ಸೆಪ್ಟೆಂಬರ್ 25ಕ್ಕೆ ಕರ್ನಾಟಕ ಬಂದ್: ನಾಳೆ ಅಂತಿಮ ತೀರ್ಮಾನ
ಬೆಂಗಳೂರು, ಸೆಪ್ಟೆಂಬರ್ 22: ದೇಶಾದ್ಯಾಂತ ಭಾರೀ ವಿವಾದ ಸೃಷ್ಟಿಸಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೃಷಿ ಮಸೂದೆ ವಿರೋಧಿಸಿ ಶುಕ್ರವಾರ ರೈತ ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ನೀಡಲು ಮುಂದಾಗಿದ್ದು, ನಾಳೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.
ಬುಧವಾರ ನಗರದ ಪ್ರೀಡಂ ಪಾರ್ಕ್ ನ ಜನ ಚಳವಳಿಗಳ ಪರ್ಯಾಯ ಜನತಾ ಅಧಿವೇಶನ ನಡೆಯುತ್ತಿರುವ ಪ್ರೀಡಂ ಪಾರ್ಕ್ ನ ದೇವರಾಜ ಅರಸು ವೇದಿಕೆಯಲ್ಲಿ ನಡೆದ ಸಭೆಯಲ್ಲಿ ಶುಕ್ರವಾರ ಬಂದ್ ಗೆ ಕರೆ ನೀಡುವ ಜತೆಗೆ ಕೇಂದ್ರ ಸರ್ಕಾರದ ರೈತ ವಿರೋಧಿ ಧೋರಣೆ ವಿರುದ್ಧ ಎರಡನೇ ಹಂತದ ಹೋರಾಟ ನಡೆಸಲು ಸಹ ಚಿಂತನೆ ನಡೆಸಿವೆ.
ಕೃಷಿ ಮಸೂದೆ ಅಂಗೀಕಾರ, ಸೆಪ್ಟೆಂಬರ್ 25ರಂದು ಬಂದ್ಗೆ ಕರೆ
ಇನ್ನು ಈ ಸಂಬಂಧ ಇಂದು ಸುದ್ದಿಗೋಷ್ಠಿ ನಡೆಸಿದ ರೈತ ಸಂಘದ ಪದಾಧಿಕಾರಿಗಳು, ದೇಶಾದ್ಯಂತ ಕೇಂದ್ರ ಸರಕಾರದ ನಡೆಯ ಬಗ್ಗೆ ವಿರೋಧ ವ್ಯಕ್ತವಾಗಿದೆ. ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳಲ್ಲಿ ಸೆ.25ರಂದು ಬಂದ್ ಆಚರಿಸಲಿದ್ದಾರೆ.
ನಾವು ಕೂಡಾ ಇಂದು ಸಂಜೆ ರಾಷ್ಟ್ರದ ವಿವಿಧ ಸಂಘಟನೆಗಳ ಜೊತೆ ಚರ್ಚೆ ನಡೆಸುತ್ತೇವೆ. ಬಂದ್ ಬಗ್ಗೆ ನಾಳೆ ಬೆಳಿಗ್ಗೆ ಅಂತಿಮ ನಿರ್ಧಾರ ಪ್ರಕಟಿಸುತ್ತೇವೆ ಎಂದು ಹೇಳಿದ್ದಾರೆ.
" ಬದುಕಲು ಬೇಕಾದಷ್ಟು ಭೂಮಿ, ಗೌರವದಿಂದ ಬಾಳುವಂತಹ ವಸತಿ ನಮ್ಮ ಜನ್ಮ ಸಿದ್ಧ ಹಕ್ಕು" ಎನ್ನುವ ಘೋಷಣೆಯಡಿ ಹೋರಾಟ ನಡೆಲು ತೀರ್ಮಾನಿಸಿವೆ.
ರೈತ ಸಂಘಟನೆಗಳು ಕರೆ ನೀಡಿರುವ ರಾಜ್ಯ ಬಂದ್ಗೆ ವಿವಿಧ ಸಂಘಟನೆಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗುವ ಸಾಧ್ಯತೆಗಳಿವೆ. ರೈತ ಸಂಘಟನೆಗಳು ಮಾತ್ರವಲ್ಲದೆ ನಾರಾಯಣಗೌಡ ನೇತೃತ್ವದ ಕರವೇ, ಕಾರ್ಮಿಕ ಸಂಘಟನೆಗಳು, ದಲಿತ ಸಂಘಟನೆಗಳು, ಓಲಾ-ಉಬರ್, ಆಟೋ, ಟ್ಯಾಕ್ಸಿ ಸಂಘಟನೆಗಳು ಸೇರಿದಂತೆ 32ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಬೆಂಬಲ ಘೋಷಿಸಲಿವೆ.
Recommended Video
ಬಂದ್ ಸಂದರ್ಭದಲ್ಲಿ ನಗರವನ್ನು ಸಂಪರ್ಕಿಸುವ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ರೈತರು ಬಂದ್ ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಲಿದೆ. ಎಪಿಎಂಸಿ, ವಿದ್ಯುತ್, ಭೂ ಸುಧಾರಣಾ ಕಾಯ್ದೆ ಸುಗ್ರಿವಾಜ್ಞಾ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಇಂದು ಎರಡನೆ ದಿನಕ್ಕೆ ಕಾಲಿಟ್ಟಿದೆ.