ಭಾರತ ಬಂದ್ ವಿಫಲಗೊಳಿಸಿದ ರೈತರಿಗೆ ಧನ್ಯವಾದಗಳು ಎಂದ ಸಿ.ಟಿ. ರವಿ!
ಬೆಂಗಳೂರು, ಸೆ. 27: ''ಕೃಷಿ ಮಸೂದೆ ನೆಪದಲ್ಲಿ ಈಗ ನಡೆಯುತ್ತಿರುವ ಹೋರಾಟ ರಾಜಕೀಯ ಪ್ರೇರಿತ, ಪಟ್ಟಭದ್ರ ಹಿತಾಸಕ್ತಿಗಳ, ಅರಾಜಕತೆ ಸೃಷ್ಟಿಸುವ, ಬಿಜೆಪಿ ವಿರೋಧಿಗಳ ಷಡ್ಯಂತ್ರದ ಭಾಗ'' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆರೋಪಿಸಿದ್ದಾರೆ.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, "ರೈತ ಸಂಘಟನೆ ಹೆಸರಿನಲ್ಲಿ 3 ಪ್ರಮುಖ ಕೃಷಿ ಮಸೂದೆಗಳನ್ನು ವಿರೋಧಿಸಿ 19ಕ್ಕೂ ಹೆಚ್ಚು ರಾಜಕೀಯ ಪಕ್ಷಗಳು, 100ಕ್ಕೂ ಹೆಚ್ಚು ಸಂಘಟನೆಗಳು ದೇಶದ ಉದ್ದಗಲಕ್ಕೆ ಕರೆ ಕೊಟ್ಟಿದ್ದ ಭಾರತ ಬಂದ್ಗೆ ರೈತರ ಬೆಂಬಲ ಸಿಕ್ಕಿಲ್ಲ" ಎಂದರು.
"ಜೊತೆಗೆ ರೈತರು ಬಂದ್ ವಿಫಲಗೊಳಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಕೃಷಿ ಸುಧಾರಣಾ ಕ್ರಮಕ್ಕೆ ರೈತರು ಬೆಂಬಲವಾಗಿ ನಿಂತಿದ್ದಾರೆ. ಪ್ರಧಾನಿ ಮೋದಿ ಅವರ ಪ್ರಾಮಾಣಿಕತೆ ಮತ್ತು ಕೃಷಿ ಕ್ಷೇತ್ರದಲ್ಲಿ ಸುಧಾರಣೆ ಆಗಬೇಕೆಂಬ ಅವರ ಹಂಬಲವನ್ನು ರೈತರು ಅರ್ಥ ಮಾಡಿಕೊಂಡಿದ್ದಾರೆ. ಹೀಗಾಗಿ ರೈತರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ" ಎಂದು ಸಿ.ಟಿ. ರವಿ ಹೇಳಿದರು.
ತಿದ್ದುಪಡಿಗೂ ಸಿದ್ಧ ಎಂದಿದ್ದೇವೆ!
"ಭಾರತ ಬಂದ್ ವೇಳೆ ಒಂದು ಹಕ್ಕಿಯೂ ಹಾರಾಡದಂಥ ವಾತಾವರಣ ಇರಬಹುದೇ ಎಂಬ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಆದರೆ, ಕೆಲವು ಸಂಘಟನೆಗಳು ಚಳವಳಿ ನಡೆಸಿವೆ. ಜನಸಾಮಾನ್ಯರು, ರೈತರು ಈ ಬಂದ್ ಬೆಂಬಲಿಸಿಲ್ಲ. ಅರಾಜಕತೆ ಸೃಷ್ಟಿಯಿಂದ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಬಂದ್ ಸಂಘಟಕರು ಮನವರಿಕೆ ಮಾಡಿಕೊಳ್ಳಬಹುದು."
"3 ಕೃಷಿ ಮಸೂದೆಗಳು ರೈತಪರವಾಗಿವೆ. ರೈತ ವಿರುದ್ಧವಾದ ಅಂಶಗಳೇನಿವೆ? ಎಂದು ಕೃಷಿ ಸಚಿವರು ಸೇರಿ ಎಲ್ಲರೂ ಕಳೆದೊಂದು ವರ್ಷದಿಂದ ಕೇಳುತ್ತಲೇ ಬಂದಿದ್ದಾರೆ. ತಿದ್ದುಪಡಿಗೂ ಸಿದ್ಧ ಎಂದಿದ್ದೇವೆ. ರೈತರ ಆರ್ಥಿಕ ಸ್ಥಿತಿ ಸುಧಾರಣೆಗೆ ಅಡ್ಡಗಾಲು ಕೆಲವರು ವಿರೋಧಿಸುತ್ತಿದ್ದಾರೆಯೇ ಹೊರತು ರೈತರು ಇದನ್ನು ವಿರೋಧಿಸುತ್ತಿಲ್ಲ" ಎಂದು ಸಿಟಿ ರವಿ ಹೇಳಿದರು.
