ಆತ್ಮಹತ್ಯೆಗೆ ಕಾರಣ ಹುಡುಕಲು ಹುಬ್ಬಳ್ಳಿಯಲ್ಲಿ ರೈತಸಂಘ ಸಭೆ
ಹುಬ್ಬಳ್ಳಿ, ಜು. 19: ರಾಜ್ಯದಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಸಮಾಲೋಚನೆ ನಡೆಸಲು ರಾಜ್ಯ ರೈತ ಸಂಘ ಜುಲೈ 21 ರಂದು ಹುಬ್ಬಳ್ಳಿಯಲ್ಲಿ ಚಿಂತನಾ ಸಭೆ ಹಮ್ಮಿಕೊಂಡಿದೆ. ರಾಜ್ಯದ ವಿವಿಧ ಭಾಗಗಳಿಂದ ಸುಮಾರು 15 ಸಾವಿರ ರೈತರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾಹಿತಿ ನೀಡಿದ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ರೈತರ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿದೆ. ಇದರಿಂದಲೇ ಆತ್ಮಹತ್ಯೆಗಳಾಗುತ್ತಿವೆ ಎಂದು ಆರೋಪಿಸಿದರು.[ನೊಂದ ರೈತರ ಮನೆಗೆ ಅಂತೂ ಇಂತೂ ಭೇಟಿ ಇತ್ತ ಸಿಎಂ]
ನರಗುಂದ-ನವಲಗುಂದ ಲಾಠಿ ಚಾರ್ಜ್ ಪ್ರಕರಣ ನಡೆದು 35 ವರ್ಷಗಳಾಗುತ್ತಿದೆ. ರೈತರು ಸದ್ಯ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಯಾವ ನೆಲೆಗಟ್ಟಿನಲ್ಲಿ ಅವುಗಳ ಪರಿಹಾರ ಸಾಧ್ಯ ಎಂಬುದನ್ನು ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.
ಸರ್ಕಾರದ ಕೆಲ ನೀತಿಗಳು ರೈತನನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸ ಹೊರಟಿವೆ. ವಿಶ್ವ ವಾಣಿಜ್ಯ ಒಪ್ಪಂದಗಳು ರೈತನ ಮೇಲೆ ಕೆಟ್ಟ ಪರಿಣಾಮ ಬೀಳುತ್ತಿವೆ. ಅದನ್ನು ತಡೆಯಲು ಯಾವ ರೀತಿಯಲ್ಲಿ ಸಜ್ಜಾಗಬೇಕು ಎಂಬುದನ್ನು ಚರ್ಚೆ ಮಾಡಲಾಗುತ್ತದೆ ಎಂದು ರೈತ ಸಂಘದ ಕಾರ್ಯದರ್ಶಿ ಬಾದಗಲಪುರ್ ನಾಗೇಂದ್ರ ಹೇಳಿದ್ದಾರೆ.[ಕರ್ನಾಟಕದಲ್ಲಿ ರೈತರ ಸಾವಿಗೆ ಕಾರಣವೇನು? ಇಲ್ಲಿದೆ ಉತ್ತರ]
ಎಲ್ಲ ಸಂಗತಿಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ರೈತರ ಆತ್ಮಹತ್ಯೆ ಬಗ್ಗೆ ಮಾತ್ರ ಮೌನ ತಾಳಿದ್ದಾರೆ. ಇದಕ್ಕೆ ಅರ್ಥ ಮಾತ್ರ ಗೊತ್ತಾಗುತ್ತಿಲ್ಲ. ಯಾವ ರೈತರು ಸಾಲದ ಸುಳಿಗೆ ಸಿಕ್ಕಿ ಆತ್ಮಹತ್ಯೆಗೆ ಸಿಕ್ಕಿಕೊಳ್ಳಬಾರು. ಅದಕ್ಕೆ ಎರಡು ಸರ್ಕಾರಗಳನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು.