ಭಾರತ ಬಂದ್ಗೆ ಹಲವು ಸಂಘಟನೆಗಳು ಸಾಥ್
ಬೆಂಗಳೂರು: ದೇಶದಾದ್ಯಂತ ಸೋಮವಾರ (ಸೆ.27) ನಡೆಯುವ ಭಾರತ ಬಂದ್ ಗೆ ರಾಜ್ಯಲ್ಲಿಯೂ ಸಹ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಹಲವು ಸಂಘಟನೆಗಳು, ಪಕ್ಷಗಳು ಕೈಜೋಡಿಸಿವೆ.
ಕೇಂದ್ರದ ಮೂರು ಕೃಷಿ ನೀತಿಗಳನ್ನು ವಿರೋಧಿಸಿ ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಸೆ.27 ರಂದು ಭಾರತ ಬಂದ್ಗೆ ಕರೆ ನೀಡಿದೆ. ರಾಜ್ಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ರಾಜ್ಯ ಕಬ್ಬು ಬೆಳೆಗಾರರ ಸಂಘ, ಅಮ್ ಆದ್ಮಿ ಪಕ್ಷ ನೇರವಾಗಿ ಬೆಂಬಲ ವ್ಯಕ್ತಪಡಿಸಿವೆ. ಕರ್ನಾಟಕ ರಕ್ಷಣಾ ವೇದಿಕೆ, ಶಿಕ್ಷಕರ ಸಂಘಟನೆಗಳು ನೈತಿಕ ಬೆಂಬಲ ವ್ಯಕ್ತಪಡಿಸಿವೆ. "ಸ್ವಯಂ ಪ್ರೇರಿತವಾಗಿ ಬಂದ್ ಆಚರಿಸೋಣ, ರೈತರನ್ನು ಬೆಂಬಲಿಸೋಣ, ಬೆಲೆ ಏರಿಕೆಯನ್ನೂ ಖಂಡಿಸೋಣ'' ಎಂಬ ಪೋಸ್ಟರ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಭಾರತ ಬಂದ್ ಬಗ್ಗೆ ನಾನ್ಯಾಕೆ ಪ್ರತಿಕ್ರಿಯಿಸಲಿ: ಬೊಮ್ಮಾಯಿ
ಬಂದ್ ರೂಪುರೇಷೆಗಳ ಕುರಿತು ಚರ್ಚಿಸಲು ವಿವಿಧ ಸಂಘಟನೆಗಳು ಶನಿವಾರದ ನಗರದ ಫ್ರೀಡಂ ಪಾರ್ಕ್ನಲ್ಲಿ ಸಭೆ ನಡೆಸಿದವು. ಸಭೆಯ ಬಳಿಕ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, "ಬಂದ್ ಯಶಸ್ವಿಗೆ ಎಲ್ಲ ಪೂರ್ವ ತಯಾರಿ ನಡೆಸುತ್ತಿದ್ದೇವೆ. ರೈತ ಸಂಘಟನೆಗಳು ಯಾವುದೇ ಭಿನ್ನಾಭಿಪ್ರಾಯ ಇಲ್ಲದೆ ಒಂದೇ ವೇದಿಕೆಯಲ್ಲಿ ಕೆಲಸ ಮಾಡುತ್ತಿವೆ. ದಲಿತ ಸಂಘರ್ಷ ಸಮಿತಿಗಳು, ಕಾರ್ಮಿಕ ಸಂಘಟನೆಗಳು ಹಾಗೂ ಕನ್ನಡ ಪರ ಸಂಘಟನೆಗಳೂ ಕೈಜೋಡಿಸಿವೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಬಂದ್ ಯಶಸ್ವಿ ಮಾಡುತ್ತೇವೆ" ಎಂದರು.