ರೈತವಿರೋಧಿ ಎಂದು ಬಿಂಬಿಸುವ ಷಡ್ಯಂತ್ರ
ಬಿಜೆಪಿಯನ್ನು ರೈತವಿರೋಧಿ ಎಂದು ಬಿಂಬಿಸುವ ಷಡ್ಯಂತ್ರ ಇದರ ಹಿಂದಿದೆ. ಬಿಜೆಪಿ ದಲಿತ ವಿರೋಧಿ ಎಂದು ಬಿಂಬಿಸಲು ಹೊರಟು ಸೋತರು. ಅಸಹಿಷ್ಣುತೆ ಹೆಸರಿನಲ್ಲಿ ಅರಾಜಕತೆ ಸೃಷ್ಟಿಗೂ ಮುಂದಾದರು. ಪ್ರಶಸ್ತಿ ವಾಪಸ್ ನಾಟಕ ನಡೆಯಿತು. ಸಿಎಎ ಹೆಸರಿನಲ್ಲಿ ಅರಾಜಕತೆ ಸೃಷ್ಟಿಗೆ ಯತ್ನ ನಡೆಯಿತು. ಕೃಷಿ ಎಂದರೆ ಏನೆಂದೇ ತಿಳಿಯದವರೂ ಈ ಮಸೂದೆಗಳ ವಿರುದ್ಧ ಚಳವಳಿಗೆ ಇಳಿದಿದ್ದನ್ನೂ ಕಂಡಿದ್ದೇವೆ ಎಂದು ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಿವರಿಸಿದ್ದಾರೆ.
ರೈತರ ಬೆಳೆಗಳಿಗೆ ಈಗ ಹೆಚ್ಚಿನ ಬೆಂಬಲ ಬೆಲೆಯಿದೆ!
''ಹಿಂದೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್ಪಿ) ಸಂಬಂಧಿಸಿ ಕಾಂಗ್ರೆಸ್ ಸರಕಾರವು ಬಜೆಟ್ನಲ್ಲಿ 40ರಿಂದ 45 ಸಾವಿರ ಕೋಟಿ ರೂ. ನೀಡುತ್ತಿತ್ತು. ಈಗ ಈ ವರ್ಷದಲ್ಲಿ 1.21 ಲಕ್ಷ ಕೋಟಿ ರೂಪಾಯಿಯಡಿ ರೈತರ ಉತ್ಪನ್ನಗಳ ಖರೀದಿ ನಡೆದಿದೆ. ರಸಗೊಬ್ಬರ ಸಬ್ಸಿಡಿಗೆ ಹಿಂದೆ ಕಾಂಗ್ರೆಸ್ ಸರಕಾರ 30ರಿಂದ 32 ಸಾವಿರ ಕೋಟಿ ರೂ. ಕೊಡುತ್ತಿತ್ತು. ಈಗ 79 ಸಾವಿರ ಕೋಟಿ ರೂ. ಕೊಡುತ್ತಿದ್ದೇವೆ'' ಎಂದು ತಮ್ಮ ಸರ್ಕಾರದ ಸಾಧನೆಯನ್ನು ಸಿ.ಟಿ. ರವಿ ಹಳಿದರು.
Recommended Video
ಅದಾನಿ, ಅಂಬಾನಿ ಈಗ ಶ್ರೀಮಂತರಾದರೆ?
ಈಗ ನಾವು ಅದಾನಿ ಪರ, ಅಂಬಾನಿ ಪರ ಎನ್ನುತ್ತಿದ್ದಾರೆ. ಅದಾನಿ, ಅಂಬಾನಿ ನಿನ್ನೆ ಮೊನ್ನೆ ಹುಟ್ಟಿದವರೇ? ಪ್ರಧಾನಿ ಮೋದಿ ಅವರು ಬಂದ ಮೇಲೆ ಅದಾನಿ, ಅಂಬಾನಿ ಶ್ರೀಮಂತರಾದರೇ?. ನಮ್ಮ ಯೋಜನೆಗಳು ಅದಾನಿ, ಅಂಬಾನಿ ಪರ ಇಲ್ಲ. ರೈತರು, ಬಡವರು, ಕೃಷಿ ಕೂಲಿ ಕಾರ್ಮಿಕರ ಪರವಾಗಿವೆ. ಯುಪಿಎ ಸರ್ಕಾರದ 10 ವರ್ಷಗಳ ಕಾಲದಲ್ಲಿ ಕಿಸಾನ್ ಸಮ್ಮಾನ್ ಯೋಜನೆ ಇತ್ತಾ?, ಫಸಲ್ ಬಿಮಾ ಯೋಜನೆ ಇತ್ತಾ?, ರಸಗೊಬ್ಬರಕ್ಕೆ 1,700 ರೂಪಾಯಿ ಸಬ್ಸಿಡಿ ನೀವು ಕೊಟ್ಟಿದ್ದೀರಾ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಸಿ.ಟಿ. ರವಿ ಪ್ರಶ್ನಿಸಿದ್ದಾರೆ.
ಜೊತೆಗೆ ಸಂಸತ್ತಿನಲ್ಲಿ ಚರ್ಚೆ ಮಾಡದೆ ಕಾಂಗ್ರೆಸ್ ಓಡಿ ಹೋಯಿತು. ರೈತರಿಗೆ ಬ್ರಿಟಿಷ್ ಕಾಯ್ದೆಗಳಿಂದ ಬಿಡುಗಡೆ ಭಾಗ್ಯವನ್ನು ಬಿಜೆಪಿ ಕೊಡುತ್ತಿದೆ ಎಂದರು.