ಸಾಲ ಮನ್ನಾದ ಘೋಷಣೆ ಸದ್ಯಕ್ಕೆ ಮುಂದೂಡಿದ ನೂತನ ಸಿಎಂ ಬಿಎಸ್ವೈ
ಬೆಂಗಳೂರು, ಮೇ 17: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಸಾಲಮನ್ನಾ ಘೋಷಣೆಯನ್ನು ಸದ್ಯಕ್ಕೆ ಮುಂದೂಡಿದ್ದಾರೆ. ಈ ಬಗ್ಗೆ ನಾಳೆ ನಾಡಿದ್ದು ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ.
ಪ್ರಮಾಣ ವಚನ ಸ್ವೀಕರಿಸಿದ ನಂತರ ಮೊದಲ ಪತ್ರಿಕಾಗೋಷ್ಠಿ ನಡೆಸಿದ ಅವರು, "ರಾಜ್ಯದ ಆರೂವರೆ ಕೋಟಿ ಜನತೆಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅವರ ಪ್ರೀತಿಯಿಂದ ನಾನು ಮೂರನೆ ಬಾರಿಗೆ ಈ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ನನ್ನನ್ನು ಮತ್ತು ನಮ್ಮ ಪಕ್ಷವನ್ನು ಬೆಂಬಲಿಸಿದ ರಾಜ್ಯದ ರೈತರು, ಜನರಿಗೆ ಕೃತಜ್ಞತೆ ಮತ್ತು ಅಭಿನಂದನೆ ಸಲ್ಲಿಸುತ್ತೇನೆ," ಎಂದು ಹೇಳಿದರು.
24ನೇ ಮುಖ್ಯಮಂತ್ರಿ ಯಡಿಯೂರಪ್ಪ ಮುಂದಿರುವ ಸವಾಲುಗಳು
"ನಮಗೆ ಅಗತ್ಯ ಶಾಸಕರ ಬೆಂಬಲ, ಜನ ಬೆಂಬಲ ಇದ್ದರೂ ಜೆಡಿಎಸ್ ಮತ್ತು ಕಾಂಗ್ರೆಸ್ ಅನೈತಿಕವಾಗಿ ಅಧಿಕಾರ ಕಬಳಿಸಲು ಯತ್ನಿಸುತ್ತಿವೆ. ಭಾರತೀಯ ಜನತಾ ಪಕ್ಷದ ಜನಾದೇಶವನ್ನು ಒಪ್ಪುವ ಬಹಳಷ್ಟು ಕಾಂಗ್ರೆಸ್, ಜೆಡಿಎಸ್ ಶಾಸಕರಿದ್ದಾರೆ. ಅವರು ಆತ್ಮಸಾಕ್ಷಿಗೆ ಅನುಗುಣವಾಗಿ ನಮಗೆ ಮತವನ್ನು ನೀಡಬೇಕು ಎಂದು ನಾನು ಕೇಳಿಕೊಳ್ಳುತ್ತೇನೆ. ಅವರು ನಮಗೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸವಿದೆ," ಎಂದು ಯಡಿಯೂರಪ್ಪ ತಿಳಿಸಿದರು.
"222 ಶಾಸಕರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸುತ್ತಾರೆ ಎಂಬ ವಿಶ್ವಾಸ ಇದೆ. ಸುಪ್ರೀಂ ಕೋರ್ಟ್ ನಲ್ಲಿ ಈ ವಿಚಾರವಿರುವುದರಿಂದ ಇದರ ಬಗ್ಗೆ ಹೆಚ್ಚಿನ ಚರ್ಚೆ ಮಾಡುವ ಅಗತ್ಯವಿಲ್ಲ," ಎಂದ ಯಡಿಯೂರಪ್ಪ ಪ್ರಧಾನಿ ನರೇಂದ್ರಮೋದಿ ಮತ್ತು ಪಕ್ಷಾಧ್ಯಕ್ಷ ಅಮಿತ್ ಷಾ ಅವರಿಗೆ ಇದೇ ಸಂದರ್ಭದಲ್ಲಿ ಧನ್ಯವಾದ ಹೇಳಿದರು.
"ನಾನು ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ರಾಷ್ಟ್ರೀಕೃತ ಬ್ಯಾಕ್ ಗಳ 1 ಲಕ್ಷದವರೆಗಿನ ಬೆಳೆ ಸಾಲ, ಸಹಕಾರ ಬ್ಯಾಂಕ್ ಗಳಲ್ಲಿನ 1 ಲಕ್ಷಗಳವರೆಗಿನ ಸಾಲ ಮತ್ತು ನೇಕಾರರ 1 ಲಕ್ಷದವರೆಗಿನ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿಯವರಿಗೆ ಹೇಳಿದ್ದೇನೆ. ಅದರಂತೆ ಅವರು ಈ ಬಗ್ಗೆ ಅಂಕಿ ಅಂಶಗಳನ್ನು ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ನೀಡಲಿದ್ದಾರೆ. ನಂತರ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇನೆ," ಎಂದು ಸಿಎಂ ಭರವಸೆ ನೀಡಿದ್ದಾರೆ.
ಬಹುವರ್ಷಗಳ ನಂತರ ಒಂದೇ ಪಕ್ಷ ಕೇಂದ್ರ ಮತ್ತು ಕರ್ನಾಟಕದಲ್ಲಿ
ಇದೇ ವೇಳೆ ವಿಶ್ವಾಸ ಮತವನ್ನು ಸಾಬಿತುಪಡಿಸಲು ಅಧಿವೇಶನ ಯಾವಾಗ ಕರೆಯುತ್ತೀರಿ ಎಂಬ ಪ್ರಶ್ನೆಗೆ, "ನಾಳೆ ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ," ಎಂದು ಉತ್ತರಿಸಿದ್ದಾರೆ.
ಪುನಃ ಸಾಲಮನ್ನಾ ಯಾವಾಗ ಮಾಡುತ್ತಿರಿ ಎಂಬ ಪ್ರಶ್ನೆ ಎದುರಾಯಿತು, ಇದಕ್ಕೆ ಉತ್ತರಿಸಿದ ಬಿಎಸ್ ವೈ, 'ನಾಳೆ ನಾಡಿದ್ದಿನ ಒಳಗೆ ಈ ಭರವಸೆಯನ್ನು ಈಡೇರಿಸುತ್ತೇನೆ ಎಂಬ ಭರವಸೆ ನೀಡುತ್ತಿದ್ದೇನೆ," ಎಂದರು.
ಇನ್ನು ಸಚಿವ ಸಂಪುಟ ರಚನೆ ಬಗ್ಗೆ ಕೇಳಿದ ಪ್ರಶ್ನೆಗೆ, "ಬಹುಮತ ಸಾಬೀತು ಮಾಡಿದ ನಂತರ 4 ಲಕ್ಷ ಜನ ಸೇರಿಸಿ ಅಮಿತ್ ಶಾ, ನರೇಂದ್ರ ಮೋದಿ, ಬಿಜೆಪಿ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ದೊಡ್ಡ ಸಮಾರಂಭದಲ್ಲಿ ಸಂಪುಟ ರಚನೆ ಮಾಡಬೇಕು ಎಂದುಕೊಂಡಿದ್ದೇನೆ," ಎಂದು ವಿವರ ನೀಡಿದರು.