ದೆಹಲಿಯಲ್ಲಿ ನಡೆಯುತ್ತಿರುವುದು ದೇಶ ವಿರೋಧಿ ಪ್ರತಿಭಟನೆ!
ಬೆಂಗಳೂರು, ಫೆ. 05: ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರೈತರು ಚಳುವಳಿಯ ಭಾಗವಾಗಿಲ್ಲ. ರೈತರ ಹೆಸರಲ್ಲಿ ರಾಜಕೀಯ ಮಾಡಲಾಗುತ್ತಿದ್ದು, ದೇಶ ವಿರೋಧಿಗಳು ಪ್ರತಿಭಟನೆಯಲ್ಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಹತ್ತಾರು ಭಾರಿ ನಾವು ಪ್ರಶ್ನೆ ಕೇಳಿದ್ದೇವೆ. ಮೂರು ಕಾಯಿದೆಗಳಲ್ಲಿ ರೈತ ವಿರೋಧಿ ನೀತಿ ಎಲ್ಲಿದೆ ಎಂದು. ಅತಿ ಹೆಚ್ಚು ರೈತರ ಪರ ಕೆಲಸ ಮಾಡಿರೋದು ಬಿಜೆಪಿ ಸರ್ಕಾರ ಎಂದು ಅವರು ಹೇಳಿದ್ದಾರೆ.
ರೋಹಿತ್ ಮೋವೆ ಹತ್ಯೆ ಸೇರಿದಂತೆ ಹಲವು ವಿಚಾರದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸಿಎಎ ನೆಪದಲ್ಲಿ ಪಾಕಿಸ್ತಾನಕ್ಕೆ ಓಡಿಸ್ತಾರೆ ಅಂತ ಪ್ರಚೋದನೆ ಕೊಟ್ಟು ಪ್ರತಿಭಟನೆ ಮಾಡಿಸಿದರು. ಆ ಕಾನೂನು ತಂದು ಏಳು ತಿಂಗಳುಗಳಾದವು. ಆದರೂ ಬಹುತೇಕ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತು. ಜನರು, ರೈತರು ನಮ್ಮ ಸರ್ಕಾರದ ಪರ ನಿಂತಿರುವುದರಿಂದ ಚುನಾವಣೆಯಲ್ಲಿ ಗೆಲವು ಕಾಣುತ್ತಿದ್ದೇವೆ. ಉದ್ಯೋಗ ಸೃಷ್ಟಿ ಮಾಡಲು ಈ ಕಾನೂನುಗಳನ್ನು ಜಾರಿಗೆ ತಂದಿದ್ದೇವೆ. ಸತ್ಯಾಗ್ರಹ ಮಾಡುತ್ತಿರುವವರಿಗೂ ಈ ಸತ್ಯ ಗೊತ್ತಿದ್ದರೂ ವಿರೋಧ ಮಾಡುತ್ತಿದ್ದಾರೆ ಎಂದು ಸಿಟಿ ರವಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Recommended Video
ರೈತರು ಬೆಳೆದ ಅನ್ನ ತಿನ್ನುವವರು ರೈತರ ಹೋರಾಟ ಬೆಂಬಲಿಸಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಸಿಟಿ ರವಿ ಅವರು, ರೈತರೇ ಭಾಗಿಯಾಗಿರೋ ಪ್ರತಿಭಟನೆಗೆ ಬೆಂಬಲ ಕೊಡಲಿ. ಆದರೆ ರೈತರ ಹೆಸರಲ್ಲಿ ಬೇರೆಯವರು ಮಾಡುವ ಪ್ರತಿಭಟನೆಗೆ ಬೆಂಬಲ ಬೇಡ. ರೈತರು ಅರಾಜಕತೆ ಸೃಷ್ಟಿ ಮಾಡುತ್ತಿದ್ದಾರೆ. ಶಿರಾ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಇದೇ ವಿಚಾರ ಪ್ರಸ್ತಾಪ ಮಾಡಿದ್ದರು. ಆದರೆ ಅಲ್ಲಿ ಏನಾಯಿತು? ಎಂದು ಸಿಟಿ ರವಿ ಪ್ರಶ್ನೆ ಮಾಡಿದ್ದಾರೆ.