಿಗೆ ಯಾವುದೇ ನಿರ್ಬಂಧವಿಲ್ಲ
ಬೆಳೆದು ನಿಂತ ಬೆಳೆಗಳ ಕಟಾವು, ಸಾಗಣೆ, ಮಾರುಕಟ್ಟೆ ಹೀಗೆ ಅನೇಕ ಸಮಸ್ಯೆಗಳನ್ನು ರಾಜ್ಯದ ವಿವಿಧ ಜಿಲ್ಲೆಗಳ ರೈತರು ಅನುಭವಿಸುತ್ತಿದ್ದಾರೆ. ಒನ್ ಇಂಡಿಯಾ ಜೊತೆ ಹಲವಾರು ರೈತರು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ.
ಅಕಾಲಿಕ ಮಳೆ; ಮಾವು ಬೆಳೆಗಾರರಿಗೆ ಉಪಯುಕ್ತ ಸಲಹೆಗಳು
ಲಾಕ್ ಡೌನ್ ಸಮಸ್ಯೆ ನಡುವೆ ವಿವಿಧ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆ ರೈತರಿಗೆ ಮತ್ತಷ್ಟು ಆತಂಕ ಮೂಡಿಸಿದೆ. ಸಾಲ ಮಾಡಿ ಬೆಳೆದ ಬೆಳೆಯಿಂದ ಲಾಭ ಬರುವುದು ದೂರದ ಮಾತು. ಮಾಡಿದ ಖರ್ಚಾದರೂ ಸಿಗುತ್ತದೆಯೇ? ಎಂದು ರೈತರು ಲೆಕ್ಕಾಚಾರ ಹಾಕುತ್ತಿದ್ದಾರೆ.
ಬೆಳ್ಳಂಬೆಳಗ್ಗೆ ಕೃಷಿ ಮಾರುಕಟ್ಟೆಗಳಿಗೆ ಸಚಿವರುಗಳ ಭೇಟಿ, ರೈತರೊಂದಿಗೆ ಚರ್ಚೆ
ಕೃಷಿ ಚಟುವಟಿಕೆಗಳಿಗೆ ನಿರ್ಬಂಧವಿಲ್ಲ
ಕರ್ನಾಟಕದ ಕೃಷಿ ಸಚಿವ ಬಿ. ಸಿ. ಪಾಟೀಲ್, "ರೈತರು ಬೆಳೆದ ತರಕಾರಿ, ಹಣ್ಣು ಹಾಗೂ ಇತರ ದವಸ ಧಾನ್ಯಗಳ ಸಾಗಟ ಮತ್ತು ಅವುಗಳ ಮಾರಾಟಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ರೈತರು ಹಂಚಿಕೊಂಡ ಸಮಸ್ಯೆಗಳ ವಿವರಗಳು ಇಲ್ಲಿವೆ ನೋಡಿ.
ಈರುಳ್ಳಿಗೆ ಮಾರುಕಟ್ಟೆ ಇಲ್ಲ
ಈ ಬಾರಿ ಕೆಜಿಗೆ 200 ರೂ. ತನಕ ಹೋಗಿ ಮಾರುಕಟ್ಟೆಯಲ್ಲಿ ಈರುಳ್ಳಿ ತಲ್ಲಣ ಉಂಟು ಮಾಡಿತ್ತು. ಆದರೆ, ಈಗ ಈರುಳ್ಳಿಗೆ ಮಾರುಕಟ್ಟೆ ಇಲ್ಲವಾಗಿದೆ. "ನಮ್ಮ ತೋಟದಲ್ಲಿ ಬೆಳೆದಿರುವ ಹೂವ ಮತ್ತು ಈರುಳ್ಳಿ ನಮಗೆ ಮಾರುಕಟ್ಟೆ ಇಲ್ಲದೆ ತುಂಬಾ ನಷ್ಟ ಉಂಟಾಗಿದೆ ಇದಕ್ಕೆ ಪರಿಹಾರ ಒದಗಿಸಬೇಕು" ಎಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೂನಿಕೆರೆ ಗ್ರಾಮದ ಪವನ್ ಕುಮಾರ್ ಎಲ್. ಗೌಡ ಎಂಬುವವರು ಮನವಿ ಮಾಡಿದ್ದಾರೆ. ಸಮೀಪದಲ್ಲಿ ಈರುಳ್ಳಿ ಕೊಳ್ಳುವವರಿದ್ದರೆ ಖರೀದಿ ಮಾಡಿ ರೈತರಿಗೆ ನೆರವಾಗಿ.
ಪಪ್ಪಾಯಿ ಬೆಲೆ ಪಾತಾಳಕ್ಕೆ
ಪಪ್ಪಾಯಿ ಬೆಳೆದ ರೈತರು ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ. ಕೆ. ಜಿ. ಪಪ್ಪಾಯಿಯನ್ನು 4 ರೂ.ಗೆ ಕೇಳುತ್ತಿದ್ದಾರೆ. 5 ಲಕ್ಷ ರೂ. ವೆಚ್ಚ ಮಾಡಿದ್ದೇವೆ. ಹೀಗೆ ಆದರೆ ಬದುಕುವುದು ಹೇಗೆ? ಎಂದು ಒನ್ ಇಂಡಿಯಾಕ್ಕೆ ಕರೆ ಮಾಡಿದ ರೈತರು ಪ್ರಶ್ನೆ ಮಾಡಿದರು.
ಟೊಮೆಟೋ ರೇಟ್ಗೆ ಸಿಗುತ್ತಿಲ್ಲ
ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಟೊಮೆಟೋ ಬೆಳೆದ ರೈತರಿಗೆ ಸಂಕಷ್ಟ ಎದುರಾಗಿದೆ. ಟೊಮೆಟೋಗೆ ರೇಟ್ ಸಿಗುತ್ತಿಲ್ಲ ಎಂದು ರೈತರು ಸಂಕಷ್ಟ ತೋಡಿಕೊಂಡಿದ್ದಾರೆ.
ಬಾಳೆ ಹಣ್ಣು ಕೊಳೆತು ಹೋಗುತ್ತಿವೆ
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಗೌರೀಪುರ ಗ್ರಾಮದಲ್ಲಿನ ಧನಂಜಯ ಎಂಬ ರೈತರು ತೋಟದಲ್ಲಿ ಬಾಳೆ ಹಣ್ಣು ಕೊಳೆತು ಹೋಗುತ್ತಿದೆ. ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಸೋಯಾಬಿನ್ ಮಾರಾಟಕ್ಕೆ ಇದೆ
ಸೋಯಾಬೀನ್ ಕಾಳು ಮಾರಾಟ ಮಾಡಲು ನಮಗೆ ತೊಂದರೆ ಆಗುತ್ತಿದೆ ಎಂದು ಧಾರವಾಡದ ನವಲೂರ ರೈತ ಹೇಳಿದ್ದಾರೆ. ಯಾರಾದರೂ ಸೋಯಾಬೀನ ಕಾಳು ಕೊಳ್ಳುವವರು ಇದ್ದರೆ ಸಂಪರ್ಕಿಸಿ. 5 ಟನ್ ದಾಸ್ತಾನು ಇದೆ ಎಂದು ಹೇಳಿದ್ದು ತಮ್ಮ ಮೊಬೈಲ್ ನಂಬರ್ ನೀಡಿದ್ದಾರೆ (9008378297).
ಇನ್ನು ಹಲವಾರು ದೂರುಗಳು
ಹೂವಿಗೆ ಮಾರುಕಟ್ಟೆ ಇಲ್ಲ, ಭತ್ತದ ಬೆಳೆಗೆ ಹಾನಿಯಾಗಿದೆ. ಹಣ್ಣು ಕೊಳ್ಳುವವರು ಇಲ್ಲ ಎಂದು ಹೀಗೆ ಹತ್ತಾರು ಕರೆಗಳು ಒನ್ ಇಂಡಿಯಾಕ್ಕೆ ಬರುತ್ತಿವೆ. ಕೃಷಿ ಸಚಿವರು ಇತ್ತ ಗಮನ ಹರಿಸಬೇಕು ಎಂದು ಒನ್ ಇಂಡಿಯಾ ಮನವಿ ಮಾಡುತ್ತದೆ.