ಸೋಮವಾರದಂದು ಬೆಳಿಗ್ಗೆ 11 ಗಂಟೆಗೆ ನಗರದ ಟೌನ್ಹಾಲ್ ವೃತ್ತದಿಂದ ಮೆರವಣಿಗೆ ಹೊರಟು ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಬೃಹತ್ ಸಭೆ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಕೇಂದ್ರದ ಕೃಷಿ ಕಾಯ್ದೆಗಳು ಹಾಗೂ ನಿರಂತರವಾಗಿ ನಡೆಯುತ್ತಿರುವ ಬೆಲೆ ಏರಿಕೆಯನ್ನು ಖಂಡಿಸುತ್ತೇವೆ. ರಾಜಧಾನಿ ನವದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ರಾಜ್ಯದಿಂದಲೂ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತೇವೆ ಎಂದು ವಿವರಿಸಿದರು.
"ಸೋಮವಾರ ನಗರದಲ್ಲಿ ಎಲ್ಲ ಮಾರುಕಟ್ಟೆಗಳು ಮತ್ತು ವಾಣಿಜ್ಯ ಸಂಕೀರ್ಣಗಳನ್ನು ಬಂದ್ ಮಾಡಲಾಗುವುದು. ಎಲ್ಲ ಕೈಗಾರಿಕೆ ಸಂಘಟನೆಗಳು, ಸಾರಿಗೆ ಸಿಬ್ಬಂದಿ, ಆಟೋ-ಟ್ಯಾಕ್ಸಿ ಚಾಲಕರೂ ಕೈಜೋಡಿಸಿದ್ದಾರೆ. ಬೆಂಗಳೂರಿನಲ್ಲಿ 112 ಸಂಘಟನೆಗಳು ಹಾಗೂ ವಿವಿಧ ಜಿಲ್ಲೆಗಳು ಹಾಗೂ ತಾಲ್ಲೂಕಿನ ಸಂಘಟನೆಗಳು ಸೇರಿ ಎಲ್ಲೆಡೆ ಪ್ರತಿಭಟನೆ ನಡೆಸಲಾಗುವುದು'' ಎಂದು ರೈತ ಮುಖಂಡ ಬಡಗಪುರ ನಾಗೇಂದ್ರ ಹೇಳಿದರು.
ಮೇಕೆದಾಟು ಪಾದಯಾತ್ರೆಗೆ ಪೊಲೀಸರಿಂದ ಅಡ್ಡಿ, ರೈತರ ಪ್ರತಿಭಟನೆ
ಎಎಪಿ ಬೆಂಬಲ:
"ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರು ಕಳೆದ 300 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಅವರ ಬೇಡಿಕೆಗಳನ್ನು ಈಡೇರಿಸದೆ ಮೊಂಡುತನ ಪ್ರದರ್ಶಿಸುತ್ತಿದೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕೃಷಿ ಕಾಯಿದೆಗಳಿಗೆ ಮನಸೋಇಚ್ಛೆ ತಿದ್ದುಪಡಿ ಮಾಡುವ ಮೂಲಕ ಒಂದು ಕಡೆ ರೈತರಿಗೆ ಮಾರಕವಾಗಿ ಮತ್ತೊಂದು ಉದ್ಯಮಿಗಳಿಗೆ ಲಾಭ ಮಾಡಿಕೊಟ್ಟಿದೆ. ಸೆ.27ರಂದು ನಡೆಯುವ ಭಾರತ ಬಂದ್ ಸಂದರ್ಭದಲ್ಲಿ ಬೆಂಗಳೂರು ಸಹಿತ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ'' ಎಂದು ಅಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ ವಿ.ಸದಂ ತಿಳಿಸಿದ್ದಾರೆ.
ಕರವೇ ನೈತಿಕ ಬೆಂಬಲ:
"ಭಾರತ ಬಂದ್ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರೈತ ಸಂಘಟನೆಗಳಿಗೆ ನೈತಿಕ ಬೆಂಬಲ ವ್ಯಕ್ತಪಡಿಸಲಿದೆ. ಆದರೆ, ನಮ್ಮ ಕಾರ್ಯಕರ್ತರುಎಲ್ಲಿಯೂ ಪ್ರತಿಭಟನೆಗೆ ಇಳಿಯುವುದಿಲ್ಲ. ಕೇಂದ್ರ ಸರ್ಕಾರದ ಜನವಿರೋಧಿ ಧೋರಣೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು'' ಎಂದು ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಪ್ರತಿಕ್ರಿಯಿಸಿದ್ದಾರೆ.
Recommended Video